ಮಹೇಂದ್ರ ಹಸಗೂಲಿ
ನಿತಿನ್ ಗಡ್ಕರಿ-ಪ್ರಿಯಾಂಕ ಗಾಂಧಿ ಪತ್ರ ವ್ಯವಹಾರಕ್ಕೆ ರೈತರು, ಪರಿಸರವಾದಿಗಳ ವಿರೋಧ
ಗುಂಡ್ಲುಪೇಟೆ: ಕೇರಳ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಬಂಡೀಪುರದ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಅರಣ್ಯ ಮಾರ್ಗದಲ್ಲಿ ಪರ್ಯಾಯ ಸುರಂಗ ನಿರ್ಮಾಣ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರ ಸಮಿತಿ ರಚಿಸಿರುವುದರ ಸಾಧ್ಯಾಸಾಧ್ಯತೆ ಹಾಗೂ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಆರಂಭವಾಗಿದ್ದು, ಹಲವು ರೈತ ಮುಖಂಡರು, ಪರಿಸರವಾದಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
” ಬಂಡೀಪುರದಿಂದ ಕೇರಳಕ್ಕೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಿಸುವುದು ಅವೈಜ್ಞಾನಿಕ ನಡೆ.ಪ್ರಾಣಿ ಸಂಕುಲಕ್ಕೆ ಹಾನಿಯಾಗುವುದರ ಜೊತೆಗೆ ಸಂಚಾರ ವ್ಯವಸ್ಥೆಯೂ ಹದಗೆಡುತ್ತದೆ. ಮಹದೇಶ್ವರ ಬೆಟ್ಟ ಹಾಗೂ ಬಂಡೀಪುರದಲ್ಲಿ ಇರುವ ಎಷ್ಟೋ ಗ್ರಾಮಗಳು, ಹಾಡಿಗಳಿಗೆ ರಸ್ತೆ ಇಲ್ಲದೆ ರೋಗಿಗಳನ್ನು ಡೋಲಿ ಕಟ್ಟಿ ಹೊತ್ತು ಸಾಗುತ್ತಾರೆ. ಅಲ್ಲಿ ರಸ್ತೆ ಮಾಡಲು ಯೋಗ್ಯತೆ ಇಲ್ಲ. ಅಲ್ಲಿಗೆ ಕರೆಂಟ್ ನೀಡಿಲ್ಲ. ಅಂತಹ ಜನಗಳಿಗೆ ಅನುಕೂಲ ಮಾಡಿಕೊಡಲಿ. ಕೇರಳಕ್ಕೆ ಮಣ್ಣು, ಕಲ್ಲು, ಮರ ಸಾಗಣೆಯಾಗುತ್ತಿದೆ. ಆದರೆ, ಅಲ್ಲಿಂದ ನಮಗೆ ಸಿಗುವುದು ಬರೀ ತ್ಯಾಜ್ಯ. ಪುಣಂಜೂರು, ದಿಂಡಿಗಲ್ ರಸ್ತೆಯಲ್ಲಿ ಸುರಂಗ ಮಾರ್ಗ ಮಾಡಲು ಹೊರಟಿರುವು ದರಿಂದ ಜೀವ ವೈವಿಧ್ಯತೆ ಹಾಳಾಗುತ್ತದೆ.”
ಹೊನ್ನೂರು ಪ್ರಕಾಶ್, ಸಾಮೂಹಿಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ
” ಸುರಂಗ ಮಾರ್ಗ ನಿರ್ಮಾಣ ಇವರ ನಾಟಕ. ಇದು ಜನರಿಗೆ ಗೊತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ನಂಜನಗೂಡಿನಿಂದ ಕೇರಳಕ್ಕೆ ರೈಲ್ವೆ ಟ್ರ್ಯಾಕ್, ಸುರಂಗ ರಸ್ತೆ ಮಾಡುವ ವಿಚಾರ ಸಂಪೂರ್ಣ ಡ್ರಾಮ. ಸುಪ್ರೀಂಕೋರ್ಟ್ ಕಣ್ಣು ಮುಚ್ಚಿ ಕುಳಿತಿದೆಯೇ?”
ಜೋಸೆಫ್ ಹೂವರ್, ಪರಿಸರವಾದಿ
” ಬಂಡೀಪುರದಂತಹ ಸೂಕ್ಷ್ಮ ವನ್ಯಜೀವಿ ವಲಯದಲ್ಲಿ ರಾತ್ರಿ ಸಂಚಾರವೇ ನಿಷೇಧವಾಗಿದೆ. ಅಂತಹ ಸ್ಥಿತಿಯಲ್ಲಿ ದಿನಪೂರ್ತಿ ಸಂಚಾರಕ್ಕೆ ಸುರಂಗ ಮಾರ್ಗ ಮಾಡುವ ಚಿಂತನೆ ಎಷ್ಟು ಸರಿ? ಸುಪ್ರೀಂ ಕೋರ್ಟ್ ಕೂಡ ರಾತ್ರಿ ಸಂಚಾರ ನಿಷೇಧ ಎತ್ತಿಹಿಡಿದಿದೆ. ಈಗಲೇ ದಿನಕ್ಕೆ ೧೫ ಗಂಟೆ ಸಂಚಾರವಿದೆ. ಇನ್ನು ಸುರಂಗ ಮಾರ್ಗ ಮಾಡಿ ೨೪ ಗಂಟೆಗಳ ಸಂಚಾರ ಆರಂಭಿಸುವ ಉದ್ದೇಶ ಕಾಣದ ಕೈಗಳ, ಅಕ್ರಮ ಚಟುವಟಿಕೆದಾರರ ಕೈವಾಡ ಎಂದು ಹೇಳಬಹುದು. ಇಂತಹ ಆಲೋಚನೆಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು.”
ನಾಗಾರ್ಜುನ್ ಕುಮಾರ್, ಪರಿಸರ ಪ್ರೇಮಿ,
” ರೈತ ಮುಖಂಡ ಲಕ್ಷಾಂತರ ಮರಗಳನ್ನು ಕಡಿದು ಅರಣ್ಯ ನಾಶ ಮಾಡುವುದಲ್ಲದೆ ಮತ್ತಷ್ಟು ಅಕ್ರಮಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶ ಇದರಲ್ಲಿದೆ. ರಾತ್ರಿ ೯ ಗಂಟೆಯ ನಂತರ ಸಾರ್ವಜನಿಕರು ಯಾರು ಓಡಾಡುತ್ತಾರೆ? ಶಬ್ದ ಮಾಲಿನ್ಯ, ಅರಣ್ಯ ನಾಶ ಮಾಡಿ ಸುರಂಗ ಮಾಡುವ ಅಗತ್ಯವೇನಿದೆ? ಇದು ನಿಜವಾದರೆ ಉಗ್ರ ಹೋರಾಟ ಮಾಡಲಾಗುವುದು.”
ಮಹದೇವಪ್ಪಶಿವಪುರ, ರೈತಸಂಘದ (ಬಡಗಲಪುರ ನಾಗೇಂದ್ರ ಬಣ) ಜಿಲ್ಲಾಧ್ಯಕ್ಷ
” ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿರುವುದು ಹಾಸ್ಯಾಸ್ಪದ. ಈ ಭಾಗದಲ್ಲಿ ಮೂಲೆಹೊಳೆ, ಪಾಲಾರ್ ನದಿ ಹರಿಯುತ್ತದೆ. ಮೊದಲೇ ಗುಂಡ್ಲುಪೇಟೆ, ಚಾಮರಾಜನಗರ ಜನ ಬರಗಾಲದಿಂದ ತತ್ತರಿಸುತ್ತಿದ್ದಾರೆ. ಅಲ್ಲಿಂದ ಪೈಪ್ಲೈನ್ ಮಾಡಿ ನಮಗೆ ನೀರು ಕೊಡಲು ಆಗುತ್ತಿಲ್ಲ. ದೂರದ ಕಬಿನಿಯಿಂದ ನೀರು ಬರುತ್ತದೆ. ಪಕ್ಕದ ಮೂಲಹೊಳೆಯಿಂದ ಪೈಪ್ ಲೈನ್ ಮಾಡಿ ನೀರು ತರಲಾಗುತ್ತಿಲ್ಲ. ರಾತ್ರಿ ಸಂಚಾರ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ, ಬೇಕಾದಷ್ಟು ಅಕ್ರಮ ಚಟುವಟಿಕೆ ನಡೆಯುತ್ತದೆ.”
ಡಾ.ಗುರುಪ್ರಸಾದ್, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ
” ಇವೆಲ್ಲಾ ಪರಿಸರಕ್ಕೆ ಮಾರಕವಾಗುತ್ತದೆ. ಶಬ್ದ ಮಾಲಿನ್ಯವಾಗುತ್ತದೆ. ಸೂಕ್ಷ್ಮ ಪ್ರದೇಶದಲ್ಲಿ ಅತಿಯಾದ ಶಬ್ದ ಮತ್ತು ಶಾಖೋತ್ಪನ್ನವಾಗಿ ಅಂತರ್ಜಲದ ಹರಿವು ಕಡಿಮೆಯಾಗಿ, ನದಿಯ ಹರಿವು ದಾರಿ ತಪ್ಪುತ್ತದೆ. ಅರಣ್ಯಕ್ಕೆ ಬೇಕಾದ ನೀರಿನ ಪ್ರಮಾಣ ಕುಸಿಯುತ್ತದೆ. ವಯನಾಡು ಭೂ ಕುಸಿತ ಪ್ರದೇಶವಾಗಿದೆ. ಸುರಂಗ ಕೊರೆದಾಗ ಬಂಡೀಪುರ ಭಾಗದಲ್ಲಿಯೂ ಸಮಸ್ಯೆಯಾಗುತ್ತದೆ.”
ಆರ್.ಕೆ.ಮಧು, ವನ್ಯಜೀವಿ ಛಾಯಾಗ್ರಾಹಕ
” ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರ ಸಮ್ಮತಿಸಿ ಅಧ್ಯಯನ ಸಮಿತಿ ರಚಿಸಿದ್ದು, ಇದಕ್ಕೆ ಇಡೀ ಗುಂಡ್ಲುಪೇಟೆ ತಾಲ್ಲೂಕಿನ ಜನತೆಯ ವಿರೋಧವಿದೆ. ನನ್ನ ವೈಯಕ್ತಿಕ ವಿರೋಧವೂ ಇದೆ. ಸೂಕ್ಷ್ಮ ಅರಣ್ಯದಲ್ಲಿ ಸುರಂಗ ಕೊರೆಯಲು ಹೋದರೆ ತಾಲ್ಲೂಕು ಕೃಷಿಯನ್ನು ಕಳೆದುಕೊಳ್ಳುತ್ತದೆ. ಕಾರಣ ಕಾವೇರಿಯ ಉಪನದಿ ಕಪಿಲೆ ವಯನಾಡಿನಲ್ಲಿ ಮೂಲೆಹೊಳೆ ಮೂಲಕ ಹರಿಯುತ್ತದೆ. ಅದು ನುಗು ಮೂಲಕ ತಿ.ನರಸೀಪುರದ ಬಳಿ ಕಾವೇರಿ ನದಿ ಸೇರುತ್ತದೆ. ಸುರಂಗ ಕೊರೆದರೆ ಭೂಮಿಯ ಒಳಗಿನ ರಚನೆಗಳು ವಿರೂಪಗೊಳ್ಳುತ್ತವೆ. ನೀರಿನ ಹರಿವು ಸ್ಥಗಿತವಾಗುತ್ತದೆ. ಕಪಿಲೆಯ ಒಡಲು ಬರಿದಾಗುತ್ತದೆ.”
ಶೈಲಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ
” ಸುರಂಗ ಮಾರ್ಗವಾದರೆ ಕರ್ನಾಟಕದಿಂದ ಅಕ್ರಮವಾಗಿ ಮಣ್ಣು,ಕಲ್ಲು, ಮರಗಳು ಕೇರಳಕ್ಕೆ ಸಾಗಣೆಯಾಗುತ್ತವೆ. ಕಳ್ಳಸಾಗಾಣಿಕೆ ಪದಾರ್ಥಗಳು, ಲಾಟರಿ, ಗಾಂಜಾ ಸಾಗಾಣೆ ಮಾಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ನುಗು ನದಿ ಮೂಲದಿಂದ ನೀರು ಸರಬರಾಜು ಮಾಡಲಿ. ಆಗ ಇಡೀ ಚಾ.ನಗರ ಜಿಲ್ಲೆಗೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಹಣ ಮಾಡುವ ಮಾರ್ಗಕ್ಕೆ ಕೈ ಹಾಕಿದರೆ ಹೋರಾಟ ಖಚಿತ.”
ಮಹದೇವಪ್ಪ ಮಾಡ್ರಹಳ್ಳಿ, ಜಿಲ್ಲಾ ರೈತ ಸಂಘದ (ವಾಸುದೇವ ಮೇಟಿ ಬಣ) ಅಧ್ಯಕ್ಷ
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ…
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ…
ಮಂಡ್ಯ: ನಿಂತಿದ್ದ ಟಿಪ್ಪರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ…
ನವದೆಹಲಿ: 2026ರ ಬಜೆಟ್ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು…
ಬೆಂಗಳೂರು: ಭಾನುವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು…
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು 2026-27ನೇ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ನಲ್ಲಿ…