Andolana originals

ಜು.20ಕ್ಕೆ ವಿಧಾನಪರಿಷತ್ ಐದು ಸ್ಥಾನ ತೆರವು

ಕೆ.ಬಿ.ರಮೇಶನಾಯಕ

ಮೈಸೂರು: ರಾಜ್ಯದಲ್ಲಿ ಜುಲೈ ೨೦ಕ್ಕೆ ತೆರವಾಗಲಿರುವ ವಿಧಾನಪರಿಷತ್‌ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ. ಮೈಸೂರು ಭಾಗದಿಂದಲೂ ಪರಿಷತ್ ಸದಸ್ಯ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಅತ್ತ ಚಿತ್ತನೆಟ್ಟಿದ್ದಾರೆ. ವಿಧಾನಸಭೆಯಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಅವಕಾಶ ಸಿಗಬಹುದೆಂದು ಆಸೆಪಟ್ಟಿದ್ದು, ನಂತರ ನಿರಾಸೆಗೊಂಡಿರುವ ಆಕಾಂಕ್ಷಿಗಳು, ಈಗಲಾದರೂ ಚಾನ್ಸ್ ಕೊಡುವಂತೆ ಹೈಕಮಾಂಡ್ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಅವರು ಪರಿಷತ್ ಸದಸ್ಯ ಸ್ಥಾನಕ್ಕಾಗಿ ಕಸರತ್ತು ಶುರು ಮಾಡಿದ್ದು, ಹೈಕಮಾಂಡ್ ಕೃಪಾಕಟಾಕ್ಷ ಯಾರ ಕಡೆಗೆ ಹರಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ೨೦೨೩ರ ಚುನಾವಣೆಯಲ್ಲಿ ವರುಣ ಕ್ಷೇತ್ರವನ್ನು ತಂದೆ ಸಿದ್ದರಾಮಯ್ಯ ಅವರಿಗೆ ತ್ಯಾಗ ಮಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ೨೦೨೪ರಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ನಂತರ, ೨೦೨೫ರಲ್ಲಿ ಸಾಹಿತ್ಯ, ಕಲೆ ಮೊದಲಾದ ಕ್ಷೇತ್ರಗಳಿಂದ ಮೇಲ್ಮನೆಗೆ ನಾಲ್ಕು ಮಂದಿಯನ್ನು ಆಯ್ಕೆ ಮಾಡುವಾಗ ಮೈಸೂರು ಭಾಗದಿಂದ ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಲಾಯಿತು. ಅದೇ ರೀತಿ ರಾಜ್ಯಸಭಾ ಹಾಗೂ ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಳೆಯ ಮೈಸೂರು ಪ್ರಾಂತ್ಯದ ಮುಖಂಡರಿಗೂ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಬಿಜೆಪಿ ಮಾತ್ರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಅವರನ್ನು ಆಯ್ಕೆ ಮಾಡಿ ಮೇಲ್ಮನೆಗೆ ಕಳುಹಿಸಿದರೆ, ಕಾಂಗ್ರೆಸ್‌ನಿಂದ ಅವಕಾಶ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ ವಿಜಯಕುಮಾರ್, ಬಸವರಾಜು, ಕೊಳ್ಳೇಗಾಲದ ಜಿ.ಎನ್.ನಂಜುಂಡಸ್ವಾಮಿ ಅವರಿಗೆ ನಿರಾಸೆಯಾಗಿತ್ತು.

ಜುಲೈ ೨೦ರಂದು ಎ.ಎಚ್.ವಿಶ್ವನಾಥ್ ಸೇರಿದಂತೆ ಐದು ಮಂದಿ ವಿಧಾನಪರಿಷತ್ ಸದಸ್ಯರ ಅವಽ ಅಂತ್ಯ ವಾಗಲಿದ್ದು, ತೆರವಾಗುವ ಸ್ಥಾನಗಳಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಬೇಕಾಗಿದೆ. ಹೀಗಾಗಿ, ಕಾಂಗ್ರೆಸ್ ಆಂತರಿಕವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗುತ್ತಿದ್ದಂತೆ ಮೈಸೂರು ಭಾಗದಿಂದ ಸದ್ದಿಲ್ಲದೆ ಸ್ಥಾನ ಗಿಟ್ಟಿಸಲು ಆಕಾಂಕ್ಷಿಗಳಿಂದ ಕಸರತ್ತು ಆರಂಭವಾಗಿದೆ ಎನ್ನಲಾಗಿದೆ.

ವಿಜಯಕುಮಾರ್‌ಗೆ ಕಾಂಗ್ರೆಸ್ ಪದಾಧಿಕಾರಿಗಳ ಬೆಂಬಲ: ಕಳೆದ ೧೨ ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಬಿ.ಜೆ.ವಿಜಯಕುಮಾರ್ ಪರವಾಗಿ ಕಾಂಗ್ರೆಸ್ ಜಿಲ್ಲಾ ಸಮಿತಿ, ಮುಂಚೂಣಿ ಘಟಕಗಳ ಪದಾಧಿಕಾರಿಗಳು ನಿಂತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದಾಗ ಪರಿಷತ್‌ನಲ್ಲಿ ಅವಕಾಶ ಮಾಡಿಕೊಡುವ ಭರವಸೆಯನ್ನು ಸಿದ್ದರಾಮಯ್ಯ ಅವರು ನೀಡಿದ್ದರು ಎಂದು ಹೇಳಲಾಗಿದೆ.

ಆದರೆ, ನಾಯಕತ್ವ ಬದಲಾವಣೆಯಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ, ಈ ಬಾರಿ ಕೆಪಿಸಿಸಿಯೇ ಹಲವು ವರ್ಷಗಳಿಂದ ಕೆಲಸ ಮಾಡಿರುವ ಜಿಲ್ಲಾಧ್ಯಕ್ಷರಿಗೆ ಸ್ಥಾನಮಾನ ಕೊಡುವ ಬಗ್ಗೆ ಮನಸ್ಸು ಮಾಡಿರುವುದರಿಂದ ಒಂದು ಅವಕಾಶ ಖಚಿತವಾಗಿ ಸಿಗುತ್ತದೆ ಎನ್ನುವ ಅತೀವ ವಿಶ್ವಾಸ ಅವರ ಬೆಂಬಲಿಗರಲ್ಲಿ ಮೂಡಿದೆ.

ಬಸವರಾಜು ಬೆನ್ನಿಗೆ ಸಮುದಾಯ: ಹಳೆಯ ಮೈಸೂರು ಪ್ರಾಂತ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಅವಕಾಶ ಮಾಡಿಕೊಡಬೇಕೆಂಬ ಕೂಗು ಎದ್ದಿರುವುದರಿಂದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಪರ ಅವರ ಸಮುದಾಯ ಬೆನ್ನಿಗೆ ನಿಂತಿದೆ. ಬಸವರಾಜುಗೆ ಮೇಲ್ಮನೆ ಟಿಕೆಟ್ ಕೊಡಿಸಲು ವಿಫಲವಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಈಗ ಸಮಾಜದ ಸಂಘಟನೆ ಹೆಸರಿನಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅದಕ್ಕೆ ಪೂರಕವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಪರಿಷತ್‌ಗೆ ನಾಮನಿರ್ದೇಶನಕ್ಕೆ ಬಸವರಾಜು ಅವರನ್ನು ಪರಿಗಣಿಸುವ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.

ಚುನಾವಣಾ ರಾಜಕೀಯದಿಂದ ವಿಶ್ವನಾಥ್ ನಿವೃತ್ತಿ: ಜುಲೈ ೨೦ಕ್ಕೆ ಪರಿಷತ್ ಸದಸ್ಯತ್ವದ ಅವಧಿ ಮುಗಿಯುತ್ತಿರುವ ಎ.ಎಚ್.ವಿಶ್ವನಾಥ್ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿ ಜಯಗಳಿಸಿದರು. ನಂತರ ದಿಢೀರ್ ಪಕ್ಷ ತೊರೆದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಶಾಸಕರ ಪೈಕಿ ವಿಶ್ವನಾಥ ಕೂಡ ಒಬ್ಬರಾದರು. ೨೦೧೯ರ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ ಸಾಹಿತ್ಯ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾದರು. ಆದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಸಚಿವ ಸ್ಥಾನ ಕೊಡಲು ಅವಕಾಶ ದೊರೆಯಲಿಲ್ಲ. ಈಗ ಬಿಜೆಪಿಯಿಂದಲೂ ಅಂತರ ಕಾಯ್ದುಕೊಂಡಿರುವ ವಿಶ್ವನಾಥ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಲೇ, ಅವರೊಂದಿಗೆ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದನ್ನು ಗಮನಿಸಬಹುದು.

ಆಂದೋಲನ ಡೆಸ್ಕ್

Recent Posts

ಅಪ್ಪಟ ಸಮಾಜವಾದಿ, ಗುಡಿಸಲೂ ಇರದಿದ್ದ ಜೋಗಿ ಕಿಶನ್ ಪಟ್ನಾಯಕ್

ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…

19 mins ago

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…

27 mins ago

ಜೇನು ಕೃಷಿಗೆ ಸರ್ಕಾರದ ಬಲ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು…

33 mins ago

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

10 hours ago

ಸರಗೂರು | ಮತ್ತೆ ಹುಲಿ ದಾಳಿ ; ಬೋನು ಅಳವಡಿಸಲು ತೆರಳಿದ್ದ ಅರಣ್ಯ ಗಾರ್ಡ್‌ ಮೇಲೆ ಎರಗಿದ ಹುಲಿ

ಸರಗೂರು : ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ಆತಂಕ ಮುಂದುವರಿದಿದ್ದು, ಹುಲಿ ಸೆರೆಹಿಡಿಯಲು ತೆರಳಿದ್ದ ಎಸ್‌ಟಿಎಫ್ ಸಿಬ್ಬಂದಿಯ ಮೇಲೆಯೇ…

10 hours ago