ಹಾಡು ಪಾಡು

ತುಂಡು ಕೈಯಿಂದ ಕಡೆದ ಸೋಮನಾಥಪುರದ ಮೊಂಡಸಾಲೆ ನಾರಾಯಣನ ದೇಗುಲ

ಫೋಟೋ ಬರಹ, ಚಂದ್ರಶೇಖರ ಮೂರ್ತಿ

ಸೋಮನಾಥಪುರದ ಬಳಿಯ ಮೊಂಡಸಾಲೆ ನಾರಾಯಣನ ದೇಗುಲ ಸರಿಯಾದ ಪೋಷಣೆ ಇಲ್ಲದೆ, ನಿರ್ಲಕ್ಷ್ಯಕ್ಕೆ ಒಳಗಾಗಿ ಗಿಡ ಮರ ಬಳ್ಳಿಗಳಿಂದ ಆವೃತವಾಗಿ ದೇಗುಲದ ಗೋಪುರಗಳು ಬೀಳುವ ಸ್ಥಿತಿಯಲ್ಲಿವೆ. ಗುಡಿಯೊಳಗೆ ಬಾವಲಿಗಳು ಸೇರಿಕೊಂಡು ಬಾವಲಿಗಳ ಪಿಕ್ಕೆಯ ಗೊಬ್ಬರದ ಗೂಡಾಗಿದೆ. ಗಿಡಗಂಟಿಗಳು ಬೆಳೆದು ಪಾಳುಬಿದ್ದ ಸ್ಥಿತಿಯಲ್ಲಿ ಇರುವ ಈ ದೇಗುಲ ಇರುವುದು ಬೇರೆಲ್ಲೂ ಅಲ್ಲ, ಸೋಮನಾಥಪುರ ಚನ್ನಕೇಶವ ದೇವಾಲಯದ ಹಿಂಬದಿಯ ರಸ್ತೆಯಲ್ಲಿ ಹಾಗೇ ಮುಂದುವರಿದು ಸಾಗಿದರೆ ಕಾಣಸಿಗುತ್ತದೆ. ಈ ಗುಡಿಯ ಮೇಲೆ ಗಿಡ-ಗಂಟಿ ಬೆಳೆದು, ಗೋಪುರದ ನಡುವೆ ಗಿಡದ ಬೇರು ದಪ್ಪವಾಗಿ ಗೋಪುರ ಬೀಳುವಂತಿದೆ.

ಹೊಯ್ಸಳರ ಶಿಲ್ಪ ಕಲೆ ಇರುವ ಈ ದೇಗುಲ ಏಕೆ ಈ ದುಸ್ಥಿತಿಗೆ ತಲುಪಿದೆ ಯೆಂದು ಸ್ಥಳೀಯ ಗ್ರಾಮಸ್ಥರು ಹೇಳುವ ವಿಚಾರ ಸ್ವಾರಸ್ಯಕರವಾಗಿದೆ. ದೇಗುಲ ವನ್ನು ಶಿಲ್ಪಿಯೊಬ್ಬ ತನ್ನ ಮೊಂಡಾದ ಒಂದೇ ಕೈಯಿಂದ ಕೆತ್ತನೆ ಮಾಡುತ್ತಾನೆ. ನಂತರ ತನ್ನ ದಾಂಪತ್ಯ ಕಲಹ ಕಾರಣದಿಂದ ಗರ್ಭಿಣಿ ಹೆಂಡತಿಯನ್ನು ತನ್ನ ತಂದೆಯ ಜೊತೆ ಬಿಟ್ಟು ಮನೆ ತೊರೆದು ಹೋಗುತ್ತಾನೆ. ಗರ್ಭಿಣಿ ಯಾಗಿದ್ದ ಶಿಲ್ಪಿಯ ಹೆಂಡತಿಗೆ ಒಂದು ಗಂಡು ಮಗು ಜನಿಸುತ್ತದೆ. ಆ ಮಗು ತನ್ನ ತಾತನೊಂ ದಿಗೆ ಇದ್ದು ಬೆಳೆದು ದೊಡ್ಡವನಾದಾಗ ಶಿಲ್ಪಿಯಾಗುತ್ತಾನೆ.

ಒಂದು ದೊಡ್ಡ ಕಂಬದಲ್ಲಿ ಶಿಲ್ಪವನ್ನು ಕೆತ್ತಿದಾಗ, ಮಗನಂತೆ ಮೊಮ್ಮಗ ಕೂಡ ಶಿಲ್ಪವನ್ನು ಕೆತ್ತಿರುವುದನ್ನು ಅಂಧತ್ವ ಹೊಂದಿದ್ದ ತಾತ ಸ್ಪರ್ಶದಿಂದಲೇ ಸೌಂದರ್ಯವನ್ನು ಹೊಗಳಿ, ‘ಕಂಬದಲ್ಲಿ ಎಲ್ಲಾ ಸರಿಯಾಗಿದೆ ಆದರೆ ಈ ಶಿಲ್ಪಕ್ಕೆ ಕಣ್ಣುಗಳೇ ಇಲ್ಲ’ ಎಂದು ಹೇಳುತ್ತಾನೆ. ತಾತನ ಮಾತು ಕೇಳಿ ಮೊಮ್ಮಗನಿಗೆ ತನ್ನ ತಂದೆ ಕೂಡ ದೊಡ್ಡ ಶಿಲ್ಪಿ ಆಗಿದ್ದ ಎನ್ನುವ ವಿಚಾರ ತಿಳಿಯುತ್ತದೆ.

ಬಳಿಕ ತನ್ನ ತಂದೆಯ ಬಗ್ಗೆ ಮಾಹಿತಿ ಕಲೆಹಾಕಿ ಹುಡುಕಲು ಹೊರಡುತ್ತಾನೆ. ಹೀಗೆ ತನ್ನ ತಂದೆ ಹುಡುಕಾಟದಲ್ಲಿ ಸಂಚಾರ ಮಾಡುತ್ತಾ ಸೋಮನಾಥಪುರಕ್ಕೆ ಬಂದ ಮಗ ಶಿಲ್ಪಿ ಸೋಮನಾಥಪುರದ ಚನ್ನಕೇಶವ ದೇಗುಲದ ಶಿಲ್ಪಕಲೆ ಕಂಡು ಪುಳಕಿತನಾಗುತ್ತಾನೆ. ದೇಗುಲ ಕೆತ್ತಿದ ಶಿಲ್ಪಿಯನ್ನು ಭೇಟಿಯಾಗಿ ‘ಕಟ್ಟಿದ ದೇಗುಲ ಸುಂದರವಾಗಿದೆ, ಮುಂಭಾಗದಲ್ಲಿ ಇರುವ ಗರುಡಗಂಬದಲ್ಲಿ ಏನೂ ನ್ಯೂನತೆ ಇಲ್ಲವೇ?’ ಎಂದು ಪ್ರಶ್ನಿಸುತ್ತಾನೆ.

ಆಗ ಆ ಶಿಲ್ಪಿ ‘ಕಂಬದಲ್ಲಿ ಏನಾದರೂ ಕುಂದು ಇದ್ದರೆ ನನ್ನ ಕೈಯನ್ನು ಕತ್ತರಿಸಿಕೊಳ್ಳುತ್ತೇನೆ’ ಎಂದು ಹೇಳುತ್ತಾನೆ. ‘ಹೌದೇ ಹಾಗಾದರೆ ನಾನು ಕುಂದು ತೋರಿಸುತ್ತೇನೆ’ ಎಂದು ಸುತ್ತಿಗೆಯಲ್ಲಿ ಆ ಕಂಬವನ್ನು ಸತತವಾಗಿ ಹೊಡೆದಾಗ ಕಂಬ ಮೂರು ಭಾಗವಾಗಿ ತುಂಡಾಗುತ್ತದೆ. ಕಂಬದ ಒಂದು ಭಾಗದಲ್ಲಿ ಮರಳು ಮಿಶ್ರಿತ ನೀರು ಮತ್ತು ಕಪ್ಪೆ ಇರುವುದು ಕಂಡು ಬರುತ್ತದೆ. ಶಿಲ್ಪಿ ತನ್ನ ಶಪಥದಂತೆ ಕಂಬದಲ್ಲಿದ್ದ ಕುಂದಿಗಾಗಿ ತನ್ನ ಒಂದು ಕೈಯನ್ನು ತಾನೇ ಕತ್ತರಿಸಿಕೊಳ್ಳುತ್ತಾನೆ.

ನಂತರ ‘ನಾನು ಕೆತ್ತಿದ ಶಿಲ್ಪದಲ್ಲಿ ಕೊರತೆ ಕಂಡು ಹಿಡಿದ ನೀನು ಯಾರು?’ ಎಂದು ಕೇಳಿದಾಗ ತನ್ನ ಹಿನ್ನೆಲೆ ತಿಳಿಸಿದ ಯುವಕನ ಮಾತು ಕೇಳಿ ‘ನಾನೇ ನಿನ್ನ ತಂದೆ’ ಎಂದು ಬಾಚಿ ತಬ್ಬಿಕೊಳ್ಳುತ್ತಾನೆ. ಮೂರು ತುಂಡಾಗಿದ್ದ ಕಂಬದಲ್ಲಿ ಒಂದು ತುಂಡಿನಲ್ಲಿ ಮೂಗೂರು ತಿಬ್ಬಾದೇವಿ, ಇನ್ನೊಂದು ತುಂಡಿನಲ್ಲಿ ತಿ.ನರಸೀಪುರದ ಗುಂಜಾ ನರಸಿಂಹಸ್ವಾಮಿಯಾಗಿ ಕೆತ್ತನೆ ಮಾಡಲಾಗಿದೆಯಂತೆ. ಉಳಿದ ತುಂಡಿನಿಂದ ತನ್ನ ಮೊಂಡಾದ ಒಂಟಿ ಕೈಯಿಂದ ಮೊಂಡುಸಾಲೆ ದೇಗುಲ ನಿರ್ಮಾಣ ಮಾಡುತ್ತಾನೆಂಬುದು ಜನಪದರ ಬಾಯಿಯಲ್ಲಿ ಹರಿದುಬಂದ ಸ್ಥಳಚರಿತ್ರೆ. ಮೊಂಡಾದ ಒಂಟಿ ಕೈಯಿಂದ ಕೆತ್ತಿದ ಕಾರಣ ಈ ದೇಗುಲವನ್ನು ಮೊಂಡಸಾಲೆ ದೇಗುಲ ಎಂದು ಕರೆಯಲಾಗುತ್ತದೆ. ದೇಗುಲದ ಗರ್ಭಗುಡಿಯಲ್ಲಿ ನಾರಾಯಣ ಸ್ವಾಮಿ ವಿಗ್ರಹವಿದ್ದು, ನಂತರ ಅದನ್ನು ಚನ್ನಕೇಶವ ದೇವಾಲಯದಲ್ಲಿ ಇರಿಸಿದರು ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

” ಯಾವುದೇ ದೇಗುಲ ನಿರ್ಮಾಣ ಮಾಡಬೇಕಾದರೆ ಪೂರ್ವದಲ್ಲಿ ಒಂದು ಮಾದರಿ ದೇಗುಲ ನಿರ್ಮಾಣ ಮಾಡಿಕೊಂಡು ಅದು ಸರಿ ಎನ್ನಿಸಿದರಷ್ಟೇ, ಮುಖ್ಯ ದೇಗುಲ ನಿರ್ಮಾಣ ಮಾಡುತ್ತಿದ್ದರು.ಅದರಂತೆಯೇ ಇದು ಕೂಡ ಖಾಲಿ ಜಮೀನಿನಲ್ಲಿ ಒಂದು ಮಾದರಿ ದೇಗುಲ ಕೆತ್ತನೆ ಮಾಡಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.”

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯ

5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…

6 hours ago

ಮೈಸೂರು | ದಸರಾ ವೇಳೆಗೆ ಫುಟ್‌ಪಾತ್‌ಗಳ ದುರಸ್ತಿಗೆ ಸೂಚನೆ

ಮೈಸೂರು‌ : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…

7 hours ago

ಪ.ಬಂಗಾಳ | ಬೆಂಕಿ ಅವಘಡದಲ್ಲಿ ಏಳು ಮಂದಿ ಸಾವು, ಹಲವರು ಗಂಭೀರ

ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…

7 hours ago

ಯಳಂದೂರು | ಚಿರತೆ ದಾಳಿಗೆ ಕರು ಬಲಿ

ಯಳಂದೂರು : ಚಿರತೆ ದಾಳಿಗೆ ಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ಶೋಭಾ ಕೋಂ…

8 hours ago

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

9 hours ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

9 hours ago