Andolana originals

ವಾಹನ ತಪಾಸಣೆ ಕಾಯಕ; ಆಗದಿರಲಿ ಜೀವಕ್ಕೆ ಮಾರಕ

ಎಚ್.ಎಸ್.ದಿನೇಶ್ ಕುಮಾರ್

ತಪಾಸಣೆ ವೇಳೆ ಕೈಗೊಳ್ಳಬಹುದಾದ ಕ್ರಮಗಳು

* ವಾಹನ ತಪಾಸಣೆ ಸ್ಥಳದಿಂದ ನೂರು ಮೀಟರ್ ಹಿಂದೆ ಸೂಚನಾ ಫಲಕದೊಂದಿಗೆ ಬ್ಯಾರಿಕೇಡ್ ಅಳವಡಿಕೆ

* ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಿಸಿ ಟಿವಿಗಳ ಸಂಖ್ಯೆ ಹೆಚ್ಚಳ

* ಸಂಚಾರ ಪೊಲೀಸರಿಗೆ ಆಧುನಿಕ ತಂತ್ರ ಜ್ಞಾನದ ಕ್ಯಾಮೆರಾ ಒದಗಿಸುವುದು

ಮೈಸೂರು: ಮಂಡ್ಯದಲ್ಲಿ ಸೋಮವಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಡೆದ ದುರಂತದಲ್ಲಿ ೩ ವರ್ಷದ ಹೆಣ್ಣು ಮಗು ಪ್ರಾಣ ಕಳೆದುಕೊಂಡ ಘಟನೆಯ ಬೆನ್ನಲ್ಲೇ, ಪೊಲೀಸರು ನಡೆಸುವ ವಾಹನ ತಪಾಸಣೆ ಹೇಗಿರಬೇಕು? ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಅದಕ್ಕಿಂತ ಹೆಚ್ಚಾಗಿ ಅದು ಜೀವ ರಕ್ಷಕ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ. ಆ ಜವಾಬ್ದಾರಿ ಯಾರದ್ದು? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಮಂಡ್ಯದಲ್ಲಿ ನಡೆದ ಪ್ರಕರಣದಲ್ಲಿ ಹೆಲ್ಮೆಟ್ ಧರಿಸದ ಕಾರಣ ಸಂಚಾರ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅನಿರೀಕ್ಷಿತವಾಗಿ ಬೈಕ್‌ಗೆ ಟ್ಯಾಂಕರ್ ಗುದ್ದಿದ ಪರಿಣಾಮವಾಗಿ, ಬೈಕ್ ಸವಾರ ಸಹಿತ ಮೂವರು ಕೆಳಗೆ ಬಿದ್ದಿದಾರೆ. ಅವರ ಪೈಕಿ ೩ ವರ್ಷದ ಮಗುವು ಪ್ರಾಣ ಕಳೆದುಕೊಂಡಿತು.

ಮೈಸೂರಿನಲ್ಲಿ ಕೂಡ ಹಿಂದೆ ಇಂತಹ ಘಟನೆಗಳು ನಡೆದಿವೆ. ೨೦೨೨ರ ಮಾರ್ಚ್‌ನಲ್ಲಿ ಹಿನಕಲ್ ವರ್ತುಲ ರಸ್ತೆಯ ಬಳಿ ಸಂಚಾರ ಪೊಲೀಸರು ಮಾಡಿದ ಎಡ ವಟ್ಟಿನಿಂದ ಬೈಕ್ ಸವಾರರೊಬ್ಬರು ಲಾರಿಗೆ ಸಿಲುಕಿ ಸಾವಿಗೀಡಾಗಿದ್ದರು.

ಇಂತಹ ಘಟನೆಗಳು ವಾಹನ ಸವಾರರಿಗೆ ಎಚ್ಚರಿಕೆಯ ಘಂಟೆಯಾಗಬೇಕು. ಜೊತೆಗೆ ರಸ್ತೆಯಲ್ಲಿ ನಿಂತು ಏಕಾಏಕಿ ಚಲಿಸುತ್ತಿರುವ ವಾಹನಗಳಿಗೆ ಸಂಚಾರ ಪೊಲೀಸರು ಕೈ ಅಡ್ಡವಿಟ್ಟು ವಾಹನಗಳನ್ನು ನಿಲ್ಲಸಲು ಮುಂದಾದಲ್ಲಿ ಆಗಬಹುದಾದ ಅನಾಹುತ ಎಂತಹುದು ಎಂಬುದು ಪೊಲೀಸರಿಗೂ ಗೊತ್ತಾಗಬೇಕು.

ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಕೆ ಮುಂತಾದ ಅಪಾಯಕಾರಿ ನಡವಳಿಕೆಗಳನ್ನು ಬಿಡಬೇಕು. ಇವುಗಳು ಅಪಘಾತಕ್ಕೆ ಕಾರಣವಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ನಗರದಲ್ಲಿ ಕೆಲ ವರ್ಷಗಳ ಹಿಂದೆ ಸಂಚಾರ ನಿಯಮ ಉಲ್ಲಂಸುವ ವಾಹನ ಸವಾರರ ಫೋಟೋಗಳನ್ನು ನಾಗರಿಕರೇ ತೆಗೆದು ಪೊಲೀಸರಿಗೆ ಕಳುಹಿಸುವ ‘ಪಬ್ಲಿಕ್ ಐ’ ಎಂಬ ಯೋಜನೆಯೊಂದು ಜಾರಿಯಾಗಿತ್ತು.

ಆದರೆ, ಅದು ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಇನ್ನು ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಂಟರ್ ಸೆಪ್ಟರ್ ಸಂಚರಿಸುತ್ತಲೇ ಇರುತ್ತದೆ. ಆದರೂ ಸಂಚಾರ ನಿಯಮ ಉಲ್ಲಂಸುವವರನ್ನು ನಿಯಂತ್ರಿಸುವುದು ಸಾಧ್ಯವಾಗದಿರುವುದು ವಿಪರ್ಯಾಸ.

ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರೆ, ಭವಿಷ್ಯದಲ್ಲಿ ಅವರು ಸಂಚಾರ ನಿಯಮ ಪಾಲಿಸುತ್ತಾರೆ. ಮಾತ್ರವಲ್ಲ ಅವರು ತಮ್ಮ ಪೋಷಕರಿಗೂ ತಿಳಿಹೇಳುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಅದು ಮತ್ತಷ್ಟು ವೇಗಪಡೆದುಕೊಳ್ಳುವ ಅವಶ್ಯಕತೆ ಇದೆ.

ಇನ್ನು ಸಂಚಾರ ವಿಭಾಗದ ಪೊಲೀಸರಿಗೂ ಮೇಲಧಿಕಾರಿಗಳು ತಿಳಿಹೇಳುವ ಅಗತ್ಯ ಇದೆ. ಇಂದು ದೇಶ ವೈಜ್ಞಾನಿಕವಾಗಿ ಸಾಕಷ್ಟು ಸಾಧನೆ ಮಾಡಿದೆ. ಆ ವೈಜ್ಞಾನಿಕ ಸಾಧನಗಳನ್ನು ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿದೆ. ೨೦೧೫ರಲ್ಲಿ ಬಿ.ದಯಾನಂದ್ ಅವರು ನಗರ ಪೊಲೀಸ್ ಆಯುಕ್ತರಾಗಿದ್ದ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ನೋಟಿಸ್ ಜಾರಿಗೊಳಿಸುವ ನಿಯಮವನ್ನು ಜಾರಿಗೆ ತಂದಿದ್ದರು. ಇದರಿಂದ ಸಂಚಾರ ನಿಯಮ ಉಲ್ಲಂಘಿಸಿದವರ ಮನೆಗಳಿಗೆ ನೋಟಿಸ್ ಹೋಗುತ್ತಿತ್ತು. ತಪ್ಪು ಮಾಡಿದವರು ಆಯಾ ವ್ಯಾಪ್ತಿಯ ಠಾಣೆಗಳಿಗೆ ತೆರಳಿ ದಂಡ ಪಾವತಿಸುತ್ತಿದ್ದರು. ಸರತಿಯಲ್ಲಿ ನಿಂತು ದಂಡ ಪಾವತಿಸಿದ ಉದಾಹರಣೆಗಳೂ ಇವೆ. ಆದರೀಗ ಇಲಾಖೆಯ ಆಂತರಿಕ ಕಾರಣಗಳಿಂದಾಗಿ ನೋಟಿಸ್ ನೀಡುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.

ಇಂದಿನ ಪ್ರಭಾರ ಡಿಜಿಪಿ ಡಾ.ಎಂ.ಎ.ಸಲೀಂ ಅವರು ೨೦೧೩ರಲ್ಲಿ ಮೈಸೂರು ಪೊಲೀಸ್ ಆಯುಕ್ತರಾಗಿದ್ದರು. ಆ ಸಂದರ್ಭದಲ್ಲಿ ಸಂಚಾರ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರು. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಚುರುಕು ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದರು.

ನಗರದಾದ್ಯಂತವಿರುವ ಎಲ್ಲ ಸಂಚಾರ ಠಾಣೆಗಳ ಪೊಲೀಸರಿಗೆ ಇಲಾಖೆ ವತಿಯಿಂದಲೇ ಕ್ಯಾಮೆರಾಗಳನ್ನು ನೀಡಿದ್ದರು. ನಿಯಮ ಉಲ್ಲಂಘಿಸುವವರ ವಾಹನಗಳ ಫೋಟೋ ತೆಗೆದು ಅವರ ವಿಳಾಸಕ್ಕೆ ನೋಟಿಸ್ ತಲುಪುವಂತೆ ನೋಡಿಕೊಂಡಿದ್ದರು. ಆದರೀಗ ಕ್ಯಾಮೆರಾಗಳು ನಾಪತ್ತೆಯಾಗಿವೆ. ಹೀಗಾಗಿ ಪೊಲೀಸರು ಹಳೇ ಪದ್ಧತಿಯಲ್ಲಿಯೇ ವಾಹನ ತಪಾಸಣೆಗೆ ಮುಂದಾಗಿದ್ದಾರೆ. ಈಗಲಾದರೂ ಪೊಲೀಸರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

” ಇಂದು ನಾವು ವೈಜ್ಞಾನಿಕವಾಗಿ ಸಾಕಷ್ಟು ಮುಂದಿದ್ದೇವೆ. ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಿಸಿಕ್ಯಾಮೆರಾಗಳನ್ನು ಹೆಚ್ಚು ಮಾಡಬಹುದು. ಪೊಲೀಸರಿಗೆ ಒಳ್ಳೆಯ ಕ್ಯಾಮೆರಾಗಳನ್ನು ನೀಡಬೇಕು. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ತಪಾಸಣೆ ಬಿಟ್ಟು ಉಳಿದ ತಪಾಸಣೆಗಳನ್ನು ದೈಹಿಕವಾಗಿ ಮಾಡುವುದು ಸರಿಯಲ್ಲ. ಹಾಗೇನಾದರೂ ರಸ್ತೆಯಲ್ಲಿ ನಿಂತು ತಪಾಸಣೆ ಮಾಡಲೇ ಬೇಕು ಎಂದಾದಲ್ಲಿ ನೂರು ಮೀಟರ್ ಹಿಂದೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ತಪಾಸಣೆ ಮಾಡುತ್ತಿದ್ದೇವೆ ಎಂದು ಜನರಿಗೆ ಫಲಕಗಳ ಮೂಲಕ ತಿಳಿವಳಿಕೆ ನೀಡಬೇಕು. ಸಂಚಾರ ಪೊಲೀಸರು ಇರುವುದು ಅಪಘಾತಗಳನ್ನು ತಪ್ಪಿಸಲು ಮಾತ್ರ. ಆದರೆ, ಅವರೇ ಅಪಘಾತಕ್ಕೆ ಕಾರಣವಾದರೆ, ಜನರಿಗೆ ಎಂತಹ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.”

-ಶಂಕರೇಗೌಡ, ನಿವೃತ್ತ ಎಸ್‌ಪಿ

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

8 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

9 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

9 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

24 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago