Andolana originals

ಕೊಡಗಿನಲ್ಲಿ ಜೀತ ಪದ್ಧತಿ ಇನ್ನೂ ಜೀವಂತ

ಕೃಷ್ಣ ಸಿದ್ದಾಪುರ

ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ 

ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ ಬೇರೂರಿರುವ ಜೀತಪದ್ಧ್ದತಿ ಕೊಡಗು ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿರುವ ಆರೋಪ ಕೇಳಿ ಬಂದಿದ್ದು, ದಕ್ಷಿಣ ಕೊಡಗಿನಲ್ಲಿ ದೌರ್ಜನ್ಯಕ್ಕೆ ತುತ್ತಾಗಿದ್ದರು ಎನ್ನಲಾದ ೮ ಕುಟುಂಬಗಳ ೨೬ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ, ಪ್ರಕರಣದಲ್ಲಿ ಕನಿಷ್ಠ ವೇತನ ನೀಡದಿರುವುದನ್ನು ಹೊರತು ಪಡಿಸಿದರೆ ಉಳಿದ ಯಾವುದೇ ದೌರ್ಜನ್ಯ ನಡೆದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

೮ ಕುಟುಂಬಗಳು ಕಾಫಿ ತೋಟದಲ್ಲಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕಿ ಗಾಯತ್ರಿ ಅವರಿಗೆ ಮಾಹಿತಿ ದೊರೆತಿತ್ತು. ಅಲ್ಲಿನ ಕಾರ್ಮಿಕರನ್ನು ರಕ್ಷಣೆ ಮಾಡುವಂತೆ ಗಾಯತ್ರಿ ಅವರು ಮೈಸೂರು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಪವಿಭಾಗಾಧಿಕಾರಿ ಕಚೇರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಮಾಲೀಕರ ಕಪಿಮುಷ್ಟಿಯಲ್ಲಿ ಇದ್ದ ೮ ಕುಟುಂಬಗಳ ೨೬ ಮಂದಿಯನ್ನು ಕರೆತಂದು ಸಾಂತ್ವನ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ.

ದಕ್ಷಿಣ ಕೊಡಗಿನ ಗ್ರಾಮವೊಂದರ ತೋಟದ ಲೈನ್‌ಮನೆಯಲ್ಲಿ ಕಳೆದ ಐದು ವರ್ಷಗಳಿಂದ ಕುಟುಂಬಗಳು ಶೋಷಣೆ ಅನುಭವಿಸುತ್ತಾ ಬದುಕು ನಡೆಸುತ್ತಿದ್ದವು ಎನ್ನಲಾಗಿದೆ. ಹಿಂದೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬಗಳು ೨೫,೦೦೦ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಆ ೨೫,೦೦೦ ರೂ. ಸಾಲವನ್ನು ಈಗಿನ ಮಾಲೀಕ ಪಾವತಿಸಿ, ಈ ಕುಟುಂಬಗಳಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿ ಕಾರ್ಮಿಕರನ್ನು ತಮ್ಮ ಲೈನ್ ಮನೆಗೆ ಕರೆತಂದಿದ್ದರು ಎನ್ನಲಾಗಿದೆ.ಆದರೆ ಬಳಿಕ ಕನಿಷ್ಠ ವೇತನವನ್ನೂ ನೀಡದೆ ದುಡಿಸಿ ಕೊಂಡಿದ್ದಾರೆ ಎಂದು ಸಂತ್ರಸ್ತ ಕಾರ್ಮಿಕರು ಆರೋಪಿಸಿದ್ದಾರೆ.

ಸದ್ಯ ಕಾರ್ಮಿಕರನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಅಸಲಿಗೆ ಮಾಲೀಕರು ಎಷ್ಟು ವೇತನ ನೀಡುತ್ತಿದ್ದರು? ಹಿಂದಿನ ಮಾಲೀಕರಿಗೆ ಪಾವತಿಸಿದ ಹಣ ಎಷ್ಟು? ಕಾರ್ಮಿಕರು ಯಾವ ರೀತಿ ದೌರ್ಜನ್ಯ ಕ್ಕೊಳಗಾಗಿದ್ದರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

” ದೂರು ಬಂದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಹಸಿಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ೮ ಕುಟುಂಬಗಳ ೨೬ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಪ್ರಕರಣ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಕಾರ್ಮಿಕರು ಹಾಗೂ ಮಾಲೀಕರ ಹೇಳಿಕೆಗಳನ್ನು ಪಡೆಯಲಾಗಿದೆ. ಕನಿಷ್ಠ ವೇತನ ಪಾವತಿಸದಿರುವುದನ್ನು ಹೊರತುಪಡಿಸಿದರೆ ಇತರೆ ಕಾನೂನು ಉಲ್ಲಂಘನೆಯಾಗದಿರುವುದರಿಂದ ಇದನ್ನು ಜೀತ ಪದ್ಧತಿ ಎನ್ನಲಾಗುವುದಿಲ್ಲ. ಪ್ರಕರಣವನ್ನು ಲೇಬರ್ ಕೋರ್ಟ್‌ಗೆ ವರ್ಗಾಯಿಸಲಾಗಿದ್ದು, ಅಲ್ಲಿ ತನಿಖೆ ನಡೆಯಲಿದೆ.”

-ನಿತಿನ್ ಚಕ್ಕಿ, ಮಡಿಕೇರಿ ಉಪವಿಭಾಗಾಧಿಕಾರಿ

” ತಂದೆ ಆಸ್ತಮಾ ರೋಗಿಯಾಗಿದ್ದರೂ ಕೆಲಸ ಮಾಡಿಸುತ್ತಿದ್ದರು. ಸೂಕ್ತ ಚಿಕಿತ್ಸೆಗೆ ಹಣ ನೀಡುತ್ತಿರಲಿಲ್ಲ. ಅನಾರೋಗ್ಯ ಪೀಡಿತರಾಗಿದ್ದ ತಂದೆ ನಿಧನ ಹೊಂದಿದರು. ಅಂತ್ಯ ಸಂಸ್ಕಾ ರಕ್ಕೂ ಮಾಲೀಕರು ಹಣ ನೀಡಲಿಲ್ಲ.”

-ಪೊನ್ನಕ್ಕಿ. ಸಂತ್ರಸ್ಥ ಮಹಿಳೆ

” ಕಳೆದ ೩೫ ದಿನಗಳಿಂದ ಬಡಪಾಯಿಗಳನ್ನು ಸಾಂತ್ವನ ಕೇಂದ್ರದಲ್ಲಿ ಉಳಿಸಿಕೊಂಡಿದ್ದು, ಕೆಲಸಕ್ಕೂ ಹೋಗಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕಿದೆ.”

-ಗಾಯತ್ರಿ, ದಸಂಸ ಕೊಡಗು ಜಿಲ್ಲಾ ಸಂಚಾಲಕಿ, ದೂರುದಾರರು

” ಈ ಹಿಂದಿನ ಮಾಲೀಕರಿಂದ ನಮ್ಮ ತಂದೆ ೨೫ ಸಾವಿರ ರೂ. ಸಾಲ ಪಡೆದು ಉಳಿಸಿ ಕೊಂಡಿದ್ದರು. ೫ ವರ್ಷಗಳ ಹಿಂದೆ ಈಗಿನ ಮಾಲೀಕರು ಆ ಸಾಲವನ್ನು ತೀರಿಸಿ, ಒಟ್ಟಾರೆ ೮ ಕುಟುಂಬಗಳನು ತಮ್ಮ ತೋಟಕ್ಕೆ ಕರೆತಂದಿದ್ದು, ಸಾಲದ ಮೊತ್ತವನ್ನು ಹೆಚ್ಚಾಗಿ ತೋರಿಸಿ ಬೇರೆ ಕಡೆ ಕೆಲಸಕ್ಕೆ ಹೋಗಲೂ ಬಿಡದೆ ಬಂಧಿಗಳನ್ನಾಗಿ ಮಾಡಿದ್ದಾರೆ.”

-ದಿನೇಶ್, ಶೋಷಣೆಗೊಳಗಾದ ಕಾರ್ಮಿಕ

 

 

 

ಆಂದೋಲನ ಡೆಸ್ಕ್

Recent Posts

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

55 mins ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

4 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

4 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

4 hours ago

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ ೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ…

4 hours ago