Andolana originals

ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ದುಬಾರಿ!

ನವೀನ್ ಡಿಸೋಜ

ವೈದ್ಯಕೀಯ ಶಿಕ್ಷಣ ಇಲಾಖೆ ಆಡಳಿತಕ್ಕೊಳಪಟ್ಟ ಬಳಿಕ ಸೇವೆಯೊಂದಿಗೆ ಶುಲ್ಕವೂ ಹೆಚ್ಚಳ; ಪ್ರತಿಯೊಂದು ಸೇವೆಗೂ ಪಾವತಿ ಮಾಡಬೇಕಾದ ಅನಿವಾರ್ಯತೆ 

ಮಡಿಕೇರಿ: ಮಡಿಕೇರಿಯ ಜಿಲ್ಲಾ ಆಸ್ಪತ್ರೆಯು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಾದ ನಂತರ ರೋಗಿಗಳಿಗೆ ದುಬಾರಿಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಪ್ರತಿಯೊಂದು ಸೇವೆಗೂ ಈಗ ಹಣ ಪಾವತಿ ಮಾಡಬೇಕಿದ್ದು, ರೋಗಿಗಳಿಗೆ ಸರ್ಕಾರಿ ಸಂಸ್ಥೆಯಲ್ಲಿ ಖಾಸಗಿ ಆಸ್ಪತ್ರೆಯ ಅನುಭವವಾಗುತ್ತಿದೆ.

ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾದ ಬಳಿಕ ಆರೋಗ್ಯ ಸೇವೆ ಬಹಳಷ್ಟು ಸುಧಾರಣೆ ಕಂಡಿದೆ. ಸಣ್ಣಪುಟ್ಟ ಕಾಯಿಲೆಗೂ ಹೊರಜಿಲ್ಲೆಗಳಿಗೆ ಹೋಗಬೇಕಿದ್ದ ಪರಿಸ್ಥಿತಿ ಬದಲಾಗಿ ಈಗ ಹೊರ ಜಿಲ್ಲೆಯ ರೋಗಿಗಳೂ ಮಡಿಕೇರಿಯ ಕೋಯಿಮ್ಸ್‌ಗೆ ಬಂದು ಚಿಕಿತ್ಸೆ ಪಡೆಯುವಷ್ಟು ವ್ಯವಸ್ಥೆ ಬದಲಾಗಿದೆ.

ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತಹ ಉತ್ತಮ ಸೌಲಭ್ಯಗಳು ಲಭ್ಯವಾಗುತ್ತಿದೆ. ಆದರೆ ಅದರೊಂದಿಗೆ ನಾನಾ ಆರೋಗ್ಯ ಸೇವೆಗಳ ಶುಲ್ಕವೂ ಹೆಚ್ಚಾಗಿದ್ದು, ಬಿಪಿಎಲ್ ಕಾರ್ಡ್ ಇಲ್ಲದವರು ಪ್ರತಿಯೊಂದು ಸೇವೆಗೂ ಶುಲ್ಕ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ನಿಯಂತ್ರಣ ಬಹುಪಾಲು ಕಳೆದುಕೊಂಡಿದ್ದು, ಇನ್ನು ಕೆಲ ದಿನಗಳಲ್ಲಿ ವಿರಾಜಪೇಟೆಯಲ್ಲಿ ಜಿಲ್ಲಾ ಆಸ್ಪತ್ರೆ ಆರಂಭವಾದರೆ ಈ ಆಸ್ಪತ್ರೆ ಸಂಪೂರ್ಣ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿನಕ್ಕೆ ಬರಲಿದೆ.

ಸಂಸ್ಥೆಯ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಪ್ರತಿ ಸೇವೆಗೂ ಇಂತಿಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಅದರಂತೆ ಈಗಾಗಲೇ ಎಲ್ಲಾ ಸೇವೆಗಳಿಗೂ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯ ಜನರಿಗೆ ಇದರ ಬಿಸಿ ತಟ್ಟಿದೆ. ಬಿಪಿಎಲ್ ಕಾರ್ಡುದಾರರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉಚಿತ ಸೇವೆಯಿದ್ದು, ಉಳಿದವರು ಪ್ರತಿ ಸೇವೆಗೂ ಇಂತಿಷ್ಟೆಂದು ಪಾವತಿ ಮಾಡಬೇಕಿದೆ.

ಜಿಲ್ಲೆಯ ಮಟ್ಟಿಗೆ ಇದ್ದ ಒಂದು ಜಿಲ್ಲಾ ಆಸ್ಪತ್ರೆಯೇ ದೊಡ್ಡ ಆಸ್ಪತ್ರೆಯಾಗಿತ್ತು. ಆಗ ಸರ್ಕಾರಿ ಆಸ್ಪತ್ರೆ ಎಂದರೇ ಎಲ್ಲವೂ ಫ್ರೀ ಎಂಬ ಮನೋಭಾವನೆ ಇತ್ತು. ಆದರೆ ಈಗ ಸೌಲಭ್ಯಗಳು ಹೆಚ್ಚಾಗುವುದರ ಜತೆಗೆ ಎಲ್ಲದಕ್ಕೂ ಪಾವತಿಸಬೇಕಾಗಿರುವುದು ಬಡವರಾಗಿದ್ದೂ ಬಿಪಿಎಲ್ ಕಾರ್ಡ್ ಹೊಂದಿಲ್ಲದವರಿಗೆ ಕೊಂಚ ಮಟ್ಟಿಗೆ ಹೊರೆಯಾಗಿ ಪರಿಣಮಿಸಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಮದಂತೆ ಪ್ರತಿ ಸೇವೆಗೆ ಇಂತಿಷ್ಟೆಂದು ಶುಲ್ಕ ನಿಗದಿಯಾಗಿದೆ. ಆದರೆ ಇದೇ ಸೇವೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ. ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರಕುತ್ತಿದ್ದು, ಎಪಿಎಲ್ ಕಾರ್ಡು ಹೊಂದಿದವರಿಗೂ ಶೇ.೩೦ರಷ್ಟು ಶುಲ್ಕಗಳನ್ನು ಸರ್ಕಾರ ಪಾವತಿಸುತ್ತದೆ. ಯಾವುದೇ ದಾಖಲೆ ಇಲ್ಲದವರಿಗೂ ಕೆಲವೊಮ್ಮೆ ಉಚಿತವಾಗಿ ಸೇವೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ಶುಲ್ಕ?: 

ಕೊಯಿಮ್ಸ್‌ನಲ್ಲಿ ಸದ್ಯ ಹೊರ ರೋಗಿಗಳ ನೋಂದಣಿಗೆ ೧೦ ರೂ., ಒಳ ರೋಗಿಗಳ ನೋಂದಣಿಗೆ ೫೦ ರೂ., ಬೆಡ್ ಶುಲ್ಕ ಪ್ರತಿ ದಿನಕ್ಕೆ ೫೦ ರೂ. ಇದೆ. ವಿಶೇಷ ವಾರ್ಡ್ ಗಳು ಬೇಕಾದರೇ ೨ ಬೆಡ್‌ನ ವಾರ್ಡಿಗೆ ಪ್ರತಿ ದಿನ ೯೦೦ ರೂ., ಒಂದೇ ಬೆಡ್‌ನ ವಾರ್ಡಿಗೆ ೧,೮೦೦ ರೂ. ಮತ್ತು ವಿಶೇಷ ಸೌಲಭ್ಯಗಳುಳ್ಳ ವಾರ್ಡಿಗೆ ದಿನವೊಂದಕ್ಕೆ ೩,೬೦೦ ರೂ. ಪಾವತಿ ಮಾಡಬೇಕಿದೆ. ಐಸಿಯುಗೆ ಪ್ರತಿ ದಿನ ೨,೫೦೦ ರೂ., ಆಪರೇಷನ್ ಥಿಯೇಟರ್‌ಗೆ ಮೊದಲ ಒಂದು ಗಂಟೆಗೆ ೫೦೦ ರೂ., ಬಳಿಕ ೩೦೦ ರೂ., ಎಂಆರ್ ಐಗೆ ೫೦೦ ರಿಂದ ೪,೫೦೦ ರೂ., ಸಿಟಿ ಸ್ಕ್ಯಾನ್ ಗೆ ೧,೦೦೦ – ೧,೫೦೦ ರೂ., ಅಲ್ಟ್ರಾ ಸೌಂಡ್ ಗೆ ೧೫೦-೫೦೦ ರೂ., ಎಕ್ಸ್-ರೇ ೯೦ರಿಂದ ೨,೭೦೦ ರೂ., ಪ್ರಯೋಗಾಲಯ ೫೦ – ೩,೬೦೦ ರೂ. ಹೀಗೆ ಬೇರೆ ಬೇರೆ ಸೌಲಭ್ಯಗಳಿಗೆ ಒಂದೊಂದು ರೀತಿಯ ಶುಲ್ಕಗಳನ್ನು ಪಾವತಿಸಬೇಕಿದೆ.

” ಸಂಸ್ಥೆಯ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೆಲವು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಬಿಪಿಎಲ್ ಮತ್ತು ಎಸ್‌ಸಿ, ಎಸ್‌ಟಿ ಜಾತಿ ದೃಢೀಕರಣ ಪತ್ರವಿದ್ದರೆ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದೆ. ಆದರೂ ಕೆಲವೊಮ್ಮೆ ಯಾವುದೇ ದಾಖಲೆ ಇಲ್ಲದೆ ಬರುವ ವಲಸೆ ಕಾರ್ಮಿಕರು ಸೇರಿದಂತೆ ಬಡ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹವರಿಗೆ ಪ್ರತಿ ತಿಂಗಳು ೮ರಿಂದ ೧೦ ಲಕ್ಷ ರೂ. ವೆಚ್ಚದ ಶುಲ್ಕ ರಹಿತ ಚಿಕಿತ್ಸೆ ಲಭಿಸುತ್ತಿದೆ.”

-ಡಾ.ನಂಜುಂಡಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರು, ಕೋಯಿಮ್ಸ್‌ 

 

 

ಆಂದೋಲನ ಡೆಸ್ಕ್

Recent Posts

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

13 hours ago

ಓದುಗರ ಪತ್ರ: ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಖಂಡನೀಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ಕುಮ್ಮಕ್ಕು ಹಾಗೂ ಪೊಲೀಸರ…

16 hours ago

ಓದುಗರ ಪತ್ರ: ಗ್ರಂಥಪಾಲಕರಿಲ್ಲದ ಗ್ರಂಥಾಲಯಗಳು

ಕಳೆದ ೨೫ ವರ್ಷಗಳಿಂದ ರಾಜ್ಯದಲ್ಲಿ ೧೦ ಸಾವಿರ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ. ೧,೨೦೦ ಸರ್ಕಾರಿ…

16 hours ago

ಓದುಗರ ಪತ್ರ: ಮುಚ್ಚಿರುವ ಪಿಎಚ್‌ಸಿ ಕೇಂದ್ರ ತೆರೆಯುವುದು ಎಂದು?

ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ.…

16 hours ago

ಇದು ನಮಿತ್ ಮಲ್ಹೋತ್ರ ‘ರಾಮಾಯಣ’ ದರ್ಶನ

 ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ  ‘ತಿಣಿಕಿದನು -ಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂ ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು…

16 hours ago

ಮಡಿಕೇರಿಯಲ್ಲಿ ಬಳಂಜಿಗಿಲ್ಲ ಬೇಡಿಕೆ

ಪುನೀತ್ ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆಯಿಂದ ಬೇಡಿಕೆ ಕುಸಿತ; ಕುಲಕಸುಬಿಗೆ ಹೊಡೆತ  ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯ ವಾತಾವರಣ ಇಲ್ಲದ ಕಾರಣ…

16 hours ago