Andolana originals

ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ದುಬಾರಿ!

ನವೀನ್ ಡಿಸೋಜ

ವೈದ್ಯಕೀಯ ಶಿಕ್ಷಣ ಇಲಾಖೆ ಆಡಳಿತಕ್ಕೊಳಪಟ್ಟ ಬಳಿಕ ಸೇವೆಯೊಂದಿಗೆ ಶುಲ್ಕವೂ ಹೆಚ್ಚಳ; ಪ್ರತಿಯೊಂದು ಸೇವೆಗೂ ಪಾವತಿ ಮಾಡಬೇಕಾದ ಅನಿವಾರ್ಯತೆ 

ಮಡಿಕೇರಿ: ಮಡಿಕೇರಿಯ ಜಿಲ್ಲಾ ಆಸ್ಪತ್ರೆಯು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಾದ ನಂತರ ರೋಗಿಗಳಿಗೆ ದುಬಾರಿಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಪ್ರತಿಯೊಂದು ಸೇವೆಗೂ ಈಗ ಹಣ ಪಾವತಿ ಮಾಡಬೇಕಿದ್ದು, ರೋಗಿಗಳಿಗೆ ಸರ್ಕಾರಿ ಸಂಸ್ಥೆಯಲ್ಲಿ ಖಾಸಗಿ ಆಸ್ಪತ್ರೆಯ ಅನುಭವವಾಗುತ್ತಿದೆ.

ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾದ ಬಳಿಕ ಆರೋಗ್ಯ ಸೇವೆ ಬಹಳಷ್ಟು ಸುಧಾರಣೆ ಕಂಡಿದೆ. ಸಣ್ಣಪುಟ್ಟ ಕಾಯಿಲೆಗೂ ಹೊರಜಿಲ್ಲೆಗಳಿಗೆ ಹೋಗಬೇಕಿದ್ದ ಪರಿಸ್ಥಿತಿ ಬದಲಾಗಿ ಈಗ ಹೊರ ಜಿಲ್ಲೆಯ ರೋಗಿಗಳೂ ಮಡಿಕೇರಿಯ ಕೋಯಿಮ್ಸ್‌ಗೆ ಬಂದು ಚಿಕಿತ್ಸೆ ಪಡೆಯುವಷ್ಟು ವ್ಯವಸ್ಥೆ ಬದಲಾಗಿದೆ.

ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತಹ ಉತ್ತಮ ಸೌಲಭ್ಯಗಳು ಲಭ್ಯವಾಗುತ್ತಿದೆ. ಆದರೆ ಅದರೊಂದಿಗೆ ನಾನಾ ಆರೋಗ್ಯ ಸೇವೆಗಳ ಶುಲ್ಕವೂ ಹೆಚ್ಚಾಗಿದ್ದು, ಬಿಪಿಎಲ್ ಕಾರ್ಡ್ ಇಲ್ಲದವರು ಪ್ರತಿಯೊಂದು ಸೇವೆಗೂ ಶುಲ್ಕ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ನಿಯಂತ್ರಣ ಬಹುಪಾಲು ಕಳೆದುಕೊಂಡಿದ್ದು, ಇನ್ನು ಕೆಲ ದಿನಗಳಲ್ಲಿ ವಿರಾಜಪೇಟೆಯಲ್ಲಿ ಜಿಲ್ಲಾ ಆಸ್ಪತ್ರೆ ಆರಂಭವಾದರೆ ಈ ಆಸ್ಪತ್ರೆ ಸಂಪೂರ್ಣ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿನಕ್ಕೆ ಬರಲಿದೆ.

ಸಂಸ್ಥೆಯ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಪ್ರತಿ ಸೇವೆಗೂ ಇಂತಿಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಅದರಂತೆ ಈಗಾಗಲೇ ಎಲ್ಲಾ ಸೇವೆಗಳಿಗೂ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯ ಜನರಿಗೆ ಇದರ ಬಿಸಿ ತಟ್ಟಿದೆ. ಬಿಪಿಎಲ್ ಕಾರ್ಡುದಾರರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉಚಿತ ಸೇವೆಯಿದ್ದು, ಉಳಿದವರು ಪ್ರತಿ ಸೇವೆಗೂ ಇಂತಿಷ್ಟೆಂದು ಪಾವತಿ ಮಾಡಬೇಕಿದೆ.

ಜಿಲ್ಲೆಯ ಮಟ್ಟಿಗೆ ಇದ್ದ ಒಂದು ಜಿಲ್ಲಾ ಆಸ್ಪತ್ರೆಯೇ ದೊಡ್ಡ ಆಸ್ಪತ್ರೆಯಾಗಿತ್ತು. ಆಗ ಸರ್ಕಾರಿ ಆಸ್ಪತ್ರೆ ಎಂದರೇ ಎಲ್ಲವೂ ಫ್ರೀ ಎಂಬ ಮನೋಭಾವನೆ ಇತ್ತು. ಆದರೆ ಈಗ ಸೌಲಭ್ಯಗಳು ಹೆಚ್ಚಾಗುವುದರ ಜತೆಗೆ ಎಲ್ಲದಕ್ಕೂ ಪಾವತಿಸಬೇಕಾಗಿರುವುದು ಬಡವರಾಗಿದ್ದೂ ಬಿಪಿಎಲ್ ಕಾರ್ಡ್ ಹೊಂದಿಲ್ಲದವರಿಗೆ ಕೊಂಚ ಮಟ್ಟಿಗೆ ಹೊರೆಯಾಗಿ ಪರಿಣಮಿಸಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಮದಂತೆ ಪ್ರತಿ ಸೇವೆಗೆ ಇಂತಿಷ್ಟೆಂದು ಶುಲ್ಕ ನಿಗದಿಯಾಗಿದೆ. ಆದರೆ ಇದೇ ಸೇವೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ. ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರಕುತ್ತಿದ್ದು, ಎಪಿಎಲ್ ಕಾರ್ಡು ಹೊಂದಿದವರಿಗೂ ಶೇ.೩೦ರಷ್ಟು ಶುಲ್ಕಗಳನ್ನು ಸರ್ಕಾರ ಪಾವತಿಸುತ್ತದೆ. ಯಾವುದೇ ದಾಖಲೆ ಇಲ್ಲದವರಿಗೂ ಕೆಲವೊಮ್ಮೆ ಉಚಿತವಾಗಿ ಸೇವೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ಶುಲ್ಕ?: 

ಕೊಯಿಮ್ಸ್‌ನಲ್ಲಿ ಸದ್ಯ ಹೊರ ರೋಗಿಗಳ ನೋಂದಣಿಗೆ ೧೦ ರೂ., ಒಳ ರೋಗಿಗಳ ನೋಂದಣಿಗೆ ೫೦ ರೂ., ಬೆಡ್ ಶುಲ್ಕ ಪ್ರತಿ ದಿನಕ್ಕೆ ೫೦ ರೂ. ಇದೆ. ವಿಶೇಷ ವಾರ್ಡ್ ಗಳು ಬೇಕಾದರೇ ೨ ಬೆಡ್‌ನ ವಾರ್ಡಿಗೆ ಪ್ರತಿ ದಿನ ೯೦೦ ರೂ., ಒಂದೇ ಬೆಡ್‌ನ ವಾರ್ಡಿಗೆ ೧,೮೦೦ ರೂ. ಮತ್ತು ವಿಶೇಷ ಸೌಲಭ್ಯಗಳುಳ್ಳ ವಾರ್ಡಿಗೆ ದಿನವೊಂದಕ್ಕೆ ೩,೬೦೦ ರೂ. ಪಾವತಿ ಮಾಡಬೇಕಿದೆ. ಐಸಿಯುಗೆ ಪ್ರತಿ ದಿನ ೨,೫೦೦ ರೂ., ಆಪರೇಷನ್ ಥಿಯೇಟರ್‌ಗೆ ಮೊದಲ ಒಂದು ಗಂಟೆಗೆ ೫೦೦ ರೂ., ಬಳಿಕ ೩೦೦ ರೂ., ಎಂಆರ್ ಐಗೆ ೫೦೦ ರಿಂದ ೪,೫೦೦ ರೂ., ಸಿಟಿ ಸ್ಕ್ಯಾನ್ ಗೆ ೧,೦೦೦ – ೧,೫೦೦ ರೂ., ಅಲ್ಟ್ರಾ ಸೌಂಡ್ ಗೆ ೧೫೦-೫೦೦ ರೂ., ಎಕ್ಸ್-ರೇ ೯೦ರಿಂದ ೨,೭೦೦ ರೂ., ಪ್ರಯೋಗಾಲಯ ೫೦ – ೩,೬೦೦ ರೂ. ಹೀಗೆ ಬೇರೆ ಬೇರೆ ಸೌಲಭ್ಯಗಳಿಗೆ ಒಂದೊಂದು ರೀತಿಯ ಶುಲ್ಕಗಳನ್ನು ಪಾವತಿಸಬೇಕಿದೆ.

” ಸಂಸ್ಥೆಯ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೆಲವು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಬಿಪಿಎಲ್ ಮತ್ತು ಎಸ್‌ಸಿ, ಎಸ್‌ಟಿ ಜಾತಿ ದೃಢೀಕರಣ ಪತ್ರವಿದ್ದರೆ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದೆ. ಆದರೂ ಕೆಲವೊಮ್ಮೆ ಯಾವುದೇ ದಾಖಲೆ ಇಲ್ಲದೆ ಬರುವ ವಲಸೆ ಕಾರ್ಮಿಕರು ಸೇರಿದಂತೆ ಬಡ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹವರಿಗೆ ಪ್ರತಿ ತಿಂಗಳು ೮ರಿಂದ ೧೦ ಲಕ್ಷ ರೂ. ವೆಚ್ಚದ ಶುಲ್ಕ ರಹಿತ ಚಿಕಿತ್ಸೆ ಲಭಿಸುತ್ತಿದೆ.”

-ಡಾ.ನಂಜುಂಡಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರು, ಕೋಯಿಮ್ಸ್‌ 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಕಲ್ಪಿಸಿ

ದೇಶದ ಸಾವಿರಾರು ಮಂದಿ ಅಸಂಘಟಿತ ಕಾರ್ಮಿಕರು ಹೊಟ್ಟೆಪಾಡಿಗಾಗಿ ಮಾಡುವ ಉದ್ಯೋಗವೇ ಅವರ ಜೀವಕ್ಕೆ ಮುಳುವಾಗುತ್ತಿದೆ. ಭಾನುವಾರ ಉತ್ತರ ಕನ್ನಡ ಜಿಲ್ಲೆಯ…

4 hours ago

ಓದುಗರ ಪತ್ರ: ರೌಂಡ್ ಕ್ಯಾಂಟೀನ್ ಶೀಘ್ರ ಪುನರಾರಂಭವಾಗಲಿ

ಮೈಸೂರಿನ ಮಾನಸ ಗಂಗೋತ್ರಿಯ ರೌಂಡ್ ಕ್ಯಾಂಟೀನ್ ಕಳೆದ ೫೦ ವರ್ಷಗಳಿಂದ ವಿದ್ಯಾರ್ಥಿಗಳನ್ನು, ಬೋಧಕ -ಬೋಧಕೇತರ ಸಿಬ್ಬಂದಿಗಳನ್ನು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇದು…

4 hours ago

ಓದುಗರ ಪತ್ರ: ದೇವನೂರರ ಸಲಹೆಗಳು ಅನುಷ್ಠಾನಗೊಳ್ಳಲಿ

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಕೆ.ಪಿ.ಎಸ್. ಶಾಲೆಗಳ ರೂಪರೇಷೆ ಹಾಗೂ ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ…

5 hours ago

ಓದುಗರ ಪತ್ರ: ಮಹಿಳೆಯರಿಗೂ ಪ್ರಾತಿನಿಧ್ಯ ದೊರಕಲಿ

ಇತ್ತೀಚಿನ ದಿನಗಳಲ್ಲಿ ನಡೆಯುವ ಸಾರ್ವಜನಿಕ ಸಭೆ ಸಮಾರಂಭಗಳು, ವಿಶ್ವವಿದ್ಯಾನಿಲಯ, ಶಾಲಾ ಕಾಲೇಜು ಮೊದಲಾದ ಕಡೆ ನಡೆಯುವ ಚರ್ಚಾಗೋಷ್ಠಿ , ವಿಚಾರಸಂಕಿರಣಗಳಲ್ಲಿ…

5 hours ago

ಇಂಧನ ಬೆಲೆ ಏರಿಕೆ-ಮೊಸಳೆ ಬಂತು ಮೊಸಳೆ ಕಥೆ!

ರಾಜಾರಾಂ ತಲ್ಲೂರು ಇಂದು ದೇಶ ಅನುಭವಿಸುತ್ತಿರುವ ತೈಲ ಶಾಕ್‌ಗೆ ಸರ್ಕಾರದ ಅನಧಿಕೃತ ಹಸ್ತಕ್ಷೇಪ ಕಾರಣ ಸುವ್ಯವಸ್ಥೆಗೆಂದು ರೂಪಿಸಲಾದ ನಿಯಮಗಳನ್ನು, ಆ…

5 hours ago

‘ಬೇಡು ಹಬ್ಬದ ಹೆಸರಿನಲ್ಲಿ ತೊಂದರೆ ನೀಡಿದಲ್ಲಿ ಕಾನೂನು ಕ್ರಮ’

ನವೀನ್ ಡಿಸೋಜ ಕಂಡ ಕಂಡವರನ್ನು ನಿಂದಿಸಿ, ಹಣ ಸಂಗ್ರಹಿಸುವ ವಿಭಿನ್ನ ಹಬ್ಬ; ಕಾನೂನು ಪಾಲಿಸಲು ಪೊಲೀಸ್ ಇಲಾಖೆ ಸೂಚನೆ  ಮಡಿಕೇರಿ: ಅಶ್ಲೀಲ…

5 hours ago