• ಜಿ.ಕೃಷ್ಣ ಪ್ರಸಾದ್
ನಾಲ್ಕು ವರ್ಷಗಳ ಕೆಳಗೆ ರಾಜಸ್ಥಾನದ ಬಾನಸವಾಡ ಪಟ್ಟಣದ ಬೀಜಮೇಳಕ್ಕೆ ಹೋಗಿದ್ದೆ. ಬೀಜಮೇಳ ಆಯೋಜನೆಯಾಗಿದ್ದ ‘ವಾಗ್ದಾರ’ ಎಂಬ ಸಂಸ್ಥೆಯ ಆವರಣದಲ್ಲಿ ಸಿಂಗಪುರ ಚೆರಿ ಮರದ ರೀತಿ ಹರಡಿಕೊಂಡ ಹಿಪ್ಪುನೇರಳೆ ಗಿಡವಿತ್ತು.
ಗಿಡದ ತುಂಬಾ ಹಣ್ಣುಗಳು. ಕಿತ್ತಷ್ಟೂ ಬೊಗಸೆ ತುಂಬುತ್ತಿದ್ದವು. ನಾನಿದ್ದ ಎರಡೂ ದಿನ ಸಾಕು ಬೇಕಷ್ಟು ರೇಷ್ಮೆ ಹಣ್ಣು ತಿಂದಿದ್ದೆ.
ನಮ್ಮೂರಲ್ಲೂ ಹಿಪ್ಪು ನೇರಳೆ ಬೆಳೆಸುತ್ತಿದ್ದೆವು. ಆದರೆ ರೇಷ್ಮೆ ಹುಳುವಿನ ಮೇವಿಗೆ ಎಳೆಯ ಸೊಪ್ಪು ಕತ್ತರಿಸುತ್ತಿದ್ದರಿಂದ ಅದು ಬೆಳೆದು ಹಣ್ಣಾಗುವ ಅವಕಾಶ ಇರುತ್ತಿರಲಿಲ್ಲ. ಬದು ವಿನಲ್ಲಿ ತಪ್ಪಿಸಿಕೊಂಡ ಗಿಡಗಳಲ್ಲಿ ಅಪರೂಪಕ್ಕೆ ಒಂದೆರಡು ರೇಷ್ಮೆ ಹಣ್ಣುಗಳು ಸಿಗುತ್ತಿದ್ದವು.
ಇಲ್ಲಿ ನೋಡಿದರೆ ಗಿಡದ ತುಂಬಾ ಹಣ್ಣಿನ ಸುಗ್ಗಿ. ಅದರ ರುಚಿಗೆ ಮನಸೋತು ಒಂದಷ್ಟು ಕಡ್ಡಿಗಳನ್ನು ತಂದು ತೋಟದಲ್ಲಿ ನೆಟ್ಟಿದ್ದೆ. ಮೊನ್ನೆ ತೋಟಕ್ಕೆ ಹೋದಾಗ ನಾಲ್ಕು ವರ್ಷಗಳ ಹಿಂದೆ ನೆಟ್ಟ ರಾಜಸ್ಥಾನದ ಹಿಪ್ಪುನೇರಳೆ ಗಿಡ ಸಣ್ಣ ಮರವಾಗಿ, ಹಣ್ಣು ಹೊತ್ತು ತೊನೆಯುತ್ತಿತ್ತು. ಮನಸೋ ಇಚ್ಛೆ ತಿಂದು ಸಂಭ್ರಮಪಟ್ಟೆ.
ಹಿಪ್ಪು ನೇರಳೆ ಹಣ್ಣಿನ ತಳಿಗಳು: ಹಿಪ್ಪು ನೇರಳೆಯಲ್ಲಿ ನೂರಾರು ತಳಿಗಳಿವೆ. ತಮಿಳುನಾಡಿನ ಹೊಸೂರಿನಲ್ಲಿರುವ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ 1,269 ತಳಿಗಳ ಸಂಗ್ರಹವಿದೆ. ರೇಷ್ಮೆ ಕೃಷಿಗೆ ಬಳಸುವ ಸಾಮಾನ್ಯ ಹಿಪ್ಪು ನೇರಳೆ ತಳಿಗಳು ಹಣ್ಣಿಗೆ ಸೂಕ್ತವಲ್ಲ. ಮರವಾಗುವ, ಸಿಹಿ ರುಚಿ ಇರುವ ಉದ್ದನಾದ ಹಣ್ಣಿನ ವಿಶೇಷ ತಳಿಗಳ ಬೆಳೆಸಬೇಕು. ಈ ತಳಿಗಳು ಸಾಕು ಬೇಕಷ್ಟು ಹಣ್ಣು ಕೊಡುತ್ತವೆ; ನೆರಳೂ ನೀಡುತ್ತವೆ.
ನೆಟ್ಟ ಒಂದು ವರ್ಷಕ್ಕೆ ಹಣ್ಣು ಸಿಕ್ಕರೂ, ಸಮೃದ್ಧವಾಗಿ ಫಲ ನೀಡಲು ಮೂರು-ನಾಲ್ಕು ವರ್ಷ ಕಾಯಬೇಕು. ರೋಗ ಕೀಟಗಳ ಬಾಧೆ ಯಿಲ್ಲ. ಹೆಚ್ಚು ನೀರು, ಆರೈಕೆ ಕೇಳುವುದಿಲ್ಲ.
ಮೌಲ್ಯವರ್ಧನೆಯ ಅವಕಾಶಗಳು: ಹಣ್ಣುಗಳನ್ನು ಮಾರುಕಟ್ಟೆಗೆ ತರುವುದು ಕಷ್ಟ. ಹಾಲಿನಂತೆ ಫ್ರಿಜ್ನಲ್ಲಿ ಸಂಗ್ರಹಿಸಿಡಬೇಕು. ಇಲ್ಲವೆ ರೈತ ಸಂತೆಗಳಲ್ಲಿ ನೇರ ಮಾರಾಟ ಮಾಡಬೇಕು. ರೇಷ್ಮೆ ಹಣ್ಣನ್ನು ಒಣ ದ್ರಾಕ್ಷಿಯಂತೆ ನಿರ್ಜಲೀಕರಣ ಮಾಡಿ ಮಾರುವುದು ಹೆಚ್ಚು ಲಾಭದಾಯಕ. ಮಹಾರಾಷ್ಟ್ರದ ಕಂಪೆನಿಯೊಂದು ಇದಾಗಲೇ ಒಣ ರೇಷ್ಮೆ ಹಣ್ಣನ್ನು ಮಾರುಕಟ್ಟೆಗೆ ತಂದಿದೆ.
ನನ್ನ ತೋಟದ ಹಿಪ್ಪು ನೇರಳೆ ಹಣ್ಣನ್ನು ಎರಡು ದಿನ ಡೈಯರ್ನಲ್ಲಿಟ್ಟು ಒಣಗಿಸಿ ನೋಡಿದೆ. ಒಣ ದ್ರಾಕ್ಷಿಯಂತೆ ರುಚಿಯಾಗಿತ್ತು. ಬೇಗ ಬೂಸ್ಟ್ ಬರುವುದರಿಂದ, ಒಣಗಿಸುವಾಗ ಜಾಗ್ರತೆ ವಹಿಸಬೇಕು. ಹಿಪ್ಪುನೇರಳೆ ಹಣ್ಣು ರುಬ್ಬಿ, ಜೇನುತುಪ್ಪ ಸೇರಿಸಿದರೆ ರುಚಿಕರ ಜಾಮ್ ಸಿದ್ಧವಾಗುತ್ತದೆ. ಎಳೆಯ ಹಿಪ್ಪುನೇರಳೆ ಎಲೆಯ ಚೂರುಗಳನ್ನು ಕುದಿಯುವ ನೀರಿಗೆ ಹಾಕಿ ‘ಹರ್ಬಲ್ ಟೀ ತಯಾರಿಸಬಹುದು. ಎಲೆಗಳನ್ನು ಒಣಗಿಸಿ, ಪುಡಿಮಾಡಿ ಕೂಡ ಚಹ ತಯಾರಿಸಬಹುದು. ಇದರ ಸೇವನೆಯಿಂದ ಸುಖಕರ ನಿದ್ದೆ ಬರುತ್ತದೆ. ನರಗಳ ಸೆಳೆತ ಶಕ್ತಿ ಕಡಿಮೆಯಾಗುತ್ತದೆ. ಯಾವನೋ ಪುಣ್ಯಾತ್ಮ ರೇಷ್ಮೆ ಎಲೆ ಪುಡಿ ಮಾಡುವ ವಿಧಾನವನ್ನೂ ಪೇಟೆಂಟ್ ಮಾಡಿಕೊಂಡಿದ್ದಾನಂತೆ!
ಥಾಯ್ ಲ್ಯಾಂಡ್ ದೇಶದ ಹಣ್ಣಿನ ಅಂಗಡಿಗಳಲ್ಲಿ ಇದರ ಹಣ್ಣು ಮಾರಾಟಕ್ಕೆ ಸಿಗುತ್ತದೆ.
ಜಾಮ್ ಜಲ್ಲಿ ಮೊದಲಾದ ಇದರ ಮೌಲ್ಯವರ್ಧಿತ ಪದಾರ್ಥಗಳು ಲಭ್ಯ. ಮೈಸೂರು- ಕೆಆರ್ಎಸ್ ರಸ್ತೆಯಲ್ಲಿ ಬೆಳಗೊಳ ಸಮೀಪ ಇರುವ ಬೆಳವಲ ಪರಿಸರ ತೋಟ’ ದಲ್ಲಿ ಹಣ್ಣಿನ ತಳಿಯ ಹಿಪ್ಪು ನೇರಳೆ ಗಿಡಗಳು ಲಭ್ಯವಿವೆ. ಆಸಕ್ತರು ಮದನ್ ಮೊ. ಸಂ. 7411048468 ಸಂಪರ್ಕಿಸಬಹುದು.
ಔಷಧಿ ಗುಣಗಳ ಖಜಾನೆ:
ಹಿಪ್ಪು ನೇರಳೆ ಹಣ್ಣಿನ ಬಳಕೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ದೃಷ್ಟಿ ದೋಷ ಸುಧಾರಿಸುತ್ತದೆ. ರಕ್ತ ಶುದ್ದೀಕರಣಕ್ಕೆ ಸಹಕಾರಿ, ನರದೌರ್ಬಲ್ಯದಿಂದ ಬಳಲುವವರಿಗೂ ಇದು
ಔಷಧಿ, ಹಿಪ್ಪು ನೇರಳೆ ಹಣ್ಣು ವಿಟಮಿನ್ ಸಿ, ವಿಟಮಿನ್ ಇ, ಪೊಟಾಷಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಹಾಗಾಗಿ ರಕ್ತಪುಷ್ಟಿ ಹೆಚ್ಚಿಸಲು ಸಹಕಾರಿ. ಹಿಪ್ಪು ನೇರಳೆ ಹಣ್ಣು
ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿ, ಹಾಗಾಗಿ ಮಧುಮೇಹಿಗಳು ಅಂಜಿಕೆಯಿಲ್ಲದೆ ಹಿಪ್ಪು ನೇರಳೆ ಹಣ್ಣು ಚಪ್ಪರಿಸಬಹುದು. ನಮ್ಮ ದೇಹದ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬು ಈ ಹಣ್ಣಿನ ಸೇವನೆಯಿಂದ ಕಡಿಮೆಯಾಗುತ್ತದೆ. ಇದರಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಅಂಶ ಇದ್ದು, ಇದು ನಮ್ಮ ದೇಹದಲ್ಲಿ ರಕ್ತ ಚಲನೆಯನ್ನು ವೃದ್ಧಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ೫ ಹಾಗೂ ಬಿಜೆಪಿ…
ಆಷಾಢ ಶುಕ್ರವಾರಗಳಂದು ( ಜುಲೈ ೧೭, ೨೪, ೩೧, ಆಗಸ್ಟ್ ೭ ರಂದು ಆಷಾಢ ಶುಕ್ರವಾರಗಳು) ಸಾವಿರಾರು ಭಕ್ತರು ಚಾಮುಂಡಿ…
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸದ್ಯ,ಪೊಲೀಸ್ ಇಲಾಖೆಯ ಮೂರು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ಲಿಖಿತ ಪರೀಕ್ಷಾ ದಿನಾಂಕ…
ದೇಶದ ಹಲವು ಕಡೆ ಮತ್ತೆ ಪಕ್ಷಾಂತರದ ಹಾವಳಿ ಶುರುವಾಗಿದೆ. ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಕೈವಾಡವಿಲ್ಲದೆ ಈ ಪಕ್ಷಾಂತರ…
ಸಿ.ಎಂ.ನರಸಿಂಹಮೂರ್ತಿ ಪಾಠ ಪ್ರವಚನಗಳ ಜೊತೆ ವಿದ್ಯಾರ್ಥಿಗಳ ನೋವು ನಲಿವುಗಳಿಗೂ ಸ್ಪಂದಿಸುತ್ತಿದ್ದ ಈ ಗುರುಗಳ ಗುಣ ದೊಡ್ಡದು ಶಿವಸ್ವಾಮಿ ಎಂಬ ಕನ್ನಡದ…
ಸಿರಿ ಮೈಸೂರು ಮಾಂಸಾಹಾರಿಗಳಿಗೆ ಮಾತ್ರ ಇಲ್ಲಿ ಸಿಗುವಷ್ಟು ವೈವಿಧ್ಯದ ಆಹಾರಗಳು ಇನ್ನೆಲ್ಲೂ ಸಿಗಲಾರವು. ನೀವೂ ಮಾಂಸಾಹಾರಿ ಆಗಿದ್ದರೆ ಹಾಂಗ್ಕಾಂಗ್ಗೆ ಬಂದಾಗ…