Andolana originals

ಕೆಮ್ಮಣ್ಣು ಮಟ್ಟಿಯಲ್ಲಿ ತೊಡೆ ತಟ್ಟಲು ಪೈಲ್ವಾನರು ಸಜ್ಜು

ವಿಜೃಂಭಿಸಲಿದೆ ನಾಡಿನ ಕಲೆ ಕುಸ್ತಿ

ಸೆ.೨೨ರಿಂದ ಒಂದು ವಾರ ಆಯೋಜನೆ 

ದಸರಾ ಮಹೋತ್ಸವದಲ್ಲಿ ರೋಚಕ ಅನುಭವ ನೀಡಲಿದೆ ಕುಸ್ತಿ ಪಂದ್ಯ 

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಾಡಿನ ‘ಕುಸ್ತಿ’ ಪರಂಪರೆ ವಿಜೃಂಭಿಸಲಿದೆ. ದಸರಾ ಅಂಗವಾಗಿ ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ ದಲ್ಲಿ ಸೆ.೨೨ರಿಂದ ಒಂದು ವಾರ ಕಾಲ ಕುಸ್ತಿ ಪ್ರೇಮಿಗಳಿಗೆ ‘ನಾಡಕುಸ್ತಿ’, ‘ರಾಜ್ಯಮಟ್ಟದ ಪಾಯಿಂಟ್ ಕುಸ್ತಿ’ ಹಾಗೂ ‘ಪಂಜಕುಸ್ತಿ’ ಪಂದ್ಯಾವಳಿಗಳು ರೋಚಕ ಅನುಭವ ನೀಡಲಿವೆ.

‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಗಳ ಕುಸ್ತಿಯೂ ಇರಲಿವೆ. ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಜೇತರಿಗೆ ‘ದಸರಾ ಕುಮಾರ’, ರಾಜ್ಯ ಮಟ್ಟದ ವಿವಿಧ ವಿಭಾಗಗಳ ಕುಸ್ತಿ ಪಂದ್ಯಗಳ ವಿಜೇತರಿಗೆ ಪ್ರತಿಷ್ಠಿತ ‘ದಸರಾ ಕಂಠೀರವ’,‘ದಸರಾ ಕೇಸರಿ’ ಪ್ರಶಸ್ತಿ ನೀಡಲು ಚರ್ಚಿಸಲಾಗುತ್ತಿದೆ.

ನಾಡಕುಸ್ತಿಯ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಪುರುಷರ ಗ್ರೀಕೋ ರೋಮನ್ ಕುಸ್ತಿ, ರಾಜ್ಯಮಟ್ಟದ ಮಹಿಳೆಯರ ಕುಸ್ತಿ, ರಾಜ್ಯಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ ಪಂದ್ಯಗಳನ್ನೂ ಆಯೋಜಿಸಲು ಕುಸ್ತಿ ಉಪ ಸಮಿತಿ ಹಾಗೂ ಕ್ರೀಡಾ ಉಪ ಸಮಿತಿ ಮುಂದಾಗಿವೆ. ಈ ಬಾರಿ ವಿಶೇಷವಾಗಿ ದಸರಾ ಕಿಶೋರ ಹಾಗೂ ದಸರಾ ಕಿಶೋರಿ ಪ್ರಶಸ್ತಿಗಳ ಕುಸ್ತಿಗಳನ್ನು ನಡೆಸಲಾಗುತ್ತಿದೆ.

ಮಹಿಳಾ ಕುಸ್ತಿಪಟುಗಳಿಗೆ ದಸರಾ ಕಿಶೋರಿ ಸ್ಪರ್ಧೆ, ೫೭ ಕೆ.ಜಿ.ಯಿಂದ ೬೫ ಕೆ.ಜಿ.ವಿಭಾಗದಲ್ಲಿ ದಸರಾ ಕಿಶೋರ ಪ್ರಶಸ್ತಿ ಕುಸ್ತಿ ನಡೆಯಲಿದೆ. ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಭಾಗದಲ್ಲಿ ‘ಮೈಸೂರು ದಸರಾ ಕುಮಾರ’(೭೪ ಕೆ.ಜಿ.ಮೇಲ್ಪಟ್ಟ) ಪ್ರಶಸ್ತಿ ನೀಡಲಾಗುತ್ತದೆ. ಉಳಿದಂತೆ ‘ದಸರಾ ಕಂಠೀರವ’(೮೬ ಕೆ.ಜಿ.ಮೇಲ್ಪಟ್ಟ ), ‘ದಸರಾ ಕೇಸರಿ’(೭೪ರಿಂದ ೮೬ ಕೆ.ಜಿ.ವರೆಗೆ) ಕುಸ್ತಿಗಳು ನಡೆಯಲಿವೆ.

ನಾಡ ಕುಸ್ತಿ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಮಹಿಳೆಯರ ಕುಸ್ತಿ, ರಾಜ್ಯಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿಗಳು ನಡೆಯಲಿವೆ. ದಸರಾ ಕಂಠೀರವ, ದಸರಾ ಕೇಸರಿ, ಮೈಸೂರು ದಸರಾ ಕುಮಾರ್, ದಸರಾ ಕಿಶೋರಿ ಮತ್ತು ದಸರಾ ಕಿಶೋರ್ ಪ್ರಶಸ್ತಿಗಳಿಗೆ ಕ್ರಮವಾಗಿ ೧.೨೫ ಕೆಜಿ, ೧ ಕೆ.ಜಿ., ೦.೭೫ ಕೆ.ಜಿ., ೦.೫೦ ಕೆ.ಜಿ. ಮತ್ತು ೦.೫೦ ಕೆ.ಜಿ. ಬೆಳ್ಳಿ ಗದೆಗಳನ್ನು ನೀಡಲು ಚಿಂತಿಸಲಾಗಿದೆ. ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ನಾಡಕುಸ್ತಿ ಪರಂಪರೆ ವಿಜೃಂಭಿಸಲಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದಸರಾ ಕುಸ್ತಿ ಅಖಾಡದಲ್ಲಿ ಪಟ್ಟು ಹಾಕಲು ಹಾತೊರೆಯುತ್ತಾರೆ. ತಮಗೂ ಕುಸ್ತಿ ಮಾಡಲು ಅವಕಾಶ ಸಿಕ್ಕರೆ ಸಾಕೆಂದು ನೂರಾರು ಸ್ಥಳೀಯ ಪೈಲ್ವಾನರು ಚಡಪಡಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ನಾಡಕುಸ್ತಿ, ದೊಡ್ಡಕುಸ್ತಿ, ಮಾರ್ಫಿಟ್ ಕುಸ್ತಿಯ ಗಮ್ಮತ್ತು ಸವಿಯಲು ಕುಸ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗಾಗಿ ನಿತ್ಯ ೩೦ಕ್ಕೂ ಹೆಚ್ಚಿನ ನಾಡಕುಸ್ತಿ ಹಾಗೂ ೪ ರಿಂದ ೫ ಮಾರ್ಫಿಟ್ ಕುಸ್ತಿಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಮಾರ್ಫಿಟ್ ಕುಸ್ತಿಗೆ ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಭಾಗಗಳ ಸ್ಟಾರ್ ಕುಸ್ತಿಪಟುಗಳನ್ನು ಕರೆತರಲು ಚರ್ಚಿಸಲಾಗುತ್ತಿದೆ. ಒಟ್ಟಿನಲ್ಲಿ ದಸರಾ ನಾಡ ಕುಸ್ತಿಯಲ್ಲಿ ನೂರಾರು ಪೈಲ್ವಾನರು ಕೆಮ್ಮಣ್ಣು ಮಟ್ಟಿಯಲ್ಲಿ ತೊಡೆ ತಟ್ಟಲು ಕಾತರರಾಗಿದ್ದಾರೆ.

ಕುಸ್ತಿ ಕಲೆಗೆ ಮತ್ತೆ ಜೀವಕಳೆ: ವಿಶ್ವವಿಖ್ಯಾತ ಮೈಸೂರು ದಸರಾಗೂ ಕುಸ್ತಿಗೂ ಅವಿನಾಭಾವ ಸಂಬಂಧ. ದಸರಾ ಬಂತೆಂದರೆ ಕುಸ್ತಿಪಟುಗಳಿಗೆ ಸಂಭ್ರಮ. ದೇಶದ ಮೂಲೆ ಮೂಲೆಗಳಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುವ ಪೈಲ್ವಾನರ ನಡುವೆ ಅಖಾಡದಲ್ಲಿ ನಡೆಯುವ ಹಣಾಹಣಿ ರೋಚಕ ಅನುಭವ ನೀಡುತ್ತದೆ. ಪ್ರತಿ ದಿನ ಸಂಜೆ ೪ ಗಂಟೆಗೆ ನಾಡಕುಸ್ತಿ ಆರಂಭವಾಗಲಿದೆ. ವಿಜೇತರಿಗೆ ಮೇಯರ್ ಕಪ್, ಸಾಹುಕಾರ್ ಚನ್ನಯ್ಯ ಕಪ್, ಮೈಸೂರು ಒಡೆಯರ್ ಕಪ್ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಲು ಚಿಂತಿಸಲಾಗಿದೆ.

” ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸೆ.೨೨ರಿಂದ ದಸರಾ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ‘ದಸರಾ ಕಿಶೋರಿ’ ಜತೆಗೆ ‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಗಳ ಕುಸ್ತಿಗಳು ನಡೆಯಲಿದೆ. ಶೀಘ್ರದಲ್ಲಿಯೇ ನಾಡಕುಸ್ತಿ ಸಂಬಂಧ ಜೋಡಿ ಕಟ್ಟಲಾಗುತ್ತದೆ.”

ಎಲ್.ನಾಗೇಶ್, ಉಪ ವಿಶೇಷಾಧಿಕಾರಿ, ದಸರಾ ಕುಸ್ತಿ ಸಮಿತಿ

” ಮಹಿಳಾ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಬಾರಿಯೂ ‘ದಸರಾ ಕಿಶೋರಿ’ ಪ್ರಶಸ್ತಿ ನೀಡಲು ದಸರಾ ಕುಸ್ತಿ ಉಪ ಸಮಿತಿ ಚಿಂತಿಸಿದೆ. ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಗೆಲ್ಲುವವರಿಗೆ ಬೆಳ್ಳಿ ಗದೆ, ನಗದು ಬಹುಮಾನ, ಮೈಸೂರು ಪೇಟಾ ಮತ್ತು ಪ್ರಶಸ್ತಿ ಪತ್ರ ನೀಡಲು ದಸರಾ ಕುಸ್ತಿ ಉಪ ಸಮಿತಿ ಚಿಂತಿಸಿದೆ”

ಆಂದೋಲನ ಡೆಸ್ಕ್

Recent Posts

ವಡ್ಡರದೊಡ್ಡಿ ಮನೆಯೊಂದರಲ್ಲಿ ಕಳ್ಳತನ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ವಡ್ಡರದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ. ಗ್ರಾಮದ ನಿವಾಸಿ ಸೆಲ್ವಂ ಅವರು…

11 hours ago

ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ…

12 hours ago

ಕಾರು ಪಲ್ಟಿ: ಐವರಿಗೆ ಗಾಯ

ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಕಲ್ಯಾಣಿ ಕೊಳದ ಬಳಿ ಸೇತುವೆಯಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಮೂಲದ…

13 hours ago

ಶಾಂತಳ್ಳಿ: ಮುಂದುವರೆದ ಕಾಡಾನೆ ಹಾವಳಿ

ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರೆದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು…

13 hours ago

ಕರ್ನಾಟಕದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಕೆ

ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್.‌28ರವರೆಗೂ ಕರ್ನಾಟಕದಲ್ಲಿ ಮಳೆ…

14 hours ago

ಭಾರತದಲ್ಲಿ ಟೆಲಿಗ್ರಾಂ ನಿಷೇಧ ತೆರವು

ನವದೆಹಲಿ: ನೀಟ್‌ ಮರು ಪರೀಕ್ಷೆ ಅಂಗವಾಗಿ ಭಾರತದಲ್ಲಿ ಟೆಲಿಗ್ರಾಂ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಸದ್ಯ ಪ್ಲೇ ಸ್ಟೋರ್‌ ಹಾಗೂ…

16 hours ago