Andolana originals

ಮಂಡ್ಯ ಜಿಲ್ಲೆಯ 307 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದು ನೀರು ಪೂರೈಸಲು ಜಿಲ್ಲಾಡಳಿತ ನಿರ್ಧಾರ

ಮಂಡ್ಯ: ಪಂಚ ನದಿಗಳು ಹರಿಯುವ ಮಂಡ್ಯ ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೇಸಿಗೆಯ ವೇಳೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಬಹುದಾದ ೩೦೭ ಗ್ರಾಮಗಳನ್ನು ಮಂಡ್ಯ ಜಿಲ್ಲಾಡಳಿತ ಪಟ್ಟಿ ಮಾಡಿದೆ. ಕಾವೇರಿ, ಹೇಮಾವತಿ, ಲೋಕಪಾವನಿ, ಶಿಂಷಾ, ವೀರವೈಷ್ಣವಿ ನದಿಗಳು ಜಿಲ್ಲೆಯಲ್ಲಿ ಹರಿಯುತ್ತವೆ. ಇಷ್ಟಾಗಿಯೂ ಮಂಡ್ಯ ಜಿಲ್ಲೆಯಲ್ಲಿ ಶೇ.೫೨ರಷ್ಟು ಕೃಷಿ ಪ್ರದೇಶ, ಶೇ.೪೮ರಷ್ಟು ಮಳೆಯಾಶ್ರಿತ ಪ್ರದೇಶವಿದೆ. ನೀರಾವರಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳಿಗೆ ಕಾವೇರಿ ನದಿಯಿಂದಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸಲಾಗುತ್ತಿದೆ.

ಈ ಪೈಕಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲೇ ಅತಿ ಹೆಚ್ಚು(೬೭) ಗ್ರಾಮಗಳನ್ನು ಗುರುತಿಸಲಾಗಿದೆ. ಉಳಿದಂತೆ ನಾಗಮಂಗಲ ತಾಲ್ಲೂಕಿನ ೬೧, ಮಳವಳ್ಳಿ ತಾಲ್ಲೂಕಿನ ೫೦, ಮದ್ದೂರು ತಾಲ್ಲೂಕಿನ ೪೩, ಮಂಡ್ಯ ತಾಲ್ಲೂಕಿನ ೪೨, ಪಾಂಡವಪುರ ತಾಲ್ಲೂಕಿನ ೨೮, ಶ್ರೀರಂಗಪಟ್ಟಣ ತಾಲ್ಲೂಕಿನ ೧೬ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎನ್ನಲಾಗಿದೆ. ಹಿಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದ ಹಳ್ಳಿಗಳನ್ನು ಆಧರಿಸಿ ಈಗ ಸಮಸ್ಯೆ ಎದುರಾಗಬಹುದಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ.

ಮಳೆಯಾಶ್ರಿತ ಪ್ರದೇಶಗಳಿಗೂ ವಿಶ್ವೇಶ್ವರಯ್ಯ ನಾಲೆ, ಕಾವೇರಿ ನದಿ ಹಾಗೂ ಕೆಲವು ಕೆರೆ ಮೂಲಗಳಿಂದ ನೀರನ್ನು ಲಿಫ್ಟ್ ಮಾಡಿ, ಪೈಪ್ ಲೈನ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದಲ್ಲದೆ ಸ್ಥಳೀಯವಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿ ಕಿರು ನೀರು ಸರಬರಾಜು ಯೋಜನೆ ಮೂಲಕವೂ ನೀರು ಪೂರೈಕೆ ಮಾಡುತ್ತಿದ್ದು, ೬೦೦ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ.

ಇಷ್ಟಾಗಿಯೂ ಪ್ರತೀ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿದ್ದಲ್ಲ. ಕಳೆದ ವರ್ಷ ಉತ್ತಮ ಮಳೆಯಾದ್ದರಿಂದ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಹೀಗಾಗಿ ಈವರೆಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿಲ್ಲ. ಆದರೆ, ಪೂರ್ವ ಮುಂಗಾರಿನಲ್ಲಿ ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗುವುದು ಖಂಡಿತ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ೩೦೭ ಗ್ರಾಮಗಳನ್ನು ಗುರುತಿಸಲಾಗಿದೆ.

ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ: 

ಮಂಡ್ಯ:ಕುಡಿಯುವ ನೀರಿಗಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಬಹುತೇಕ ಅವಲಂಬಿಸಿರುವ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ೧೦೮.೨೯ ಅಡಿಗೆ ಕುಸಿದಿದೆ. ಗರಿಷ್ಟ ೧೨೪.೮೦ ಅಡಿ ಎತ್ತರ , ೪೯.೪೫೨ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ ೩೦.೦೩೭ ಟಿಎಂಸಿ ನೀರಿದೆ. ಇದರಲ್ಲಿ ೨೪.೯೬೨ ಟಿಎಂಸಿ ನೀರಷ್ಟೇ ಬಳಕೆಗೆ ಲಭ್ಯವಿದೆ.

ಪಂಪುಗಳ ಅಳವಡಿಕೆ: 

ಮಂಡ್ಯ:ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಿರುವ ಗ್ರಾಮಗಳಲ್ಲಿ ಈಗಾಗಲೇ ಕೊರೆಸಿರುವ ೪೪ ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್, ರೇಸಿಂಗ್ ಮೇನ್ ಮತ್ತು ವಿದ್ಯುದ್ದೀಕರಣ ಮಾಡಲಾಗಿದೆ. ಮಳವಳ್ಳಿ ತಾಲ್ಲೂಕಿನ ೨೨, ಮಂಡ್ಯ ತಾಲ್ಲೂಕಿನ ೧೧, ಪಾಂಡವಪುರ, ಮದ್ದೂರು ತಾಲ್ಲೂಕುಗಳಲ್ಲಿ ತಲಾ ೫, ನಾಗಮಂಗಲ ತಾಲ್ಲೂಕಿನಲ್ಲಿ ೧ ಬೋರ್ವೆಲ್‌ಗೆ ಮೋಟಾರ್ ಪಂಪ್  ಅಳವಡಿಸಲಾಗಿದೆ.

” ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಗಂಭೀರ ಸಮಸ್ಯೆಯಿಲ್ಲ. ಟ್ಯಾಂಕರ್ಗಳಲ್ಲಿ ನೀರು  ಪೂರೈಸುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದರೆ, ಭವಿಷ್ಯದಲ್ಲಿ ಸಮಸ್ಯೆ ಎದುರಾಗಬಹುದಾದ ೩೦೭ ಗ್ರಾಮಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.”

– ಡಾ.ಕುಮಾರ, ಜಿಲ್ಲಾಧಿಕಾರಿ

೧೬೭ ಕೊಳವೆ ಬಾವಿಗಳ ವಶಕ್ಕೆ ನಿರ್ಧಾರ: 

ಮಂಡ್ಯ:ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಿರುವ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಶಕ್ಕೆ ಪಡೆಯಲು ೧೬೭ ಖಾಸಗಿ ಕೊಳವೆ ಬಾವಿಗಳನ್ನು ಜಿಲ್ಲಾಡಳಿತ ಗುರುತಿಸಿದೆ. ನೀರಿನ ಸಮಸ್ಯೆ ಎದುರಾದರೆ ಆ ಕೊಳವೆ ಬಾವಿಗಳನ್ನು ವಶಕ್ಕೆ ಪಡೆಯಲು ಕ್ರಮವಹಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ೯೬ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಮಂಡ್ಯ ಜಿಲ್ಲಾಡಳಿತ ನಿರ್ಧರಿಸಿದೆ.

 

 

ಆಂದೋಲನ ಡೆಸ್ಕ್

Recent Posts

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

53 mins ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

58 mins ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

1 hour ago

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ ೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ…

1 hour ago

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

10 hours ago