ಹಾಡು ಪಾಡು

ಮೊಬೈಲಾಸುರನನ್ನು ವಧಿಸುವ ದೇವತೆ ಎಲ್ಲಿರುವಳೋ

-ಸದಾನಂದ ಆರ್

‘‘ಬರದ ಛಾಯೆಯ ನಡುವೆ ೨೦೨೩ರ ದಸರಾ ಅಂತ್ಯ’’ ಅನ್ನೋ ಸುದ್ದಿ ಓದುತ್ತಿದ್ದವನನ್ನು ‘‘ಓ…..ದಸರಾದಲ್ಲಿ ರಾವಣಾಸುರನನ್ನೂ ಸುಡುತ್ತಾರೆ. ದೆಹಲಿ ಎಷ್ಟು ದೊಡ್ಡ ಬೊಂಬೆ ನಿರ್ಮಿಸಿದ್ದಾರೆ ನೋಡಿಲ್ಲ’’ ಕರೆದು ಇಂಗ್ಲಿಷ್ ಪತ್ರಿಕೆಯಲ್ಲಿದ್ದ ಚಿತ್ರವನ್ನು ತೋರಿಸಿದಳು ಮಗಳು. ‘‘ಹೌದು. ದಸರಾದಲ್ಲಿ ರಾವಣಾಸುರನ ದಹನ ಮಾಡುವ ಸಂಪ್ರದಾಯವೂ ಇದೆ’’ ಎಂದೆ. ಮತ್ತೇನು ಪ್ರಶ್ನೆ ಕೇಳದೆ ಸುಮ್ಮನಾದಳು. ನಾನು ಪತ್ರಿಕೆಯಿಂದ ತಲೆಯೆತ್ತಿ ನೋಡಿದರೆ ಅವಳಾಗಲೇ ತನ್ನ ಮೊಬೈಲ್‌ನಲ್ಲಿ ಬಿಜಿಯಾಗಿದ್ದಳು. ಅವಳ ಕೈಯಲ್ಲಿದ್ದ ಮೊಬೈಲ್ ನೋಡುತ್ತಿದ್ದಂತೆ ಮೊಬೈಲ್ ಫೋನಿನ ಚಟ ನಮ್ಮ ಕಾಲದ ಪ್ಯಾಂಡಮಿಕ್ ಅನ್ನುವ ವರದಿಯನ್ನು ಓದಿದ ನೆನಪಾಯಿತು. ಕೋವಿಡ್‌ನ ನಂತರ ಎಲ್ಲರಿಗೂ ಪ್ಯಾಂಡಮಿಕ್ ಅನ್ನೋ ಪದ ಪರಿಚಿತ ? ದೇಶಗಳ ಮಿತಿಯನ್ನು ದಾಟುವ ಸರ್ವವ್ಯಾಪಿಯಾದ ರೋಗ. ಪಿಯು ಹಂತದಲ್ಲಿ ಪಾಠ ಮಾಡುವ ಮೇಷ್ಟ್ರಾಗಿ ಮೊಬೈಲ್‌ನ ಹಾವಳಿಯ ಪ್ರಮಾಣವನ್ನು ಕಣ್ಣಾರೆ ಕಂಡಿರುವ ನನಗೆ ಮೊಬೈಲ್ ಚಟ ಪ್ಯಾಂಡಮಿಕ್ ಅನ್ನೋದನ್ನು ಒಪ್ಪುವುದು ಕಷ್ಟವೆನಿಲಿಲ್ಲ. ಜೊತೆಗೆ ನಮ್ಮನ್ನು ಕಾಡುತ್ತಿರುವ ರಕ್ಕಸ ಈ ಮೊಬೈಲಾಸುರ!

ಬಹಳ ಹಿಂದೆ ವೈದ್ಯಕೀಯ ಕ್ಷೇತ್ರ ಪ್ರಗತಿ ಸಾಧಿಸುವುದಕ್ಕೆ ಮೊದಲು, ಇಂತಹ ದೊಡ್ಡ ರೋಗಗಳು ಬಂದರೆ ಅದಕ್ಕೊಂದು ದೇವರ ಹೆಸರು ನೀಡಿ, ಪೂಜಿಸಿ, ಬಲಿ ನೀಡಿ ತಮ್ಮನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ಜನ ಮಾಡುತ್ತಿದ್ದರು. ಇದರ ಕುರಿತು ಅನೇಕ ಜನಪದ ಕಥೆಗಳು ಮತ್ತು ಪುರಾಣ ಕಥೆಗಳು ಇದ್ದಾವೆ. ಹಾಗೆ ನೋಡಿದರೆ, ದುಷ್ಟ ಶಕ್ತಿ ಮತ್ತು ದೈವಿ ಶಕ್ತಿಗಳ ನಡುವಿನ ಕದನವೇ ಈ ಕಥೆಗಳ ಹೂರಣ. ನವರಾತ್ರಿಯಲಿ ಪೂಜಿತರಾಗುವ ದುರ್ಗೆಯರಿರಲಿ, ಮೈಸೂರಿನ ಚಾಮುಂಡಿ ಮಾತೆಯಿರಲಿ, ದಹನವಾಗುವ ರಾವಣಾಸುರನಿರಲಿ-ಈ ಎಲ್ಲಾ ಕಥೆಗಳಲ್ಲೂ ದೈವೀ ಶಕ್ತಿ ಅಂತಿಮವಾಗಿ ಜಯಗಳಿಸುತ್ತದೆ. ಹೀಗೆ ದುಷ್ಟ ಶಕ್ತಿಯಿಂದ ಪೀಡಿತನಾಗಿದ್ದ ಮಾನವ ತನ್ನನ್ನು ರಕ್ಷಿಸಿದ ದೈವೀ ಶಕ್ತಿಯನ್ನು ಸ್ತುತಿಸಿ ಪೂಜಿಸುವ ಘಳಿಗೆಯೇ ದಸರಾ ? ನವರಾತ್ರಿ ಹಬ್ಬಗಳಾಗುತ್ತವೆ. ಜನರ ಜಾತ್ರೆಗಳಾಗುತ್ತವೆ.

‘‘ಅಯ್ಯೋ ಬಿಡಿ. ಎಂತಹ ದುಷ್ಟ ಶಕ್ತಿ ಅವತರಿಸಿದರೂ, ದೇವರಿದ್ದಾನೆ. ದೈವೀ ಶಕ್ತಿಯ ಮುಂದೆ ಯಾರ ಆಟವೂ ಸಾಗದು ಅಂದಿರಾ?’’ ಕಲಿಯುಗದ ರಕ್ಕಸನಾದ ಮೊಬೈಲಾಸುರನ ಮಾಯಾಜಾಲದಲ್ಲಿರುವವರಿಗೆ ‘‘ಅದುವೇ ನಮ್ಮನೆ ದೇವರು’’ ಎಂದಾಗಿದೆ. ‘‘ನಾಶ ಪಡಿಸು’’ ದೇವರೇ ಎನ್ನುವ ಮಾತಿರಲಿ, ‘‘ನಮ್ಮನ್ನು ಕಾಪಾಡು’’ ಎಂದು ಅಸಲಿ ದೇವರಿಗೆ ಮೊರೆಯಿಡುವ ವಿವೇಚನೆಯೇ ಇಲ್ಲವಾಗಿದೆ.
ಪುರಾಣ ಕಥೆಗಳಲ್ಲಿ ನಾವು ನೋಡುವಂತೆ, ಮೊಬೈಲಾಸುರ ವರವಾಗಿಯೇ ಮಾನವರ ಬದುಕಿನಲ್ಲಿ ಜಾಗಪಡೆದುಕೊಂಡಿದ್ದು. ಮನೆಯಿಂದ ಹೊರಬರದ ಸ್ಥಿತಿಯಲ್ಲಿ ಆಪ್ತರೊಂದಿಗೆ ಮಾತನಾಡಲು, ವೈದ್ಯರ ಪರೀಕ್ಷೆಗೆ ಒಳಪಡಲು, ಮಕ್ಕಳಿಗೆ ಪಾಠ ಕಲಿಸಲು ಮೊಬೈಲ್ ಆ ದೇವರೇ ನೀಡಿದ ವಿಶೇಷ ಅವಕಾಶವಾಗಿತ್ತು.

ಕೋವಿಡ್ ಮಾರಿ ಹೋಯಿತು. ಶಾಲೆಗಳು ತೆರೆದವು. ಆದರೆ ತರಗತಿಯ ಕಪ್ಪು/ಹಸಿರು ಹಲಗೆ ಮಕ್ಕಳಿಗೆ ಸಪ್ಪೆಯಾಯಿತು. ಆಕರ್ಷಕ ಚಿತ್ರಗಳನ್ನು ಉಣಬಡಿಸುವ ಮೊಬೈಲ್ ಸ್ಕ್ರೀನ್‌ನಲ್ಲಿ ಅವರು ಲೀನವಾಗ ಬಯಸಿದರು. ಮೇಷ್ಟ್ರು ಹಠಕ್ಕೆ ಬಿದ್ದರು. ಮೊಬೈಲ್‌ನ್ನು ಮುಟ್ಟುಗೋಲು ಹಾಕಿಕೊಂಡರು. ಮಾಯಾವಿಯ ಪೂರ್ಣ ಹಿಡಿತದಲ್ಲಿದ್ದ ಮಕ್ಕಳೇನು ಕಡಿಮೆಯೇ? ಅವರು ಹಠ ಹಿಡಿದರು. ಮೊಬೈಲ್ ಕೊಡದಿದ್ದರೆ, ಸಾಯುವೇ ಎಂದು ಬೆದರಿಸಿದರು. ಕೆಲವರು ಸತ್ತರು ಕೂಡ. ಮೇಷ್ಟ್ರಿಗೆ ಬಿಟ್ಟರೆ ಕಲಿಕೆಯಿಲ್ಲ-ಬಿಡಿದಿದ್ದರೆ ಮಕ್ಕಳ ಜೀವವಿಲ್ಲ ಅನ್ನೋ ಸ್ಥಿತಿ ಬಂತು. ಕೊನೆಗೆ ಪೋಷಕರು ಉಳಿಯಲಿ ಜೀವ ಅನ್ನೋ ನಿರ್ಧಾರಕ್ಕೂ ಬಂದರು. ಇಂದಲ್ಲ ನಾಳೆ ಎಲ್ಲವೂ ಸರಿಯಾಗಬಹುದೆಂಬೋ ಆಸೆ ಪೋಷಕರದ್ದು.
ಮುಂದೊಂದು ದಿನ ಎಲ್ಲವೂ ಸರಿ ಹೋಗುವುದೇ? ಖಂಡಿತ ಇಲ್ಲ. ಮೊಬೈಲಾಸುರನ ಬತ್ತಳಿಕೆಯಲ್ಲಿ ಹಲವು ಬಾಣಗಳಿವೆ. ಈ ಬತ್ತಳಿಕಯೂ ಮಹಾಭಾರತದ ಅಕ್ಷಯಪಾತ್ರೆಯಂತೆ. ಅಪರಿಮಿತ. ಡಿಜಿಟಲ್ ಅಮೃತವನ್ನು ಅನುದಿನವು ಹೀರುವ ಮೊಬೈಲಾಸುರನಿಗೆ ಸಾವು ಎನ್ನುವುದೇ ಇಲ್ಲ.

ಕಲಿಗಾಲದ ಅಸುರನಾದ ಮೊಬೈಲಾಸುರ ಎಲ್ಲರಲ್ಲೂ ಇರುವ ಪಶುತ್ವವನ್ನು ಉದ್ದೀಪನಗೊಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾನೆ. ಮಾನವ ಸಾವಾಜಿಕ ಜೀವಿಯಾಗಿ ವಿಕಸನಗೊಂಡಾಗ ಅವನಲ್ಲಿದ್ದ ಪಶು ಸ್ವಭಾವ ಹಿನ್ನೆಲೆಗೆ ಸರಿದಿತ್ತು. ಕಳೆದ ನೂರು ವರ್ಷಗಳಿಂದ ಔಪಚಾರಿಕ ಶಿಕ್ಷಣದ ಮೂಲಕ ಮಾನವನನ್ನು ಮತ್ತಷ್ಟು ಸಂಘಜೀವಿಯಾಗಿಸುವ ಸಂಘಟಿತ ಪ್ರಯತ್ನ ನಿರಂತರ ಸಾಗಿತ್ತು. ಇದೆಲ್ಲವನ್ನೂ ಕೇವಲ ಐದಾರು ವರ್ಷಗಳಲ್ಲಿ ಮೊಬೈಲಾಸುರ ಮುರಿಯುವಲ್ಲಿ ಗೆಲವು ಸಾಧಿಸಿದ್ದಾನೆ. ಮಾನವರೀಗ ಜಾತಿ, ಧರ್ಮ, ಭಾಷೆ ಮುಂತಾದುವಗಳ ಹೆಸರಲ್ಲಿ ತಮ್ಮಲ್ಲಿರುವ ಮೃಗತ್ವವನ್ನು ಜಾಲತಾಣಗಳಲ್ಲಿ ರಾಚುತ್ತಿದ್ದಾರೆ. ಮಾನವ ತಾನೇ ದಾನವನಾಗುವ ಹಾದಿಯಲ್ಲಿದ್ದಾನೆ!

ಎಲ್ಲರೂ ಈಗ ಮೊಬೈಲಾಸುರನ ದಾಸರೇ. ಒಂದೆರಡು ಘಳಿಗೆ ಮೊಬೈಲ್ ಕಾಣದಿದ್ದರೆ ಇವರು ಬೆವರುತ್ತಾರೆ, ಬೆದರುತ್ತಾರೆ. ಮನೋ ವೈದ್ಯರು ಇದನ್ನು ಚಟ ಎನ್ನುತ್ತಾರೆ. ಇದೊಂದು ಸರ್ವವ್ಯಾಪಿಯಾಗಿರುವ ಚಟ ? ಚಟದ ಎಪಿಡಮಿಕ್ ಅನ್ನೋದು ಅವರ ನಿಲುವು. ಸತ್ಯವನ್ನು ಕಾಣುವ ಅರ್ಥವಾಡಿಕೊಳ್ಳುವ ಮಾನವರು ಬೇಕಷ್ಟೇ? ಮಾನವರೆಲ್ಲಾ ಮೊಬೈಲ್ ಹಿಡಿದು ಸೆಲ್ಛಿ ತೆಗೆದು, ಜಾಲತಾಣಗಳಲ್ಲಿ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ. ದೈವೀ ಶಕ್ತಿ ಮಾತೆಯರ ಅವತಾರದಲ್ಲಿ ದುಷ್ಟ ಶಕ್ತಿಯನ್ನು ನಾಶಪಡಿಸಿದ್ದನ್ನು ನವರಾತ್ರಿ ಎಂದೋ ದಸರವೆಂದೋ ವಿಜೃಂಭಣೆಯಿಂದ ಆಚರಿಸುವುದಷ್ಟೇ ಅಲ್ಲದೆ, ಆಚರಿಸಿದ್ದನ್ನು ವಾಟ್ಸ್‌ಅಪ್‌ನಲ್ಲಿ ಇನ್‌ಸ್ಟಾದಲ್ಲಿ ಇಲ್ಲವೇ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ವಾಡುವುದರಲ್ಲೇ ಮುಳುಗಿ ಹೋಗಿದೆ. ಈ ಮಾಯಾ ಲೋಕವನ್ನೇ ವಾಸ್ತವವೆಂದು ಗ್ರಹಿಸಿ ಸುಖವಾಗಿದ್ದಾರೆ. ಇವರನ್ನು ಬಂಧಿಸಿರುವ ಮಾಯಾ ಶಕ್ತಿಯಿಂದ ಬಿಡುಗಡೆಗೊಳಿಸುವವರು ಯಾರು?

andolanait

Recent Posts

ಅರಣ್ಯ ಅಧಿಕಾರಿಗಳಿಂದಲೇ ಮೈಸೂರಿನಲ್ಲಿ ʻಮರಗಳ ಮಾರಣಹೋಮ’

ಮೈಸೂರು : ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣದಲ್ಲಿ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು…

39 mins ago

ಮೈಸೂರಿನಿಂದ ಲಕ್ನೋಗೆ ಭವ್ಯ ಪೀಠ : UP ವಿಧಾನಸಭೆಯಲ್ಲಿ ಕರ್ನಾಟಕದ ಕಲಾ ಛಾಪು

ಮೈಸೂರು : ಕರ್ನಾಟಕದ ಕಲಾ-ಶಿಲ್ಪ ಪರಂಪರೆಯು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ ಕೈಸರ್…

2 hours ago

ಮಾರ್ಚ್‌ನಲ್ಲಿ ಬಜೆಟ್‌ ಮಂಡನೆ : ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಗುರುವಾರದಿಂದ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ. ಮಾರ್ಚ್.6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ…

2 hours ago

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ ಸೇದಿ ಫೋಟೋಶೂಟ್:‌ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲು

ಮೈಸೂರು: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ…

2 hours ago

ಮೆಟ್ರೋ ಪ್ರಯಾಣ ದರ ಏರಿಕೆ: ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥನೆ

ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,…

3 hours ago

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮುಂದುವರಿದ ಹಸುಗಳ ಮರಣ ಮೃದಂಗ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಹಸುಗಳ ಮರಣ ಮೃದಂಗ ಮುಂದುವರೆದಿದ್ದು ಸಂಬಂಧಪಟ್ಟ ಪಶುಸಂಗೋಪನಾ…

3 hours ago