ಕೆ.ಬಿ.ರಮೇಶನಾಯಕ
೨ನೇ, ೪ನೇ ಶನಿವಾರ, ಭಾನುವಾರ ಬಾಗಿಲು ಹಾಕಿದರೆ ಶಿಸ್ತುಕ್ರಮ
ಮೈಸೂರು: ವಾರದ ಭಾನುವಾರವೂ ಸೇರಿದಂತೆ ಸರ್ಕಾರಿ ರಜಾ ದಿನಗಳಂದು ನಮ್ಮ ಕ್ಲಿನಿಕ್ಗಳ ಬಾಗಿಲು ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ವೈದ್ಯರು, ಸಿಬ್ಬಂದಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು, ಇನ್ನು ಮುಂದೆ ಸಾರ್ವಜನಿಕ ಆಸ್ಪತ್ರೆಗಳಂತೆ ವರ್ಷವಿಡೀ ಕಾರ್ಯನಿರ್ವಹಿಸಲಿದೆ.
ಬಡವರು, ಮಧ್ಯಮ ವರ್ಗದವರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲು ಆರಂಭಿಸಿರುವ ನಮ್ಮ ಕ್ಲಿನಿಕ್ಗಳಲ್ಲಿ ವಾರದ ರಜಾ ದಿನಗಳಂದು ಬಾಗಿಲು ಹಾಕುತ್ತಿರುವ ಕುರಿತು ದೂರು ಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಹಳೆಯ ದಿನಗಳಂತೆ ಹೇಳದೆ-ಕೇಳದೆ ಕ್ಲಿನಿಕ್ ಬಂದ್ ಮಾಡಿ ಮನೆಗೆ ಹೊರಟರೆ ಶಿಸ್ತುಕ್ರಮ ಎದುರಿಸುವುದು ಗ್ಯಾರಂಟಿಯಾಗಿದೆ.
ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಖಾಸಗಿ ಕ್ಲಿನಿಕ್ಗಳು, ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಹೋಗುವುದನ್ನು ತಡೆಯಲು ರಾಜ್ಯ ಸರ್ಕಾರ ರಾಜ್ಯಾದ್ಯಂತ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಿತ್ತು. ವೈದ್ಯರು, ವೈದ್ಯಕೇತರ ಸಿಬ್ಬಂದಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾಗುವಂತಹ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದರಿಂದ ಸಾರ್ವಜನಿಕರು ಸಮೀಪದ ನಮ್ಮ ಕ್ಲಿನಿಕ್ಗಳಿಗೆ ಬಂದು ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲೂ ನಗರ ಪ್ರದೇಶಗಳಲ್ಲಿರುವ ನಮ್ಮ ಕ್ಲಿನಿಕ್ಗಳಿಗೆ ಉತ್ತಮ ಬೇಡಿಕೆ ಬಂದಿದ್ದರಿಂದಾಗಿ ರಾಜ್ಯ ಸರ್ಕಾರ ವಿವಿಧ ಪ್ರದೇಶಗಳಲ್ಲಿ ಕ್ಲಿನಿಕ್ ತೆರೆಯಲು ಅನುದಾನ ಮಂಜೂರು ಮಾಡಿಕೊಂಡು ಬರುತ್ತಿದೆ.
ವಿಶೇಷವಾಗಿ ಮಧ್ಯಮ ಹಾಗೂ ಶಿಕ್ಷಿತ ಸಮುದಾಯದ ಜನರು ಮಧುಮೇಹ, ರಕ್ತದೊತ್ತಡ, ಮತ್ತಿತರ ಸಮಸ್ಯೆಗಳಿಗೆ ಹೆಚ್ಚು ಬಳಸಿಕೊಳ್ಳುತ್ತಿದ್ದರು. ಹೀಗಾಗಿ, ತಿಂಗಳಿಂದ ತಿಂಗಳಿಂದ ಸೇವೆ ಪಡೆಯುವವರ ಪ್ರಮಾಣದಲ್ಲೂ ಏರಿಕೆ ಕಂಡಿತ್ತು. ಆದರೆ, ಕ್ಲಿನಿಕ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ರಜಾ ದಿನಗಳಾದ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರ ಕರ್ತವ್ಯನಿರ್ವಹಿಸದೆ ನಮ್ಮ ಕ್ಲಿನಿಕ್ಗಳನ್ನು ಮುಚ್ಚುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಹಾಗೂ ದೂರವಾಣಿ ಕರೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು, ಸಚಿವರ ಕಚೇರಿಗೆ ತಲುಪುತ್ತಿದ್ದವು. ಹಾಗಾಗಿ, ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಎಲ್ಲಾ ನಮ್ಮ ಕ್ಲಿನಿಕ್ಗಳಲ್ಲಿ ರಜಾ ದಿನಗಳೂ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿ ಆದೇಶ ಹೊರಡಿಸಿದೆ.
ರೋಸ್ಟರ್ ವ್ಯವಸ್ಥೆ: ಮುಂದಿನ ದಿನಗಳಲ್ಲಿ ಕ್ಲಿನಿಕ್ ಬಂದ್ ಮಾಡದೆ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುವ ಕಾರಣ ರೋಸ್ಟರ್ ಪ್ರಕಾರ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ರಜಾ ದಿನಗಳಂದು ಇರುವ ಸಿಬ್ಬಂದಿ ಡ್ಯೂಟಿ ರೋಸ್ಟರ್ ಹಾಕಿ ಕರ್ತವ್ಯನಿರ್ವಹಿಸುವುದು.
ಒಂದು ವೇಳೆ ವೈದ್ಯರು ಅನಿವಾರ್ಯವಾಗಿ ರಜೆ ಹೋದರೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ನಮ್ಮ ಕ್ಲಿನಿಕ್ನಮ ಸಂಬಂಧಪಟ್ಟ ಆಡಳಿತ ವೈದ್ಯಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಜಿಲ್ಲಾ ಆರ್ಸಿಎಚ್ ಹೊರಡಿಸಿರುವ ಸೂಚನೆಯಲ್ಲಿ ಹೇಳಲಾಗಿದೆ.
” ನಮ್ಮ ಕ್ಲಿನಿಕ್ಗಳಲ್ಲಿ ರಜಾ ದಿನಗಳಂದು ಬಾಗಿಲು ಹಾಕಲಾಗುತ್ತಿದೆ ಎಂಬುದರ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ದಿನಗಳಂದು ಕಾರ್ಯನಿರ್ವಹಿಸುವಂತೆ ಆದೇಶ ನೀಡಿದೆ. ಅದರಂತೆ ನಮ್ಮ ಕ್ಲಿನಿಕ್ಗಳು ಪ್ರತಿನಿತ್ಯ ತೆರೆದು ಕಾರ್ಯನಿರ್ವಹಿಸುವಂತೆ ವೈದ್ಯರಿಗೆ ಸೂಚನೆ ಕೊಡಲಾಗಿದೆ. ವೈದ್ಯರು, ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಲು ರೋಸ್ಟರ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.”
-ಡಾ.ಪಿ.ಎಂ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ನಮ್ಮ ಕ್ಲಿನಿಕ್ನ ವಿಶೇಷತೆಗಳು: ‘ನಮ್ಮ ಕ್ಲಿನಿಕ್’ಗಳಲ್ಲಿ ದೊರೆಯುವ ಚಿಕಿತ್ಸೆಗಳು ಸಂಪೂರ್ಣ ಉಚಿತವಾಗಿದೆ. ಸಾಮಾನ್ಯ ತಪಾಸಣೆ, ಉಚಿತ ಔಷಧಿ ವಿತರಣೆ, ಗರ್ಭಿಣಿ ಮತ್ತು ಹೆರಿಗೆ ಆರೈಕೆ, ಲಸಿಕೆಗಳು ಮತ್ತು ೧೪ ಬಗೆಯ ಪ್ರಯೋಗಾಲಯ (ಲ್ಯಾಬ್) ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪ್ರತಿ ಕ್ಲಿನಿಕ್ನಲ್ಲಿ ಓರ್ವ ಎಂಬಿಬಿಎಸ್ ವೈದ್ಯರು, ಓರ್ವ ನರ್ಸ್, ಓರ್ವ ಲ್ಯಾಬ್ ಟೆಕ್ನಿಷಿಯನ್ ಮತ್ತು ಒಬ್ಬ ಗ್ರೂಪ್ -ಡಿ ಸಿಬ್ಬಂದಿ ಇರುತ್ತಾರೆ. ಇಲ್ಲಿ ಒದಗಿಸಲಾಗುವ ಎಲ್ಲಾ ಸೇವೆಗಳು ಮತ್ತು ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ದೊಡ್ಡ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ೨೧ ಕ್ಲಿನಿಕ್ ಕಾರ್ಯನಿರ್ವಹಣೆ: ಮೈಸೂರು ನಗರಕ್ಕೆ ೨೩ ಕ್ಲಿನಿಕ್ಗಳು ಮಂಜೂರಾಗಿದ್ದು, ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಎರಡು ‘ನಮ್ಮ ಕ್ಲಿನಿಕ್’ ಗಳನ್ನು ತೆರೆಯಲು ಬೇಕಾದ ಸಿದ್ಧತೆ ಆರಂಭವಾಗಿದೆ. ಉಳಿದಂತೆ ೨೧ ಕ್ಲಿನಿಕ್ಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಯರಗನಹಳ್ಳಿ, ತಿ.ನರಸೀಪುರ, ಶ್ರೀರಾಂಪುರ, ಕೆ.ಆರ್.ನಗರ, ಎಚ್.ಡಿ.ಕೋಟೆ, ಹೂಟಗಳ್ಳಿ, ಬೋಗಾದಿ, ಹೊಸಹುಂಡಿ, ಪಿರಿಯಾಪಟ್ಟಣ, ದಟ್ಟಗಳ್ಳಿ, ರಾಜೀವ್ ನಗರ, ಎಸ್ವಿಪಿ ನಗರ, ಚಾಮುಂಡಿಬೆಟ್ಟ, ವಿಜಯನಗರ ೧ನೇ ಹಂತ, ವಿಜಯನಗರ ೩ನೇ ಹಂತ, ಹಳೆಯ ಕೆಸರೆ, ಕೆ.ಆರ್. ನಗರ-೨, ಭಾರತ್ನಗರ, ಬನ್ನೂರು, ಏಕಲವ್ಯನಗರ, ವಿಜಯನಗರ ೪ನೇ ಹಂತ, ಕೆಎಸ್ಆರ್ಟಿಸಿ ನಗರ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸದಾಗಿ ೮೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು…
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಮೇ ೨೯ರಂದು ಪ್ರಾರಂಭವಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರ ಪ್ರತೀ ವರ್ಷ ಮಕ್ಕಳಿಗೆ ಉಚಿತ ಪಠ್ಯಪುಸ್ತಕ,…
ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಚಿತ್ರನಟ ಜೋಸೆಫ್ ವಿಜಯ್ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಒಂದೇ ರಸ್ತೆಯಲ್ಲಿ…
ನವೀನ್ ಡಿಸೋಜ ವಿಪತ್ತು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ; ಸಂತ್ರಸ್ತರನ್ನು ರಕ್ಷಿಸುವ ವಿಧಾನ, ದೋಣಿ ಮೋಟಾರ್ಗಳನ್ನು ಚಾಲನೆ ಮಾಡುವ ಬಗ್ಗೆ…
ಬಾಪೂಜಿ ಮತ್ತು ವಾಜಪೇಯಿ ದಾರಿ ಬೇರೆಯಾಗಿದ್ದರೂ ನೈತಿಕತೆಗೆ ಮಾದರಿಯಾಗಿದ್ದರು ರಾಜೀವ ಹೆಗಡೆ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿ ಸಿದಾಗ…
ಸುಧಾರಣೆ ನೆಪದಲ್ಲಿ ಎಚ್ಚರ ತಪ್ಪಿದೆ. ಪ್ರೌಢಶಾಲೆಯಲ್ಲಿ ನನಗೆ ಆಪ್ತ ಸ್ನೇಹಿತರು ಬಹಳ ಕಡಿಮೆಯಿದ್ದರು. ಅಲ್ಲಿ ಬೇರೆ ಬೇರೆ ಕಾಲದಲ್ಲಿ ನನಗೆ…