• ಎನ್.ಕೇಶವಮೂರ್ತಿ
ಮಂಡ್ಯ ಸಮೀಪದ ಹಳ್ಳಿಯೊಂದರಲ್ಲಿ ಹೂವಿನ ಬೇಸಾಯ ಮಾಡುವ ಕುಟುಂಬವೊಂದಿದೆ. ಈ ಕುಟುಂಬ ತಮ್ಮ ಎರಡು ಎಕರೆ ಜಮೀನಿನಲ್ಲಿ ಸೇವಂತಿಗೆ, ಕಾಕಡ, ಕನಕಾಂಬರ, ಸುಗಂಧರಾಜ, ಮಲ್ಲಿಗೆ ಹೂಗಳನ್ನು ಬೆಳೆಯುತ್ತಾರೆ.
ಕೈತೂಕದಲ್ಲಿ ನೀರು ಹೊತ್ತು ಬೆಳೆಯುವುದೂ ಇದೆ. ಕಷ್ಟಪಟ್ಟು ಬೆಳೆದ ಹೂವನ್ನು ಇವರು ಮಾರೋದು ಹಳ್ಳಿಗಳ ಸಂತೆಗಳಲ್ಲಿಯೇ ಹೊರತು ನಗರಗಳ ಮಾರುಕಟ್ಟೆಗಳಲ್ಲಿ ಅಲ್ಲ.
ಏಕೆ ಹೀಗೆ? ಎಂದು ಪ್ರಶ್ನಿಸಿದರೆ ರೈತರು ಹೇಳುವುದು, ‘ಸರ್ ಈ ಸಂತೆ ನಮಗೆ ಹತ್ತಿರ, ಸೈಕಲ್ನಲ್ಲಿ ಬರಬಹುದು, ಬಹಳ ಜನ ಗ್ರಾಹಕರು ಪರಿಚಯ ಆಗಿರುವುದರಿಂದ ಮಾರಾಟ ಬೇಗ ಆಗುತ್ತೆ, ತಕ್ಷಣ ಹಣ ಸಂದಾಯವೂ ಆಗಿ ನಾವು ತಂದೆ ಮಕ್ಕಳು ಸೇರಿ, ಬೆಳಗಿನ ನಾಲ್ಕಾರು ಗಂಟೇಲಿ ಕಟ್ಟಿದ ಹೂ ಮಾರಿಬಿಡ್ತೀವಿ. ಮಾರಿದ ಮೇಲೆ ಮನೆಗೆ ಹೋಗಿ ತಿಂಡಿ ತಿಂತೀವಿ. ಬೇರೆ ಖರ್ಚು ಇರೋಲ್ಲ. ಒಮ್ಮೊಮ್ಮೆ ಹೂವಿನ ಜತೆ ಬೆಳೆದ ತರಕಾರಿಯನ್ನೂ ಹೀಗೇ ಮಾರ್ತೀವಿ. ನಮಗೋಸ್ಕರ ಕಾಯುವ ಗ್ರಾಹಕರಿದ್ದಾರೆ. ಮುಂಗಡವಾಗಿ ಹಬ್ಬ ಹರಿದಿನಗಳಲ್ಲಿ ಹಣ ನೀಡುವವರಿದ್ದಾರೆ. ನಮ್ಮ ಹೂವಿನ ಗುಣಮಟ್ಟ ಉತ್ತಮವಾಗಿರುವುದರಿಂದ ನಮಗೆ ನಾವು ಬೆಳೆದಿರೋದನ್ನು ಮಾರಲು ಎಂದಿಗೂ ಸಮಸ್ಯೆಯಾಗಿಲ್ಲ. ಪೇಟೆಗಿಂತ ಬೆಲೆ ಕಡಿಮೆ ಇರಬಹುದು. ಆದರೆ ಉಳಿದ ಖರ್ಚು ಕಡಿಮೆಯಾಗಿರುವುದರಿಂದ ಲಾಭಕ್ಕೇನೂ ಮೋಸವಿಲ್ಲ ಅಂತಾರೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಎಲ್ಲೆಲ್ಲೂ ಹುಡುಕುವ ನಾವು ನಮ್ಮ ಹಳ್ಳಿ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದ್ದೆಲ್ಲಿ? ದೀಪದ ಕೆಳಗೆ ಕತ್ತಲೆ ಅಂತಾ ಇದಕ್ಕೇ ಹೇಳ್ತಾರೇನೋ…!
ಸುಮ್ಮನೆ ಒಂದು ಹಳ್ಳಿನ ಉದಾಹರಣೆಗೆ ತೆಗೆದುಕೊಳ್ಳೋಣ. ಐದುನೂರು ಮನೆಗಳ ಗ್ರಾಮ ಅಂದುಕೊಳ್ಳಿ. ಒಂದೊಂದು ಮನೆಯವರೂ ಹಾಲು, ಮೊಸರು, ಬೆಣ್ಣೆ, ತುಪ್ಪ, ಹಣ್ಣು, ತರಕಾರಿ, ಸೊಪ್ಪು, ಅಕ್ಕಿ, ರಾಗಿ, ಬೇಳೆಕಾಳುಗಳು, ಎಣ್ಣೆ, ಸಾಂಬಾರ ಪದಾರ್ಥಗಳು ಹೀಗೆ ಮನೆಗೆ ಬೇಕಾದ ಇತರೇ ವಸ್ತುಗಳಿಗಾಗಿ ಕನಿಷ್ಠ ಮೂರು ಸಾವಿರ ರೂ.ಗಳಾದರೂ ಖರ್ಚಾಗಲಿದೆ. ಇವುಗಳಲ್ಲಿ ಒಂದಿಷ್ಟನ್ನು ರೈತರು ತಾವೇ ಬೆಳೆದುಕೊಳ್ಳುತ್ತಾರೆ. ಆದರೆ ಬಹುಪಾಲು ರೈತರೂ ತಮ್ಮ ಮನೆ ಅಗತ್ಯಗಳಿಗಾಗಿ ಮಾರುಕಟ್ಟೆ ಅವಲಂಬಿಸಿದ್ದಾರೆ. ಅಂದಾಜಿನ ಪ್ರಕಾರ ಐದುನೂರು ಮನೆಗಳ ಗ್ರಾಮವೊಂದು ಪ್ರತಿ ತಿಂಗಳು ಏನಿಲ್ಲ ಎಂದರೂ ಮಾರುಕಟ್ಟೆ ಮೌಲ್ಯ ಹದಿನೈದರಿಂದ ಇಪ್ಪತ್ತು ಲಕ್ಷ ರೂ. ಖರ್ಚು ಮಾಡುತ್ತಿದೆ. ಈ ಮಾರುಕಟ್ಟೆಯನ್ನು ಯಾವ ರೈತ ಬಳಸಿಕೊಳ್ಳುತ್ತಿದ್ದಾನೆ? ಇದರ ಬದಲು ಸಮೀಪದ ಪಟ್ಟಣಕ್ಕೆ ಹೋಗಿ ಇತರೇ ಗ್ರಾಹಕರಂತೆ ಖರೀದಿಸುತ್ತಿದ್ದಾನೆ.
ಪಟ್ಟಣಕ್ಕೆ ಹೋಗಿ ಬರುವ, ಅಲ್ಲಿ ಶೋಕಿ ಮಾಡುವ, ಸಿನಿಮಾ ಹೋಟೆಲ್ ಖರ್ಚು, ಅಲ್ಲದೆ ಪಾನಪ್ರಿಯರಾದರೆ ಅದರ ಖರ್ಚು ಎಲ್ಲ ಸೇರಿ ತಿಂಗಳಿಗೆ ಮೂರರಿಂದ ಐದು ಸಾವಿರ ರೂ. ಹೆಚ್ಚು ಖರ್ಚು. ಅದೂ ಮನೆಗೆ ಬೇಕಾಗಿದ್ದ ಸಾಮಾನು ತರಲು ಆಗುವ ಖರ್ಚಿಗೆ ಕೊಸರು. ರೈತರು ಪ್ರಾಪಂಚಿಕ ಸುಖಗಳಿಂದ ದೂರ ಇರಬೇಕು ಅಂತಾ ಹೇಳುವುದು ನನ್ನ ಉದ್ದೇಶವಲ್ಲ. ಬದಲಿಗೆ ಆದಾಯ ಹಾಗೂ ವೆಚ್ಚದ ಮೂಲ ಹುಡುಕುವುದೇ ಆಗಿದೆ.
ನಾನು ಹೇಳುವುದಿಷ್ಟು. ನಮ್ಮ ಮಾರುಕಟ್ಟೆ ಬೇರೆಲ್ಲೂ ಇಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಇದೆ. ನಮ್ಮ ಹಳ್ಳಿಯಲ್ಲಿಯೇ ಇದೆ. ನಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿದೆ. ಮೊದಲು ಆ ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳೋಣ, ಸದ್ಬಳಕೆ ಮಾಡಿಕೊಳ್ಳೋಣ. ನಂತರ ಬೇರೆ ಮಾರುಕಟ್ಟೆ ನಿಧಾನವಾಗಿ ನಮಗೆ ಅರ್ಥವಾಗುತ್ತೆ.
ಮೊದಲು ಮನೆ ಗೆದ್ದು ನಂತರ ಮಾರುಕಟ್ಟೆ ಗೆಲ್ಲಬೇಕಲ್ಲವೇ?
(keshavamurthy.n@gmail.com) (ಅಂಕಣಕಾರರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಕರು)
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನಡುವೆ ನಾಟಿ ಕೋಳಿಯ ಬಗ್ಗೆ ಚರ್ಚೆ…
ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿಯಡಿ ಇದುವರೆಗೆ 2,84,802 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ…
ಬೆಳಗಾವಿ (ಸುವರ್ಣಸೌಧ) : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೇಬಲ್ ಟಿವಿ ಆಪರೇಟರ್ಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು…
ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…
ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…
ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…