Andolana originals

‘ಬಹುರೂಪಿ: ಅಂಬೇಡ್ಕರ್ ಆಶಯಗಳ ವಿಶ್ವಮೈತ್ರಿ ಪ್ರದರ್ಶನ’

ಸಂದರ್ಶನ: ಚಿರಂಜೀವಿ ಸಿ.ಹುಲ್ಲಹಳ್ಳಿ

‘ಆಂದೋಲನ’ ಸಂದರ್ಶನದಲ್ಲಿ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಭಿಮತ 

ಮೈಸೂರು: ರಂಗಭೂಮಿಯ ಒಳಗೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅರಿವಿನ ಬೆಳಕನ್ನು ಚೆಲ್ಲುವ ಹೊಸ ಪ್ರಯೋಗಕ್ಕೆ ಈ ಬಾರಿ ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಾಂದಿ ಹಾಡಿದೆ.

ಇದು ಬಹುರೂಪಿಯ ರಜತ ಮಹೋತ್ಸವ ವರ್ಷದ ಹೆಮ್ಮೆಯೂ ಹೌದು ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.

ಅಂಬೇಡ್ಕರ್ ಅವರ ಸಮಾನತೆ ಆಶಯದ ಚಿಂತನೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿ ಅಂಬೇಡ್ಕರ್‌ರ ಹೆಸರಿನಲ್ಲಿ , ಅವರ ಆಶಯಗಳನ್ನು ದೃಶ್ಯರೂಪದಲ್ಲಿ ಜನರಿಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದರು.

‘ಆಂದೋಲನ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ನಾಟಕೋತ್ಸವದ ರೂಪುರೇಷೆ, ಆಶಯಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಬಹುರೂಪಿಯಲ್ಲಿ ಅಂಬೇಡ್ಕರ್ ಅವರ ಆಶಯಗಳನ್ನು ಪ್ರಧಾನವಾಗಿ ಇಟ್ಟು ಕೊಂಡಿರುವ ಉದ್ದೇಶ?

ಸತೀಶ್ ತಿಪಟೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಬಸವಣ್ಣ, ಟಾಲ್‌ಸ್ಟಾಯ್, ರವೀಂದ್ರ ನಾಥ ಠಾಗೋರ್‌ರ ಆಶಯಗಳನ್ನೂ ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಹಿಂದಿನ ಕೆಲ ನಾಟ ಕೋತ್ಸವಗಳಲ್ಲಿ ಪ್ರಯೋಗ ಮಾಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಬಾಬಾ ಸಾಹೇಬ್‌ರ ಸಮಾನತೆಯನ್ನು ಕುರಿತು ಅರಿವು ಮೂಡಿಸಲು ರಂಗಾಯಣ ಸಜ್ಜಾಗಿದೆ. ಅಂಬೇಡ್ಕರ್ ಬದುಕು, ಬರಹ, ಜೀವನ ಚರಿತ್ರೆ, ಹೋರಾಟಗಳ ಗೀತೆಗಳು, ನಾಟಕಗಳು, ಜನಪದ ಕಲೆಗಳ ಮೂಲಕ ಸಮಾನತೆಯ ಸಂದೇಶ ಸಾರಲು ರಂಗಾಯಣ ಸಜ್ಜಾಗಿದೆ. ಜ. ೧೧ರಿಂದ ೧೮ರವರೆಗೆ ೮ ದಿನಗಳ ಕಾಲ ರಂಗಾಯಣವು ಬಾಬಾಸಾಹೇಬರ ಸಾಂಸ್ಕೃತಿಕ ಅನುಸಂಧಾನಕ್ಕೆ ಮುನ್ನುಡಿಯಾಗಲಿದೆ.

ಆಂದೋಲನ: ಈಗಿನ ಕಾಲಘಟ್ಟದಲ್ಲಿ ಅಂಬೇಡ್ಕರ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಏನು ಹೇಳುತ್ತೀರಿ?

ಸತೀಶ್ ತಿಪಟೂರು: ಬಾಬಾ ಸಾಹೇಬರು ಭಾರತಕ್ಕೆ ಸೀಮಿತವಾಗಿಲ್ಲ. ಅವರದ್ದು ವಿಶ್ವಪ್ರಜ್ಞೆ. ಅವರ ಅರಿವಿನ ಬಗೆಗೆ ಕಳೆದ ಒಂದೂವರೆ ದಶಕದಲ್ಲಿ ಬಹಳಷ್ಟು ಸಂಶೋಧನೆಗಳು ನಡೆದಿವೆ; ಈಗಲೂ ನಡೆಯುತ್ತಿವೆ. ಜಾತೀಯತೆ, ಭೇದ-ಭಾವ, ತಾರತಮ್ಯ, ಶೋಷಣೆ ಇದೆಯೋ ಅಲ್ಲೆಲ್ಲಾ ಬಾಬಾ ಸಾಹೇಬರು ಬಿಡುಗಡೆಯ ಬೆಳಕಾಗಿದ್ದಾರೆ. ಹೀಗಾಗಿ ಯಾವುದೇ ಭೇದವಿಲ್ಲದೆ, ಪ್ರತಿಯೊಬ್ಬರೂ ಬಾಬಾಸಾಹೇಬರ ಬಗ್ಗೆ ಅರಿಯುವುದು ಇವತ್ತಿನ ತುರ್ತಾಗಿದೆ. ಬಾಬಾ ಸಾಹೇಬರ ಹೋರಾಟಗಳು, ಆಶಯಗಳೊಂದಿಗೆ ಸಾಂಸ್ಕೃತಿಕ ಅನುಸಂಧಾನ ಮಾಡಬೇಕಿದೆ. ಆ ಮೂಲಕ ಅವರನ್ನು ಮೂಲನೆಲೆಯಲ್ಲಿಯೇ ನೋಡುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ನಾಟಕ, ಹಾಡುಗಳು, ಚಿತ್ರಕಲೆ, ಚಲನಚಿತ್ರಗಳಲ್ಲಿ ಬಾಬಾ ಸಾಹೇಬರನ್ನು ಮುಖ್ಯವಾಗಿ ಪರಿಗಣಿಸಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ಎಲ್ಲ ಮಜಲುಗಳನ್ನೂ ಒಂದೇ ಸೂರಿನಡಿಯಲ್ಲಿ ಬಹುರೂಪಿ ಕೊಡಲಿದೆ ಎಂದರು.

ಆಂದೋಲನ: ಮಣಿಪುರದ ೮೦ ವರ್ಷ ವಯಸ್ಸಿನ ಮಹಿಳಾ ಕಲಾವಿದರಾದ ಹೇಯ್ನಾಮ್ ಸಾಬಿತ್ರಿ ಅವರನ್ನು ಬಹುರೂಪಿಗೆ ಆಯ್ಕೆ ಮಾಡಿರುವುದಕ್ಕೆ ಕಾರಣವೇನು?

ಸತೀಶ್ ತಿಪಟೂರು: ಹೇಯ್ನಾಮ್ ಸಾಬಿತ್ರಿ ಕೇವಲ ಮಣಿಪುರಕ್ಕೆ ಸೀಮಿತವಾದ ಕಲಾವಿದರಲ್ಲ. ದೇಶದ ರಂಗಭೂಮಿಯನ್ನು ಪ್ರತಿನಿಧಿಸುವ ಪ್ರತಿಭಾವಂತರು. ೨೦೧೨ರಿಂದ ಫ್ರಾನ್ಸ್, ಸ್ವೀಡನ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದ ಯುವ ಕಲಾವಿದರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕಲಾ ಸಾಧನೆಯು ಹಲವಾರು ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಮತ್ತು ಸಂಶೋಧ ನೆಯ ಆಸಕ್ತಿಗೆ ಕಾರಣವಾಗಿದೆ. ೮೦ ವರ್ಷದ ವಯಸ್ಸಿ ನವರಾದ ಇವರು ಈಗಲೂ ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ಹಲವು ಪ್ರಯೋಗಗಳು ರಂಗಭೂಮಿಯ ಪಠ್ಯಗಳಾಗಿವೆ. ನಟಿಯಾಗಿ ಭಾರತದಲ್ಲಿ ದೊಡ್ಡ ಹೆಸರು. ಇವರನ್ನು ಗೌರವಿಸುವುದು ರಂಗಾಯಣದ ಹೆಮ್ಮೆ ಎಂದರು.

ಆಂದೋಲನ: ಪಂಜಾಬ್ ರಾಜ್ಯದ ಗಾಯಕರಾದ ಗಿನ್ನಿ ಮಾಯಿ ಅವರ ಕಾರ್ಯಕ್ರಮವನ್ನೂ ಆಯೋಜಿಸಿದ್ದೀರಿ. ಸ್ಥಳೀಯ ರಂಗಾಸಕ್ತರು ಸ್ಪಂದಿಸುವ ನಿರೀಕ್ಷೆ ಇದೆಯೇ?

ಸತೀಶ್ ತಿಪಟೂರು: ಪ್ರಸ್ತುತ ದೇಶದಲ್ಲಿ ಜನಪ್ರಿಯ ಗಾಯಕರಲ್ಲಿ ಗಿನ್ನಿಮಾಯಿ ಕೂಡ ಒಬ್ಬರು. ಮೂಲತಃ ಪಂಜಾಬ್ ರಾಜ್ಯದ ಇವರು ‘ಅಂಬೇಡ್ಕರ್ ರೈಟ್’ ಹಾಡುಗಳನ್ನು ಕಟ್ಟಿ ಹಾಡಿ ಜಾಗತಿಕವಾಗಿ ಪ್ರಸಿದ್ಧರಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಇವರ ಕಾರ್ಯಕ್ರಮ ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.

ಆಂದೋಲನ: ಈ ಬಾರಿಯ ಬಹುರೂಪಿ ನಿರೀಕ್ಷೆಗಳೇನು?

ಸತೀಶ್ ತಿಪಟೂರು: ೨೫ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಬಹುರೂಪಿ ನಾಟಕೋತ್ಸವ ಕುರಿತು ಬಹಳಷ್ಟು ನಿರೀಕ್ಷೆಗಳು ಇವೆ. ಆದರೆ, ಈ ನಿರೀಕ್ಷೆಗಳನ್ನು ನಾನು ಹೇಳುವುದಕ್ಕಿಂತ ಉತ್ಸವದಲ್ಲಿ ಪಾಲ್ಗೊಂಡ ಜನ ಸಮೂಹ ಹೇಳಿದರೆ ಚೆನ್ನಾಗಿರುತ್ತದೆ. ಬಾಬಾಸಾಹೇಬರ ವಿಶ್ವಜ್ಞಾನದ ಅರಿವನ್ನು ಹೊನಲಾಗಿಸುವ ನಿಟ್ಟಿನಲ್ಲಿ ಬಹುರೂಪಿ ಯಶಸ್ವಿಯಾಗುವ ನಿರೀಕ್ಷೆ ಇದೆ

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ…

12 mins ago

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

47 mins ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

1 hour ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

2 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

18 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

20 hours ago