ಆಂದೋಲನ ಪುರವಣಿ

ಬಾಳು ಕಟ್ಟಿಕೊಂಡಾಯ್ತು, ಬಯಸಿದ್ದೀಗ ದಕ್ಕಾಯ್ತು…

ಶಿಕ್ಷಕರಾಗಿ ಆಯ್ಕೆಯಾದ ಮೂವರು ತೃತೀಯ ಲಿಂಗಿಗಳು; ಪೂಜಾ ಅಂತರಂಗದ ಅನಾವರಣ

-ಸೌಮ್ಯ ಹೆಗ್ಗಡಹಳ್ಳಿ

ಅಪಮಾನ, ಅಸಮಾನತೆಗೆ ತುತ್ತಾಗಿ ಹಿಂದೆ ಬೀಳುತ್ತಿದ್ದ ತೃತೀಯ ಲಿಂಗಿಗಳು ಈಗ ಮುನ್ನೆಲೆಗೆ ಬರುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಛಲ, ಎಲ್ಲರಂತೆಯೇ ನಾವುಗಳೂ ಎನ್ನುವ ದೃಢ ನಿಲುವು ಕಾರಣ. ಇದರ ಜೊತೆಗೆ ಸಮಾಜದ ವರ್ತನೆಯಲ್ಲಿಯೂ ತುಸು ಬದಲಾವಣೆಯಾಗುತ್ತಿದೆ. ಇದೆಲ್ಲರ ಒಟ್ಟಂದ ಎಂಬಂತೆ ಇಂದು ತೃತೀಯ ಲಿಂಗಿಗಳು ಸಾಕಷ್ಟು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದರಂತೆ ಇದೀಗ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೂವರು ತೃತೀಯ ಲಿಂಗಿಗಳು ಆಯ್ಕೆಯಾಗಿದ್ದು, ರಾಜ್ಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಈ ಬಾರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ಬರೆದವರಲ್ಲಿ ಹತ್ತು ಮಂದಿ ತೃತೀಯ ಲಿಂಗಿಗಳಿದ್ದರು. ಇವರಲ್ಲಿ ರಾಯಚೂರು ಜಿಲ್ಲೆಯ ಅಶ್ವಥ ಪೂಜಾ, ಚಿಕ್ಕಬಳ್ಳಾಪುರದ ಸುರೇಶ್ ಬಾಬು, ಮಧುಗಿರಿಯ ರವಿಕುಮಾರ್ ವೈ.ಆರ್. ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಪೂಜಾ ಅವರು, ಅಪಮಾನವೇ ಆವರಿಸಿಕೊಂಡಿದ್ದ ಹೊತ್ತಿನಲ್ಲಿ ನಾನು ದೇವರನ್ನು ಕೇಳಿಕೊಳ್ಳುತ್ತಿದ್ದದ್ದು ಎಲ್ಲವನ್ನೂ ಗೆಲ್ಲುವ ಶಕ್ತಿ ಕೊಡು ಎಂದು. ಓದಿನಿಂದಲೇ ನಾನು ಮುಂದೆ ಬರಲು ಸಾಧ್ಯ ಎಂಬುದರ ಅರಿವಾಗಿ ಓದಿನಲ್ಲಿ ತೊಡಗಿಸಿಕೊಂಡೆ. ಅದರ ಫಲವಾಗಿ ಈ ಮಟ್ಟಕ್ಕೆ ಬಂದಿದ್ದೇನೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಇನ್ನೂ ಮುಂದಿನ ಹಂತಕ್ಕೆ ಹೋಗಲು ನಾನು ಶ್ರಮಿಸುತ್ತಲೇ ಇರುತ್ತೇನೆ. ಈ ನಿಟ್ಟಿನಲ್ಲಿ ನಾನು ಸದಾ ವಿದ್ಯಾರ್ಥಿ ಎನ್ನುತ್ತಾರೆ ಪೂಜಾ.

ಮೀಸಲಾತಿ ನೀಡಿದ ಧೈರ್ಯ

ಸದಾ ಮಕ್ಕಳೊಂದಿಗೆ ಬರೆಯುತ್ತಿದ್ದ ನಾನು ಮಕ್ಕಳ ನಡುವಲ್ಲೇ ಇರಬೇಕು ಎಂದು ಬಯಸಿದ್ದೆ. ಅದಕ್ಕೆ ತಕ್ಕುದಾಗಿ ಶಿಕ್ಷಕಿಯೇ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಇದಕ್ಕೆ ಸಹಕಾರ ನೀಡಿದ್ದು ತೃತೀಯ ಲಿಂಗಿಗಳಿಗೆ ನೀಡಿದ ಮೀಸಲಾತಿ. ನಿರಂತರ ಓದಿನಲ್ಲಿ ತೊಡಗಿಸಿಕೊಂಡ ನಾನು ಗೆದ್ದರೆ ನಮ್ಮ ಸಮುದಾಯದ ಎಲ್ಲರಲ್ಲೂ ಹೊಸ ಭರವಸೆಯನ್ನು ಹುಟ್ಟಿಸಬಹುದು ಎನ್ನುವ ಆಶಾಭಾವನೆ ಇಟ್ಟುಕೊಂಡಿದ್ದೆ. ಅದು ಇಂದು ನನಸಾಗಿದೆ.

ನನಗೆ ನಾನೇ ಸ್ಫೂರ್ತಿ

ಹೆಣ್ಣಾಗಿ ಅಥವಾ ಗಂಡಾಗಿ ಸಾಧನೆ ಮಾಡುವುದು ಬೇರೆ. ಅವರಿಗೆ ಕೆಲವಷ್ಟು ಅವಕಾಶಗಳು ಇರುತ್ತವೆ. ಆದರೆ ತೃತೀಯ ಲಿಂಗಿಯಾದ ನನಗೆ ಕೆಲವಾರು ಕಡೆಗಳಲ್ಲಿ ಸೂಕ್ತ ಅವಕಾಶವೇ ಇರುತ್ತಿರಲಿಲ್ಲ. ಹೀಗಾಗಿ ನಾನು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗಿಲ್ಲ, ಸಿಲಬಸ್‌ಗೆ ಅನುಗುಣವಾಗಿ ಹಳೆಯ ಪ್ರಶ್ನೆ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಪುಸ್ತಕಗಳನ್ನು ಓದುತ್ತಿದ್ದೆ. ನಿತ್ಯವೂ ೬ ಗಂಟೆಗಳ ಕಾಲ ಓದಿಗೆ ಮೀಸಲಿಟ್ಟಿದ್ದೆ. ಇದೇ ನನ್ನನ್ನು ಶಿಕ್ಷಕಿಯನ್ನಾಗಿ ಮಾಡಿದೆ. ಈ ಲೆಕ್ಕದಲ್ಲಿ ನನಗೆ ನಾನೇ ಸ್ಫೂರ್ತಿ.


ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ನೀರಮಾನವಿ ಗ್ರಾಮದ ಪೂಜಾ ಬಿಎಡ್, ಎಂಎ ಮಾಡಿದ್ದಾರೆ. ಹುಟ್ಟುತ್ತಾ ಗಂಡಾಗಿ, ೫ನೇ ತರಗತಿಗೆ ಬರುವಷ್ಟರಲ್ಲಿ ಹೆಣ್ಣಿನ ಗುಣ ಲಕ್ಷಣಗಳನ್ನು ಹೊಂದಿದ ಪೂಜಾ ಎದುರಾದ ಹೀಯಾಳಿಕೆಗಳನ್ನೇ ಸವಾಲಾಗಿ ಸ್ವೀಕಾರ ಮಾಡಿ ಈ ಹಂತಕ್ಕೆ ಬಂದಿದ್ದಾರೆ. ಮೊದಲ ಬಾರಿಗೇ ಪರೀಕ್ಷೆ ಬರೆದು ಪಾಸ್ ಮಾಡಿದ್ದಾರೆ.


 ಮಂಗಳಮುಖಿಯರು ಹಲವಾರು ಸವಾಲುಗಳ ನಡುವೆ ಶಿಕ್ಷಣ ಪಡೆದು ಸಾಧನೆ ಮಾಡಿರುವುದು ಖುಷಿ ತಂದಿದೆ. ಸಮಾಜದಲ್ಲಿ ಇದು ಉತ್ತಮ ಬದಲಾವಣೆ. ತೃತಿಯ ಲಿಂಗಿಗಳ ಆಸಕ್ತಿಗೆ ಅನುಗುಣವಾಗಿ ಸಮಾಜ ಸಹಕಾರ ನೀಡಬೇಕು. ಈಗ ಶಿಕ್ಷಕರಾಗಿ ಆಯ್ಕೆಯಾಗಿರುವವರು ನಮ್ಮ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. -ಪ್ರಣತಿ ಪ್ರಕಾಶ್, ಅಧ್ಯಕ್ಷರು, ಲೈಂಗಿಕ ಅಲ್ಪಸಂಖ್ಯಾತರ ಘಟಕ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ವಿಭಾಗ

ಶಿಕ್ಷಕರಾಗಿ ಆಯ್ಕೆಯಾಗಿರುವ ತೃತೀಯ ಲಿಂಗಿಗಳ ಮೇಲೆ ಜವಾಬ್ದಾರಿ ಹೆಚ್ಚಿದೆ. ಮಕ್ಕಳು, ಸಹೋದ್ಯೋಗಿಗಳು, ಪೋಷಕರು ಮುಂದೆ ಇವರನ್ನು ಹೇಗೆ ನೋಡುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ. ಉತ್ತಮ ಓದಿನಿಂದ ಉತ್ತಮ ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂಬುದನ್ನು ಇವರು ತೋರಿಸಿದ್ದಾರೆ. ಇದು ಇತರ ಅಲ್ಪಸಂಖ್ಯಾತರ ಮನೋಬಲ ಹೆಚ್ಚಿಸಲಿದೆ. – ಅಕ್ಕಯ್‌ ಪದ್ಮಶಾಲಿ, ಸಾವಾಜಿಕ, ರಾಜಕೀಯ ಹಕ್ಕುಗಳ ಹೋರಾಟಗಾರ್ತಿ

ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಬೇಕು ಎನ್ನುವ ಹೋರಾಟ ನಮ್ಮದಾಗಿತ್ತು. ಅದು ಈಗ ಈಡೇರುತ್ತಿದೆ. ಇದರ ಪ್ರಯೋಜನ ಪಡೆದು ಶಿಕ್ಷಕರಾಗಿರುವವರು ಉತ್ತಮ ಸಾಧನೆ ಮಾಡಬೇಕು. ಈ ಮೂಲಕ ಬೇರೆ ಬೇರೆ ಇಲಾಖೆಗಳಲ್ಲಿಯೂ ತೃತೀಯ ಲಿಂಗಿಗಳಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. – ನಿಶಾ ಗುಲೂರು, ನಿರ್ದೇಶಕರು, ಸಂಗಮ ಸಂಸ್ಥೆ

andolana

Recent Posts

ವಿರಾಜಪೇಟೆ ಐತಿಹಾಸಿಕ ಕೆರೆಗಳ ಒತ್ತುವರಿ ಆರೋಪ

ಕಾಂಗೀರ ಬೋಪಣ್ಣ ವಿರಾಜಪೇಟೆ : ಪುರಸಭೆ ವ್ಯಾಪ್ತಿಗೆ ಒಳಪಡುವ ೨ ಐತಿಹಾಸಿಕ ಕೆರೆಗಳು ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿದ್ದು, ಈ…

1 hour ago

ಪಿಯುಸಿ : ಗುಂಡ್ಲುಪೇಟೆಯಲ್ಲಿ ಬಾಲಕಿಯರೇ ಮೇಲುಗೈ

ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಟಾಪರ್ಸ್‌ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ತಾಲ್ಲೂಕಿನ…

1 hour ago

ಮೈಸೂರು ಜಿಲ್ಲೆಯ 147 ಗ್ರಾಪಂಗಳೀಗ ಕ್ಷಯ ಮುಕ್ತ!

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷಯರೋಗ ಮುಕ್ತ ಗ್ರಾಪಂ ಅಭಿಯಾನ ಮೈಸೂರು : ಜಿಲ್ಲೆಯಲ್ಲಿ ಕ್ಷಯ ರೋಗ ಮತ್ತು ಸಾವಿನ ಪ್ರಮಾಣ…

1 hour ago

ಓದುಗರ ಪತ್ರ | ಜನಗಣತಿ ಪಾರದರ್ಶಕ,ನಿಖರವಾಗಿರಲಿ. . .

ಭಾರತದ ಜನಗಣತಿ ಕಾಯ್ದೆ ೧೯೪೮ರ ಪ್ರಕಾರ ಈ ಬಾರಿಯ ಜನಗಣತಿ ೨೦೨೭ರ ಕಾರ್ಯವು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈ ಜನಗಣತಿಯು…

2 hours ago

ಬಾಪೂ ಆದರ್ಶ ಮಡದಿ ಕಸ್ತೂರ ಬಾ ಗಾಂಧಿ

ಡಾ.ಎಂ.ಡಿ.ಉಮೇಶ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪತ್ನಿ ಕಸ್ತೂರ ಬಾ ಅವರು ಏ. ೧೧, ೧೮೬೯ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಗೋಕುಲ್‌ದಾಸ್ ಕಪಾಡಿಯಾ…

2 hours ago

ದಳಪತಿ ವಿಜಯ್‌ಗೆ ಮತ್ತೆ ಸಂಕಷ್ಟ : ಬಿಡುಗಡೆಗೂ ಮೊದಲೆ ʻಜನ ನಾಯಗನ್‌ʼ ಸೋರಿಕೆ.

ಚೆನ್ನೈ : ನಟ ಹಾಗೂ ರಾಜಕಾರಣಿ ದಳಪತಿ ವಿಜಯ್‌ ಅವರ ವೃತ್ತಿ ಜೀವನದ ಕೊನೆಯ ಹಾಗೂ ಬಹುನಿರೀಕ್ಷಿತ ʻಜನ ನಾಯಗನ್‌ʻ…

3 hours ago