ಡಿ.ಎನ್‌ ಹರ್ಷ

ದೇಶದಲ್ಲಿ ಕೈತುಂಬಾ ಸಂಬಳ, ವಾಸ ಮಾಡಲು ಉತ್ತಮ ಮನೆ, ಓಡಾಡಲು ಕಾರು, ಹೀಗೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದರೂ ಮನದಲ್ಲಿ ತನ್ನ ದೇಶಕ್ಕೆ ಮರಳ ಬೇಕೆನ್ನುವ ತುಡಿತ ಹೊಂದಿರುತ್ತಾರೆ ಬೆರಳೆಣಿಕೆ ಮಂದಿ. ಅಮೆರಿಕದಲ್ಲಿ ತಿಂಗಳಿಗೆ ಆರು ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಸುರೇಶ್ ದೇವಾಂಗರವರು, ಹತ್ತು ವರ್ಷಗಳ ಹಿಂದೆ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಬಂದು ಮೈಸೂರು ಜಿಲ್ಲೆ ಎಚ್. ಡಿ. ಕೋಟೆ ತಾಲ್ಲೂಕು ಹಂಪಾಪುರ ಹೋಬಳಿ ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ ‘ಹೊಸ ಚಿಗುರು’ ಎನ್ನುವ ಅದ್ಭುತ ತೋಟ ಮಾಡಿದ್ದಾರೆ.

ಕೆಲವರ ಹತ್ತಿರ, ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮರಳಿ ಮಣ್ಣಿಗೆ, ಮರಳಿ ಗೂಡಿಗೆ ಬಂದೆ ಎನ್ನುವ ವಾಕ್ಯವನ್ನು ಪ್ರೀತಿಯಿಂದ ಹೇಳುತ್ತಾರೆ. ಸುರೇಶ್ ಕಂಪ್ಯೂಟರ್ ಇಂಜಿನಿಯರ್ ಪದವೀಧರರಾಗಿದ್ದು, ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ೧೧ ವರ್ಷಗಳು ಸೇರಿದಂತೆ, ೨೦ ವರ್ಷಗಳ ಕಾಲ ದೇಶ ಮತ್ತು ವಿದೇಶಗಳಲ್ಲಿ ಕೆಲಸ ಮಾಡಿ, ಈಗ ಕೃಷಿ ಕ್ಷೇತ್ರವನ್ನು ಮುಖ್ಯ ಕಸುಬಾಗಿಸಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ.

ತಮ್ಮ ೬ ಎಕರೆ ೧೬ ಗುಂಟೆ ನೀರಾವರಿ ಜಮೀನನ್ನು ೧೩ ಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ. ‘ಹೊಸ ಚಿಗುರು’ ತೋಟದಲ್ಲಿ ಮುಖ್ಯವಾಗಿ ಕೃಷಿ ಸಂರಕ್ಷಣೆಗಾಗಿ ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ಕೃಷಿ ಅರಣ್ಯದ ಜೊತೆಗೆ ಹೈನುಗಾರಿಕೆ ಮತ್ತು ಮೇಕೆ ಸಾಕಾಣಿಕೆಯನ್ನು ಕೂಡ ಮಾಡುತ್ತಾ ಇದ್ದಾರೆ. ತೋಟಗಾರಿಕೆ ಬೆಳೆಗಳಲ್ಲಿ ಮುಖ್ಯವಾಗಿ ಅಡಕೆ, ತೆಂಗು, ಬಾಳೆ, ಮಾವು, ಕಾಳು ಮೆಣಸು, ಸೀಬೆ, ನಿಂಬೆ, ದಾಳಿಂಬೆ, ಸೀತಾಫಲ, ಸಪೋಟ, ರಾಮಫಲ, ಚಕ್ಕೋತ ಇದ್ದು, ತರಕಾರಿ ಹಾಗೂ ಸೊಪ್ಪಿನ ಬೆಳೆಗಳು, ಏಕದಳ ಬೆಳೆಗಳು, ದ್ವಿದಳ ಬೆಳೆಗಳು, ಎಣ್ಣೆಕಾಳು ಬೆಳೆಗಳನ್ನು ಬೆಳೆಯುತ್ತಾ ಇದ್ದು, ಅಜೋಲ ಮತ್ತು ಜೇನು ಸಾಕಾಣಿಕೆ ಕೂಡ ಮಾಡುತ್ತಾ ಇದ್ದಾರೆ. ಭೂಮಿಯ ಕೊನೆಯ ಭಾಗದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದು, ಅದರ ಸುತ್ತ ವಿವಿಧ ಜಾತಿಗಳ ಮರಗಳನ್ನು ಬೆಳೆಸುತ್ತಾ ,ಜಲ ಮರುಪೂರಣದ ಮೂಲಕ ನೀರಿನ ಸದ್ಬಳಕೆ ಮಾಡಿಕೊಂಡಿದ್ದಾರೆ. ಹಾಗೆ ಹೂವಿನ ಗಿಡಗಳು, ಬಹುಪಯೋಗಿ ಮರಗಳು, ಔಷಧೀಯ ಹಾಗೂ ಸುಗಂಧ ಸಸ್ಯಗಳು, ಪುದೀನ, ತುಳಸಿ, ದೊಡ್ಡಪತ್ರೆ, ಸಾಗವಾನಿ, ಅಡಕೆ, ಸಂಪಿಗೆ, ಹಲಸು, ನೇರಳೆ, ಬಿದಿರು, ಕಿತ್ತಳೆ, ಚಕ್ಕೆ-ಲವಂಗ, ಏಲಕ್ಕಿ, ನೆಲ್ಲಿಕಾಯಿ ಇತ್ಯಾದಿಗಳನ್ನೂ ಬೆಳೆದಿರು ವುದು ಇಲ್ಲಿನ ವಿಶೇಷ.

ಎರೆಗೊಬ್ಬರ ಘಟಕ, ಅಜೋಲ, ಕುಟೀರ (ಸಭಾಂಗಣ) ಕೃಷಿ ಹೊಂಡ, ಕೈ ತೋಟದ ಜೊತೆ ಮಕ್ಕಳ ಉದ್ಯಾನ ಕೂಡ ಇದ್ದು, ನೂರಾರು ಮಕ್ಕಳು ‘ಹೊಸ ಚಿಗುರು’ಫಾರ್ಮ್‌ಗೆ ಬಂದು ಹೋಗುವುದು ಸಹಜವಾಗಿದೆ. ಭವಿಷ್ಯದಲ್ಲಿ ಶಾಲಾ ವಿದ್ಯಾರ್ಥಿ ಗಳಿಗೆ ಪ್ರಾಕ್ಟಿಕಲ್ ಆಗಿ ಕೃಷಿಯ ಬಗ್ಗೆ ತಿಳಿಸಿಕೊಡಬೇಕು ಎನ್ನುವ ತುಡಿತ ಹೊಂದಿದ್ದು, ಮೈಸೂರು ನಗರಕ್ಕೆ ಹತ್ತಿರ ಇದ್ದು, ಹಸಿರಿನಿಂದ ಕಂಗೊಳಿಸುತ್ತಾ ಇರುವ ‘ಹೊಸ ಚಿಗುರು’ ತೋಟವನ್ನು ಕೃಷಿ ಪ್ರವಾಸೋದ್ಯಮ ತಾಣವಾಗಿ ಮಾರ್ಪಾಟು ಮಾಡಬೇಕು ಎನ್ನುವ ಆಲೋಚನೆ ಹೊಂದಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನ ಹೊಸ ಚಿಗುರು ತೋಟದಲ್ಲಿ ಆಯೋಜನೆ ಮಾಡಿದ್ದರಿಂದ, ಆಸಕ್ತ ಆರು ನೂರಕ್ಕೂ ಹೆಚ್ಚು ಜನ ಕೃಷಿಕರು, ಗ್ರಾಹಕರು ಸುರೇಶ್ ದೇವಾಂಗರ ತೋಟಕ್ಕೆ ಭೇಟಿ ಕೊಟ್ಟು, ಪರಸ್ಪರ ಕೃಷಿ ಬಗೆಗಿನ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಮೂಲತಃ ಶಿವಮೊಗ್ಗದ ಚಿನ್ನಮನೆ ಗ್ರಾಮದವರಾಗಿರುವ ಸುರೇಶ್ ದೇವಾಂಗ ಅವರು, ಸಾಲುಮರದ ತಿಮ್ಮಕ್ಕರವರ ಕಾಯಕದಿಂದ ಸ್ಛೂರ್ತಿ ಹೊಂದಿ, ಇಲ್ಲಿಗೆ ಬಂದು ಆರೋಗ್ಯ – ಆಹಾರ, ಕೃಷಿ – ಕಾಡು, ಮಳೆ-ಬೆಳೆ ಎನ್ನುವ ತತ್ವದಡಿ ಕೃಷಿ ಮಾಡುತ್ತಾ ಇರುವುದು ವಿಶೇಷವೇ ಸರಿ. ಪತ್ನಿ ಸ್ಮಿತಾ ದೇವಾಂಗ ಹಾಗೂ ಮಕ್ಕಳಾದ ಅಭಿಜ್ಞಾ ದೇವಾಂಗ, ಅಧೀರ ದೇವಾಂಗ ಸಹಕಾರದಿಂದ ಅಂದುಕೊಂಡ ಹಾಗೆ ಕೃಷಿ ಮಾಡಲು ಸಾಧ್ಯವಾಗಿದೆ ಎಂದು ಗೌರವ ದಿಂದ ನೆನೆಯುತ್ತಾರೆ.

ಸುರೇಶ ದೇವಾಂಗರಿಗೆ ಕೃಷಿ ಪಂಡಿತ ಪ್ರಶಸ್ತಿ, ತಾಲ್ಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ ಮೆಂಟ್ ಆರ್ಗನೈಜೇಷನ್ ವತಿ ಯಿಂದ ಬಾನುಲಿ ಕೃಷಿ ಬೆಳಗು ಕಾರ್ಯ ಕ್ರಮದಲ್ಲಿ ಸುರೇಶ್-ಸ್ಮಿತಾ ದೇವಾಂಗ ದಂಪತಿಗೆ ‘ಕೃಷಿ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆಸಕ್ತರು ಸುರೇಶ್ ದೇವಾಂಗ ಮೊ. ೯೪೮೦೯ ೮೮೪೮೭ ಸಂಪರ್ಕಿಸಬಹುದು.

 

ಆಂದೋಲನ ಡೆಸ್ಕ್

Recent Posts

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣಗೆ ಬಿಗ್‌ ಶಾಕ್‌

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಕೈಬಿಡುವಂತೆ ಕೋರಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ…

5 hours ago

ಟಿ.ನರಸೀಪುರ| ಆನೆ ದಾಳಿಗೆ ರೈತ ಬಲಿ

ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್‌ ಠಾಣೆ ವ್ಯಾಪ್ತಿಯ…

8 hours ago

ಮೈಸೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಪೂರೈಸುತ್ತಿದ್ದ ಇಬ್ಬರ ಬಂಧನ

ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…

9 hours ago

ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಿ: ದಿನೇಶ್‌ ಗೂಳಿಗೌಡ

ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಕರ್ನಾಟಕ ರಾಜ್ಯ…

9 hours ago

ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…

9 hours ago

ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತಕ್ಕೆ ತಲುಪಿದ ಎಸ್‌ಐಟಿ ತನಿಖೆ

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…

9 hours ago