ಎಚ್.ಎಸ್.ದಿನೇಶ್ಕುಮಾರ್
ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು ಕಡಿಮೆ ಖರ್ಚಿನಲ್ಲಿ ಕೈಗೊಳ್ಳಬಹುದಾದ ಜೇನು ಕೃಷಿಗೆ ಕೂಡ ತೋಟಗಾರಿಕೆ ಇಲಾಖೆಯ ಮೂಲಕ ಉತ್ತೇಜನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಜೇನುತುಪ್ಪ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ತನ್ನ ವಿಶಿಷ್ಟ ಸ್ವಾದದಿಂದ ಮಕ್ಕಳಾದಿಯಾಗಿ ಎಲ್ಲ ವಯೋಮಾನದವರನ್ನೂ ತನ್ನತ್ತ ಸೆಳೆಯುತ್ತದೆ. ಬೊಜ್ಜು ಕರಗಿಸುವ ಉದ್ದೇಶ ಹೊಂದಿರುವವರು, ಆಯುರ್ವೇದ ಔಷಧ ತಯಾರಿಸುವವರು/ ಬಳಸುವವರು, ಕ್ರೀಡಾಪಟುಗಳು, ಸೌಂದರ್ಯ ವರ್ಧಕ ತಯಾರಕರು ಜೊತೆಗೆ ಆಹಾರದೊಂದಿಗೆ ಕೂಡ ಜೇನನ್ನು ಸಾಕಷ್ಟು ಮಂದಿ ನಿಯಮಿತವಾಗಿ ಬಳಸುತ್ತಿದ್ದಾರೆ.
ಹಲವಾರು ಔಷಧಿಯ ಗುಣಗಳನ್ನೂ ಹೊಂದಿರುವ ಜೇನುತುಪ್ಪಕ್ಕೆ ಬಹಳಷ್ಟು ಬೇಡಿಕೆಯಿದೆ. ಖಾಸಗಿ ಕಂಪೆನಿಗಳು ಪ್ರತಿ ಕೆಜಿ ಜೇನು ತುಪ್ಪವನ್ನು ೪೦೦ ರೂ.ಗಳಿಂದ ೫೦೦ರೂ.ಗಳಿಗೆ ಮಾರಾಟ ಮಾಡುತ್ತಿವೆ. ಸಹಕಾರ ಸಂಘಗಳು ಕೂಡ ಕೆಜಿ ಜೇನುತುಪ್ಪವನ್ನು ೩೦೦ ರೂ.ಗಳಿಂದ ೩೫೦ ರೂ. ದರಕ್ಕೆ ಮಾರಾಟ ಮಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವಂತಹ ಜೇನು ಕೃಷಿಯನ್ನು ಪ್ರೋತ್ಸಾಹಿಸಿದರೆ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬಹುದು ಎಂಬ ದೃಷ್ಟಿಯಿಂದ ಜೇನು ಕೃಷಿಗೆ ಇಲಾಖೆ ಒತ್ತು ನೀಡಿದೆ. ಜೇನು ಪೆಟ್ಟಿಗೆ ಖರೀದಿಸಲು ಪ್ರೋತ್ಸಾಹಧನ, ಸಾಕಾಣಿಕೆ ವಿಧಾನ, ಜೇನು ಕೃಷಿ ಕೈಗೊಂಡಿರುವವರೊಂದಿಗೆ ಸಂವಾದ… ಹೀಗೆ ಹಲವಾರು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ.
ಗ್ರಾಮೀಣ ಭಾಗದಲ್ಲಿ ಸಣ್ಣಮಟ್ಟದ ಕೈದೋಟ ಹೊಂದಿರುವವರು ಕೂಡ ಜೇನು ಸಾಕಾಣಿಕೆಯಲ್ಲಿ ತೊಡಗಬಹುದು. ತೋಟದಲ್ಲಿ ಬೆಳೆಯಲಾಗುವ ತರಕಾರಿ, ಹಣ್ಣು ಮತ್ತು ಹೂವುಗಳಲ್ಲಿರುವ ಮಕರಂದದಿಂದ ಸಮೃದ್ಧವಾಗಿ ಜೇನು ದೊರಕುವುದಲ್ಲದೆ, ಪರಾಗ ಸ್ಪರ್ಶ ಕ್ರಿಯೆಯಿಂದ ಬೆಳೆಗಳ ಇಳುವರಿ ಕೂಡ ಹೆಚ್ಚುತ್ತದೆ. ಕೇವಲ ಲಾಭದ ದೃಷ್ಟಿಯಿಂದ ಮಾತ್ರವಲ್ಲದೆ ಔಷಧಿಯ ಗುಣಗಳಿಂದಲೂ ಜೇನು ಕೃಷಿಗೆ ಉತ್ತೇಜನ ನೀಡುವ ಅವಶ್ಯಕತೆಯಿದೆ.
ದೇಹದಲ್ಲಿನ ಕೊಬ್ಬು ಕರಗಿಸುವಲ್ಲಿ ಜೇನು ಬಹಳಷ್ಟು ಉಪಯೋಗಕಾರಿ ಎಂಬುದು ವೈದ್ಯರೊಬ್ಬರ ಅಭಿಪ್ರಾಯ. ಜೇನಿನಲ್ಲಿ ಫಾಕ್ಟೋಸ್ ಎಂಬ ಸಿಹಿ ಅಂಶ ವಿರುವುದರಿಂದ ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಇದಲ್ಲದೆ, ಬಹಳಷ್ಟು ಔಷಧಗಳ ತಯಾರಿಕೆಯಲ್ಲಿ ಜೇನುತುಪ್ಪವನ್ನು ಕಡ್ಡಾಯವಾಗಿ ಬಳಸುತ್ತಾರೆ ಎನ್ನಲಾಗಿದೆ.
ಜೇನು ಕೃಷಿ ಹೇಗೆ?: ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಮಟ್ಟದ ತರಕಾರಿ, ಹೂ ಮತ್ತಿತರ ಬೆಳೆಗಳನ್ನು ಬೆಳೆಯುವವರು ಜೇನು ಸಾಕಾಣಿಕೆ ವೃತ್ತಿಯನ್ನು ಆರಂಭಿಸಬಹುದು. ಒಮ್ಮೆ ಬಂಡವಾಳ ಹೂಡಿದರೆ ನಿರಂತರವಾಗಿ ಜೇನು ಕೃಷಿಯನ್ನು ಮುಂದುವರಿಸಬಹುದು. ವರ್ಷದಲ್ಲಿ ಪ್ರತಿ ಪೆಟ್ಟಿಗೆಯಿಂದ ಕನಿಷ್ಠ ೬ ರಿಂದ ೮ ಕೆಜಿಯಷ್ಟು ಜೇನುತುಪ್ಪವನ್ನು ಪಡೆಯಬಹುದು.
ತೋಟಗಾರಿಕೆ ಇಲಾಖೆಯ ಕಾರ್ಯಕ್ರಮಗಳು: ಜೇನು ಸಾಕಾಣಿಕೆಯಲ್ಲಿ ತೊಡಗುವವರಿಗಾಗಿ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೇನು ಸಾಕಾಣಿಕೆ ಆರಂಭಿಸಲು ೪,೫೦೦ ರೂ.ಬೆಲೆಯ ಜೇನು ಪೆಟ್ಟಿಗೆ ಹಾಗೂ ೧,೪೦೦ ರೂ. ಬೆಲೆಯ ಜೇನು ಹುಳು ಹಾಗೂ ಗೂಡು ಖರೀದಿಸಲು ಇಲಾಖೆ ಶೇ.೭೫ ರಷ್ಟು ಸಬ್ಸಿಡಿ ಹಣ ನೀಡಲಿದೆ.
ಜೇನು ಸಾಕಾಣಿಕೆಗೆ ಸಂಬಂಧಿಸಿದಂತೆ ತಜ್ಞರಿಂದ ತರಬೇತಿ ಕಾರ್ಯಕ್ರಮವನ್ನು ಕಾಲಕಾಲಕ್ಕೆ ಇಲಾಖೆಹಮ್ಮಿಕೊಳ್ಳುತ್ತದೆ. ಇಷ್ಟೇ ಅಲ್ಲದೆ, ಈಗಾಗಲೇ ಜೇನು ಸಾಕಾಣಿಕೆ ವೃತ್ತಿಪರ ರೈತರ ಮನೆಗಳಿಗೆ ಕರೆದೊಯ್ದು ಅವರೊಡನೆ ಸಂವಾದ ನಡೆಸಲು ಇಲಾಖೆ ಅನುಕೂಲ ಮಾಡಿಕೊಡಲಿದೆ. ಇಲಾಖೆ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳೂ ಉಚಿತವಾಗಿವೆ.
ಜೇನು ಕೃಷಿ ಕೈಗೊಳ್ಳುವವರು ತೋಟಗಾರಿಕೆ ಇಲಾಖೆಯ ಮುಖ್ಯ ಕಚೇರಿ ಅಥವಾ ತಾಲ್ಲೂಕು ಮಟ್ಟದ ತೋಟಗಾರಿಕೆ ಇಲಾಖಾ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಎಸ್ ಎಸ್ಎಲ್ಸಿ ಉತ್ತೀರ್ಣರಾದ ಗ್ರಾಮೀಣ ಭಾಗದ ಯುವಕರಿಗೆ ಉಚಿತವಾಗಿ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಬಹುದು.
” ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿನೊಂದಿಗೆ ಜೇನುತುಪ್ಪವನ್ನು ಸೇವಿಸಿದರೆ ಮೂರು ತಿಂಗಳ ಅವಧಿಯಲ್ಲಿ ೫ ರಿಂದ ೬ ಕೆಜಿಗಳಷ್ಟು ದೇಹದ ತೂಕ ಇಳಿಸಬಹುದು ಎನ್ನುವುದು ವೈದ್ಯರೊಬ್ಬರ ಅಭಿಪ್ರಾಯ.”
” ಜೇನು ಕೃಷಿ ಕೈಗೊಳ್ಳುವ ರೈತರಿಗೆ ನೆರವಾಗಲು ಸರ್ಕಾರ ಪ್ರತೀ ವರ್ಷ ನಿಗದಿತ ಮೊತ್ತವನ್ನು ಮೀಸಲಿಡುತ್ತದೆ. ಆರ್ಟಿಸಿ ಹೊಂದಿರುವ ಗ್ರಾಮೀಣ ಭಾಗದ ರೈತರಿಗೆ ತಲಾ ೧೦ ಪೆಟ್ಟಿಗೆಗಳು, ಆಧಾರ್ ಕಾರ್ಡ್ ಹೊಂದಿರುವ ಆಸಕ್ತ ನಗರ ಪ್ರದೇಶದವರಿಗೆ ತಲಾ ೪ ಜೇನು ಪೆಟ್ಟಿಗೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.”
-ಬಸವರಾಜು, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ
ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…
ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…
ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯದಲ್ಲಿ ಜುಲೈ ೨೦ಕ್ಕೆ ತೆರವಾಗಲಿರುವ ವಿಧಾನಪರಿಷತ್ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ.…
ಮೈಸೂರು : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…
ಸರಗೂರು : ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ಆತಂಕ ಮುಂದುವರಿದಿದ್ದು, ಹುಲಿ ಸೆರೆಹಿಡಿಯಲು ತೆರಳಿದ್ದ ಎಸ್ಟಿಎಫ್ ಸಿಬ್ಬಂದಿಯ ಮೇಲೆಯೇ…