Andolana originals

ಕೊಡಗು ಡಿಸಿ ಕಚೇರಿ ತಡೆಗೋಡೆಗೆ ಪ್ಲಾಸ್ಟಿಕ್ ಹೊದಿಕೆ!

ನೀರು ಸೇರಿದರೆ ಭೂ ಕುಸಿತ ಉಂಟಾಗುವ ಅಪಾಯ; ಈ ಬಾರಿಯೂ ಮಂಗಳೂರು ರಸ್ತೆ ಬಂದ್‌ ಭೀತಿ

ಮಡಿಕೇರಿ: ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿದ್ದು, ಇಡೀ ಜಿಲ್ಲೆ ಮಳೆಗಾಲಕ್ಕೆ ಸಜ್ಜಾಗುತ್ತಿದೆ. ಈನಡುವೆ ಈ ಬಾರಿಯೂ ಪೂರ್ಣಗೊಳ್ಳದ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಗೆ ಮತ್ತೆ ಪ್ಲಾಸ್ಟಿಕ್ ಹೊದಿಕೆ ಅಳವಡಿಸಲಾಗುತ್ತಿದ್ದು, ಈ ಬಾರಿಯ ಮಳೆಗಾಲದಲ್ಲಿಯೂ ಮಂಗಳೂರು ರಸ್ತೆ ಬಂದ್ ಭೀತಿ ಎದುರಾಗಿದೆ.

ನಿರ್ಮಾಣದ ಹಂತದಲ್ಲಿದ್ದ ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯನ್ನು ಭಾಗಶಃ ತೆರವುಗೊಳಿಸಿ ಮರು ನಿರ್ಮಾಣ ಕಾರ್ಯ ಆರಂಭಿಸಿ ಬರೋಬ್ಬರಿ 2 ವರ್ಷಗಳಾಗಿವೆ. 2022ರ ಮಳೆಗಾಲದ ಆರಂಭದಲ್ಲಿ ಜರ್ಮನ್ ಟೆಕ್ನಾಲಜಿಯಲ್ಲಿ ಕಾಂಕ್ರಿಟ್ ಬ್ಲಾಕ್‌ಗಳನ್ನು ಬಳಸಿ ನಿರ್ಮಿಸಲಾದ ತಡೆಗೋಡೆ ಕುಸಿಯುವ ಹಂತಕ್ಕೆ ತಲುಪಿತ್ತು. ಇದರಿಂದ ಕುಸಿಯುವ ಹಂತದಲ್ಲಿದ್ದ ಎಲ್ಲ ಬ್ಲಾಕ್‌ಗಳನ್ನೂ ತೆಗೆದು ಮರು ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.

ಕಾಮಗಾರಿ ಆರಂಭವಾಗಿ 2 ವರ್ಷಗಳಾದರೂ ಪೂರ್ಣವಾಗಿಲ್ಲ. ಕಾಂಕ್ರೀಟ್ ಬ್ಲಾಕ್‌ಗಳನ್ನು ತೆಗೆದು ಇಡೀ ಬರೆಯನ್ನು ಹಾಗೆಯೇ ಬಿಟ್ಟಿದ್ದು, ಈಗ ಅದಕ್ಕೆ ಮತ್ತೆ ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದೆ. ನೀರು ಸೇರಿದರೆ ಭೂಕುಸಿತ ಉಂಟಾಗುವ ಅಪಾಯವಿದ್ದು, ನೀರು ಸೇರದಂತೆ ತಡೆಯಲು ಅಧಿಕಾರಿಗಳು ಪ್ಲಾಸ್ಟಿಕ್ ಹೊದಿಕೆಯ ಮೊರೆಹೋಗಿದ್ದಾರೆ. ಇನ್ನು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿ ಕಳಪೆ ಆರೋಪದ ಹಿನ್ನೆಲೆಯಲ್ಲಿ ಕಾಮಗಾರಿ ಮುಂದುವರಿಸುವ ಅಥವಾ ಹೊಸ ತಡೆಗೋಡೆ ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸಲು ಇತ್ತೀಚೆಗೆ ಸದನ ಸಮಿತಿ ಸದಸ್ಯರು ಜಿಲ್ಲೆಗೆ ಆಗಮಿಸಿ ಮಾಹಿತಿ ಪಡೆದಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸದನ ಸಮಿತಿ ಸದಸ್ಯರು, ತಡೆಗೋಡೆ ಸಂಬಂಧ ಪರ್ಯಾಯ ಅಭಿವೃದ್ಧಿ ಬಗ್ಗೆ ಯೋಚಿಸಲಾಗಿದೆ. ಬೆಂಚು ಮಾದರಿಯಲ್ಲಿ ತಡೆಗೋಡೆ ನಿರ್ಮಿಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರು, ಕೇಂದ್ರ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಜ್ಞರಿಂದ ಸವಿಸ್ತಾರವಾದ ವರದಿ (ಡಿಪಿಆರ್ )ಯನ್ನು 15 ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ ಅಷ್ಟರಲ್ಲಿಯೇ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟತೆ ಸಿಗಲಿಲ್ಲ. ಸದ್ಯ ಹಳೆಯ ಜರ್ಮನ್ ಟೆಕ್ನಾಲಜಿಯಲ್ಲಿಯೇ ಕಾಮಗಾರಿ ಮುಂದು ವರಿದಿದ್ದು, ಇದು ಹೀಗೆಯೆ ಸಾಗಲಿದೆಯೇ ಅಥವಾ ತೆರವಾಗಿ ಹೊಸ ತಡೆಗೋಡೆ ನಿರ್ಮಾಣವಾಗಲಿದೆಯೇ ಎನ್ನುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲದಾಗಿದೆ.

ರಾಷ್ಟ್ರೀಯ ಹೆದ್ದಾರಿ ಬಂದ್ ಭೀತಿ
ಕಳೆದ ಬಾರಿ ಜಿಲ್ಲೆಯಲ್ಲಿ ಹೆಚ್ಚು ಮಳೆ ಆಗದಿದ್ದ ಕಾರಣ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈ ಬಾರಿ ಮಳೆ ಹೆಚ್ಚಾಗುವ ಮುನ್ಸೂಚನೆಯಿದ್ದು, ತಡೆಗೋಡೆ ತೆರವಾಗಿರುವ ಸ್ಥಳದಲ್ಲಿ ಭೂಕುಸಿತವಾಗುವ ಭೀತಿ ಇದೆ. ತಡೆಗೋಡೆ ಇದ್ದ ಸ್ಥಳವನ್ನು ಪ್ಲಾಸ್ಟಿಕ್‌ನಿಂದ ಮುಚ್ಚಲಾಗಿದೆಯಾದರೂ ಮೇಲ್ಬಾಗದ ನೀರು ಭೂಮಿಗೆ ಸೇರಿದರೂ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗುವ ಸಾಧ್ಯತೆಯಿದೆ. ಇದರಿಂದ ಜಿಲ್ಲಾಧಿಕಾರಿ ಕಚೇರಿಗೂ
ಅಪಾಯವಿದ್ದು, ಇತ್ತ ಮಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ- 275ಕ್ಕೂ ಬಂದ್ ಭೀತಿ ಎದುರಾಗಿದೆ. ಒಂದು ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ವಿರಾಜಪೇಟೆ ರಸ್ತೆ ಮೂಲಕ ರಾಜ್ಯ ಹೆದ್ದಾರಿಯಿಂದ ಬೈಪಾಸ್ ವ್ಯವಸ್ಥೆ ಮಾಡಿದರೂ, ಹೆಚ್ಚಿನ ವಾಹನಗಳ ಸಂಚಾರದಿಂದ ಆ ರಸ್ತೆಯೂ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಮಳೆ ಹೆಚ್ಚಾಗಿ ಭೂಕುಸಿತದ ಸೂಚನೆ ಸಿಕ್ಕರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇಧವಾಗಲಿದೆ.

ಜಿಲ್ಲಾಡಳಿತ ಭವನ ತಡೆಗೋಡೆ ಸಂಬಂಧ ಲೋಕೋಪಯೋಗಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದೆ. ಇತ್ತೀಚೆಗೆ ಈ ಸಂಬಂಧ ಯಾವುದೇ ಸಭೆ ನಡೆದಿಲ್ಲ. ಲೋಕೋಪಯೋಗಿ ಇಲಾಖೆಯಿಂದಲೇ ಟೆಂಡರ್ ಮಾಡಲಾಗುತ್ತಿದ್ದು, ನಿರ್ವಹಣೆ ಮಾಡುತ್ತಿದ್ದಾರೆ.
-ವೆಂಕಟ್ ರಾಜಾ, ಜಿಲ್ಲಾಧಿಕಾರಿ ಕೊಡಗು

ಜಿಲ್ಲಾಡಳಿತ ಭವನದ ಸ್ಥಿತಿ ಮುಳುಗುತ್ತಿರುವ ಹಡಗಿನಂತಾಗಿದೆ. ಕಾಮಗಾರಿ ಹೆಸರಲ್ಲಿ ಬೃಹತ್‌ ವಾಹನಗಳನ್ನು ಓಡಿಸಿ ಅಲ್ಲಿನ ಮಣ್ಣನ್ನು ಸಂಪೂರ್ಣ ಸಡಿಲಗೊಳಿಸಲಾಗಿದೆ. ಮಳೆ ಹೆಚ್ಚಾಗಿ ಮಣ್ಣಿಗೆ ನೀರು ಸೇರಿದರೆ ಭೂಕುಸಿತ ಉಂಟಾಗಿ ಜಿಲ್ಲಾಡಳಿತ ಭವನವೇ ಕುಸಿಯವ ಅಪಾಯವಿದೆ. ಸದ್ಯ ಈ ಬಗ್ಗೆ ಎಚ್ಚರವಹಿಸುವುದು ಒಳಿತು.
-ತೆನ್ನಿರ ಮೈನಾ, ಕಾಂಗ್ರೆಸ್ ವಕ್ತಾರ

ನವೀನ್‌ ಡಿಸೋಜ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನವನಾದ ನಾನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮಾಡಿ ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜ್ಯಮಟ್ಟದ ವಾಹಿನಿಗಳಾದ ಸುದ್ದಿಟಿವಿ, ಸಮಯ ಟಿವಿ, ಸ್ಥಳೀಯ ವಾಹಿನಿಗಳಾದ ಕೊಡಗು ಚಾನಲ್, ಚಾನಲ್ 24 ಕರ್ನಾಟಕ ವಾಹಿನಿಗಳಲ್ಲಿ ಜಿಲ್ಲಾ ವರದಿಗಾರ, ಪತ್ರಿಕೆಗಳಾದ ಕನ್ನಡಪ್ರಭ, ಕಾವೇರಿ ಟೈಮ್ಸ್ ಸಂಸ್ಥೆಗಳಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದೇನೆ. ಸದ್ಯ ಆಂದೋಲನ ಪತ್ರಿಕೆಯಲ್ಲಿ ಕಳೆದ ಸುಮಾರು 5 ವರ್ಷಗಳಿಂದ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದರೊಂದಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಕೇರಂ ನೆಚ್ಚಿನ ಕ್ರೀಡೆಗಳಾಗಿವೆ.

Recent Posts

ಶಾಲೆ ಶುರುವಾಗಿದೆ; ಮನಸು ಯಾಕೋ ಹೂ ಬಿಟ್ಟಿದೆ…

ವರ್ಷಕ್ಕೊಮ್ಮೆ ಎದುರುಗೊಳ್ಳುವ ಈ ಸುಂದರ ಕಾಲ ಹೊಸತೊಂದು ಯುಗದ ಆರಂಭಕ್ಕೆ ಭಾಷ್ಯ ಬರೆದಂತೆ ಭಾಸವಾಗುತ್ತದೆ. ಮಕ್ಕಳ ಹುಮ್ಮಸ್ಸನ್ನು ನೋಡುವುದೇ ಒಂದು…

57 mins ago

ಭಾನುವಾರದ ಹಾಡುಪಾಡು | ಶಾಲೆಯೆಂಬ ಕಟ್ಟಡಗಳಿಗೆ ಜೀವ ಬರುವ ಹೊತ್ತು…..

ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ. ಸುಧಾ…

1 hour ago

ಭಾನುವಾರದ ಹಾಡುಪಾಡು | ಜೂನ್ ಬಂತು ಎಂದರೆ ಶಿಕ್ಷಕರಿಗೆ ಸುಗ್ಗಿ ಕಾಲ

ವರ್ಷವಿಡೀ ಪಾಠ ಮಾಡಿ ಸುಸ್ತಾದ ಶಿಕ್ಷಕರು ಬೇಸಿಗೆ ರಜಕ್ಕಾಗಿ ಎಷ್ಟೇ ಹಂಬಲಿಸಿದರೂ ಕೂಡ ರಜೆ ಮುಗಿಯುವ ಹೊತ್ತಿಗೆ ಬೇಸರವಾಗಿ ಎಷ್ಟು…

1 hour ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌| ಮೇ 31 ಭಾನುವಾರ

1 hour ago

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ನೇಮಕ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮೊದಲು ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಕರ್ನಾಟಕ ರಾಜ್ಯ ಮಾನವ…

14 hours ago

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ

ಬೆಂಗಳೂರು : ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಆಗಿದ್ದಾರೆ. ಡಿಕೆಶಿ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

17 hours ago