Andolana originals

ಯುಗಾದಿ ವಿಶೇಷ | ಧಾರವಾಡದ ಮಣ್ಣಿನಲ್ಲಿ ಹಸಿರು ಚಿಗುರಿದ ಕಂಪನ

ಭಾಗ್ಯಜ್ಯೋತಿ ಹಿರೇಮಠ,
ಗುಡಗೇರಿ, ಕಥೆಗಾರ್ತಿ ಮತ್ತು ಕವಯಿತ್ರಿ

ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ಚೈತ್ರದ ಬಿಸಿಲು ಅಪ್ಪಳಿಸುತ್ತಿದ್ದಂತೆಯೇ ಗಾಳಿಯಲ್ಲಿ ಒಣಗಿದ ಎಲೆಗಳ ಮರ್ಮರ ಮತ್ತು ಹೊಸ ಚಿಗುರಿನ ಕಂಪಿನ ನಡುವೆ ಒಂದು ವಿಶಿಷ್ಟ ಸಂಘರ್ಷ ಶುರುವಾಗುತ್ತದೆ. ಯುಗಾದಿ ಎನ್ನುವುದು ಬರಿ ಕ್ಯಾಲೆಂಡರಿನ ಹಾಳೆ ಬದಲಾವಣೆಯಲ್ಲ, ಅದು ಮಣ್ಣಿನ ಒಡಲು ತನ್ನನ್ನು ತಾನು ನವೀಕರಿಸಿ ಕೊಳ್ಳುವ ಒಂದು ಅಧ್ಯಾತ್ಮಿಕ ವಿಧಿವಿಧಾನ ಮುಂಜಾನೆಯ ಕೆಂಪು ಇಡೀ ಹಳ್ಳಿಯನ್ನು ಆವರಿಸಿ ಕೊಂಡಾಗ, ಮನೆಗಳ ಮುಂದಿನ ಸಗಣಿ ಸಾರಿಸಿದ ನೆಲದ ಮೇಲೆ ಬಿಳಿ ಹಿಟ್ಟಿನ ರಂಗೋಲಿಗಳು ಜೀವತಳೆಯುತ್ತವೆ. ಈ ರಂಗೋಲಿಗಳು ಬರಿ ಆಕೃತಿಗಳಲ್ಲ; ಬದುಕಿನ ಏರಿಳಿತಗಳನ್ನು ಮೌನವಾಗಿ ಒಪ್ಪಿಕೊಂಡ ರೈತಜೀವದ ಕಲಾತ್ಮಕ ಅಭಿವ್ಯಕ್ತಿ. ಬಾಗಿಲಿಗೆ ಕಟ್ಟಿದ ಹಸಿರು ಮಾವಿನ ಎಲೆ ಮತ್ತು ಬೇವಿನ ಸೊಪ್ಪಿನ ತಳಿರು ತೋರಣಗಳು ಗಾಳಿಗೆ ಅಲುಗಾಡುವಾಗ, ಅವು ಮನೆಯೊಳಗಿನ ದುಷ್ಟ ಶಕ್ತಿಗಳನ್ನು ತಡೆದು ನಿಲ್ಲಿಸುವ ಹಸಿರು ಕಾವಲುಗಾರನಂತೆ ಕಾಣಿಸುತ್ತವೆ. ಬೇವಿನ ಎಲೆಯ ಕಹಿಯು ಚೈತ್ರದ ಬಿಸಿಲಿಗೆ ಒಂದು ಬಗೆಯ ಘಮವನ್ನು ನೀಡುವ ಆ ವಿರೋಧಾಭಾಸವೇ ಈ ನೆಲದ ಸೌಂದರ್ಯ. ಬೆಳ್ಳಂಬೆಳಿಗ್ಗೆ ಹಂಡೆಗಳಲ್ಲಿ ನೀರು ಕಾಯಿಸಿ ಮೈಗೆ ಎಣ್ಣೆ ಹಚ್ಚಿ ಶಾಸ್ರೋಕ್ತವಾಗಿ ನೀರು ಸುರಿಸಿಕೊಳ್ಳುವಾಗ, ಅದು ಬರಿ ದೈಹಿಕ ಸ್ಥಾನವಲ್ಲ, ಬದಲಾಗಿ ಕಳೆದ ವರ್ಷದ ದಣಿವನ್ನು ಮರೆತು ಹೊಸ ವರ್ಷದ ಚೈತನ್ಯವನ್ನು ಮೈಗೆ ಇಳಿಸಿಕೊಳ್ಳುವ ಒಂದು ಶುದ್ದೀಕರಣದ ಪ್ರಕ್ರಿಯೆ.

ಕೊಟ್ಟಿಗೆಯ ಕಡೆ ಮುಖ ಮಾಡಿದರೆ, ಅಲ್ಲಿ ವರ್ಷವಿಡೀ ಬೆವರು ಹರಿಸಿದ ದನ-ಕರುಗಳ ಸಂಭ್ರಮ ಮೈಮನ ಸೆಳೆಯುತ್ತದೆ. ರೈತನ ಪಾಲಿಗೆ ಇವು ಕೇವಲ ಪ್ರಾಣಿಗಳಲ್ಲ, ತನ್ನ ಸಂಸಾರದ ಅವಿಭಾಜ್ಯ ಅಂಗಗಳು, ಎತ್ತುಗಳ ಮೈ ತೊಳೆದು, ಅವುಗಳ ಕೊಂಬುಗಳಿಗೆ ಕಡು ಕೆಂಪು ಅಥವಾ ಹಳದಿ ಬಣ್ಣ ಹಚ್ಚಿ, ಕೊರಳಿಗೆ ಹೊಸ ಗೆಜ್ಜೆ ಕಟ್ಟಿದಾಗ ಆ ಮೂಕ ಪ್ರಾಣಿಗಳ ನಡಿಗೆಯಲ್ಲೇ ಒಂದು ರಾಜಗಾಂಭೀರ್ಯ ಕಾಣಿಸಿಕೊಳ್ಳುತ್ತದೆ. ‘ಬಾ ಮಗನೇ’ ಎಂದು ರೈತ ತನ್ನ ಎತ್ತಿನ ಹಣೆಗೆ ಮುದ್ದಿಸಿ ಬೇವು-ಬೆಲ್ಲದ ತುತ್ತು ನೀಡುವಾಗ, ಅಲ್ಲಿ ಮನುಷ್ಯ ಮತ್ತು ಪ್ರಾಣಿಯ ನಡುವಿನ ಭಾಷೆಯಿಲ್ಲದ ಸಂವಾದವೊಂದು ನಡೆಯುತ್ತದೆ. ಈ ಬೇವು-ಬೆಲ್ಲ ಕೇವಲ ರುಚಿಯಲ್ಲ; ಅದು ಬದುಕಿನ ಕಟು ಸತ್ಯವನ್ನು ಸಾರುವ ದಿವ್ಯ ಪ್ರಸಾದ, ಕಹಿಯನ್ನು ಬೆಲ್ಲದ ಸಮಾಧಾನದೊಂದಿಗೆ ನುಂಗುವುದನ್ನು ಕಲಿಸುವ ಈ ಆಚರಣೆ, ಮನುಷ್ಯನ ಮನಸ್ಥಿತಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಹಳೆಯ ಕಹಿ ಘಟನೆಗಳನ್ನು, ದ್ವೇಷಗಳನ್ನು ಬೇವಿನ ಎಲೆಯಂತೆ ಉದುರಿಸಿ, ಹೊಸ ಬದುಕಿನ ಹಸಿರು ಪ್ರತಿ ಹಬ್ಬದ ಆಚ ರಣೆಯನ್ನೂ ಅಂದು ತಯಾರಿಸುವ ಚಿಗುರನ್ನಷ್ಟೇ ಮನಸಿನಲ್ಲಿ ಉಳಿಸಿಕೊಳ್ಳುವ ಒಂದು ಮಾನಸಿಕ ಸ್ಥಿತ್ಯಂತರ ಇಲ್ಲಿ ಸಂಭವಿಸುತ್ತದೆ. ಉತ್ತರ ಕರ್ನಾಟಕದ ಈ ನೆಲದಲ್ಲಿ ದ್ವೇಷ ಕೂಡ ಬೇವಿನಷ್ಟೇ ಗಾಢ, ಆದರೆ ಪ್ರೀತಿ ಬೆಲ್ಲದಷ್ಟೇ ಮೃದು ಮತ್ತು ಮಧುರ.

ಅಡುಗೆ ಮನೆಯಿಂದ ಬರುವ ಬಿಸಿ ಹೂರಣದ ಹೋಳಿಗೆ ಮತ್ತು ತುಪ್ಪದ ಘಮಲು ಬರಿ ಹಸಿವನ್ನಲ್ಲ, ಬದಲಾಗಿ ಬಾಲ್ಯದ ಸುಖದ ನೆನಪುಗಳನ್ನು ಬಡಿದೆಬ್ಬಿಸುತ್ತದೆ. ಕಲ್ಲಿನ ಒರಳಿನಲ್ಲಿ ಬೇಳೆ ರುಬ್ಬುವ ಲಯಬದ್ಧ ಸದ್ದು ಹಳ್ಳಿಯ ಸಂಗೀತದಂತೆ ಕೇಳಿಸುತ್ತದೆ. ಹೋಳಿಗೆಯ ಜೊತೆಗೆ ಮಾವಿನಕಾಯಿ ಚಿತ್ರಾನ್ನ, ಬದನೇಕಾಯಿ ಪಲ್ಯ ಮತ್ತು ಹಪ್ಪಳ, ಸಂಡಿಗೆಯ ಮೆರವಣಿಗೆಯೇ ಅಲ್ಲಿ ನಡೆಯುತ್ತದೆ. ಸಂಜೆ ಹೊತ್ತಿಗೆ ಊರ ಚಾವಡಿಯ ಅಂಚಿನಲ್ಲಿ ಅಥವಾ ಗುಡಿಯ ಕಟ್ಟೆಯ ಮೇಲೆ ಕುಳಿತು ಪಂಚಾಂಗ ಶ್ರವಣ ಮಾಡುವ ರೈತರ ಮುಖಗಳಲ್ಲಿ ಆತಂಕ ಮತ್ತು ಭರವಸೆಯ ಮಿಶ್ರಣವಿರುತ್ತದೆ. ರೋಹಿಣಿ ಮಳೆಯ ನಕ್ಷತ್ರದ ಬಗ್ಗೆ ಅಥವಾ ಮೃಗಶಿರಾ ಮಳೆಯ ಮುನ್ಸೂಚನೆಯ ಬಗ್ಗೆ ಹೇಳುವಾಗ, ಅಲ್ಲಿ ನೆರೆದಿದ್ದವರ ಕಣ್ಣುಗಳಲ್ಲಿ ಬೆಳೆಯ ಕನಸುಗಳು ಮೊಳಕೆಯೊಡೆಯುತ್ತವೆ. ‘ಈ ಸಲದ ಮಳೆ ಹದವಾಗಿ ಬಿದ್ದರೆ ಬದುಕು ಹಸನಾದೀತು’ ಎನ್ನುವ ಆಶಾವಾದ ಅವರ ಸುಕ್ಕುಗಟ್ಟಿದ ಮುಖಗಳಲ್ಲಿ ಮಿನುಗುತ್ತದೆ. ಇದು ಬರಿ ಭವಿಷ್ಯವಾಣಿಯಲ್ಲ, ಈ ಮಣ್ಣಿನ ಮಕ್ಕಳು ತಮ್ಮ ಅಸ್ತಿತ್ವದ ಭರವಸೆಯನ್ನು ಕಂಡುಕೊಳ್ಳುವ ಕ್ಷಣ.

ಮರುದಿನ ಬರುವ ‘ವರ್ಷದ ತೊಡಕು’ ಹಬ್ಬದ ಇನ್ನೊಂದು ಆಯಾಮ. ಅಂದು ಜನರೆಲ್ಲರೂ ಸಾಮೂಹಿಕವಾಗಿ ಸೇರಿ ವನಭೋಜನ ಮಾಡುವುದು ಅಥವಾ ಹೊಲಗದ್ದೆಗಳಲ್ಲಿ ಕುಳಿತು ಊಟ ಮಾಡುವುದು ಅಥವಾ ಊರ ಹಳ್ಳಿಯ ಜಾತ್ರೆಗೆ ಸೇರುವುದು ವಿಶಿಷ್ಟ ಸಂಪ್ರದಾಯ. ಇದು ಸಮಾಜದ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸುವ ಕೊಂಡಿ ಈ ಯುಗಾದಿಯು ಮನುಷ್ಯನನ್ನು ಮರಳಿ ತನ್ನ ಮೂಲ ಬೇರುಗಳಿಗೆ ಕರೆದೊಯ್ಯುತ್ತದೆ. ಇದು ಬರಿ ಸಂಭ್ರಮವಲ್ಲ, ಇದು ಮಣ್ಣು, ಪ್ರಾಣಿ ಮತ್ತು ಮನುಷ್ಯನ ಅಸ್ತಿತ್ವದ ಹೊಸ ಬಿತ್ತನೆ. ಈ ಹಬ್ಬದಲ್ಲಿ ಹಳೆಯದನ್ನು ಕಳಚಿ, ಹೊಸ ಮನ್ವಂತರಕ್ಕೆ ತೆರೆದುಕೊಳ್ಳುವ ಸಾತ್ವಿಕ ತುಡಿತವಿದೆ. ಪ್ರಕೃತಿಯೇ ತನ್ನನ್ನು ತಾನು ಸಿಂಗರಿಸಿಕೊಂಡಿರುವಾಗ, ಮಾನವನ ಮನಸು ಕೂಡ ಆ ಹಸಿರಿಗೆ ಸ್ಪಂದಿಸಿ ಹೊಸ ಬದುಕಿನ ಶಪಥ ಮಾಡುತ್ತದೆ. ಒಟ್ಟಾರೆಯಾಗಿ, ಉತ್ತರ ಕರ್ನಾಟಕದ ಯುಗಾದಿಯು ನಿಸರ್ಗದ ಆವರ್ತನದೊಂದಿಗೆ ಮಾನವನ ಬದುಕು ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಸಾರುವ ಮಣ್ಣಿನ ಮಹಾಕಾವ್ಯ ದಂತೆ ಕಂಗೊಳಿಸುತ್ತದೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೆಪಿಎಸ್ ಶಾಲೆ ಯೋಜನೆ ಸರ್ಕಾರದ ಜಾಣ ನಡೆ!

ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸದಾಗಿ ೮೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು…

2 hours ago

ಓದುಗರ ಪತ್ರ: ಸರ್ಕಾರಿ ಶಾಲೆ ದತ್ತು ಪಡೆಯುವ ಪ್ರಕ್ರಿಯೆ ಆರಂಭವಾಗಲಿ

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಮೇ ೨೯ರಂದು ಪ್ರಾರಂಭವಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರ ಪ್ರತೀ ವರ್ಷ ಮಕ್ಕಳಿಗೆ ಉಚಿತ ಪಠ್ಯಪುಸ್ತಕ,…

2 hours ago

ಓದುಗರ ಪತ್ರ: ತಮಿಳುನಾಡು ಮುಖ್ಯಮಂತ್ರಿ ನಡೆ ಶ್ಲಾಘನೀಯ

ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಚಿತ್ರನಟ ಜೋಸೆಫ್ ವಿಜಯ್ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಒಂದೇ ರಸ್ತೆಯಲ್ಲಿ…

2 hours ago

ಪ್ರಾಕೃತಿಕ ವಿಕೋಪ ಎದುರಿಸಲು ಪೊಲೀಸ್ ಇಲಾಖೆ ಸಜ್ಜು

ನವೀನ್ ಡಿಸೋಜ ವಿಪತ್ತು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ; ಸಂತ್ರಸ್ತರನ್ನು ರಕ್ಷಿಸುವ ವಿಧಾನ, ದೋಣಿ ಮೋಟಾರ್‌ಗಳನ್ನು ಚಾಲನೆ ಮಾಡುವ ಬಗ್ಗೆ…

5 hours ago

ಗಾಂಧಿ ಅಭಿಯಾನ ಅರಿವಿನ ಯಾನ

ಬಾಪೂಜಿ ಮತ್ತು ವಾಜಪೇಯಿ ದಾರಿ ಬೇರೆಯಾಗಿದ್ದರೂ ನೈತಿಕತೆಗೆ ಮಾದರಿಯಾಗಿದ್ದರು ರಾಜೀವ ಹೆಗಡೆ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿ ಸಿದಾಗ…

5 hours ago

ಗಾಂಧಿ ಅಭಿಯಾನ ಅರಿವಿನ ಯಾನ

ಸುಧಾರಣೆ ನೆಪದಲ್ಲಿ ಎಚ್ಚರ ತಪ್ಪಿದೆ.  ಪ್ರೌಢಶಾಲೆಯಲ್ಲಿ ನನಗೆ ಆಪ್ತ ಸ್ನೇಹಿತರು ಬಹಳ ಕಡಿಮೆಯಿದ್ದರು. ಅಲ್ಲಿ ಬೇರೆ ಬೇರೆ ಕಾಲದಲ್ಲಿ ನನಗೆ…

5 hours ago