ಲಕ್ಷ್ಮೀಕಾಂತ್ ಕೊಮಾರಪ್ಪ
ಎಲೆಯ ಹಸಿರು ಭಾಗವನ್ನು ತಿನ್ನುತ್ತಿರುವ ಹುಳು; ಕೀಟನಾಶಕ ಸಿಂಪಡಣೆಗೆ ಕೆವಿಕೆ ಸಲಹೆ
ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡಿ ೨೦ರಿಂದ ೨೫ ದಿನಗಳಾಗಿರುವ ಈ ಸಂದರ್ಭದಲ್ಲಿ ಎಲೆ ಸುರುಳಿ ಹುಳುವಿನ ಬಾಧೆ ಜಿಲ್ಲೆಯ ಕೆಲವೆಡೆ ಕಾಣಿಸಿಕೊಂಡಿದ್ದು, ಇದರ ಹತೋಟಿಗೆ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ಕೆಲವೂಂದು ಸಲಹೆಗಳನ್ನು ನೀಡಿದೆ.
ಭತ್ತವು ಕೊಡಗು ಜಿಲ್ಲೆಯ ಬಹು ಮುಖ್ಯ ಬೆಳೆ ಮತ್ತು ಸ್ಥಳೀಯರ ಆಹಾರ ಇದಾಗಿದೆ. ಅಧಿಕ ಮಳೆ ಬೀಳುವ ಈ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬರಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಭತ್ತ ಬೆಳೆಯುವ ಪ್ರದೇಶವು ಕಡಿಮೆಯಾಗಿದೆ.
ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲು ಬೇಕಾಗಿರುವ ಕದಿರನ್ನು ಕೂಡ ಭತ್ತವನ್ನು ಬೆಳೆದಿರುವ ಬೇರೆ ರೈತರಿಂದ ತಂದು ಆಚರಿಸುವ ಪರಿಸ್ಥಿತಿ ಇಂದಿನ ದಿನಗಳಲ್ಲಿ ನಾವು ಸಹಜವಾಗಿ ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ಹೊಂದುತ್ತಿದ್ದಾರೆ. ಆದರೆ, ಭತ್ತವನ್ನು ಬೆಳೆಯುವ ಪ್ರದೇಶವು ಕಡಿಮೆಯಾಗುತ್ತಿದ್ದು, ಇಳುವರಿಯಲ್ಲಿ ಕೂಡ ಇಳಿಮುಖವಾಗಿರುವುದು ಕಂಡು ಬಂದಿದೆ.
ಕೊಡಗು ಜಿಲ್ಲೆಯಾದ್ಯಂತ ಈ ವರ್ಷ ಉತ್ತಮ ಮಳೆಯಾಗುತ್ತಿರುವುದರಿಂದ ಭತ್ತದ ಕೃಷಿ ಚಟುವಟಿಕೆ ಈಗಾಗಲೆ ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಭತ್ತದ ನಾಟಿ ಕಾರ್ಯ ಬಹುತೇಕ ಮುಗಿದಿದೆ. ಇನ್ನು ಕೆಲವೆಡೆ ನಾಟಿ ಕಾರ್ಯ ನಡೆಯುತ್ತಿದೆ. ಬೇರೆಡೆ ನೇರ ಬಿತ್ತನೆ ಅಥವಾ ಡ್ರಮ್ ಸೀಡರ್ಗಳ ಮೂಲಕ ಬಿತ್ತನೆ ಕಾರ್ಯ ನಡೆಯುತ್ತಿದೆ. ಆದರೆ ಈಗ ಗದ್ದೆಗಳಲ್ಲಿ ಎಲೆ ಸುರುಳಿ ಹುಳುವಿನ ಬಾಧೆ ಜಿಲ್ಲೆಯ ಕೆಲವೆಡೆ ಕಾಣಿಸಿಕೊಂಡಿದೆ.
ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಗದ್ದೆಗಳಲ್ಲಿ ಎಲೆ ಸುರುಳಿ ಹುಳುವಿನ ಬಾಧೆ ಕಂಡು ಬಂದಿದ್ದು, ಹುಳುಗಳು ಎಲೆಯ ಹಸಿರು ಭಾಗವನ್ನು ತಿನ್ನುತ್ತಿವೆ. ಇದರಿಂದ ಪೈರು ಬೆಳ್ಳಗೆ ಬಿಳಿಚಿಕೊಂಡಂತೆ ಕಾಣಿಸುತ್ತಿದೆ. ಹುಳುವಿನ ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ. ಆದ್ದರಿಂದ ರೈತ ಬಾಂಧವರು ಈ ಕೀಟ ಬಾಧೆಯ ಲಕ್ಷಣಗಳು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದಿದ್ದರೆ ಕೆಲವು ಕ್ರಮಗಳನ್ನು ಕೂಡಲೇ ಅನುಸರಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿ ಮಾಡಿದೆ.
ಮೋಡ ಕವಿದ ವಾತಾವರಣ, ತುಂತುರು ಮಳೆ, ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಹುಳುವಿನ ಬಾಧೆ ತೀವ್ರವಾಗಿ ಹರಡಲು ಕಾರಣಗಳಾಗಿವೆ. ಪತಂಗವು ತಿಳಿ ಹಳದಿ ಬಣ್ಣ ಹೊಂದಿದ್ದು, ರೆಕ್ಕೆಗಳ ಮೇಲೆ ತೆಳುವಾದ ಕಪ್ಪು ಅಡ್ಡ ಗೆರೆಗಳಿರುತ್ತವೆ.
ಹೆಣ್ಣು ಪತಂಗ ಸುಮಾರು ೩೦೦ ಮೊಟ್ಟೆಗಳನ್ನು ಎಲೆಯ ಮೇಲೆ ಮಧ್ಯದ ನರಕ್ಕೆ ಸಮಾನಾಂತರ ರೇಖೆಯಲ್ಲಿ ಇಡುತ್ತದೆ. ೪ರಿಂದ ೭ ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬಂದು ೧೫ ರಿಂದ ೨೭ ದಿನಗಳವರೆಗೆ ಎಲೆಯನ್ನು ಕೆರೆದು ತಿನ್ನುತ್ತಾ ಬೆಳೆದು ಕೋಶಾವಸ್ಥೆಯನ್ನು ಸೇರುತ್ತವೆ. ಆರರಿಂದ ಎಂಟು ದಿನಗಳವರೆಗೆ ಕೋಶಾವಸ್ಥೆಯಲ್ಲಿದ್ದು ತದನಂತರ ಪ್ರೌಢಕೀಟವು ಹೊರ ಬರುತ್ತದೆ.
” ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಪೈರು ಬೆಳ್ಳಗೆ ಬಿಳಿಚಿಕೊಂಡತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ. ಹಾಗಾಗಿ ಸೂಚಿಸಿರುವ ಕ್ರಮಗಳನ್ನು ಕೂಡಲೇ ಅನುಸರಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿ ಮಾಡಿದೆ.”
ಡಾ.ಕೆ.ವಿ.ವೀರೇಂದ್ರ ಕುಮಾರ್, ವಿಜ್ಞಾನಿ, ಸಸ್ಯಸಂರಕ್ಷಣೆ ವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ
ಹತೋಟಿಗೆ ಏನು ಮಾಡಬೇಕು?: ಹುಳುವಿನ ಬಾಧೆ ಹತೋಟಿಗೆ ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು. ಶಿಫಾರಸ್ಸು ಮಾಡಿರುವಷ್ಟು ಮಾತ್ರ ಸಾರಜನಕ ಗೊಬ್ಬರವನ್ನು ಹಾಕಬೇಕು. ಕೀಟವಿರುವ ಸೂಚನೆಯನ್ನು ನೋಡಿಕೊಂಡು ಇಂಡಾಕ್ಸಿಕಾರ್ಬ್ ೦.೫ ಮಿ.ಲೀ. ಅಥವಾ ಬ್ಲೆಂಡಮೈಡ್ ೦.೪ ಮಿ.ಲೀ. ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟನಾಶಕಕ್ಕೆ ಅಂಟು ದ್ರಾವಣವನ್ನು ಸೇರಿಸಿ ಸಿಂಪಡಿಸುವುದು ಉತ್ತಮ
ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ ಘಟನೆಯ…
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…
ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯ ಕಾಂಗ್ರೆಸ್ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…