ಡಾ.ನೀ.ಗೂ.ರಮೇಶ್
ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರುತ್ತದೆ. ಹೀಗಿರುವಾಗ ಯಾರ ಮಾತುಗಳೂ ಸಂಪೂರ್ಣ ವ್ಯರ್ಥವಲ್ಲ ಎಂಬ ಮಾತೊಂದು ಮಾರ್ಮಿಕವಾಗಿದೆ. ನಮ್ಮಲ್ಲಿ ಹೆಚ್ಚು ಜನರು ಮಾಡುವ ತಪ್ಪೆಂದರೆ, ನಮ್ಮೆದುರು ಮಾತನಾಡುತ್ತಿರುವ ವ್ಯಕ್ತಿ ಯಾರು? ಅವರ ಸ್ಥಾನಮಾನ ಏನು? ಎಂಬುದನ್ನು ಆಧರಿಸಿ ಅವರ ಮಾತುಗಳನ್ನು ಕೇಳಿಸಿಕೊಳ್ಳಕೋಬೇ, ಬೇಡವೋ ಎಂಬುದನ್ನು ನಿರ್ಧಾರ ಮಾಡಿಬಿಡುತ್ತಾರೆ. ಅಲ್ಲಿಂದಲೇ ನಮ್ಮ ಕೇಳಿಸಿಕೊಳ್ಳುವ ಸಾಮರ್ಥ್ಯದ ಕುಸಿತ ಪ್ರಾರಂಭವಾಗುತ್ತದೆ.
ವಾಸ್ತವವಾಗಿ ವೇದಿಕೆಯಲ್ಲಿ ಉಪನ್ಯಾಸ ಕೊಡಬೇಕೆಂದರೆ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಒಂದು ಉತ್ತಮ ಉಪನ್ಯಾಸ ಹಲವು ಪುಸ್ತಕಗಳ ಓದಿಗೆ ಸಮ. ಆಲಿಸುವುದು, ಜೀವಿಯ ಶೈವಾವಸ್ಥೆಯಿಂದಲೂ ಅತ್ಯಂತ ಪ್ರಧಾನ ಪಾತ್ರವಹಿಸುವ ಸಾಮರ್ಥ್ಯವಾಗಿದೆ. ಮಗು ಮಾತು ಕಲಿಯುವುದೇ ಕೇಳಿಸಿಕೊಳ್ಳುವುದರಿಂದ. ಇದು ಭಾಷಾ ಕಲಿಕೆಯ ಮೊದಲ ಹಂತ. ಸರಿ ತಪ್ಪುಗಳ ವಿವೇಚನಾ ಶಕ್ತಿ ಬರುವುದೇ ಬೇರೆಯವರ ಮಾತುಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದರಿಂದ. ಹಾಗಾಗಿಯೇ, ಶ್ರವಣಶಕ್ತಿ ಇಲ್ಲದ ಮಕ್ಕಳು ಮೂಕರೂ, ಬುದ್ಧಿಮಾಂದ್ಯರೂ ಆಗಿಬಿಡುವ ಅಪಾಯವಿರುತ್ತದೆ. ಅದಕ್ಕಾಗಿಯೇ ಶಾಲಾ-ಕಾಲೇಜುಗಳಲ್ಲಿ, ಮನೆಗಳಲ್ಲಿ ‘ಸರಿಯಾಗಿ ಕೇಳಿಸಿಕೊಳ್ಳಿ’ ‘ಗಮನವಿಟ್ಟು ಕೇಳಿಸಿಕೊಳ್ಳಿ’ ಎಂಬ ಮಾತುಗಳನ್ನು ಒತ್ತಿ ಒತ್ತಿ ಹೇಳಲಾಗುತ್ತದೆ.
ಇಂದಿನ ಯುವಜನರಲ್ಲಿ, ವಿದ್ಯಾರ್ಥಿಗಳಲ್ಲಿ ಆಲಿಸುವ ಸಾಮರ್ಥ್ಯ ದಿನೇ ದಿನೇ ಕುಸಿಯುತ್ತಿದೆ. ದೇಹವೊಂದೆಡೆ ಮನಸ್ಸು ಮತ್ತೊಂದೆಡೆಯಾಗಿ ಕೇಳಿಸಿಕೊಂಡಿದ್ದರಲ್ಲಿ ಬಹುಪಾಲು ಮನಸ್ಸಿನಲ್ಲಿ ದಾಖಲಾಗದೆ ಹೋಗುತ್ತಿವೆ. ಇದು ಇಂದಿನ ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಇರುವ ಅತ್ಯಂತ ದೊಡ್ಡ ತೊಡಕಾಗಿದೆ. ಹತ್ತು ನಿಮಿಷಗಳ ಹಿಂದೆ ಹೇಳಿದ ವಿಷಯದ ಕುರಿತು ಕೇಳಿದ ಅಂಶಗಳನ್ನೂ ಹೇಳಲಾಗದಷ್ಟು ಅನ್ಯಮನಸ್ಕತೆ ಇಂದಿನ ಪೀಳಿಗೆಯ ಹೆಚ್ಚು ಜನರನ್ನು ಕಾಡುತ್ತಿದೆ ಎಂಬುದು ಆತಂಕದ ಸಂಗತಿ. ಒಬ್ಬರ ಮಾತುಗಳನ್ನು ಕೇಳಿಸಿಕೊಳ್ಳಲು ಬೇಕಾದ ಸಹನೆ ಯುವಕರಲ್ಲಿ ಕಡಿಮೆಯಾಗುತ್ತಿದೆ. ಎದುರಿಗಿರುವವರು ಪೂರ್ಣ ವಾಕ್ಯ ಮುಗಿಸುವ ಮೊದಲೇ ಪ್ರತ್ಯುತ್ತರ ನೀಡುವುದು, ವಾದ, ವೈಮನಸ್ಯಗಳನ್ನು ಸೃಷ್ಟಿಸುವುದು ಸಾಮಾನ್ಯವಾಗಿಬಿಟ್ಟಿದೆ.
ಇಂದಿನ ಈ ಏಕಾಗ್ರತೆಯ ಕೊರತೆ ಹಾಗೂ ಅನ್ಯಮನಸ್ಕತೆಗೆ ಹಲವು ಕಾರಣಗಳಿವೆ
೧.ಮನರಂಜನೆಯ ವಿಷಯಗಳನ್ನೇ ಮನಸ್ಸಿನ ತುಂಬ ತುಂಬಿಕೊಂಡಿರುವುದು.
೨.ಅತಿಯಾಗಿ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಪರದೆಗಳನ್ನು ವೀಕ್ಷಿಸುವುದು.
೩.ಮುಂದಿನ ಗುರಿಯನ್ನು ಗುರುತಿಸಿಕೊಳ್ಳದೆ ಅಸ್ಪಷ್ಟತೆಯಲ್ಲೇ ಕಾಲ ದೂಡುತ್ತಿರುವುದು.
೪.ಅತಿಯಾದ ರಾಸಾಯನಿಕಯುಕ್ತ ಆಹಾರಗಳ ಸೇವನೆ ಮಾಡುತ್ತಿರುವುದು.
೫.ಚಿಕ್ಕ ವಯಸ್ಸಿನಲ್ಲೇ ಹಣ, ವಾಹನದಂತಹ ಚಂಚಲತೆ ಸೃಷ್ಟಿಸುವ ವಸ್ತುಗಳು ಬಳಕೆಗೆ ದೊರಕಿರುವುದು.
ಇವು ಯುವ ಪೀಳಿಗೆಯಲ್ಲಿ ಕೇಳಿಸಿಕೊಳ್ಳುವ ಮತ್ತು ಏಕಾಗ್ರತೆಯ ಸಾಮರ್ಥ್ಯ ಕುಸಿಯಲು ಕಾರಣವಾಗಿದೆ.
ಅತ್ಯಂತ ಎಚ್ಚರಿಕೆಯಿಂದ ಈ ಸಮಸ್ಯೆಯಿಂದ ಹೊರಬರುವ ಬಗ್ಗೆ ಯುವಜನತೆ ಆಲೋಚಿಸಬೇಕಾಗಿದೆ. ನಿರ್ಲಕ್ಷಿಸಿದರೆ, ಮುಂದೆ ಇದೇ ಸಮಸ್ಯೆ ಎಂತಹ ಪ್ರತಿಭಾವಂತರನ್ನೂ ಮೂಲೆಗುಂಪು ಮಾಡಬಹುದಾಗಿದೆ.
‘ಕೇಳಿಸಿಕೊಳ್ಳುವುದು’ ಒಂದು ಹಿತವಾದ, ಸುಖವಾದ ಅನುಭವ. ಈ ಮನಸ್ಥಿತಿಯನ್ನು ಸಾಧಿಸಿದರೆ ನಮ್ಮ ಬೆಳವಣಿಗೆಯನ್ನು, ಆತ್ಮವಿಶ್ವಾಸವನ್ನು ಯಾರಿಂದಲೂ ಕುಗ್ಗಿಸಲಾಗದು. ಅಷ್ಟೇ ಅಲ್ಲ, ಇದರಿಂದ ನಮ್ಮ ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಸರಿಯಾದ ಕ್ರಮದಲ್ಲಿ ಕೇಳಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಮೆದುಳೂ ಕಾರ್ಯಪ್ರವೃತ್ತವಾಗುತ್ತದೆ.
ಸುಧಾರಣೆ ಕ್ರಮಗಳು
೧) ನಿಮಗೆ ಇಷ್ಟವಾದ ಹಾಡು, ವಿಷಯಗಳನ್ನು ಆಡಿಯೋ ರೂಪದಲ್ಲಿ ಕೇಳಿಸಿಕೊಳ್ಳುವುದನ್ನು ಅಭ್ಯಸಿಸುವುದು
೨) ತರಗತಿಯಲ್ಲಿ ಅಥವಾ ಹೊರಗೆ ಉಪನ್ಯಾಸಗಳನ್ನು ಕೇಳುವಾಗ ಪ್ರಜ್ಞಾಪೂರ್ವಕವಾಗಿ ಕೇಳಿಸಿಕೊಂಡು ಅಲ್ಲಿನ ಮುಖ್ಯಾಂಶಗಳನ್ನು ಪಟ್ಟಿ ಮಾಡುವುದು. ಆ ಮೂಲಕ ಪ್ರಶ್ನೆ ಕೇಳಲು ಅಥವಾ ಪ್ರತಿಕ್ರಿಯಿಸಲು ಸಿದ್ಧತೆ ಮಾಡಿಕೊಳ್ಳುವುದು
೩) ಮತ್ತೆ ಮತ್ತೆ ಮೊಬೈಲ್, ಲ್ಯಾಪ್ಟಾಪ್, ಟಿವಿಗಳನ್ನು ವೀಕ್ಷಿಸದಿರುವುದು. ಒಮ್ಮೆಗೆ ೧೦ ರಿಂದ ೧೫ ನಿಮಿಷಗಳ ಕಾಲ ಮಾತ್ರ ನೋಡುವುದು
೪) ಎದುರಿದ್ದವರು ಪೂರ್ಣ ಮಾತು ಮುಗಿಸಿದ ನಂತರವಷ್ಟೇ ಅವರಿಗೆ ಪ್ರತಿಕ್ರಿಯಿಸುವುದನ್ನು ಅಭ್ಯಾಸ ಮಾಡಿಕೊಳ್ಳುವುದು
೫) ಆಹಾರದಂತೆ ಆಲೋಚನೆ ಎಂಬ ಮಾತಿದೆ. ಆದಷ್ಟು ಸಹಜ, ಸರಳ ಆಹಾರ ಸೇವನೆ ಮನಸ್ಸಿನ ಶಾಂತತೆ ಮತ್ತು ಏಕಾಗ್ರತೆಯ ವೃದ್ಧಿಗೆ ಇರುವ ಮತ್ತೊಂದು ಮುಖ್ಯವಾದ ಸಂಗತಿಯಾಗಿದೆ.
ಇಸ್ಲಾಮಾಬಾದ್: ಇರಾನ್, ಅಮೇರಿಕಾ-ಇಸ್ರೇಲ್ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದಾಗಿದೆ. ಮಾರ್ಚ್.23ರಂದು…
ಮಡಿಕೇರಿ: ನಾಡಿನಾದ್ಯಂತ ಇಂದು ಹೊಸ ವರ್ಷ ಯುಗಾದಿ ಸಂಭ್ರಮ ಮನೆ ಮಾಡಿದ್ದು, ಕೊಡಗಿನ ಮನೆ ಮನೆಯಲ್ಲೂ ಯುಗಾದಿ ಹಬ್ಬದ ಸಡಗರ…
ಟಿ.ನರಸೀಪುರ: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪುಣ್ಯಸ್ನಾನಕ್ಕೆಂದು ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಮೈಸೂರು ಜಿಲ್ಲೆ…
ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಕಾಡಾನೆಯೊಂದು ಕೆಲಕಾಲ ಒದ್ದಾಟ ನಡೆಸಿದ ಘಟನೆ ತಾಲ್ಲೂಕಿನ ಉಡುವೆಪುರ ಬಳಿ ನಡೆದಿದೆ. ನಾಗರಹೊಳೆ…
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಭಾರೀ ಪ್ರಮಾಣದ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ…
ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ಅನ್ನದಾತರು ಹೊನ್ನೇರು ಕಟ್ಟಿ ಭೂಮಿ…