ಹಾಡು ಪಾಡು

ಮರೆಯಾದ ಕೊಡಗಿನ ಮದ್ದುಕಾರ ಮಾಞು

ಡಾ.ತೀತಿರ ರೇಖಾ ವಸಂತ

ಕೊಡಗು – ಕೇರಳ ಗಡಿಭಾಗ ಕುಟ್ಟದ ಹತ್ತಿರದ ಕಾಯಮಾನಿ ಅಚ್ಚಹಸುರಿನ ಸುಂದರ ಊರು. ಸದ್ದಿಲ್ಲದೆ ಸಮುದಾಯಗಳ ಸಾಮರಸ್ಯವನ್ನು ಮಾನವೀಯತೆಯ ಸೆಲೆಯಲ್ಲೇ ಬದುಕು ಕಟ್ಟಿಕೊಂಡಿರುವವರ ನೆಲೆ. ಶ್ರೀಮಂಗಲದಿಂದ ಕುಟ್ಟದ ಕಡೆಗೆ ಸಾಗುವ ದಾರಿಯಲ್ಲಿ ಬ್ರಹ್ಮಗಿರಿ ಕ್ಲಬ್ಬಿನಿಂದಾಚೆಯ ಕೆಳಗಿನ ಕಾಯಮಾನಿಯ ತಿರುವಿನಲ್ಲಿ ಸುಮಾರು ಏಳು ದಶಕಗಳಿಗೂ ಮೀರಿ ಹಲವು ಗಡಿಗಳನ್ನು ಮೀರುತ್ತಲೇ ಮಾನವೀಯತೆಯ ಗುಡಿಯಂತೆ ಬಾಳಿ ಬದುಕಿದವರು ನಾಟಿ ಔಷಧಿ ಕೊಡುವ ಮಾಞು.

ಮದ್ದುಕಾರ ಅಂಗಡಿ ಮಾಞು ಎಂದೇ ಸುತ್ತೆಲ್ಲಾ ಸದ್ದಿಲ್ಲದೇ ಸುದ್ದಿಯಾಗಿದ್ದವರು. ಇವರ ನಿಜವಾದ ಹೆಸರು ಮಾಯಿನ್ ಪಿ.ಎಂ. ಎಂದು ಗೊತ್ತಾಗಿದ್ದು ಇವರು ತೀರಿಹೋದ ಮೇಲೆಯೇ. ನಾನು ಕಳೆದ ಮೂವತ್ತು ವರ್ಷಗಳಿಂದಲೂ ಗಮನಿಸುತ್ತಾ ಬಂದಿರುವಂತೆ ಮಂದಸ್ಮಿತ, ಮಿತಭಾಷಿ, ಮುಗ್ಧಮನಸ್ಸಿನ ನಮ್ಮ ಮಾಞುವಿನ ದಿನಸಿ ಅಂಗಡಿ ಎಂದರೆ – ತಕ್ಷಣಕ್ಕೆ ಬೇಕಾದ ಎಲ್ಲವೂ ಅಲ್ಲೇ ಸಿಗುವ ಇಂದಿನ ʻಮಾಲ್’ಗಳಿಗಿಂತ ಕಮ್ಮಿಯೇನೂ ಆಗಿರಲಿಲ್ಲ. ಜೊತೆಗೆ ‘ಮದ್ದುಕಾರ’ ಎಂದೇ ಖ್ಯಾತನಾಗಿದ್ದ ನುರಿತ ನಾಟಿವೈದ್ಯ, ಸುತ್ತಲಿನ ಗಿಡ-ಮರ, ಬೇರು-ನಾರು, ಬಳ್ಳಿಗಳನ್ನೇ ಬಳಸಿ ಎಂತಹದೇ ಹಾವು ಕಡಿತದಿಂದ ಹಿಡಿದು ಕಾಮಾಲೆ, ಕೈ-ಕಾಲು ಉಳುಕುವ, ಮೈ ನೋಯುವ ಸಾಮಾನ್ಯ ಕಾಯಿಲೆಯವರೆಗೂ ನಾಟಿ ಔಷಧಿಕೊಟ್ಟು ಎಲ್ಲವನ್ನೂ ವಾಸಿ ಮಾಡುವ ಕೈಗುಣದ ಮೋಡಿಕಾರ.

ಹುಟ್ಟಿದ್ದು ಕೊಡವ ಮಾಪಿಳ್ಳೆ ಸಮುದಾಯದ ಮೂಲತಃ ಪೊನ್ನಂಪೇಟೆಯ ಸಮೀಪದ ಮಾಪಿಳ್ಳೆತೋಡಿನಲ್ಲಿರುವ ಕೊಡವ ಮುಸ್ಲಿಂ ಸಮುದಾಯದ ಪಾತೆರ ಮೊಯಿದುವಿನ ಮಗನಾಗಿ ಪ್ರೀತಿಸಿ ಮದುವೆಯಾಗಿದ್ದು ಕಾಯಿಮಾನಿಯ ಕೊಡವ ಭಾಷಿಕ ಸಮುದಾಯದ ಹುಡುಗಿಯನ್ನು. ಮಾಞು ಅವರನ್ನು ಮದುವೆಯಾದ ನಂತರ ಆಕೆಯ ಹೆಸರು ಕೈರುನ್ನೀಸಾ. ಅಕ್ಕ-ಪಕ್ಕದಲ್ಲೇ ಇದ್ದು ಕೊಂಡು ಎರಡೂ ಮನೆತನಗಳೊಂದಿಗೆ, ಊರು ನಾಡಿನೊಂದಿಗೆ, ಎಲ್ಲರ ಪ್ರೀತಿಯೊಂದಿಗೆ ಬಾಳಿ ಬದುಕಿದವರು. ಯಾವ ಸಿದ್ಧಾಂತ, ಕ್ರಾಂತಿ, ಬದಲಾವಣೆಯ ಬಿಸಿ ಇಲ್ಲದೆ ಬೆಚ್ಚನೆಯ ಮಾನವೀಯತೆಯ ಮಡಿಲೊಳಗೆ ಮನಮನದ ಮನಸ್ಸು ಗೆದ್ದವರು. ಸರಳ ಸಜ್ಜನಿಕೆಯ ಖ್ಯಾತಿ ಯಿಂದ ಬಾಳಿದವರು. ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳು. ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ, ಸಂಸಾರಸ್ಥರಾಗಿ ಹೊಸ ತಲೆಮಾರಿನ ಜೀವನ ಕಟ್ಟಿಕೊಂಡಿದ್ದಾರೆ. ತುಂಬು ಕುಟುಂಬದ ಸುಂದರ ಸಂಸಾರ ಈಗ ಇವರದು. ಪುಟ್ಟ ಅಂಗಡಿಯ ಪಕ್ಕದಲ್ಲೇ ಚೆಂದದ ಮನೆ ಯೊಳಗೆ ಸಂತಸದ ಸುಗ್ಗಿಯಲ್ಲಿ ಮಾಗಿದ್ದ ಮಾಞು ಕಳೆದ ಆರು ತಿಂಗಳಿಂದ ಕಾಡಿದ್ದ ಆರೋಗ್ಯದ ಸಮಸ್ಯೆಯಿಂದಾಗಿ ಮೊನ್ನೆ ತಾನೇ ತೀರಿಕೊಂಡರು. ನಾಟಿ ಔಷಧಿಯ ಮದ್ದು ಮಾಡಿ ಸಾವಿರಾರು ಜೀವಗಳನ್ನು ಉಳಿಸಿದ ಮದ್ದುಕಾರ ಮಾಞುವಿಗೆ ಮದ್ದು ಬೇಕಾದಾಗ ಮದ್ದು ಅರೆಯುವವನು ಬರಲು ಮರೆತೇ ಬಿಟ್ಟ. ಕಾಯಮಾನಿಯ ತಿರುವಿನ ಮಾಞು ಬಾಳ ತಿರುವನ್ನು ಹೊಕ್ಕು ಹೊರಟೇಬಿಟ್ಟರು. ಈ ಹೊತ್ತಿನಲ್ಲಿ ಸಂಸಾರದ, ಸಂಸರ್ಗದ ಸರ್ವರ ತುಂಬು ಮನದ ವಿದಾಯ, ಇತ್ತೀಚಿನ ದಿನಗಳಲ್ಲಿ ಕೊಡಗು ಎನ್ನುವ ನನ್ನ ಪ್ರೀತಿಯ ನಾಡು ಭಾಷೆ, ಜನಾಂಗ, ಧರ್ಮಗಳ ಹೆಸರಿನಲ್ಲಿ ಶೋಭೆಗೆ ಒಳಗಾಗಿ ತತ್ತರಿಸುತ್ತಿರುವ ಹೊತ್ತಿನಲ್ಲಿ ಮಾಞು ಎಂಬ ನಾಟಿ ವೈದ್ಯ ಇಲ್ಲವಾಗಿರುವುದು ಕೇವಲ ಕಾಕತಾಳೀಯ ಅಲ್ಲ ಎಂದು ನನಗನಿಸುತ್ತದೆ. ಜಾತಿ ಜನಾಂಗಗಳ ನಡುವೆ ಅಪನಂಬಿಕೆ ದ್ವೇಷಗಳು ಕೊಳ್ಳಿಯಿಡುತ್ತಿರುವ ಹೊತ್ತಲ್ಲಿ ಸಾಮರಸ್ಯದ ಔಷಧಿ ನೀಡುತ್ತಿದ್ದ ಮಾಞು ಇರಬೇಕಿತ್ತು ಎಂದೂ ಅನಿಸುತ್ತದೆ.

vasantharekha6@gmail.com

 

ಆಂದೋಲನ ಡೆಸ್ಕ್

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

7 hours ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

8 hours ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

9 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

9 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

10 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

10 hours ago