Andolana originals

ತುಳುನಾಡಿನ ಯುಗಾದಿ ‘ಬಿಸು’ವಿಗಾಗಿ ಇನ್ನೂ ಇಪ್ಪತ್ತೆಂಟು ದಿನ

ಅಕ್ಷತಾರಾಜ್ ಪೆರ್ಲ, ಕನ್ನಡ, ತುಳು ಉಭಯ ಭಾಷಾ ಲೇಖಕಿ 

ಯುಗಾದಿ ಹಬ್ಬದ ಆಚರಣೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇದ್ದು, ಕರ್ನಾಟಕದ ಕರಾವಳಿ ಎನ್ನಿಸಿಕೊಂಡ ತುಳುನಾಡಿನಲ್ಲಿ ಯುಗಾದಿ ಆಚರಣೆ, ನಂಬಿಕೆ, ಸಂಪ್ರದಾಯ ಎಲ್ಲವೂ ತುಸು ಭಿನ್ನ. ಬೇಸಾಯವನ್ನು ಅವಲಂಬಿಸಿರುವ ತುಳುವನಾಡಿನಲ್ಲಿ ಆಚರಿಸಲ್ಪಡುವ ಬಹುತೇಕ ಹಬ್ಬಗಳಲ್ಲಿ ಪ್ರಕೃತಿ ಆರಾಧನೆ ಕಂಡುಬರುತ್ತದೆ. ‘ಕೆಡ್ಡಸ’ ಸಂಪ್ರದಾಯದಲ್ಲಿ ಭೂಮಿತಾಯಿ ರಜಸ್ವಲೆಯಾಗಿ ಫಲವತ್ತತೆಗೆ ಸಮರ್ಥಳಾಗುತ್ತಾಳೆ ಎಂಬ ನಂಬಿಕೆಯಿದ್ದು ಭೂಮಿಯನ್ನು ಆರಾಽಸುವ ರೀತಿ ಕಂಡುಬಂದರೆ ಯುಗಾದಿಯಲ್ಲಿ ಸೂರ್ಯನಿಗೆ ಎಂದರೆ ‘ಬಾನದೇವ’ನಿಗೆ ವಿಶೇಷ ಮಹತ್ವ. ಇದೇ ಕಾರಣಕ್ಕೆ ಚಾಂದ್ರಮಾನ ಯುಗಾದಿಗಿಂತ ಸೌರಮಾನ ಯುಗಾದಿ ‘ಬಿಸು ಪರ್ಬ’ವಾಗಿ ತುಳುವರಿಗೆ ದೊಡ್ಡ ಹಬ್ಬ.

ಚಾಂದ್ರಮಾನ ಯುಗಾದಿಗೆ ವಿಶೇಷ ಪ್ರಾಧಾನ್ಯತೆ ತುಳುನಾಡಿನಲ್ಲಿ ಕಂಡುಬರುವುದಿಲ್ಲ. ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವ ಸೌರಮಾನ ಯುಗಾದಿಯನ್ನು ‘ಬಿಸು ಪರ್ಬ’ ಅಥವಾ ವಿಷುಹಬ್ಬವಾಗಿ ಆಚರಿಸುತ್ತಾರೆ. ಕೇರಳದ ‘ವಿಷು ಯುಗಾದಿ’ಯೊಡನೆ ತುಳುನಾಡಿನ ಬಿಸುವಿಗೆ ಸಾಮ್ಯತೆ ಇದ್ದು ಆಚರಣೆಗಳಲ್ಲಿ ತುಸು ವ್ಯತ್ಯಾಸವಿದೆ. ಕೇರಳೀಯರಿಗೆ ‘ಕೊನ್ನೆ ಹೂವು’ ಸೌರಮಾನ ಯುಗಾದಿಗೆ ವಿಶೇಷವಾಗಿದ್ದರೆ, ತುಳುವರಿಗೆ ಸೌರಮಾನ ಯುಗಾದಿಯಂದು ಇಡುವ ‘ಬಿಸು ಕಣಿ’ಯೇ ವಿಶೇಷ.

ತುಳವರಿಗೆ ಬಿಸು ಅಥವಾ ಸೌರಮಾನ ಯುಗಾದಿ ಕೊನೆಯ ಹಬ್ಬವಾಗಿದ್ದು ಅಷ್ಟಮಿಯನ್ನು ಮೊದಲ ಹಬ್ಬವಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ‘ಬಿಸು ಭೀಮೆ ಕೊಂಡು ಕಂತ್ಯೆಂಡ, ಅಟ್ಟೆಮಿಗ್ ಕಿಸ್ನೆ ಉದಿತ್ ಬರ್ಪೆರ್’ ಎಂದರೆ ‘ವಿಷುವನ್ನು ಭೀಮ ಕೊಟ್ಟು ಹೋದರೆ, ಅಷ್ಟಮಿಗೆ ಕೃಷ್ಣ ಹುಟ್ಟಿ ಬರುತ್ತಾನೆ’ ಎಂಬ ಮಾತು ಚಾಲ್ತಿಯಲ್ಲಿದೆ. ಆದ್ದರಿಂದ ವಾರ್ಷಿಕಾವರ್ತನದ ಕೊನೆಯ ಹಬ್ಬವಾಗಿ ಸೌರಮಾನ ಯುಗಾದಿ ಪರಿಗಣಿಸಲ್ಪಡುತ್ತದೆ. ಬೇಸಾಯಗಾರರ ಕೊಯ್ಲು ಮುಗಿದು ಫಸಲು ಮನೆಯಂಗಳದಲ್ಲಿ ಹೊನ್ನಾದ ಕಾಲ.

‘ಬುಳೆ ಕಾಣಿಕೆ’ ಅಥವಾ ಬೆಳೆ ಕಾಣಿಕೆ ತುಳುನಾಡು ಜಮೀನ್ದಾರಿ ಪದ್ಧತಿಯನ್ನು ಹೊಂದಿದ್ದಂತಹ ಪ್ರದೇಶ. ಗೇಣಿ ಒಕ್ಕಲು ಇಲ್ಲಿ ರೂಢಿಯಲ್ಲಿದ್ದುದರಿಂದ ಗೇಣಿದಾರರು ವರ್ಷಕ್ಕೊಮ್ಮೆ ಜಮೀನ್ದಾರನಿಗೆ ತನ್ನ ಜಮೀನಿನಲ್ಲಿ ಬೆಳೆದ ಬೆಳೆಯ ಒಂದಂಶವನ್ನು ಕೊಡುವುದು ಪದ್ಧತಿಯಾಗಿತ್ತು. ಹೀಗೆ ಲಾಭದ ಒಂದಂಶವಾದ ಬೆಳೆಯನ್ನು ಸೌರಮಾನ ಯುಗಾದಿಯ ದಿನ ತನ್ನ ದೇವನಾದ ಭೂಮಿಯ ಒಡೆಯನಿಗೆ ಕೊಡುವ ಕ್ರಮವಿತ್ತು. ಇದನ್ನು ’ಬುಳೆ ಕಾಣಿಕೆ’ (ಬೆಳೆ ಕಾಣಿಕೆ) ಎಂದು ಕರೆಯಲಾಗುತ್ತಿತ್ತು. ಜಮೀನ್ದಾರಿ ಪದ್ಧತಿ ಮರೆಯಾದ ಕಾಲಘಟ್ಟದಲ್ಲಿ ‘ಬುಳೆ ಕಾಣಿಕೆ’ ಸಂಪ್ರದಾಯ ಇರದಿದ್ದರೂ ‘ಬಿಸು ಕಣಿ’ ಚಾಲ್ತಿಯಲ್ಲಿದೆ. ತಂತಮ್ಮ ಮನೆಗಳಲ್ಲಿ ತಾವು ಬೆಳೆದ ಹಣ್ಣು, ತರಕಾರಿಗಳನ್ನಿಟ್ಟು ಆರಾಧಿಸುವುದು ಸಂಪ್ರದಾಯ.

ಯುಗಾದಿ ದಿನ ‘ಬಿಸು ಕಣಿ’ ದರ್ಶನ ಕೃಷಿಕ ತಾನು ಬೆಳೆದ ಹೊಸ ಬೆಳೆಯನ್ನು ಕೊಯ್ದು ಸೌರಮಾನ ಯುಗಾದಿಯ ಮುನ್ನಾದಿನ ಸಾಯಂಕಾಲ ದೇವರ ಮನೆಯಲ್ಲಿ ಜೋಡಿಸಿಡುವುದು ವಿಶೇಷ. ಹೀಗೆ ಜೋಡಿಸುವುದಕ್ಕೂ ಅದರದ್ದೇ ಆದ ನಿಯಮವಿದ್ದು ಮನೆಯ ಯಜಮಾನನ ಸೂಚನೆಯನ್ನು ಪಾಲಿಸಲಾಗುತ್ತದೆ. ಮಣೆಯ ಮೇಲೆ ತುದಿ ಬಾಳೆ ಎಲೆಯಲ್ಲಿ ತಾನು ಬೆಳೆದ ಹಣ್ಣು, ತರಕಾರಿಗಳ ಜೊತೆಗೆ ಸೇರು ಅಕ್ಕಿ, ಹಿಂಗಾರ,  ವೀಳ್ಯದೆಲೆ, ಅಡಕೆ, ತೆಂಗಿನಕಾಯಿ, ಧೋತಿ, ಹಣ ಇತ್ಯಾದಿಗಳನ್ನು ಜೋಡಿಸಿಟ್ಟು ಮಧ್ಯ ಭಾಗದಲ್ಲಿ ಕನ್ನಡಿ ಇಡುತ್ತಾರೆ. ಹೀಗೆ ಇಡುವ ಕಣಿಯಲ್ಲಿ ಗೇರುಹಣ್ಣು, ಹಲಸಿನ ಹಣ್ಣಿನ ಪಾರುಪತ್ಯ ಬಲು ಜೋರು. ಇದನ್ನೇ ಬಿಸು ಕಣಿ ಎನ್ನುವುದು. ಸೌರಮಾನ ಯುಗಾದಿ ದಿನ ಬೆಳಿಗ್ಗೆ ಮನೆಯ ಯಜಮಾನ ಮಿಂದು ಹೊಸ ಬಟ್ಟೆ ಧರಿಸಿ ಕಣಿ ಮುಂದೆ ದೀಪ ಬೆಳಗಿ ಕಣಿಯಲ್ಲಿಟ್ಟ ಕನ್ನಡಿಯಲ್ಲಿ ಮುಖ ನೋಡುತ್ತಾನೆ. ನಂತರ ಮನೆಮಕ್ಕಳೆಲ್ಲ ಕಣಿ ಕನ್ನಡಿ ನೋಡಿ ಕಣಿಗೆ ನಮಸ್ಕರಿಸಿ, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವುದನ್ನು ‘ಕಣಿ ನೋಡುವುದು’ ಎನ್ನುತ್ತಾರೆ. ಈ ಕಣಿ ಮೂಲಕ ರೈತ ದೇವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾನೆ. ಕಣಿಗೆ ಇಟ್ಟ ತರಕಾರಿ, ಹಣ್ಣು ಇತ್ಯಾದಿಗಳ ಸ್ವಲ್ಪ ಭಾಗವನ್ನು ತೆಗೆದು ಅಡುಗೆಗೆ ಉಪಯೋಗಿಸಿ ಪ್ರಸಾದವೆಂದು ಸ್ವೀಕರಿಸಲಾಗುತ್ತದೆ. ಎಳೆಯ ಗೋಡಂಬಿ ಹಾಕಿದ ಪಾಯಸ ಇರದ ತುಳುನಾಡಿನ ಮನೆ ಯುಗಾದಿ ದಿನ ಇರಲಿಕ್ಕಿಲ್ಲ! ತುಳುವರ ಪ್ರಕಾರ ಬಿಸು ಕಳೆಯಿತೆಂದರೆ ಮಳೆಗಾಲ ಆರಂಭವಾಯಿತು ಎಂದರ್ಥ. ನಂತರದ್ದೆಲ್ಲ ಮಳೆಗಾಲದ ಸಿದ್ಧತೆಗಳೇ. ಬಿಸುವಿನ ದಿನ ’ಕೈ ಬಿತ್ತು ಹಾಕುವುದು’ ಎಂಬ ಸಂಪ್ರದಾಯವಿದ್ದು ಕೃಷಿ ಬೆಳೆಗಳ ಬೀಜ ಬಿತ್ತನೆಗೆ ಆ ದಿನ ಸಕಾಲವೆಂದು ನಂಬಿಕೆ. ಶುಭಕಾರ್ಯಗಳಿಗೆ ಬಿಸುವಿನ ದಿನ ಶುಭದಿನ. ಮುಹೂರ್ತ ನೋಡುವ ಕ್ರಮವೂ ಇಲ್ಲ. ಒಂದಾದರೂ ತರಕಾರಿ ಗಿಡವನ್ನು ಬಿಸುವಿನಂದು ನೆಡಲೇಬೇಕು ಎಂಬುದು ವಾಡಿಕೆ. ಹೀಗೆ ತುಳುವರಿಗೆ ಸೌರಮಾನ ಯುಗಾದಿ ‘ಬಿಸು ಪರ್ಬ’ವಾಗಿ ಆಚರಿಸಲ್ಪಡುವ ದೊಡ್ಡ ಹಬ್ಬ.

ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಮನುಷ್ಯನೂ ಬದಲಾಗಿದ್ದಾನೆ. ಕೃಷಿಭೂಮಿಗಳು ಸೈಟು, ಅಪಾರ್ಟುಮೆಂಟುಗಳಾಗಿ ಬದಲಾಗಿರುವಾಗ ತಮ್ಮ ಭೂಮಿಯ ಫಸಲಿನ ಕಣಿ ಎಲ್ಲಿರಲು ಸಾಧ್ಯ? ಇದೇ ಕಾರಣಕ್ಕೆ ಇಂದು ಹೆಚ್ಚಿನ ಮನೆಗಳಲ್ಲಿ ‘ಕಣಿ ಸಂಸ್ಕ ತಿ’ ಮರೆಯಾದರೂ ತುಳುನಾಡಿನ ದೇವಸ್ಥಾನಗಳಲ್ಲಿ ಬಿಸುವಿನ ದಿನ ಕಣಿಯ ಸೊಬಗು ನೋಡಲು ಸಿಗುತ್ತದೆ. ಚಾಂದ್ರಮಾನ ಅಥವಾ ಸೌರಮಾನ, ಯುಗಾದಿ ಯಾವುದೇ ಆಗಿರಲಿ, ಹೊಸತನ್ನು ಸ್ವಾಗತಿಸುವುದು ಎಲ್ಲ ದೇಶ, ಕಾಲದ ಮೂಲ ಆಶಯ. ನಿನ್ನೆಯ ಹಳತಿನ ತಳಪಾಯದಲ್ಲಿ ನಾಳಿನ ಹೊಸತಿನ ನಿರೀಕ್ಷೆ ಒಟ್ಟಂದದಲ್ಲಿ ಯುಗಾದಿ ಎಂಬ ಹಬ್ಬದ ಸೊಗಡು.

ಆಂದೋಲನ ಡೆಸ್ಕ್

Recent Posts

ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್‌ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ. ಈ ವೈಮಾನಿಕ…

3 hours ago

ಮೈಸೂರಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…

4 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

4 hours ago

ಕಳೆದ ಮೂರು ದಿನಗಳಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತದ ಮಂದಿ ಭಕ್ತರು ಭೇಟಿ

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…

4 hours ago

ಕಾಡಿನಲ್ಲಿ ಅಕ್ರಮವಾಗಿ ಚರ್ಚ್‌ ನಿರ್ಮಾಣ: 40ಕ್ಕೂ ಹೆಚ್ಚು ಜನರ ಬಂಧನ

ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್‌ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…

6 hours ago

ಹಾರ್ಮುಜ್‌ ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂತು 20,000 ಟನ್‌ ಎಲ್‌ಪಿಜಿ ಟ್ಯಾಂಕರ್‌

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್‍ಪಿಜಿಯನ್ನು ಹೊತ್ತ…

6 hours ago