Agricultural Advice
ಡಾ.ಜಿ.ವಿ.ಸುಮಂತ್ಕುಮಾರ್
ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ಹವಾಮಾನ ಮುನ್ಸೂಚನೆ ಆಧರಿಸಿ ಕೃಷಿ ಚಟುವಟಿಕೆ ಕೈಗೊಳ್ಳುವುದರಿಂದ ಅಧಿಕ ಇಳುವರಿ ಪಡೆದು, ಬೆಳೆ ನಷ್ಟವನ್ನು ತಪ್ಪಿಸಿಕೊಳ್ಳ ಬಹುದು. ದೆಹಲಿಯ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಆಧರಿಸಿ ರಾಜ್ಯ ಹವಾಮಾನ ಕೇಂದ್ರದ ಮಾಹಿತಿಯಂತೆ ಮೈಸೂರಿನ ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗವು ವಿವಿಧ ಮಾಧ್ಯಮಗಳ ಮೂಲಕ ಹವಾಮಾನ ಮುನ್ಸೂಚನೆ ನೀಡುತ್ತಾ ಬರುತ್ತಿದ್ದು, ರೈತರು ಇದರ ಸದುಪಯೋಗ ಪಡೆದು ಕೃಷಿ ಕಾರ್ಯ ಕೈಗೊಳ್ಳುವುದು ಸೂಕ್ತ.
ಹವಾಮಾನ ಮುನ್ಸೂಚನೆ ಆಧರಿಸಿ ಕೃಷಿ ಮಾಡುವುದು ಹೇಗೆ?:
೧.ಕೃಷಿ ಕಾರ್ಯಾಚರಣೆಗಳ ಸರಿಯಾದ ಯೋಜನೆ: ಸಕಾಲಿಕ ಬಿತ್ತನೆ, ಅಂತರ ಬೇಸಾಯ,ನೀರಾವರಿ, ಕೀಟನಾಶಕ ಸಿಂಪಡಣೆ
೨.ಕೃಷಿ ಪರಿಕರಗಳ ವೆಚ್ಚ ಉಳಿತಾಯ: ಹವಾಮಾನ ಅನುಕೂಲಕರವಾಗಿದ್ದಾಗ ಅನ್ವಯಿಸುವ ಮೂಲಕ ರಸಗೊಬ್ಬರ, ಕೀಟನಾಶಕಗಳ ವ್ಯರ್ಥವನ್ನು ತಪ್ಪಿಸಿ
೩.ಹವಾಮಾನ ವಿಪತ್ತುಗಳಿಂದ ರಕ್ಷಣೆ: ಭಾರಿ ಮಳೆ, ಗುಡುಗು, ಬರ, ಆಲಿಕಲ್ಲು ಮಳೆಯ ಸಂದರ್ಭದಲ್ಲಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಿ
೪.ಉತ್ತಮ ಇಳುವರಿ ಮತ್ತು ಆದಾಯ: ಆರೋಗ್ಯ ಕರ ಬೆಳೆ ಉತ್ತಮ ಉತ್ಪಾದಕತೆಗೆ ಕಾರಣವಾಗುತ್ತದೆ
೫.ಜಾನುವಾರು ಮತ್ತು ಕೋಳಿ ನಿರ್ವಹಣೆ: ಶಾಖದ ಒತ್ತಡ ಮತ್ತು ಶೀತದ ಅಲೆಗಳಿಂದ ರಕ್ಷಿಸಿ, ಸರಿಯಾದ ಆಶ್ರಯ ಮತ್ತು ಆಹಾರವನ್ನು ಖಚಿತಪಡಿಸಿಕೊಳ್ಳಿ
ವಿಧಗಳು:
ಸದ್ಯದ ಹವಾಮಾನ ಮುನ್ಸೂಚನೆ, ಅವಧಿ ೬ ಗಂಟೆಗಳವರೆಗೆ (ಕೆಲವು ಗಂಟೆಗಳಿಂದ ಒಂದು ದಿನದ ಮುನ್ಸೂಚನೆ) ಉದಾಹರಣೆಗೆ ಮುಂದಿನ ಕೆಲವು ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯು ರೈತರಿಗೆ ಸಲಕರಣೆಗಳನ್ನು ಭದ್ರಪಡಿಸುವುದು ಅಥವಾ ಜಾನುವಾರುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು… ಮುಂತಾದ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಅಲಾವಧಿ ಮುನ್ಸೂಚನೆ: ಅವಧಿ- ಒಂದರಿಂದ ಮೂರು ದಿನಗಳವರೆಗೆ. ಉದಾಹರಣೆಗೆ ಕೃಷಿ ಚಟುವಟಿಕೆಗಳಾದ ಮೇಲು ಗೊಬ್ಬರ ನೀಡುವುದು, ನೀರುಣಿಸುವಿಕೆ ಮತ್ತು ಸಿಂಪಡಣೆ ಮುಂತಾದವುಗಳನ್ನು ನಿರ್ಧರಿಸಬಹುದು.
ಮಧ್ಯಮ ಅವಧಿಯ ಮುನ್ಸೂಚನೆ: ಅವಧಿ- ಮೂರರಿಂದ ಹತ್ತು ದಿನಗಳವರೆಗೆ. ಉದಾಹರಣೆಗೆ ಮುಂದಿನ ವಾರ ಬಿಸಿಲಿನ ವಾತಾವರಣವನ್ನು ಸೂಚಿಸುವ ಮುನ್ಸೂಚನೆಯು ರೈತರಿಗೆ ಬೆಚ್ಚಗಿನ ಮಣ್ಣಿನ ತಾಪಮಾನದ ಅವಶ್ಯಕತೆ ಇರುವ ಬೀಜಗಳನ್ನು ನೆಡುವುದನ್ನು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ.
ದೀರ್ಘಾವಧಿಯ ಮುನ್ಸೂಚನೆಗಳು: ಅವಧಿ-ಹತ್ತು ದಿನಗಳು, ಒಂದು ತಿಂಗಳು ಮತ್ತು ಒಂದು ಋತುವಿಗಾಗಿ. ಉದಾಹರಣೆಗೆ ಮುಂಬರುವ ಮಾನ್ಸೂನ್ ಋತುವಿನಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ಊಹಿಸುವ ಋತುಮಾನದ ಮುನ್ಸೂಚನೆಗಳು ರೈತರಿಗೆ ಸಂಭವನೀಯ ಪ್ರವಾಹಕ್ಕೆ ತಯಾರಿ ಮಾಡಲು ಮತ್ತು ಬರ-ನಿರೋಧಕ ಬೆಳೆಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.
ಮೇಘದೂತ್ ತಂತ್ರಾಂಶ:
ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಅನು ಸಂಧಾನ ಪರಿಷತ್ ಜೊತೆಯಾಗಿ ಹವಾಮಾನ ಆಧಾರಿತ ಕೃಷಿ ಚಟುವಟಿಕೆಗಳ ಬಗ್ಗೆ ರೈತರಿಗೆ ಸ್ಥಳೀಯ ಭಾಷೆಯಲ್ಲೇ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರ ಮತ್ತು ಭೂ ವಿಜ್ಞಾನ ಸಚಿವಾಲಯದ ನೆರವಿ ನೊಂದಿಗೆ ‘ಮೇಘದೂತ್’ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇನ್ನು ಮುಂದೆ ರೈತರು ‘ಮೇಘದೂತ್’ ತಂತ್ರಾಂಶವನ್ನು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ ಲೋಡ್ ಮಾಡಿಕೊಂಡು ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ ಪಡೆದುಕೊಳ್ಳಬಹುದು.
ತಂತ್ರಾಂಶದಲ್ಲಿ ಏನಿದೆ?:
ಎಲ್ಲಾ ಬೆಳೆಗಳ ಮಾಹಿತಿ, ಸರ್ಕಾರದ ಅಧಿಸೂಚನೆ, ಹಿಂದಿನ ಐದು ದಿನಗಳ ಹಾಗೂ ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ, ಪ್ರತಿ ದಿನದ ಉಷ್ಣಾಂಶ, ಆರ್ದ್ರತೆ, ಮೋಡ, ಗಾಳಿಯ ದಿಕ್ಕು ಮತ್ತು ಗಾಳಿಯ ವೇಗವನ್ನು ತಿಳಿದುಕೊಳ್ಳಬಹುದು. ದೆಹಲಿಯ ಐಟಿಟಿಎಂ ಮತ್ತು ಪುಣೆಯ ಐಎಂಡಿ ಸಹಯೋಗದೊಂದಿಗೆ ಹೈದರಾಬಾದ್ನ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ ಇಂಟರ್ ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ ಏರಿಡ್ ಟ್ರಾಫಿಕ್ಸ್ (ಐಸಿಆರ್ಐಎಸ್ಎಟಿ) ಸಂಸ್ಥೆಯು ಡಿಜಿಟಲ್ ಅಗ್ರಿಕಲ್ಚರಲ್ ರಿಸರ್ಚ್ ಥೀಮ್ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ಅಗತ್ಯಕ್ಕೆ ಅನುಗುಣವಾಗಿ ಮಾಹಿತಿ ಪೂರೈಸುವ ಕೆಲಸ ಮಾಡುತ್ತಿದೆ. ಕರ್ನಾಟಕದ ೩೦ ಜಿಲ್ಲೆಗಳು ಸೇರಿದಂತೆ ದೇಶದ ಒಟ್ಟು ೧೫೦ ಜಿಲ್ಲೆಗಳಲ್ಲಿ ಪ್ರಯೋಗಾರ್ಥವಾಗಿ ಈ ತಂತ್ರಜ್ಞಾನ ಬಳಕೆಗೆ ಚಾಲನೆ ನೀಡಲಾಗಿದೆ. ೨೦೧೯ರ ಆಗಸ್ಟ್ನಲ್ಲಿ ಈ ಆಪ್ ಅನ್ನು ಪರಿಚಯಿಸಲಾಗಿದ್ದು, ಅದರಲ್ಲಿದ್ದ ಕೆಲವು ಲೋಪಗಳನ್ನು ಸರಿಪಡಿಸಿ ಈಗ ಮತ್ತಷ್ಟು ರೈತ ಸ್ನೇಹಿಗೊಳಿಸಲಾಗಿದೆ.
ಮೌಸಮ್ ತಂತ್ರಾಂಶ:
‘ಮೌಸಮ್’ ತಂತ್ರಾಂಶವನ್ನು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡರೆ ಮಳೆ ಮುನ್ಸೂಚನೆ ಮತ್ತು ಕೃಷಿ ಸಲಹೆಗಳನ್ನು ತಿಳಿದುಕೊಳ್ಳಬಹುದು.
(ಲೇಖಕರು: ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು)
ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್ ಬಳಿಯ ಅರ್ಪೊರಾದ ನೈಟ್ಕ್ಲಬ್ ಬೀರ್ಚ್ ಬೈ ರೋಮಿಯೋ ಲೇನ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…
ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…
ಗೋವಾ: ಇಲ್ಲಿನ ನೈಟ್ ಕ್ಲಬ್ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್…
ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…
ನಿಕೋಟಿನ್, ಪಾನ್ ಮಸಾಲಾ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಪ್ರಸ್ತಾವಿಸಿದ ಆರೋಗ್ಯ ಮತ್ತು…
ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ ,…