ಆಂದೋಲನ ಪುರವಣಿ

ತಂಬಾಕು ಮಾರುಕಟ್ಟೆಗೆ ಬಂತು ಜೀವಕಳೆ

ಮೈಸೂರು ಜಿಲ್ಲೆಯ ವಿವಿಧೆಡೆ ತಂಬಾಕು ಮಾರುಕಟ್ಟೆಗಳಿಗೆ ಚಾಲನೆ; ಉತ್ತಮ ದರದ ನಿರೀಕ್ಷೆಯಲ್ಲಿ ರೈತರು

ಆರ್.ಎಲ್.ಮಂಜುನಾಥ್

ಮೈಸೂರು ಜಿಲ್ಲೆಯಲ್ಲಿ ತಂಬಾಕು ಬೆಳೆಗೆ ವಿಶಿಷ್ಟ ಸ್ಥಾನವಿದೆ. ಇದೊಂದು ವಾಣಿಜ್ಯ ಬೆಳೆಯಾಗಿದ್ದು, ರೈತರಿಗೆ ಕೈ ತುಂಬಾ ಆದಾಯ ತಂದುಕೊಡುವ ಬೆಳೆ ಎಂಬ ಹಿರಿಮೆ ಪಡೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊಗೆಸೊಪ್ಪಿಗೆ ಸೂಕ್ತ ಬೆಲೆ ದೊರಕದೆ, ಬೆಳೆಯೂ ಸಮರ್ಪಕವಾಗಿ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಸೋಮವಾರದಿಂದ ಜಿಲ್ಲೆಯ ವಿವಿಧೆಡೆ ತಂಬಾಕು ಮಾರುಕಟ್ಟೆಗಳು ಚಾಲನೆ ಪಡೆದುಕೊಂಡಿವೆ. ಮಾರುಕಟ್ಟೆಯಲ್ಲಿ ರೈತರು, ಕಂಪೆನಿಗಳ ಪ್ರತಿನಿಧಿಗಳು ವ್ಯವಹಾರದಲ್ಲಿ ನಿರತರಾಗಿದ್ದು, ಮಾರುಕಟ್ಟೆ ಗಿಜಿಗುಡುತ್ತಿದೆ. ಈ ಹಿನ್ನೆಲೆಯಲ್ಲಿ ತಂಬಾಕು ಬೆಳೆಗಾರರು, ಮಾರುಕಟ್ಟೆ ವ್ಯವಸ್ಥೆ, ದರ ನಿಗದಿ ಮುಂತಾದ ವಿಚಾರಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಮೈಸೂರು ಜಿಲ್ಲೆಯಲ್ಲಿ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲ್ಲೂಕು ಸೇರಿದಂತೆ ವಿವಿಧೆಡೆ ೪೧,೪೪೦ ಮಂದಿ ರೈತರು ತಂಬಾಕು ಬೆಳೆದಿದ್ದಾರೆ. ಅಂದಾಜು ೭೦ ಸಾವಿರ ಹೆಕ್ಟೇರ್‌ನಲ್ಲಿ ಹೊಗೆಸೊಪ್ಪು ಬೆಳೆಯನ್ನು ಬೆಳೆಯಲಾಗುತ್ತದೆ. ಹುಣಸೂರಿನಲ್ಲಿ ೪ ಫ್ಲಾಟ್‌ಫಾರಂ, ಪಿರಿಯಾಪಟ್ಟಣದಲ್ಲಿ ೩, ಎಚ್.ಡಿ.ಕೋಟೆಯಲ್ಲಿ ೨ ಮತ್ತು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ೨ ಫ್ಲಾಟ್‌ಫಾರಂ ಸೇರಿ ಒಟ್ಟು ೧೧ ಫ್ಲಾಟ್‌ಫಾರಂಗಳಿವೆ.

ಪ್ರತಿ ವರ್ಷ ರೈತರಿಗೆ ತಂಬಾಕು ಮಂಡಳಿಯಿಂದ ಇಂತಿಷ್ಟು ಕೆಜಿ ತಂಬಾಕು ಬೆಳೆಯಲು ಗುರಿ ನಿಗದಿಪಡಿಸಲಾಗುತ್ತದೆ. ಕಳೆದ ವರ್ಷ ೯೧ ಮಿಲಿಯನ್ ಕೆಜಿ ತಂಬಾಕು ಮಾರಾಟದ ಗುರಿ ನೀಡಲಾಗಿತ್ತು. ಆದರೆ, ಇಳುವರಿ ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ೬೮.೧೩ ಮಿಲಿಯನ್ ಕೆಜಿ ಮಾತ್ರ ಮಾರಾಟವಾಗಿತ್ತು. ಕಳೆದ ವರ್ಷ ಕೆಜಿಗೆ ಸರಾಸರಿ ೧೬೩ ರೂ. ದೊರೆತಿತ್ತು. ಜತೆಗೆ ೧೦೦ರಿಂದ ೧೨೦ ದಿನಗಳ ಕಾಲ ಮಾರುಕಟ್ಟೆ ಕಾರ್ಯನಿರ್ವಹಿಸಿತ್ತು.

ಮಾರುಕಟ್ಟೆ ಎಂದ ಮೇಲೆ ಚೌಕಾಸಿ ಇದ್ದೇ ಇರುತ್ತದೆ. ಅದೇ ರೀತಿ ತಂಬಾಕು ಮಾರುಕಟ್ಟೆಯಲ್ಲಿ ಚೌಕಾಸಿ ವ್ಯವಹಾರ ಸ್ವಲ್ಪ ಜಾಸ್ತಿಯೇ ಇರುತ್ತದೆ. ಪ್ರತಿ ವರ್ಷ ರೈತರು ಕೇಳಿದ ದರ ಸಿಗುವುದೇ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿರುತ್ತದೆ. ತಂಬಾಕು ಮಾರುಕಟ್ಟೆಯಲ್ಲಿ ಕೇವಲ ಒಂದೇ ರೀತಿಯ ತಂಬಾಕು ಇರುವುದಿಲ್ಲ. ಅದನ್ನೂ ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಉತ್ತಮ ದರ್ಜೆಯ ಹೊಗೆಸೊಪ್ಪಿಗೆ ೨೫೦ ರೂ. ಮತ್ತು ಸಾಧಾರಣ ದರ್ಜೆಯ ತಂಬಾಕಿಗೆ ೨೦೦ ರೂ. ದರ ನಿಗದಿಯಾಗಬೇಕು ಎಂಬುದು ರೈತರ ಆಗ್ರಹವಾಗಿದೆ. ಅದರಲ್ಲೂ ಈ ಬಾರಿ ಅತಿಯಾದ ಮಳೆಯಿಂದ ತಂಬಾಕು ರೈತರು ನಷ್ಟ ಅನುಭವಿಸಿದ್ದು, ಕಷ್ಟ ಪಟ್ಟು ಬೆಳೆದ ಬೆಳೆಗೆ ಉತ್ತಮ ದರ ನೀಡಬೇಕು ಎಂಬುದು ರೈತರ ಅಳಲು.

ಅಂದಾಜು ಪ್ರತಿ ದಿನಕ್ಕೆ ೨೦ರಿಂದ ೩೦ ಬೇಲ್‌ಗಳನ್ನು ರೈತರು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮುಂದೆ ತಂಬಾಕು ಖರೀದಿಸುವ ಟ್ರೇಡರ್ಸ್‌ಗಳು ಉತ್ತಮ ಬೆಲೆ ನೀಡಿದರೆ ಈ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಬಾರಿ ೫೦ಕ್ಕೂ ಹೆಚ್ಚು ಕಂಪೆನಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಸೋಮವಾರದಿಂದ ಆರಂಭವಾದ ಮಾರುಕಟ್ಟೆಯಲ್ಲಿ ೨೧ ಕಂಪೆನಿಗಳು ಭಾಗವಹಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ವರ್ಷ ನಮ್ಮ ತಂಬಾಕಿಗೆ ಉತ್ತಮ ಬೇಡಿಕೆ ಇದೆ. ಬೇರೆ ರಾಷ್ಟ್ರಗಳಲ್ಲಿ ಅತಿಯಾದ ಮಳೆ ಮತ್ತಿತರ ಕಾರಣಗಳಿಂದ ಇಳುವರಿ ಕಡಿಮೆ ಇದೆ. ಹಾಗಾಗಿ ನಮ್ಮ ರಾಜ್ಯದ ತಂಬಾಕಿಗೆ ಬೇಡಿಕೆ ಇದ್ದು, ರೈತರು ತಂಬಾಕನ್ನು ಗ್ರೇಡ್ ಮಾಡಿ ಗುಣಮಟ್ಟದ ತಂಬಾಕನ್ನು ಮಾರುಕಟ್ಟೆಗೆ ತರಬೇಕು. ಆಗ ಉತ್ತಮ ಬೆಲೆ ದೊರೆಯುತ್ತದೆ. ನೆರೆಯ ಆಂಧ್ರಪ್ರದೇಶಕ್ಕಿಂತ ಹೆಚ್ಚು ಬೆಲೆ ದೊರಕಿಸುವ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ. ಜತೆಗೆ ಕೆಲವು ತಂಬಾಕು ಮಾರುಕಟ್ಟೆಗಳಲ್ಲಿ ಮೂಲ ಸೌಕರ್ಯದ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಅಲ್ಲಿಗೆ ತಂಬಾಕು ತರುವ ರೈತರಿಗೆ ಕುಡಿಯುವ ನೀರು, ಶೌಚಾಲಯ, ಉಳಿದುಕೊಳ್ಳಲು ವ್ಯವಸ್ಥೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಂಸದ ಪ್ರತಾಪ್‌ಸಿಂಹ ಅವರು ಕೂಡ ರೈತರಿಗೆ ಹೆಚ್ಚಿನ ಬೆಲೆ ದೊರಕಿಸಲು ಮುಂದಾಗಿದ್ದಾರೆ ಎನ್ನುತ್ತಾರೆ ತಂಬಾಕು ಮಂಡಳಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಎಚ್.ಸಿ. ಬಸವರಾಜು


ಮಾರುಕಟ್ಟೆ ಪ್ರಾರಂಭವಾಗುವ ಮುನ್ನ ನಿರ್ದೇಶಕರು, ಸಚಿವರು, ಅಧಿಕಾರಿಗಳು, ಸಂಸದರು ರೈತರ ಸಭೆ ಕರೆದು, ಸಮಸ್ಯೆಗಳು, ಬೆಲೆ ನಿಗದಿ ಕುರಿತು ಚರ್ಚಿಸಬೇಕಿತ್ತು. ಉತ್ತಮ ಬೆಲೆ ಸಿಗದೇ ಇದ್ದರೆ ರೈತರು ಭಾರೀ ಹೋರಾಟ ನಡೆಸಬೇಕಾಗುತ್ತದೆ.

ಬಿ.ವಿ.ಬಸವರಾಜು, ತಂಬಾಕು ರೈತರು, ಎಚ್.ಡಿ.ಕೋಟೆ.

andolanait

Recent Posts

ರಾಜ್ಯಕ್ಕೆ ಹೆಚ್ಚುವರಿ 1122 ಸರ್ಕಾರಿ ಮೆಡಿಕಲ್‌ ಸೀಟ್‌ ಲಭ್ಯ: ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌

ಬೆಂಗಳೂರು: ರಾಜ್ಯದಲ್ಲಿ ಮೆಡಿಕಲ್‌ ಸೀಟು ಲಭ್ಯತೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ. ರಾಜ್ಯಕ್ಕೆ…

4 mins ago

ಹನೂರು| ಸಚಿವರನ್ನೇ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ…

29 mins ago

ಕಾಡಾನೆ ದಾಳಿಗೆ ನಾಶವಾದ ತೆಂಗು, ಮುಸುಕಿನ ಜೋಳ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಕಾಡಾನೆ ದಾಳಿಗೆ ತೆಂಗು ಹಾಗೂ ಮುಸುಕಿನ ಜೋಳದ ಬೆಳೆ ನಾಶವಾಗಿರುವ ಘಟನೆ…

37 mins ago

ರಾಜ್ಯಕ್ಕೂ ಬಂತು ಎಸ್‌ಐಆರ್‌ ; ಜೂನ್‌ನಿಂದ ಆರಂಭ

ಬೆಂಗಳೂರು : ಇಡೀ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಎಸ್‌ಐಆರ್ ಪ್ರಕ್ರಿಯೆ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಬಿಹಾರ ಮತ್ತು…

2 hours ago

ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ಪುರಭವನ?

ಮೈಸೂರು : ಸಾಂಸ್ಕೃತಿಕ ನಗರದ ಹೃದಯ ಭಾಗದಲ್ಲಿ ರುವ ಐತಿಹಾಸಿಕ ರಂಗಾಚಾರ್ಲು ಪುರಭವನ ಇದೀಗ ನಿರ್ಲಕ್ಷ್ಯದ ಪರಿಣಾಮ ಶಿಥಿಲಾವಸ್ಥೆಯತ್ತ ಸಾಗುತ್ತಿದೆ.…

3 hours ago

ಹಿಜಾಬ್‌ ವಿವಾದ : ಹೊಸ ಆದೇಶ ಸಕಾರಾತ್ಮಕ ಬೆಳವಣಿಗೆಗೆ ಸಹಾಯ

ಸಂವಿಧಾನಾತ್ಮಕ ಹಕ್ಕು ಅನುಷ್ಠಾನದಲ್ಲಿ ಎಚ್ಚರಿಕೆ ಅಗತ್ಯ ನಿರಂಜನಾರಾಧ್ಯ ವಿ.ಪಿ.ಅಭಿವೃದ್ಧಿ ಶಿಕ್ಷಣ ತಜ್ಞ ಹಿಂದೆ ೨೦೨೨ರಲ್ಲಿ ಹಿಜಾಬ್ ನಿಷೇಧಿಸಿ ಬಿಜೆಪಿ ನೇತೃತ್ವದ…

4 hours ago