ಅನ್ನದಾತರ ಅಂಗಳ

ಹೈನುಗಾರಿಕೆಯಲ್ಲೊಂದು ಹೊಸ ದಾರಿ ಸಾವಯವ ಪಶುಪಾಲನೆ…

ಭಾರತದಲ್ಲಿ ವೇದ-ಉಪನಿಷತ್ತು, ರಾಮಾಯಣ, ಮಹಾಭಾರತದ ಕಾಲದಿಂದಲೂ ‘ಗೋವು ಆಧಾರಿತ ಕೃಷಿ’ ಮಾಡಲಾಗುತ್ತಿತ್ತು. ರಾಜ, ಮಹಾರಾಜರು ಹಾಗೂ ಶ್ರೀ ಸಾಮಾನ್ಯರ ಸಂಪತ್ತು ಮತ್ತು ಶ್ರೀಮಂತಿಕೆಯನ್ನು ಗೋವುಗಳ ಸಂಖ್ಯೆ, ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಗೊಬ್ಬರ (ತಿಪ್ಪೆಗಳು) ಪ್ರಮಾಣದ ಮೇಲೆ ಅಳೆಯಲಾಗುತ್ತಿತ್ತು.

ಗೀತಾಚಾರ್ಯನಾದ ಶ್ರೀ ಕೃಷ್ಣ ಪರಮಾತ್ಮನ ಉದ್ಯೋಗ ಗೋಪಾಲನೆ ಮಾಡುವ ಗೋಪಾಲಕ ವೃತ್ತಿಯಾಗಿತ್ತು. ಅಣ್ಣ ಬಲರಾಮನ ಉದ್ಯೋಗ ಸಮಗ್ರ ಕೃಷಿಯಾಗಿತ್ತು. ಈ ಗೋವು ಆಧಾರಿತ ಕೃಷಿಯು ಸರಿ ಸುಮಾರು ೧೯೫೦ರ ತನಕವೂ ಮುಂದುವರೆದಿತ್ತು. ಆಗೆಲ್ಲಾ ಹಸುವಿನ ಹಾಲನ್ನು ಅಮೃತವೆಂದೇ ಪರಿಗಣಿಸಿ ಸರ್ವರೂ ಬಳಸುತ್ತಿದ್ದರು.

ದುರದೃಷ್ಟವಶಾತ್ ಈಗೀಗ ಹಸುವಿನ ಹಾಲನ್ನು ಬಿಳಿಯ ವಿಷಗಳ ಸಾಲಿಗೆ ಸೇರಿಸಲಾಗುತ್ತಿದೆ ಹಾಗೂ ಆರೋಗ್ಯಕ್ಕೆ ಹಾನಿಕರ ಎಂದೇ ಬಿಂಬಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ, ಪಶು ಪಾಲನೆಯಲ್ಲಿ ಅನೇಕ ರೀತಿಯ ಲಾಬಿಗಳು ಒಳನುಗ್ಗಿ ವಿಷ, ರಾಸಾಯನಿಕಗಳು ಸದ್ದಿಲ್ಲದೆ ಪಶುಪಾಲನಾ ವೃತ್ತಿಯೊಳಗೆ ಪ್ರವೇಶಿಸಿ ಅಮೃತ ಸಮಾನ ಹಾಲನ್ನು ವಿಷವೆಂದು ಅನುಮಾನ ಪಡುವಂತೆಮಾಡುತ್ತಿರುವುದು ಎಷ್ಟು ಸರಿ? ಎಷ್ಟು ನ್ಯಾಯ ಎಂದು ನಾವೇ ಪ್ರಶ್ನಿಸಿಕೊಳ್ಳಬೇಕು. ನಿಜವಾದ ಸತ್ಯವೆಂದರೆ ಹಸುವಿನ ಹಾಲು ಸಂಪೂರ್ಣವಾಗಿ ನಿಸರ್ಗ ನಮಗಾಗಿ ಒದಗಿಸಿರುವ ಆಹಾರವಾಗಿದೆ. ಮಕ್ಕಳಿಂದ ವಯೋ ವೃದ್ಧರವರೆಗೂ ಉತ್ತಮವಾದ ಅಮೃತವಾಗಿದೆ.

ಜನ್ಮದಾತೆ ಒಂದೆರಡು ವರ್ಷಗಳಷ್ಟೇ ಎದೆಹಾಲು ಕುಡಿಸಿ ಸಲಹಿದರೆ, ಗೋಮಾತೆ ಪ್ರಾಣ ಬಿಡುವವರೆಗೆ ನಮ್ಮನ್ನುಹಾಲು ನೀಡಿ ಕಾಪಾಡುತ್ತಾಳೆ. ಹಾಲಿನಲ್ಲಿ ಮನುಷ್ಯನ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಕೊಬ್ಬು, ಪ್ರೋಟೀನ್, ಲ್ಯಾಕ್ಟೋಸ್, ವಿಟಮಿನ್‌ಗಳು, ಲವಣಗಳು, ಜೀವ ಸಲಹುವ ಬ್ಯಾಕ್ಟೀರಿಯಾಗಳು (ಪ್ರೊ ಬಯೋಟಿಕ್) ಇದ್ದು, ಸತ್ವಯುತ ಅತ್ಯಗತ್ಯವಾದ ಸಂಪೂರ್ಣವಾದ ಆಹಾರವಾಗಿದೆ. ವಿಶ್ವದಲ್ಲಿ ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಹಾಗೇ ಕರ್ನಾಟಕ ರಾಜ್ಯವೂ ದೇಶದಲ್ಲಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ.

ಆದರೆ, ಗುಣಮಟ್ಟದ ಹಾಲಿನ ಉತಾದನೆಯಲ್ಲಿ ಹಾಗೂ ಪರಿಶುದ್ಧ ಹಾಲನ್ನು ಪಡೆಯುವಲ್ಲಿ ಹಿಂದೆ ಉಳಿದಿದ್ದೇವೆ. ಶುದ್ಧ, ಅಮೃತ ಸಮಾನ ಹಾಲಿನ ಉತ್ಪಾದನೆಯನ್ನು ಎಲ್ಲರೂ ಮಾಡಲು ಇರುವ ಮಾರ್ಗವೆಂದರೆ‘ಸಾವಯವ ಹೈನುಗಾರಿಕೆ’ ಅಥವಾ ವೈಜ್ಞಾನಿಕ ಹಾಲಿನ ಉತ್ಪಾದನಾ ಪದ್ಧತಿಗಳನ್ನು ನಮ್ಮ ಎಲ್ಲಾ ಪಶುಪಾಲಕರು ಅಳವಡಿಸಿಕೊಳ್ಳುವುದು ಅಗತ್ಯ.

ಸಾವಯವ ಹೈನುಗಾರಿಕೆಯ ಪ್ರಮುಖ ಅಂಶಗಳು…: 

* ಗೋಡೆ ರಹಿತ ತೆರೆದ ಶುದ್ಧ ಗಾಳಿಯಾಡುವ ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳುವುದು.

* ಹಸುಗಳನ್ನು ಕಟ್ಟಿಹಾಕಿ ಒತ್ತಡವನ್ನು ನೀಡದೆ, ಸಾಧ್ಯವಾದಷ್ಟು ನೈಸರ್ಗಿಕವಾಗಿ ಜೀವಿಸಲು ಅನುವು ಮಾಡಿಕೊಡಬೇಕು

* ಮೇವು ಬೆಳೆಯುವ ಭೂಮಿಗೆ ತಮ್ಮದೇ ಹಸುಗಳಿಂದ ಪಡೆಯುವ ಗೊಬ್ಬರಗಳನ್ನುಒಳಸಿಕೊಂಡು ರಸಸಾರ ಮಾಡಿಕೊಳ್ಳುವುದು, ಜೀವಾಮೃತ ತಯಾರಿ, ಪಂಚಗವ್ಯ ತಯಾರಿಸಿ, ಪಶು ಆಹಾರದ ಬೆಳೆಗಳನ್ನು ಬೆಳೆದುಕೊಳ್ಳುವುದು.

* ಪಶು ಮೇವು ಬೆಳೆಯುವ ಭೂಮಿಗೆ ಕಳೆನಾಶಕಗಳು, ವಿಷ, ರಾಸಾಯನಿಕಗಳನ್ನು ಬಳಕೆ ಮಾಡುವುದನ್ನು ಕೈ ಬಿಡಬೇಕು

* ಹೈನು ರಾಸುಗಳಿಗೆ ಕೃತಕ ಹಾಲು ಪ್ರಚೋದಕಗಳನ್ನು ಟಾನಿಕ್ ಹೆಸರಿನ ರಾಸಾಯನಿಕಗಳು ಹಾಗೂಹಾರ್ಮೋನು ಇಂಜೆಕ್ಷನ್‌ಗಳನ್ನು ಕೊಡಿಸುವುದನ್ನು ಕೈಬಿಡುವುದು

* ಪಶುಗಳ ಸರ್ವತೋಮುಖ ಆರೋಗ್ಯವನ್ನು ಕಾಪಾಡುವ ಏಕದಳ ಧಾನ್ಯಗಳಾದ ರಾಗಿ, ಮುಸುಕಿನ ಜೋಳ, ಮಲ್ಟಿಕಟ್ ಜೋಳ, ಗಿನಿ, ಸಿರಿಧಾನ್ಯಗಳ ಹುಲ್ಲು (ಹಸಿ-ಒಣ)ಗಳನ್ನು ಹೆಚ್ಚು ಹೆಚ್ಚು ನೀಡುವುದು

* ದ್ವಿದಳ ಧಾನ್ಯ ಮೇವಾದ ಅಲಸಂದೆ, ವೆಲ್ಪೆಟ್ ಬೀನ್ಸ್, ಹುರುಳಿ, ಅವರೆ, ಉದ್ದು, ಹೆಸರುಕಾಳು ಇತ್ಯಾದಿಗಳನ್ನು ಹಸಿ ಹಾಗೂ ಒಣಗಿಸಿ ನೀಡುವುದು

ಸಾವಯವ ಹಾಗೂ ಶುದ್ಧ ಹಾಲಿನ ಮಹತ್ವ ? :

* ಹಾಲಿನ ಗುಣಮಟ್ಟ ಉತ್ತಮವಾಗಿದ್ದರೆ, ಉತ್ತಮ ದರ ನಿಗದಿಯಾಗುತ್ತದೆ

* ಹಾಲು ಸುದೀರ್ಘಕಾಲ ತಾಜಾ ಇರುತ್ತದೆ

* ಮಾರಕರೋಗಗಳನ್ನು ನಿಯಂತ್ರಿಸಬಹುದು

* ಪೋಷಕಾಂಶಭರಿತವಾದ ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಪಡೆದುಕೊಂಡು ಉತ್ತಮ ಬೇಡಿಕೆಯನ್ನು ಸೃಷ್ಟಿಸಿ ಮಾರುಕಟ್ಟೆಯನ್ನು ಪಡೆದುಕೊಳ್ಳಬಹುದು

* ವಿದೇಶಿ ಮಾರುಕಟ್ಟೆಯಲ್ಲಿ ಶುದ್ಧ, ಸಾವಯವ ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದು, ಪಶುಪಾಲಕರು ಹಾಗೂ ರಾಷ್ಟ್ರ, ರಾಜ್ಯಗಳ ಆದಾಯವು ವೃದ್ಧಿಯಾಗುತ್ತದೆ

* ಹಾಲು ಕರೆಯುವ ಮುನ್ನ ಹಾಲು ಕರೆಯುವ ವ್ಯಕ್ತಿಯು ಕೈ, ಉಗುರುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

* ಹಾಲು ಕರೆಯುವಾಗ ಹಸುವಿನ ಬಾಲವನ್ನು ಕಟ್ಟುವುದನ್ನು ರೂಢಿಸಿಕೊಳ್ಳಬೇಕು.

* ಹಾಲು ಕರೆದ ತಕ್ಷಣ ಅನ್ಯ ಬ್ಯಾಕ್ಟೀರಿಯಾಗಳು ಹಾಲಿನಲ್ಲಿ ಉತ್ಪಾದನೆಯಾಗುವುದನ್ನು ತಡೆಯಲು ಬೇಗನೆ ಹಾಲು ಸಂಗ್ರಹಿಸುವ ಸಂಘಕ್ಕೆ ತಲುಪಿಸಬೇಕು.

* ಪ್ರತಿ ನಿತ್ಯ ಕೊಟ್ಟಿಗೆ ಸ್ವಚ್ಛತೆ, ಪಶುಗಳಿಗೆ ಶುದ್ಧ ನೀರು, ಅಗತ್ಯ ಮೇವನ್ನು ಪೂರೈಸಬೇಕು. ಪಾತ್ರೆಗಳ ಸ್ವಚ್ಛತೆಗೆ ಆದ್ಯತೆ ಕೊಡಬೇಕು.

* ಹಾಲು ಕರೆದ ನಂತರ ೩೦ ನಿಮಿಷಗಳ ಕಾಲ ಪಶು ನಿಲ್ಲುವಂತೆ ನೋಡಿಕೊಳ್ಳಲು ಮೇವು ನೀಡಬೇಕು.ಇದರಿಂದ ಹಾಲು ಹೊರಬರುವ ರಂಧ್ರಗಳು ಮುಚ್ಚಿಕೊಂಡು ಕೆಚ್ಚಲು ಬಾವು ಆಗುವುದನ್ನು ತಡೆಯಬಹುದು.

* ಪಶುಗಳು ಆರೋಗ್ಯವಾಗಿರುವಂತೆ, ಕಾಯಿಲೆ ಬೀಳದಂತೆ ನೋಡಿಕೊಳ್ಳಬೇಕು.   ರೋಗಗ್ರಸ್ತಪಶುಗಳನ್ನು ಬೇರ್ಪಡಿಸಿ ದೂರ ಕಟ್ಟಬೇಕು.

* ಸಾಂಕ್ರಾಮಿಕ ರೋಗಗಳಿಂದ ಬಳಲುವ ಮನುಷ್ಯರು ಕೂಡ ಪಶುಗಳಿಂದ ದೂರವಿರಬೇಕು

* ಪಶುಗಳಿಗೆ ಕಾಲ ಕಾಲಕ್ಕೆ ಜಂತುನಾಶಕಗಳನ್ನು ನೀಡಿ ಮೇವು ಹಾಗೂ ಹಾಲಿನ ಇಳುವರಿಯನ್ನು ಹೆಚ್ಚಿಸಿ ಸದ್ಬಳಕೆ ಮಾಡಿಕೊಳ್ಳಬೇಕು.

* ಕಾಲ ಕಾಲಕ್ಕೆ ಲಸಿಕೆಗಳನ್ನು ನಿಯಮಿತವಾಗಿ ಕೊಡಿಸಬೇಕು.

-ರಮೇಶ್ ಪಿ.ರಂಗಸಮುದ್ರ

ಆಂದೋಲನ ಡೆಸ್ಕ್

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

2 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

4 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

5 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

5 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

8 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

9 hours ago