Andolana originals

ಅವಳಿ ತಾಲ್ಲೂಕುಗಳಲ್ಲಿ ಭತ್ತದ ನಾಟಿ ಶೇ.೮೦ರಷ್ಟು ಪೂರ್ಣ

ಭೇರ್ಯ ಮಹೇಶ್

ಈ ಬಾರಿ ಅಕ್ಕಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆ; ಟಿಲ್ಲರ್, ಟ್ರಾಕ್ಟರ್‌ಗೆ ಎಲ್ಲಿಲ್ಲದ ಬೇಡಿಕೆ

ಕೆ.ಆರ್.ನಗರ: ಭತ್ತದ ಕಣಜವೆಂದು ಪ್ರಸಿದ್ಧಿ ಪಡೆದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದ್ದು, ಶೇ.೮೦ರಷ್ಟು ಭತ್ತದ ನಾಟಿ ಕಾರ್ಯವನ್ನು ರೈತರು ಮುಗಿಸಿ ಸಂತಸದಲ್ಲಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವ್ಯಾಪಕ ಮಳೆಯಾಗಿದ್ದು ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಜುಲೈ ತಿಂಗಳಲ್ಲಿ ಅವಳಿ ತಾಲ್ಲೂಕಿನ ಎಲ್ಲಾ ನಾಲೆಗಳಿಗೆ ನೀರು ಹರಿಸಲಾಗಿದ್ದು, ಕೊನೆಯ ಹಂತದವರೆಗೂ ನೀರು ಹರಿದಿದೆ. ರೈತರು ಭತ್ತದ ಸಸಿ ಮಡಿ ಕಾರ್ಯ ಮಾಡಿದ್ದು, ಈಗಾಗಲೇ ಭತ್ತದ ಪೈರು ಬಂದಿದೆ. ಅವಳಿ ತಾಲ್ಲೂಕುಗಳ ಎಲ್ಲೆಡೆ ಭತ್ತದ ನಾಟಿ ಕಾರ್ಯ ಜೋರಾಗಿದೆ.

ಟಿಲ್ಲರ್, ಟ್ರಾಕ್ಟರ್, ಎತ್ತು ಮತ್ತು ನೇಗಿಲು ಇತ್ಯಾದಿಗಳನ್ನು ಬಳಸಿ ರೈತರು ಭತ್ತದ ಗದ್ದೆ ಹದ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಟಿಲ್ಲರ್, ಟ್ರಾಕ್ಟರ್‌ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಕಸಬಾ, ಹೊಸ ಅಗ್ರಹಾರ, ಹೆಬ್ಬಾಳು, ಚುಂಚನಕಟ್ಟೆ, ಸಾಲಿಗ್ರಾಮ, ಮಿರ್ಲೆ ಹೋಬಳಿ ಗಳಲ್ಲಿ ಭತ್ತದ ನಾಟಿ ಕಾರ್ಯವನ್ನು ರೈತರು ಮಾಡುತ್ತಿದ್ದಾರೆ. ಕಳೆದ ವರ್ಷ ಭತ್ತದ ಬೆಲೆ ಕುಸಿದಿತ್ತು. ಆದರೂ ಅಕ್ಕಿ ಬೆಲೆ ಹೆಚ್ಚಾಗಿದ್ದು, ಈ ಬಾರಿ ಕೂಡ ಅಕ್ಕಿಯ ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಹೊಂದಿರುವ ರೈತರು ಉತ್ತಮ ಹೈಬ್ರೀಡ್ ಭತ್ತದ ತಳಿಯನ್ನು ಬಿತ್ತನೆ ಮಾಡಿದ್ದು, ಈಗಾಗಲೇ ಶೇ.೮೦ರಷ್ಟು ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಅಂದಾಜು ೨೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ.

ಕೃಷಿ ಇಲಾಖೆ ಸಜ್ಜು: ಈಗಾಗಲೇ ಕೃಷಿ ಇಲಾಖೆಯಿಂದ ರಸಗೊಬ್ಬರ, ಕೀಟನಾಶ ಕೀಟನಾಶಕದ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಭತ್ತದ ನಾಟಿ ಮಾಡುವ ಮೊದಲು ೨೦-೨೦ ರಸ ಗೊಬ್ಬರ ಬಳಸುವಾಗ ಎಕರೆಗೆ ೧೫ ಕೆಜಿ ಪೊಟಾಷ್ ಹಾಗೂ ೮ ಕೆಜಿ ಜಿಂಕ್ ಸಲ್ಪೇಟ್ ಮಿಶ್ರಣ ಮಾಡಿ ಗದ್ದೆಗಳಲ್ಲಿ ಹಾಕಿ ಎಂದು ಸಲಹೆ ನೀಡಿದ್ದಾರೆ. ರೈತರು ತಪ್ಪದೇ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿ ಇದೇ ಆಗಸ್ಟ್ ೧೬ರಂದು ಭತ್ತದ ವಿಮೆ ಮಾಡಿಸಲು ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನ ರಸಗೊಬ್ಬರ ಅಂಗಡಿಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬೆಲೆ ಪಡೆಯದಂತೆ ಕ್ರಮ ವಹಿಸಲಾಗಿದೆ. ತಪ್ಪದೇ ಟ್ರೇಡರ್ಸ್ ಮಾಲೀಕರಿಂದ ಬಿಲ್ ಕೇಳಿ ಪಡೆಯಬೇಕು ಎಂದು ಕೃಷಿ ಇಲಾಖೆ ಜಾಗೃತಿ ಮೂಡಿಸಿದೆ.

ಯೂರಿಯಾ ದಾಸ್ತಾನು: ಅವಳಿ ತಾಲ್ಲೂಕುಗಳಲ್ಲಿ ಈಗಾಗಲೇ ಭತ್ತದ ನಾಟಿ ಮಾಡಲಾಗುತ್ತಿದ್ದು, ಆಗಸ್ಟ್ ಕೊನೆಯ ವಾರ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಇದಕ್ಕೆ ತಕ್ಕಂತೆ ಯೂರಿಯಾ ಗೊಬ್ಬರ ದಾಸ್ತಾನು ಇದೆ. ಕೃಷಿ ಇಲಾಖೆಯ ಅಧಿಕಾರಿಗಳು ಯೂರಿಯಾ ಗೊಬ್ಬರದ ಅಭಾವ ಸೃಷ್ಟಿ ಮಾಡದಂತೆ ಟ್ರೇಡರ್ಸ್ ಮಾಲೀಕರೊಂದಿಗೆ ಈಗಾಗಲೇ ಸಭೆ ನಡೆಸಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

” ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನೀಡುವುದಿಲ್ಲ. ರೈತರು ಬಳಸುವ ರಸ ಗೊಬ್ಬರ, ಕ್ರಿಮಿನಾಶಕ ಔಷಧಗಳ ಬೆಲೆ ಏರಿಕೆಯಾಗಿದೆ. ಭತ್ತದ ನಾಟಿಗೆ ಕೂಲಿ ಕಾರ್ಮಿಕರ ವೆಚ್ಚ ಕೂಡ ಹೆಚ್ಚಾಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಆದ್ದರಿಂದ ಸರ್ಕಾರ ಈ ಬಾರಿ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು.”

-ಜೆ.ಎಂ.ಕುಮಾರ್, ಗೌರವಾಧ್ಯಕ್ಷರು, ರೈತಪರ್ವ ಸಂಘ

” ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಹೀಗಾಗಿ, ಭತ್ತ ಬೆಳೆಯಲು ಆಸಕ್ತಿ ತೋರಿದ್ದೇನೆ. ಭತ್ತದ ಫಸಲು ಬರುವವರೆಗೂ ಸಮರ್ಪಕವಾಗಿ ನಾಲೆಯಿಂದ ನೀರು ಹರಿಸಬೇಕು. ಯಾವುದೇ ಸಮಸ್ಯೆ ಬಾರದಂತೆ ಬೆಳೆ ಸಮೀಕ್ಷೆಯನ್ನು ಕಂದಾಯ ಇಲಾಖೆ ಅಽಕಾರಿಗಳಿಂದ ಮಾಡಿಸಬೇಕು. ಭತ್ತದ ಕಟಾವು ಮುನ್ನವೇ ಭತ್ತದ ಖರೀದಿ ಕೇಂದ್ರ ತೆರೆಯಬೇಕು. ಭತ್ತದ ಕಟಾವು ಮಾಡುವ ಯಂತ್ರಗಳಿಗೆ ದುಬಾರಿ ಹಣ ವಸೂಲಿ ಮಾಡುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಭತ್ತದ ಕಟಾವು ಯಂತ್ರಗಳಿಗೆ ನಿಗದಿ ದರವನ್ನು ಘೋಷಿಸಬೇಕು.”

-ಗಂಧನಹಳ್ಳಿ ಹೇಮಂತ್, ಪ್ರಗತಿಪರ ರೈತರು

ಆಂದೋಲನ ಡೆಸ್ಕ್

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

3 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

3 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

3 hours ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

3 hours ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

3 hours ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

3 hours ago