ಆಂದೋಲನ ಪುರವಣಿ

ವಾರಾಂತ್ಯ ವಿಶೇಷ : ಮೈಸೂರಿನಲ್ಲಿ ಘಮ ಘಮಿಸಲಿದೆ ಹಲಸು

ಹಲಸು ಈಗ ಕೇವಲ ಹಣ್ಣಾಗಿ ಉಳಿದಿಲ್ಲ. ಅದರ ಮೌಲ್ಯವರ್ಧನೆ ಮಾಡಿ ನಾನಾ ಬಗೆಯ ತಿನಿಸು, ಅಡುಗೆಗಳನ್ನು ತಯಾರಿಸುವ ಪದ್ಧತಿ ಇದೆ. ಹಲವರಿಗೆ ಈ ಹಣ್ಣನ್ನು ಬಳಸಿ ಏನೇನು ಮಾಡಬಹುದು ಎನ್ನುವುದು ತಿಳಿದಿರುವುದಿಲ್ಲ. ಇದನ್ನೆಲ್ಲ ತಿಳಿಸಲು ಮೈಸೂರಿನಲ್ಲಿ ಹಲಸು ಮೇಳ ನಡೆಯುತ್ತಿದೆ. ಆ. ೬, ೭ರಂದು ಎರಡು ದಿನಗಳ ಕಾಲ ನಡೆಯುವ ಈ ಹಲಸು ಹಬ್ಬಕ್ಕೆ ಎಲ್ಲರಿಗೂ ಇದೆ ಮುಕ್ತ ಅವಕಾಶ.

‘ಹಸಿದು ಹಲಸು ತಿನ್ನು, ಉಂಡು ಬಾಳೆ ತಿನ್ನು’ ಎಂಬ ಗಾದೆ ಮಾತಿದೆ. ಹಿಂದೆ ಕೇವಲ ಗ್ರಾಮೀಣ ಭಾಗದವರ ಬಳಕೆಗೆ ಸೀಮಿತವಾಗಿದ್ದ ಹಲಸು ಈಗ ಸರ್ವ ವ್ಯಾಪಿ. ಬರಗಾಲದಲ್ಲೂ ಬೆಳೆಯುವ ಶಕ್ತಿ, ಔಷಧೀಯ ಗುಣಗಳ ಆಗರ, ಗೊಬ್ಬರ ಕೇಳದ ಮರ, ರೈತರ ಪಾಲಿನ ಆಪ್ತಮಿತ್ರ… ಹೀಗೆ ಹಲಸನ್ನು ಹಲವು ಬಗೆಯಾಗಿ ಹಾಡಿ ಹೊಗಳಬಹುದು.

ಮೇಲೆ ಒರಟಾಗಿ ಇದ್ದರೂ, ಒಳಗೆ ಅಂಟು ಕಿರಿಕಿರಿ ಉಂಟು ಮಾಡುತ್ತಿದ್ದರೂ, ಹಣ್ಣು ಕೊಯ್ದು, ತೊಳೆ ಬಿಡಿಸಿ ಬಾಯಿಗಿಟ್ಟರೆ ಎಲ್ಲ ಶ್ರಮವೂ ಮಾಯವಾಗಿ ಬಾಯಲ್ಲಿ ಸಿಹಿ ನಿಲ್ಲುತ್ತದೆ. ಕೆಲವ ಜಾತಿಯ ಹಣ್ಣುಗಳಂತೂ ಬೆಲ್ಲದ ಪಾಕ. ಇಂತಿಪ್ಪ ಹಲಸಿನ ನಿರಂತರ ಸೇವನೆಯಿಂದ ಮಧುಮೇಹಿಗಳು ಇನ್ಸುಲಿನ್ ಬಳಕೆ ತಗ್ಗಿಸಬಹುದು. ಕ್ಯಾನ್ಸರ್, ಮಲಬದ್ಧತೆಯಂತಹ ಕಾಯಿಲೆಗಳನ್ನು ದೂರವಿಡಬಹುದು.

ಯಾರು ಆಯೋಜಕರು

ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಆಶ್ರಯದಲ್ಲಿ ‘ಹಲಸಿನ ಹಬ್ಬ’ ಆಯೋಜಿಸಲಾಗಿದೆ.

ಮೇಳದ ವಿಶೇಷವೇನು?
ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿಯ ಮಳಿಗೆಗಳೂ ಇರಲಿವೆ. ಹಲಸಿನ ಬೀಜದ ಪೇಯ ‘ಜಾಫಿ’ಯೂ ಸಿಗಲಿದೆ. ಹಲಸಿನ ಕೃಷಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಿಗಲಿವೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.

ಗಿಡಗಳ ಮಾರಾಟ
ಮೇಳದಲ್ಲಿ ಮೂವತ್ತು ಜಾತಿಯ ಹಲಸಿನ ತಳಿಗಳ, ವಿಶೇಷವಾಗಿ ಕೆಂಪು ಹಲಸಿನ ತಳಿಯ ಗಿಡಗಳು ಕೊಳ್ಳಲು ಲಭ್ಯ ಇರಲಿವೆ. ರುದ್ರಾಕ್ಷಿ, ಬಕ್ಕೆ, ಸಿದ್ದು ಹಲಸು, ಬೈರಸಂದ್ರ, ಸರ್ವ ಋತು, ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ಶಂಕರ ಮೊದಲಾದ ತಳಿಗಳು ಮಾರಾಟಕ್ಕೆ ಲಭ್ಯವಿವೆ.

ಎರಡು ದಿನಗಳ ಮೇಳವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ವಿದ್ಯಾಶಂಕರ್ ಉದ್ಘಾಟನೆ ಮಾಡಲಿದ್ದಾರೆ. ನಟ ಮಂಡ್ಯ ರಮೇಶ್ ಕೆಂಪು ತಳಿಯ ‘ಸಿದ್ದು ಹಲಸು’ ಬಿಡುಗಡೆ ಮಾಡಲಿದ್ದಾರೆ. ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷರಾದ ಉಲ್ಲಾಸ್ ಪಂಡಿತ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರುದ್ರೇಶ್ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಕರುಣಾಕರನ್ ಉಪಸ್ಥಿತರಿರಲಿದ್ದಾರೆ.


ವಿವಿಧ ಸ್ಪರ್ಧೆಗಳು

ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ‘ಹಲಸಿನ ಅಡುಗೆ ಸ್ಪರ್ಧೆ’ ಇದ್ದು, ಹಲಸಿನ ಹಣ್ಣು, ಕಾಯಿ, ಬೀಜ, ಎಲೆಯಿಂದ ಮಾಡುವ ಸಾಂಪ್ರದಾಯಿಕ ಅಥಾವ ಹೊಸ ಬಗೆಯ ಅಡುಗೆಗಳಿಗೆ ಆಹ್ವಾನವಿದೆ. ಮಧ್ಯಾಹ್ನ ೨ ಗಂಟೆಗೆ ‘ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ’ ಇದ್ದು, ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರಿಗೆ ಬಹುಮಾನ ಪಕ್ಕಾ.

ಪ್ರಮುಖ ಆಕರ್ಷಣೆ
ತುಮಕೂರಿನ ಚೇಳೂರಿನ ಕೆಂಪು ಮತ್ತು ಬಿಳಿ ಹಲಸು, ದೊಡ್ಡಬಳ್ಳಾಪುರದದ ತೂಬಗೆರೆ ಹಲಸು ಮೇಳದ ಆಕರ್ಷಣೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ೧೨ ರೈತ ಮತ್ತು ಮಹಿಳಾ ಗುಂಪುಗಳು ವಿವಿಧ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿದ್ದಾರೆ. ನುಗ್ಗೆ ಉಪ್ಪಿನ ಕಾಯಿ, ಬಗೆಬಗೆಯ ದಂಟು ಸೊಪ್ಪು, ಬಿದಿರು ಕಳಲೆ, ಗುಣಮಟ್ಟದ ಜವಾರಿ ಬೀಜ, ಸಿರಿಧಾನ್ಯ ಮತ್ತು ಕಾಳುಗಳು ಸಿಗಲಿವೆ.

ಎಲ್ಲಿ, ಯಾವಾಗ?

ಆ.೬,೭ರ ಶನಿವಾರ ಮತ್ತು ಭಾನುವಾರ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಹಲಸು ಮೇಳ ನಡೆಯಲಿದ್ದು, ನಂಜರಾಜ ಬಹದ್ದೂರ್ ಛತ್ರ, ಬೆಳಿಗ್ಗೆ ೧೦.೦೦ ರಿಂದ ರಾತ್ರಿ ೮ ರವರೆಗೆ ಮುಕ್ತ ಅವಕಾಶ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. ೮೮೬೭೨೫೨೯೭೯

andolana

Recent Posts

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

1 hour ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

3 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

4 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

5 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

5 hours ago

ಆಂದೋಲನ ಸಂಪಾದಕೀಯ | ಇಂಧನ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ

ಕೇವಲ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮೂರು ಬಾರಿ ಹೆಚ್ಚಳವಾಗಿದೆ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ…

6 hours ago