ಹಿರಿಯರಾದ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕಾನೂನಾತ್ಮಕ ಹೊಣೆಗಾರಿಯಾಗಿದ್ದು, ಇದನ್ನು ಉಲ್ಲಂಘಿಸಿ ಹಿರಿಯರನ್ನು ಶೋಷಣೆ ಮಾಡಿದಲ್ಲಿ ಕಾನೂನಿನ ಕ್ರಮ ಜರುಗಿಸಿ ಶಿಕ್ಷೆಯಾಗುವ ಸಾಧ್ಯತೆಯೂ ಇದೆ. ಅಲ್ಲದೆ ನಿಂದನೆಗೆ ಒಳಪಟ್ಟರೆ ಹಾಗೂ ಕುಟುಂಬದಿಂದ ದೂರವಿಟ್ಟರೆ ಮಕ್ಕಳ ವಿರುದ್ಧವೇ ಹಿರಿಯರು ಕಾನೂನು ಹೋರಾಟ ಮಾಡಬಹುದಾಗಿದೆ.
ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಕೆಲವೊಂದು ವಿಡಿಯೋಗಳು ವೈರಲ್ ಆಗುತ್ತಿವೆ. ಕುಟುಂಬಗಳಿಂದ ಹೊರದೂಡಲ್ಪಟ್ಟ ಅದೆಷ್ಟೋ ಹಿರಿ ಜೀವಗಳು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ತೀರಾ ಸಂಕಷ್ಟದಲ್ಲಿರುವ, ರಸ್ತೆ ಬದಿಯಲ್ಲಿದ್ದ ಅನೇಕರನ್ನು ವೃದ್ಧಾಶ್ರಮಕ್ಕೆ ಸ್ವಯಂಸೇವಕರು ಸೇರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇಂತಹ ವಿಡಿಯೋಗಳಲ್ಲಿ ಇತ್ತೀಚೆಗೆ ಕಂಡ ವಿಡಿಯೋವೊಂದು ಮನಕಲಕುವಂತಿತ್ತು. ಮನೆಯಿಂದ ಹೊರದೂಡಲ್ಪಟ್ಟ ಹಿರಿಯ ರೊಬ್ಬರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಕೆಲ ದಿನಗಳ ಬಳಿಕ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರೂ ಬಾರದ ಕುಟುಂಬದವರು ಅವರು ಸಾವನ್ನಪ್ಪಿದ ಬಳಿಕ ಮೃತದೇಹ ನೀಡಿ ಎಂದು ಕೇಳಿಕೊಂಡು ಬಂದಿದ್ದರು. ಈ ವೇಳೆ ವೃದ್ಧಾಶ್ರಮದ ನಿರ್ವಾಹಕರು ಮೃತದೇಹವನ್ನು ಹಸ್ತಾಂತರಿಸಿ ಕುಟುಂಬಸ್ಥರಿಗೆ ಬುದ್ಧಿಯ ಮಾತುಗಳನ್ನಾಡಿ ಕೊನೆಗೆ ಅಲ್ಲಿಯೇ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ಮಾಡಿಸಿದರು.
ಈ ವಿಡಿಯೋ ನೋಡಿ ಒಂದಷ್ಟು ಜನ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಅದರಲ್ಲಿ ಬಹಳಷ್ಟು ಕುಟುಂಬಸ್ಥರ ವಿರುದ್ಧವಾಗಿ, ವೃದ್ಧಾಶ್ರಮದವರ ಪರವಾಗಿದ್ದವು. ಮೃತದೇಹವನ್ನು ಹಸ್ತಾಂತರಿಸಬೇಡಿ, ಅವರ ಮರಣ ಪತ್ರ ಪಡೆದು ಆಸ್ತಿ ಪಡೆಯಲು ಬಂದಿದ್ದಾರೆ ಎಂಬ ಕಮೆಂಟ್ಗಳೇ ಅಲ್ಲಿ ಹೆಚ್ಚಾಗಿದ್ದವು.
ಹೌದು, ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ವೃದ್ಧರನ್ನು ವೃದ್ಧಾಶ್ರಮಕ್ಕೆ ಬಿಡುವುದು, ಬಳಿಕ ಆಸ್ತಿ-ಮತ್ತಿತರ ವಿಚಾರಗಳಿಗೆ ಮಾತ್ರ ಅವರನ್ನು
ಸಂಪರ್ಕಿಸುವವರೂ ಇದ್ದಾರೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ? ಹಿರಿಯರನ್ನು ನೋಡಿಕೊಳ್ಳಲಾಗದ ಮಕ್ಕಳು, ಬೀದಿಗೆ ದೂಡಿ, ವೃದ್ಧಾಶ್ರಮಗಳಿಗೆ ಸೇರಿಸಿ ಅವರ ಆಸ್ತಿಗಳನ್ನು ಪಡೆಯಲು ಸಾಧ್ಯವೇ? ಇಂತಹದೊಂದು ಪ್ರಶ್ನೆ ಮೂಡುವುದು ಸಹಜ.
ಇತ್ತೀಚೆಗೆ ಹಿರಿಯ ನಾಗರಿಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು, ಅವರ ಮಕ್ಕಳು, ಮೊಮ್ಮಕ್ಕಳ ಪ್ರೀತಿಯಿಂದ ವಂಚಿತರಾಗಿ, ಶೋಷಣೆಗೆ ಒಳಗಾಗಿರುವವರು ನ್ಯಾಯಾಲಯದಲ್ಲಿ ಹೋರಾಟ ನಡೆಸಬಹುದು. ಇವರಿಗಾಗಿಯೇ ಕಾನೂನು ಸಲಹಾ ಕೇಂದ್ರಗಳೂ ಇವೆ.
ಹಿರಿಯ ನಾಗರಿಕರಿಂದ ಮಕ್ಕಳು ಅಥವಾ ಸಂಬಂಧಿಕರು ಆಸ್ತಿಯನ್ನು ಪಡೆದುಕೊಂಡು ಬಳಿಕ ಅವರನ್ನು ಹೊರದೂಡಿದರೂ ಅವರ ಆಸ್ತಿಯನ್ನು ಮರಳಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಈ ಬಗ್ಗೆ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007ರೊಳಗೆ ಘೋಷಿಸಲಾಗಿದ್ದು, ಯಾವುದೇ ಆಸ್ತಿಯನ್ನು ಉಡುಗೊರೆಯ ಮೂಲಕ ವರ್ಗಾಯಿಸಿದರೂ ನಂತರ ಹಿರಿಯ ನಾಗರಿಕರು ನಿರ್ವಹಣೆ ಕಾಯಿದೆ, 2007ರ ನಿಬಂಧನೆಗಳ ಪ್ರಕಾರ ವಹಿವಾಟನ್ನು ಹಿಂತೆಗೆದುಕೊಳ್ಳಬಹುದು. ಇನ್ನು ಆಸ್ತಿ ವಿಚಾರಕ್ಕೆ ಬಂದಲ್ಲಿ ತಮ್ಮ ಆಸ್ತಿಯನ್ನು ತಮ್ಮಿಷ್ಟಕ್ಕನುಸಾರ ಯಾರಿಗಾದರೂ ಉಡುಗೊರೆಯಾಗಿ ನೀಡುವ ಅಥವಾ ಇತರೆ ವಿಧಾನಗಳ ಮೂಲಕ ವರ್ಗಾವಣೆ ಮಾಡುವ ಹಕ್ಕು ಹಿರಿಯರಿಗಿರುತ್ತದೆ. ಒಂದು ವೇಳೆ ಆಸ್ತಿ ಪಡೆದ ಬಳಿಕವೇನಾದರೂ ಮಕ್ಕಳು ಅವರನ್ನು ಹೊರದೂಡಿದರೂ ಆ ಆಸ್ತಿಯನ್ನು ಮರಳಿ ಪಡೆಯುವ ಹಕ್ಕು ಅವರಿಗಿದೆ. ಇದರೊಂದಿಗೆ ಮಕ್ಕಳು ಅಥವಾ ಹತ್ತಿರದ ಸಂಬಂಧಿಗಳು ಆಸ್ತಿ ಮಾಡಿದರೆ ಅದರಲ್ಲಿ ಹಿರಿಯರ ಹೆಸರನ್ನು ಕೈಬಿಡುವಂತಿಲ್ಲ. ಇಷ್ಟೆಲ್ಲ ಕಾನೂನು ಹಿರಿಯರಿಗಿದ್ದರೂ 80-90 ವರ್ಷವಾಗುತ್ತಿದ್ದಂತೆ ಅವರನ್ನು ವೃದ್ಧಾಶ್ರಮಗಳಿಗೆ ಬಿಡುವ ಮಕ್ಕಳಿದ್ದಾರೆ ಎಂಬುದೇ ವಿಪರ್ಯಾಸ. ಸತ್ತಾಗ ಬಂದು ಗೋಳಿಡುವ ಈ ನಾಟಕೀಯ ಬದುಕು ಕೇವಲ ಹಣ- ಆಸ್ತಿಗಾಗಿ ಎಂಬುದು ಗೋಚರ ಸತ್ಯ. ಸರ್ಕಾರದ ಈ ನಿಯಮಗಳ ಬಗ್ಗೆ ಹಿರಿಯರು ಜಾಗೃತರಾದಲ್ಲಿ ಅವರ ಮೇಲಿನ ಶೋಷಣೆ ಕಡಿಮೆಯಾಗಲಿದೆ.
ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…
ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…
ಹನೂರು : ಮೂರ್ಛೆ ತಪ್ಪಿದ್ದ ವೃದ್ದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಸಿಗದೆ ಡೋಲಿ ಮುಖಾಂತರ ಕರೆದುಕೊಂಡು ಬಂದಿರುವ ಘಟನೆ…
2.5 ವರ್ಷದಲ್ಲಿ 592 ಭರವಸೆಗಳಲ್ಲಿ 243 ಭರವಸೆ ಈಡೇರಿಕೆ ಹಾವೇರಿ : ಏನು ಮಾತು ಕೊಟ್ಟಿದ್ದೆವೋ ಅದರಂತೆ ನಡೆದಿದ್ದೇವೆ. ಸಾವಿರ…
ಜಮ್ಮು : ನೆರೆಯ ಪಾಕಿಸ್ತಾನದಿಂದ ಡ್ರೋನ್ ಮೂಲಕ ಬಂದ ನಾಲ್ಕು ಕೆಜಿಗೂ ಹೆಚ್ಚು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ…
ಮದ್ದೂರು : ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಸಲುವಾಗಿ ನಗರಸಭೆಗೆ ಗ್ರಾ.ಪಂ.ಗಳ ಸೇರ್ಪಡೆ ಸಂಬಂಧ ಸರ್ಕಾರದ ಹಂತದಲ್ಲಿ ಮಾತನಾಡಿ ಕ್ರಮ…