ಎನ್.ಕೆಶವಮೂರ್ತಿ
ನಾನು ಶಿರಸಿಯ ಸಮೀಪದ ಒಂದು ಅಡಕೆ ತೋಟಕ್ಕೆ ಹೋಗಿದ್ದೆ. ಆ ತೋಟವನ್ನು ಆ ರೈತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು. ಅಲ್ಲಿ ಅಡಕೆ ಮರಗಳು ಸೈನಿಕರಂತೆ ಶಿಸ್ತಾಗಿ ಸಾಲಿನಲ್ಲಿ ನಿಂತಿದ್ದವು. ಆರೋಗ್ಯಕರವಾದ ಅಡಕೆ ಫಲ ನಳನಳಿಸುತ್ತಿತ್ತು. ಅದು ಫಸಲಿನ ಕಾಲ. ಪ್ರತಿಯೊಂದು ಅಡಕೆ ಮರದಲ್ಲಿಯೂ ಐದರಿಂದ ಆರು ಗೊನೆ ತೂಗಾಡುತ್ತಿದ್ದವು. ಉತ್ತಮ ಇಳುವರಿ ಬರುವ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅದ್ಯಾವುದೂ ನನ್ನ ಗಮನ ಸೆಳೆಯಲಿಲ್ಲ. ನನ್ನ ಗಮನ ಎಲ್ಲ ಅಡಕೆ ಮರಗಳಿಗೆ ಕಟ್ಟಿರುವ ಬಣ್ಣದ ದಾರಗಳ ಮೇಲೆ ಹೋಯಿತು.
ಆ ಅಡಕೆ ತೋಟದಲ್ಲಿ ಮರಗಳಿಗೆ ಕೆಂಪು, ಬಿಳಿ, ಹಸಿರು, ಹಳದಿ, ನೀಲಿ ದಾರಗಳನ್ನು ಕಟ್ಟಲಾಗಿತ್ತು. ನಾನು ಕುತೂಹಲದಿಂದ ಆ ರೈತರನ್ನು ‘ಏನಿದು ದಾರ? ’ ಎಂದು ಕೇಳಿದೆ. ಅವರು ‘ಏಕೆ ನಿಮಗೆ ಅರ್ಥ ಆಗಲಿಲ್ಲವೆ? ’ ಎಂದರು. ‘ಅರ್ಥವಾಗದಿದ್ದಕ್ಕೆ ಅಲ್ಲವೇ ನಾನು ಕೇಳಿದ್ದು’ ಎಂದೆ. ‘ನೋಡಿ ದಾರದ ಬಣ್ಣ ಹಾಗೂ ಫಸಲನ್ನು ಗಮನಿಸಿ. ಹಸಿರು ದಾರವಿರುವ ಮರಗಳಲ್ಲಿ ಆರು ಗೊನೆ ಇವೆ. ನೀಲಿ ದಾರದ ಮರಗಳಲ್ಲಿ ಐದು ಗೊನೆಗಳಿವೆ. ಕೆಂಪು ದಾರ ಕಟ್ಟಿರುವ ಮರಗಳಲ್ಲಿ ಕಡಿಮೆ ಗೊನೆ ಇದ್ದಾವೆ, ಇದೇ ದಾರದ ಮಹಿಮೆ’ ಅಂದರು. ನಾನು ‘ದಾರ ಕಟ್ಟಿದರೆ ಇಳುವರಿ ಜಾಸ್ತಿ ಆಗುತ್ತದೆಯೆ’ ಎಂದೆ. ‘ಇಲ್ಲ, ಯಾವ ಮರ ಎಷ್ಟು ಇಳುವರಿ ಕೊಡುತ್ತಿದೆ ಎಂದು ಆ ದಾರಗಳ ಮೂಲಕ ತಿಳಿಯುತ್ತದೆ. ಆಗ ಅದರ ನಿರ್ವಹಣೆ ಮಾಡಲು ಸುಲಭವಾಗುತ್ತದೆ. ಕಡಿಮೆ ಫಸಲಿನ ಮರಗಳಿಗೆ ಹೆಚ್ಚು ಆರೈಕೆ ಮಾಡುತ್ತೇವೆ.
ಹಾಗಂತ ಅಧಿಕ ಇಳುವರಿ ನೀಡದ ಗಿಡಗಳನ್ನು ಕಡೆಗಣಿಸುವುದಿಲ್ಲ. ಮೂರು ವರ್ಷಗಳಾದರೂ ಕಡಿಮೆ ಫಸಲು ನೀಡುವ ಮರಗಳನ್ನು ಅದರ ತಳಿ ಗುಣ ಸರಿಯಲ್ಲ ಎಂದು ನಿರ್ಧರಿಸಿ ನಿರ್ದಾಕ್ಷಿಣ್ಯವಾಗಿ ಅಂತಹ ಮರಗಳನ್ನು ಕತ್ತರಿಸುತ್ತೇವೆ. ಅದೇ ಜಾಗದಲ್ಲಿ ಹೆಚ್ಚು ಫಸಲು ನೀಡುವ ಮರದ ಗೋಟಿನಿಂದ ತಯಾರಿಸಿದ ಸಸಿ ನಾಟಿ ಮಾಡುತ್ತೇವೆ. ಆಗ ಪ್ರತಿಯೊಂದು ಗಿಡದಿಂದಲೂ ಹೆಚ್ಚಿನ ಫಸಲು ಬರುತ್ತದೆ. ಎಕರೆವಾರು ಇಳುವರಿ ಹೆಚ್ಚಾಗುತ್ತದೆ. ಶ್ರಮಕ್ಕೆ ತಕ್ಕ ಫಲವೂ ಸಿಗುತ್ತದೆ’ ಎಂದರು. ಆ ಕ್ಷಣ ನನಗೆ ಯಾರೋ ತಳಿ ವಿಜ್ಞಾನಿಯ ಜತೆ ಮಾತನಾಡುತ್ತಿದ್ದೇನೆ ಅನಿಸಿತು.
ನಾನು ಅವರ ತೋಟವನ್ನು ಮತ್ತೊಂದು ಕೋನದಿಂದ ನೋಡತೊಡಗಿದೆ. ನೂರಕ್ಕೆ ಒಂದೆರಡು ಗಿಡಗಳು ಮಾತ್ರ ಕೆಂಪು ದಾರ ಹೊಂದಿದ್ದವು. ಹೆಚ್ಚಿನವು ಹಸಿರು, ನೀಲಿ ದಾರಗಳನ್ನೇ ಹೊಂದಿದ್ದವು. ಆದರೂ ಕುತೂಹಲ ಹೆಚ್ಚಾಗಿ ನಾನು ‘ಮೂರು ವರ್ಷಗಳ ನಿರ್ವಹಣೆಯಲ್ಲಿ ಅದರ ತಳಿ ಗುಣವನ್ನು ಹೇಗೆ ನಿರ್ಧರಿಸುತ್ತೀರ? ಕೀಟಬಾಧೆ, ರೋಗ ತಗುಲಬಹುದಲ್ಲವೇ? ’ ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟೆ. ಅವರ ಉತ್ತರ ತೀರಾ ಗಂಭೀರವಾಗಿತ್ತು. ‘ಸಾರ್, ಪ್ರಯೋಗ ಮಾಡುತ್ತಾ ಕೂರುವುದಕ್ಕೆ ನಮ್ಮದು ಸರ್ಕಾರದ ಸಂಶೋಧನಾಲಯದ ತೋಟವಲ್ಲ. ನಾನು ರೈತ. ಇದರಲ್ಲಿಯೇ ನನ್ನ ಜೀವನದ ನಿರ್ವಹಣೆ ಆಗಬೇಕು. ಅದಕ್ಕೆ ಹಣ ಬೇಕು.
ಹಣ ಬರುವುದು ಇಳುವರಿ ಹೆಚ್ಚಾದಾಗ ಮಾತ್ರ. ಹಾಗಾಗಿ, ನನ್ನ ಸೀಮಿತ ಅನುಭವದಲ್ಲಿ ನನಗೆ ಸತ್ಯ ಅನಿಸಿದ್ದನ್ನು ಮಾಡುತ್ತೇನೆ. ಒಂದು ಮರ ಕತ್ತರಿಸಿದರೆ ಇಳುವರಿ ಕಡಿಮೆ ಆಗುತ್ತದೋ ಇಲ್ಲವೋ ಅಂತ ನೀವು ಕೇಳಬಹುದು. ಇಂಥ ಮರವನ್ನು ಕತ್ತರಿಸಬೇಕು ಎಂದು ಮೊದಲೇ ನಿರ್ಧಾರವಾಗಿರುವುದರಿಂದ ಅದರ ಪಕ್ಕದಲ್ಲಿ ಮತ್ತೊಂದು ಸಸಿ ಕೂರಿಸುವ ಕಲೆ ನಮಗೆ ಕರಗತವಾಗಿದೆ. ಆ ಮರ ಕಡಿಯುವ ಹೊತ್ತಿಗೆ ಈ ಮರದ ಇಳುವರಿ ಆರಂಭವಾಗಿರುತ್ತದೆ. ಒಟ್ಟು ಇಳುವರಿಗೆ ಮೋಸವಾಗುವುದಿಲ್ಲ’ ಎಂದರು. ಅವರ ಚಿಂತನೆ ಸರಿ ಇದೆ ಅನಿಸಿತು.
ಯಾವಾಗಲೂ ಒಂದು ಎಕರೆ ಜಾಗದಲ್ಲಿ ಎಷ್ಟು ಗಿಡಗಳು ಇವೆ ಅನ್ನುವುದು ಮುಖ್ಯವಾಗುವುದಿಲ್ಲ. ಪ್ರತಿ ಗಿಡ ಎಷ್ಟು ಇಳುವರಿ ಕೊಡುತ್ತದೆ ಅನ್ನುವುದು ಮುಖ್ಯ. ಹೇಗೆ ಪ್ರತಿಯೊಬ್ಬ ಸೈನಿಕನ ಸಾಮರ್ಥ್ಯ ಆ ಸೈನ್ಯ ಬಲಿಷ್ಠವಾಗಲು ಸಹಕಾರಿಯಾಗುತ್ತದೆಯೋ ಹಾಗೆಯೇ ಪ್ರತಿಯೊಂದು ಗಿಡವೂ ಜಮೀನಿನ ಇಳುವರಿಗೆ ಮುಖ್ಯವಾಗುತ್ತದೆ.
ಮೈಸೂರು : ನಿರ್ದಿಷ್ಟ ಬ್ರಾಂಡ್ನ ಮೊಟ್ಟೆಗಳಲ್ಲಿ ಕ್ಯಾನ್ಸರ್ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…
ಮೈಸೂರು : ‘ಹಳೆಯ ಮೈಸೂರು ರಕ್ಷಣೆಯ ನಿಟ್ಟಿನಲ್ಲಿ ಕಾಲಕಾಲಕ್ಕೆ ಸೂಕ್ತ ಕ್ರಮ ವಹಿಸಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು.…
ಬೆಳಗಾವಿ : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಇದೇ ಪ್ರಥಮಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ಇರುವ…
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…