Andolana originals

ಮಾನವ-ಪ್ರಾಣಿ ಸಂಘರ್ಷಕ್ಕೆ ಹುಲಿಗಳು ಬಲಿಯಾಗುತ್ತಿವೆಯೇ?

ಪ್ರಸಾದ್ ಲಕ್ಕೂರು

ಮೀಣ್ಯಂ ವಲಯಾರಣ್ಯದಲ್ಲಿ ೫ ಹುಲಿಗಳ ಸಾವು ನಿದರ್ಶನ; ಸಂರಕ್ಷಿತಾರಣ್ಯಗಳಲ್ಲಿ ಜನರ ಮೇಲೆಯೂ ದಾಳಿ

ಚಾಮರಾಜನಗರ: ಹುಲಿಗಳಿರುವ ನಾಡು ಎಂದೇ ಹೆಸರುವಾಸಿ ಆಗುತ್ತಿರುವ ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಹುಲಿಗಳು ಬಲಿಯಾಗುತ್ತಿವೆಯೇ ? ಇಂತಹದ್ದೊಂದು ಪ್ರಶ್ನೆ ಕೇಳಿ ಬರುತ್ತಿದೆ.

ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಶಾಖೆಯ ಮಹದೇಶ್ವರ ದೇವಸ್ಥಾನ ಅರಣ್ಯ ಪ್ರದೇಶ ದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಐದು ಹುಲಿಗಳು ಒಂದೇ ದಿನ ಮೃತಪಟ್ಟಿರುವ ಘಟನೆ ಇದೇ ಮೊದಲಾಗಿದೆ. ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದು, ಇದಕ್ಕೆ ಪುಷ್ಟಿ ನೀಡುತ್ತದೆ.

ಮೀಣ್ಯಂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ೩ ದಿನಗಳ ಹಿಂದೆ ಹುಲಿ ದಾಳಿಗೆ ಹಸುವೊಂದು ಮೃತಪಟ್ಟಿತ್ತು. ಮತ್ತೆ ಮಾಂಸ ತಿನ್ನಲು ಹುಲಿ ಬರಬಹುದು ಎಂದು ಶಂಕಿಸಿ ಜಾನುವಾರುಗಳ ಮಾಲೀಕರು ವಿಷಪ್ರಾಶನ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ವಿಷಪ್ರಾಶನ ನಿಜವೆಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿಧಾಮದೊಳಗೆ ಹಾಗೂ ಅಂಚಿನಲ್ಲಿ ಅನೇಕ ಗ್ರಾಮಗಳಿದ್ದು ದೇಶಿ ಜಾನುವಾರುಗಳನ್ನು ಸಾಕುತ್ತಾರೆ. ಅವುಗಳನ್ನು ಮೇಯಲು ಅರಣ್ಯದೊಳಗೆ ಬಿಡುವುದು ಸಾಮಾನ್ಯ. ಕೆಲವು ಸಲ ಕಾಡಿನೊಳಗೆ ಹೋದ ಹಸು, ಕರುಗಳು ವಾಪಸ್ ಬಾರದೆ ಹುಲಿ, ಚಿರತೆಗೆ ಆಹಾರವಾದ ಘಟನೆಗಳು ನಡೆದಿವೆ. ಆದರೆ, ಬೆಳಕಿಗೆ ಬರುತ್ತಿಲ್ಲ. ಹುಲಿಯ ದಾಳಿಯಿಂದ ಬೆಚ್ಚಿದ ಜನರು ಸಾವಿಗೀಡಾದ ಹಸುಗಳ ಮೇಲೆ ಕ್ರಿಮಿನಾಶಕ ಸುರಿಯುತ್ತಾರೆ. ಆಗ ಹುಲಿ ಅಥವಾ ಚಿರತೆ ತಾನು ಸಾಯಿಸಿದ ಪ್ರಾಣಿಗಳನ್ನು ತಿಂದು ಸಾವನ್ನಪ್ಪಿದ ಘಟನೆಗಳು ನಡೆದಿವೆ.

ಜಿಲ್ಲೆಯಲ್ಲಿ ಸುಪ್ರಸಿದ್ಧ ಬಂಡೀಪುರ ಮತ್ತು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯಗಳಿವೆ. ಅಲ್ಲದೆ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯ ಜೀವಿಧಾಮಗಳಿವೆ. ಇವುಗಳು ಸಂರಕ್ಷಿತ ಪ್ರದೇಶಗಳಾದ್ದರಿಂದ ಆನೆಗಳು, ಚಿರತೆಗಳು, ಹುಲಿಗಳು, ಕಾಡೆಮ್ಮೆಗಳು, ಸೀಳುನಾಯಿಗಳು, ಜಿಂಕೆಗಳು, ಹಂದಿಗಳು, ಕೋತಿಗಳು ಸೇರಿದಂತೆ ಇತರೆ ಹಲವು ಪ್ರಾಣಿಗಳ ಸಂಖ್ಯೆ ವೃದ್ಧಿಸಿದೆ.

ಹುಲಿ ಸೇರಿದಂತೆ ಇತರೆ ಪ್ರಾಣಿಗಳ ಆವಾಸ ಸ್ಥಾನಕ್ಕೆ ಮಾನವನ ಹಸ್ತಕ್ಷೇಪ ಆರಂಭವಾದ್ದರಿಂದಲೇ ಮಾನವ ಮತ್ತು ಪ್ರಾಣಿ ಸಂಘರ್ಷ ಆಗಾಗ್ಗೆ ನಡೆಯುತ್ತಿದೆ. ಆದ್ದರಿಂದಲೇ ಕಡಿಮೆ ಸಂಖ್ಯೆಯಲ್ಲಿರುವ ಹುಲಿ, ಚಿರತೆ, ಆನೆಯಂತಹ ಪ್ರಾಣಿಗಳ ಜೀವ ಹರಣವಾಗುತ್ತಿದೆ ಎಂಬ ಮಾತುಗಳು ಪರಿಸರ ತಜ್ಞರಿಂದ ಆಗಾಗ ಕೇಳಿಬರುತ್ತಿವೆ.

ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದ ದೊಡ್ಡ ಪ್ರಾಣಿಗಳ ಕಳ್ಳಬೇಟೆಗೆ ಕಡಿವಾಣ ಬಿದ್ದಿದೆ. ಆದರೆ, ಅರಣ್ಯದಂಚಿನ ಮತ್ತು ಒಳಗಿನ ಜನವಸತಿ ಪ್ರದೇಶಗಳಲ್ಲಿರುವ ನಿವಾಸಿಗಳ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಹುಲಿ ಮತ್ತು ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡಿ ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ದಾಳಿಗೆ ಮುಂದಾಗುತ್ತವೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ತಕ್ಷಣ ಕಾರ್ಯಪ್ರವೃತ್ತರಾಗಿ ಇವುಗಳನ್ನು ಹಿಡಿದು ಅರಣ್ಯದೊಳಗೆ ಬಿಟ್ಟರೆ ಸಮಸ್ಯೆ ಇರುವುದಿಲ್ಲ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ವಿಷ ಪ್ರಾಶನದಂತಹ ಘಟನೆಗಳು ನಡೆದು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತವೆ.

ಜಿಲ್ಲೆಯಲ್ಲಿ ಹೆಚ್ಚು ಹುಲಿಗಳಿವೆ: ರಾಜ್ಯದಲ್ಲಿ ಅಧಿಕ ಹುಲಿಗಳಿರುವುದೇ ಜಿಲ್ಲೆಯಲ್ಲಿ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂದಾಜು ೧೯೧, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ೪೪, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ೫, ಕಾವೇರಿ ವನ್ಯಜೀವಿ ಧಾಮದಲ್ಲಿ ೧೦ ಹುಲಿಗಳಿವೆ. ಇಷ್ಟಿದ್ದರೂ ಆಗೊಮ್ಮೆ ಹೀಗೊಮ್ಮೆ ಹುಲಿ-ಮಾನವ ಸಂಘರ್ಷ ನಡೆಯುತ್ತದೆ.

ಪಾರ್ವತಾಂಬ ಬೆಟ್ಟದಲ್ಲೂ ಹುಲಿ ಸಾವು: ೩ ವರ್ಷಗಳ ಹಿಂದೆ ಗುಂಡ್ಲುಪೇಟೆ ತಾಲ್ಲೂಕಿನ ಪಾರ್ವತಾಂಬ ಬೆಟ್ಟದಲ್ಲಿ ಹುಲಿಯೊಂದು ಮೃತಪಟ್ಟಿತ್ತು. ಅದು ಸಹ ವಿಷ ಪ್ರಾಶನದಿಂದಲೇ ಸಾವಿಗೀಡಾಗಿತ್ತು ಎಂಬುದನ್ನು ಅರಣ್ಯ ಇಲಾಖೆ ಖಚಿತಪಡಿಸಿತ್ತು. ಚಾಮರಾಜನಗರ ತಾಲ್ಲೂಕಿನ ತಮ್ಮಡಹಳ್ಳಿ ಬಳಿಯೂ ಚಿರತೆಯೊಂದು ಮೃತಪಟ್ಟು ವಿಷಪ್ರಾಶನದಿಂದ ಸತ್ತಿದೆ ಎಂಬ ಮಾತು ಕೇಳಿಬಂದಿತ್ತು.

ಹುಲಿ ದಾಳಿಯಿಂದ ಹಲವರು ಸಾವು: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಬೇಡಗುಳಿ ಪ್ರದೇಶ ರಾಮಯ್ಯನಪೋಡಿನ ರಂಗಮ್ಮ ಜೂ.೧೦ ರಂದು ಹುಲಿ ದಾಳಿಗೆ ಬಲಿಯಾದರು. ಹಿಂದಿನ ದಿನ ಇದೇ ಹಾಡಿಯ ರವಿ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿತ್ತು.

ಜೂ.೧೯ರಂದು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ದೇಶಿಪುರ ಕಾಲೋನಿ ಬಳಿ ಗ್ರಾಮದ ಪುಟ್ಟಮ್ಮ, ಆಡಿನ ಕಣಿವೆಯಲ್ಲೂ ಒಬ್ಬ ವ್ಯಕ್ತಿ ಹುಲಿ ದಾಳಿಗೆ ಬಲಿಯಾದರು. ಕೆಲವು ವರ್ಷಗಳ ಹಿಂದೆ ಪ್ರತ್ಯೇಕ ಪ್ರಕರಣಗಳಲ್ಲಿ ಮದ್ದೂರು, ಚೌಡಳ್ಳಿಯಲ್ಲಿ ಇಬ್ಬರು ರೈತರು ಹುಲಿ ದಾಳಿಗೆ ಸತ್ತಿದ್ದರು. ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ, ಅಣ್ಣೂರು ಕೇರಿ, ಸೋಮಹಳ್ಳಿ ಸಮೀಪ, ಚಾಮರಾಜನಗರ ತಾಲ್ಲೂಕಿನ ಕಾಳನಹುಂಡಿ ಬಳಿ ಹುಲಿಗಳು ಕಾಣಿಸಿಕೊಂಡಿದ್ದವು. ವಯಸ್ಸಾದ ಹುಲಿ ಬೇಟೆಯಾಡಲು ಸಾಮರ್ಥ್ಯ ಕಳೆದುಕೊಂಡರೆ ಅರಣ್ಯದ ಅಂಚಿನತ್ತ ಬಂದು ಜಾನು ವಾರು ಮತ್ತು ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ

“ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷದಿಂದ ಹುಲಿ, ಚಿರತೆ, ಆನೆಗಳು ಸಾವನ್ನಪ್ಪುತ್ತಿರುತ್ತವೆ. ಇದನ್ನು ತಡೆಯಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಣಿಗಳ ಸಂರಕ್ಷಣೆಗೆ ಬಗ್ಗೆ ಅರಿವು  ಮೂಡಿಸಬೇಕು. ಪ್ರಾಣಿಗಳ ರಕ್ಷಣೆ ಎಂಬುದು ಅರಣ್ಯಾಧಿಕಾರಿ, ಸಿಬ್ಬಂದಿಗಳ ಕೆಲಸವಷ್ಟೇ ಅಲ್ಲ. ಪ್ರತಿಯೊಬ್ಬ ನಾಗರಿಕರ ಪಾತ್ರವೂ ಅಗತ್ಯ.”

-ಜಿ.ಮಲ್ಲೇಶಪ್ಪ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಡಾ.ಜಯಮಾಲ ಅವರಿಗೆ ಅಭಿನಂದನೆಗಳು

ಹಿರಿಯ ನಟಿ, ನಿರ್ಮಾಪಕಿ, ಮಾಜಿ ಸಚಿವೆ ಡಾ.ಜಯಮಾಲ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ೨ನೇ ಬಾರಿಗೆ ಆಯ್ಕೆಯಾಗಿರುವುದು…

2 mins ago

ಓದುಗರ ಪತ್ರ: ಕಸಾಪ ಗೌರವಕ್ಕೆ ಚ್ಯುತಿ ತಂದ ಜೋಶಿ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿರುವ ಅಧಿಕಾರ…

5 mins ago

ಫೆ.೫ರಂದು ಶ್ರೀ ಶಂಭುಲಿಂಗೇಶ್ವರ ದೇವಾಲಯ ಲೋಕಾರ್ಪಣೆ

ಹೇಮಂತ್ ಕುಮಾರ್ ಕಾಶಿ ನಂತರ ಸ್ಮಶಾನವಾಸಿ ಶಿವನ ದೇವಸ್ಥಾನವೆಂಬ ಹೆಗ್ಗಳಿಕೆ  ಮಂಡ್ಯ: ದೇಶದಲ್ಲೇ ಭಸ್ಮೋದ್ಧಾರಿಯಾದ ಶಿವ ಸ್ಮಶಾನವಾಸಿಯಾಗಿರುವ ದೇವಾಲಯ ಕಾಶಿ…

3 hours ago

ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ದುಬಾರಿ!

ನವೀನ್ ಡಿಸೋಜ ವೈದ್ಯಕೀಯ ಶಿಕ್ಷಣ ಇಲಾಖೆ ಆಡಳಿತಕ್ಕೊಳಪಟ್ಟ ಬಳಿಕ ಸೇವೆಯೊಂದಿಗೆ ಶುಲ್ಕವೂ ಹೆಚ್ಚಳ; ಪ್ರತಿಯೊಂದು ಸೇವೆಗೂ ಪಾವತಿ ಮಾಡಬೇಕಾದ ಅನಿವಾರ್ಯತೆ …

3 hours ago

ಸುರಕ್ಷತೆಯ ಗ್ಯಾರಂಟಿ ಇಲ್ಲದ ಶಾಲಾ ವಾಹನಗಳಲ್ಲಿ ಮಕ್ಕಳ ಪ್ರಯಾಣ!

ಮಹದೇಶ್ ಎಂ.ಗೌಡ ಹನೂರು ತಾಲ್ಲೂಕಿನ ಹಲವು ಶಾಲೆಗಳಲ್ಲಿ ದುರಸ್ತಿಗೆ ಬಂದಿರುವ, ವಿಮೆ ಇಲ್ಲದ ವಾಹನಗಳ ಬಳಕೆ; ಸಾರ್ವಜನಿಕರಲ್ಲಿ ಆತಂಕ ಹನೂರು:…

3 hours ago

ಈ ಜಾಗ ನೋಡಿ; ಕಸ ಹಾಕುವ ಮುನ್ನ ಯೋಚನೆ ಮಾಡಿ!

ಕೆ.ಬಿ.ರಮೇಶ ನಾಯಕ ಕಸ ಎಸೆಯುತ್ತಿದ್ದ ಸ್ಥಳಗಳಲ್ಲಿ ಮನರಂಜನಾ ವಸ್ತುಗಳ ಚಿತ್ತಾಕರ್ಷಣೆ ರಸ್ತೆ ಬದಿ ಕಸ ಹಾಕುವವರ ಮನ ಪರಿವರ್ತನೆಗೆ ವಿನೂತನ…

3 hours ago