ಹಾಡು ಪಾಡು

ದಸರಾ ಮತ್ತು ಶುದ್ಧ ಸಂತೋಷ

ಅದೊಂದು ಸರ್ವ ಧರ್ಮ ಸಮನ್ವಯದ ಯೂನಿವರ್ಸಲ್ ಆಶ್ರಮ ಹಬ್ಬದ ನೆಪದಲ್ಲಿ ಹೇಳಿದ್ದೆಲ್ಲವನ್ನೂ ತೆಗೆದುಕೊಂಡು ಹೋಗಿ ಎಂದಿನಂತೆ ಬಿಲ್ಲನ್ನೂ ಕೊಡದಿದ್ದಾಗ ನಾನೊಬ್ಬ ಕುರುಡು ಭಕ್ತೆ ಎಂದು ಖಾತರಿಯಾಯಿತೋ ಏನೋ, ಲೋಕಾಭಿರಾಮ ಬೇರೆ ರೀತಿಯಲ್ಲಿ ಪ್ರಾರಂಭವಾಯಿತು.

‘ಈ ಸಿದ್ರಾಮಯ್ಯ ಮುಸ್ಲಿಮರನ್ನ ಓಲೈಸೋದು ಸ್ವಲ್ಪ ಜಾಸ್ತಿ ಆಯ್ತು ಬಿಡಿ.’ ತಿನ್ನುತ್ತಿದ್ದ ಉಪ್ಪಿಟ್ಟಿನ ತುತ್ತು ನನ್ನ ಗಂಟಲಲ್ಲಿ ಸಿಕ್ಕಿಕೊಂಡಿತ್ತು. ‘ಯಾಕೆ ಹೀಗೆ ಹೇಳ್ತೀರಿ?’ ‘ಮತ್ತೆ ಇನ್ನೇನು? ದಸರಾ ಉದ್ಘಾಟನೆ ಬಾನುಮುಷ್ತಾಕ್ ಯಾಕೆ ಮಾಡಬೇಕು?’ ಒಂದು ನಿಮಿಷ ಸುಮ್ಮನಿದ್ದೆ.

‘ಯಾಕೆ ಮಾಡಬಾರದು? ಆಕೆ ಈ ನಾಡಿನ ತೆರಿಗೆ ಕಟ್ಟುವ ಒಬ್ಬ ಪ್ರಜೆ ಅಲ್ಲವೇ? ಜೊತೆಗೆ ಬುಕರ್ ಪ್ರಶಸ್ತಿಯಿಂದ ಕೀರ್ತಿ ತಂದುಕೊಟ್ಟಿದ್ದು ಅಷ್ಟೇ ಅಲ್ಲ, ಬಂದ ಕೋಟಿಗೂ ಮೀರಿದ ಹಣಕ್ಕೆ ತೆರಿಗೆ ಕಟ್ಟಿಲ್ಲವೇ? ದಸರಾ ಹಬ್ಬವನ್ನು ಸರ್ಕಾರ ನಡೆಸುವುದು ಪ್ರಜೆಗಳ ತೆರಿಗೆ ಹಣದಲಿ ತಾನೆ? ದಸರಾ ಹಬ್ಬದ ಪೂಜೆ ಗೀಜೆ ಎಲ್ಲ ರಾಜಮನೆತನ ಮಾಡಿಕೊಳ್ಳಲಿ. ಏನೀಗ?’ ಅತ್ತಲಿಂದ ಅರೆ ಗಳಿಗೆಯ ಮೌನ. ‘ಆದರೂ… ’ ಈಗ ಮಾತನಾಡಲೇ ಬೇಕಾಯಿತು.

ಯಾಕೆ ಸ್ವಾಮೀಜಿ? ವಿವಾದವೇ ಇಲ್ಲದ ಕಡೆ ಹಗರಣವನ್ನು ಸೃಷ್ಟಿಸುವ ಪ್ರಯತ್ನ ಯಾಕೆ?’ ಸರ್ವಧರ್ಮ ಸ್ವರೂಪಿಣೆ ಎಂದು ರಾಮಕೃಷ್ಣನನ್ನು ಸ್ತುತಿಸುವವರ ಪಾಡೂ ಇದೆಯೇ? ನಗರದಲ್ಲಿ, ಪೇಟೆಯಲ್ಲಿ, … ಎಲ್ಲ ಕಡೆ? ಆದರೂ ಮುಂದುವರಿಸಿದೆ. ‘ನಾನು ಬಾನು ಅವರ ವಿಸ್ತ ತ ಸಂದರ್ಶನವನ್ನು ಹಾಸನದ ಅವರ ಮನೆಗೇ ಹೋಗಿ ಮಾಡಿದ್ದೆ. ಅಲ್ಲಿಯ ಮುಲ್ಲಾ ಆಕೆ ಕಥೆ ಬರೆಯುತ್ತಾರೆ ಅಂತ ಮಸೀದಿಯಿಂದ ಜೋರು ದನಿಯಲ್ಲಿ ಬಹಿಷ್ಕಾರ ಹಾಕಿದ್ದರ ಬಗ್ಗೆ ಕಿಟಕಿಯಿಂದ ಕಾಣುತ್ತಿದ್ದ ಮಸೀದಿಯ ಗೋಪುರವನ್ನು ತೋರಿಸಿ ಹೇಳಿದ್ದರು. ಆಕೆಯ ದನಿಯಲ್ಲಿ ನೋವಿತ್ತು. ಬುಕರ್ ಬಂದಾಗ ಈ ದೇಶದ ಪ್ರಧಾನಿ ಆಕೆಯನ್ನು ಅಭಿನಂದಿಸುವ ಸೌಜನ್ಯವನ್ನೂ ತೋರಿಸಲಿಲ್ಲ.

ಎರಡೆರಡು ಮುಲ್ಲಾಗಳ ನಡುವೆ ಬರಹಗಾರ್ತಿಯೊಬ್ಬರು ಅನುಭವಿಸುವ ನೋವು ನಮಗೆ ಅರ್ಥವಾಗುತ್ತದೆಯೇ?’ ಯಾಕೋ ಏನೋ ಸರಿಯಿಲ್ಲ ಅಂತನ್ನಿಸಿತೋ ಏನೋ, ಮಾತನ್ನೇ ಬದಲಾಯಿಸಲಾಯಿತು. ಯಾಕೆ ನಾನು ಇಂತಹ ಸ್ಥಳಗಳಿಗೆ ಹೋಗುತ್ತಿದ್ದೇನೆ ಎಂದು ಮನಸ್ಸು ಬಾಡಿ ಹೋಗಿತ್ತು. ಕುರುಡು ಭಕ್ತೆಯಂತೆ ನಟಿಸಬೇಕಾದ ನೋವಿನ ಜೊತೆಗೆ ಮನಸ್ಸು ಇನ್ನಷ್ಟು ಕಹಿಯಾಗಿತ್ತು. ಒಂದು ರಾಜಕೀಯ ಜಂತು ಅತ್ತ ಚುನಾವಣೆಗೆ ಟಿಕೆಟ್ಟೂ ಸಿಗದೆ ಬಾಲ ಮುದುರಿಕೊಂಡಿರುವಾಗ ಇಂಥ ಅವಕಾಶವನ್ನು ಬಿಡುತ್ತದೆಯೇ? ಹೇಗಾದರೂ ತಾನು ಬದುಕಿದ್ದೇನೆ ಎಂದು ತೋರಿಸಿಕೊಳ್ಳಬೇಕಲ್ಲ? ಬಾನು ಮುಷ್ತಾಕ್ ಯಾಕೆ ದಸರಾ ಉದ್ಘಾಟನೆ ಮಾಡಬೇಕು ಎಂಬ ನೆಪದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳಲು ಹೈಕೋರ್ಟು ಮೆಟ್ಟಲು ಹತ್ತಿತ್ತು. ಅಪೀಲು ನೆಗೆದು ಬಿದ್ದು ತೆಪ್ಪಗಾಯಿತು. ಪೇಪರಲ್ಲಿ ಹೆಸರು ಬಂತಲ್ಲ, ಸದ್ಯಕ್ಕೆ ಅಷ್ಟು ಸಾಕು!  ಬೇಸರದ ವಿಷಯವೆಂದರೆ ಈ ಜಂತುವಿನ ಮತ್ತು ಆತನ ಚೇಲಾಗಳ ಹೆಸರುಗಳು ಈ ಯೂನಿವರ್ಸಲ್ ಆಶ್ರಮದಲ್ಲಿ ಸಹ ಆಗಾಗ್ಗೆ ಕೇಳಿಬರುತ್ತಿರುತ್ತವೆ.

ಸುತ್ತಮುತ್ತ ಇರುವ ಮಂದಿ ಕೂಡ ಬಾಯಿ ಬಿಟ್ಟರೆ ಇಂಥದ್ದೇ ವಿಷ ಎನ್ನುವುದು ಸಾಕಷ್ಟು ಸಲ ಅನುಭವಕ್ಕೆ ಬಂದ ಮೇಲೆ ಅಪಾರ್ಟ್ ಮೆಂಟಿನ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸುವುದು ಬಿಟ್ಟಿದ್ದೇನೆ. ನನ್ನ ಮನೆಯ ಮಂದಿಗೂ ಇದನ್ನೇ ಹೇಳಿದ್ದೆ; ‘ನೀವು ಕುಮ್ಮಕ್ಕು ಕೊಡುತ್ತಿರುವ ಈ ವಿಷ ನಿಮ್ಮ ಮಕ್ಕಳನ್ನೇ ಬಲಿ ತೆಗೆದುಕೊಳ್ಳುತ್ತದೆ, ನೆನಪಿರಲಿ!’ ಕಣ್ಣಿಗೆ ಕಣ್ಣು ಕಿತ್ತುಕೊಂಡು ಎಲ್ಲರೂ ಕುರುಡಾಗಿ ಹೋಗಲಿ, ಏನಂತೆ ಅಂತನ್ನಿಸುವ ಸ್ಥಿತಿಗೆ ಬಂದಿದ್ದೇನೆ.

ಈದ್ ಹಬ್ಬದ ದಿನ ನನ್ನ ಸ್ನೇಹಿತರ ತೋಟಕ್ಕೆ ಬೆಳಗಿನ ಉಪಾಹಾರವನ್ನು ಕಟ್ಟಿಸಿಕೊಂಡು ಹೋಗಿದ್ದೆ. ‘ಮುಸ್ಲಿಂ ಬಾಂಧವರಿಗೆ ಈದ್ ಹಬ್ಬದ ಶುಭಾಶಯಗಳು’ ಎಂದು ಬಂದಿದ್ದ ಹಲವಾರು ಮೆಸೇಜುಗಳನ್ನು ತೋರಿಸಿದರು. ‘ಹಿಂದೂ ಬಾಂಧವರಿಗೆ ಧನ್ಯವಾದಗಳು,’ ಎಂದು ಪ್ರತ್ಯುತ್ತರ ಕಳುಹಿಸಿದೆ, ಅವರಿಗೆ ಇಷ್ಟವಾಗಲಿಲ್ಲ ಎಂದರು. ‘ಭೇಷ್ ಉತ್ತರ!’ ಎಂದೆ. ಇದೊಂದು ಮಾಧ್ಯಮಗಳು, ರಾಜಕಾರಣಿಗಳು ಹುಟ್ಟುಹಾಕಿರುವ ಕಾಯಿಲೆ. ಉಳಿದಂತೆ, ‘ನಾಡಿನ ಸಮಸ್ತ ಜನತೆಗೆ ಗಣೇಶನ ಹಬ್ಬದ, ಯುಗಾದಿ ಹಬ್ಬದ ಶುಭಾಶಯಗಳು’ ಎಂದೆಲ್ಲಾ ಹೇಳುವ ಈ ಪುಢಾರಿಗಳು ‘ಮುಸ್ಲಿಂ ಬಾಂಧವರಿಗೆ’ ಎಂದು ಧರ್ಮ ಮಾಡುವ ಧ್ವನಿಯಲ್ಲಿ ಹೇಳುತ್ತಾರೆ. ಸಮಸ್ತ ಜನತೆ ಗಣೇಶ , ಯುಗಾದಿ ಹಬ್ಬಗಳನ್ನು ಮಾಡುತ್ತಾರೆಯೇ?

ಸಮುದ್ರದ ತೀರದಲ್ಲಿ ದೂರಕ್ಕೆ ಚೆಂಡನ್ನು ಎಸೆದು ನಮ್ಮ ನಾಯಿಯನ್ನು ಆಟವಾಡಿಸುತ್ತಿದ್ದ ಗಳಿಗೆಗಳು ತುಂಬ ನೆನಪಿಗೆ ಬರುತ್ತವೆ. ಬೆಳಗಿನ ಬಿಸಿಲಲ್ಲಿ ಕಂದುಬಣ್ಣದ ಮೊಜೊ ನೆಗೆನೆಗೆದು ಅದನ್ನು ತರುತ್ತಿದ್ದಾಗ ಶುದ್ಧ ಸಂತೋಷವೆಂದರೆ ಇದೇ ಅಂತನ್ನಿಸುತ್ತಿತ್ತು. ಸಹಜದಂತೆ ಕಾಣುವ ಇಂತಹ ಕಿರಿಕಿರಿ ಮನಸ್ಥಿತಿಯಲ್ಲಿ ‘ಚಾರಿತ್ರಿಕ ನೆಲೆಯಲ್ಲಿ ದಸರಾ’ ಎನ್ನುವ ಬಗ್ಗೆ ಈ ಭಾನುವಾರಕ್ಕೆ ಲೇಖನ ಬರೆದುಕೊಡಿ ಎಂದು ಆಂದೋಲನ ಹೇಳಿದಾಗ ಖುಷಿಯಾಗಿತ್ತು. ಶುದ್ಧ ಸಂತೋಷದ ಗಳಿಗೆಗಳು ಬೆರಳಿನ ಮೇಲೆ ಲೆಕ್ಕ ಹಾಕಬಹುದಾದ ಸ್ಥಿತಿಗೆ ಬಂದು ನಿಂತಿದೆ ಬದುಕು!

” ಎರಡೆರಡು ಮುಲ್ಲಾಗಳ ನಡುವೆ ಬರಹಗಾರ್ತಿಯೊಬ್ಬರು ಅನುಭವಿಸುವ ನೋವು ನಮಗೆ ಅರ್ಥವಾಗುತ್ತದೆಯೇ?’”

-ಭಾರತಿ ಹರಿಶಂಕರ್

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

9 hours ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

9 hours ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

9 hours ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

9 hours ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

9 hours ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

10 hours ago