Categories: Andolana originals

ಮುಡಾ ಹಗರಣ: ವಿಚಾರಣೆ ಗರಗಸ, ಸಾಗದ ಕೆಲಸ

ಕೆಲ ಅಧಿಕಾರಿಗಳು, ಸಿಬ್ಬಂದಿಗೆ ವಿಚಾರಣೆ ಸಂಕಷ್ಟ

ಕೆ.ಬಿ.ರಮೇಶನಾಯಕ

• ಕೆಲಸ ಮಾಡಲಾಗದ ಮನಸ್ಥಿತಿ; ವಿಚಾರಣೆಯತ್ತ ಚಿತ್ತ
• ಆಯುಕ್ತರು, ನಗರ ಯೋಜಕ ಸದಸ್ಯರು, ಕಾರ್ಯದರ್ಶಿ ಹೊರತಾಗಿ ಇತರರ ಅಲೆದಾಟ
• ಇನ್ನೂ ಮುಗಿಯದ ಕಡತಗಳ ತಲುಪಿಸುವ ಕೆಲಸ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದಲ್ಲಿ 50:50 ಅನುಪಾತದಡಿ ನಿವೇಶನಗಳ ಅಕ್ರಮ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಏಕಕಾಲದಲ್ಲಿ ಪ್ರತ್ಯೇಕವಾಗಿ ಮೂರು ತನಿಖಾ ಸಂಸ್ಥೆಗಳಿಂದ ನಡೆಯುತ್ತಿರುವ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಹೊಸದಾಗಿ ಬಂದ ಅಧಿಕಾರಿಗಳನ್ನು ಹೊರತುಪಡಿಸಿ ಹಳೆಯ ಅಧಿಕಾರಿ, ಸಿಬ್ಬಂದಿಗೆ ಕಚೇರಿ ಕೆಲಸಕ್ಕಿಂತ ಬೆಂಗಳೂರಿಗೆ ತೆರಳಿ ವಿಚಾರಣೆಗೆ ಹಾಜರಾಗುವುದು, ಕಡತಗಳನ್ನು ಕೊಂಡೊಯ್ಯುವುದೇ ಕಾಯಕ ಎಂಬಂತಾಗಿದೆ.

ಮುಡಾದ ಬಹುತೇಕ ಅಧಿಕಾರಿ, ಸಿಬ್ಬಂದಿಗೆ ಒಂದು ಕಡೆ ನೋಟಿಸ್ ಬಂದ ಕೂಡಲೇ ವಿಚಾರಣೆಗೆ ಹಾಜರಾಗಬೇಕು. ಇಂತಹದ್ದೇ ದಾಖಲೆ ತಲುಪಿಸುವಂತೆ ಹೇಳಿದ ತಕ್ಷಣವೇ ಮತ್ತೆ ಬೆಂಗಳೂರಿಗೆ ದೌಡಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಲವರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ, ಹೀಗಾಗಿ, ಕಳೆದ ಒಂದು ತಿಂಗಳಿನಿಂದ ಮುಡಾದಲ್ಲಿ ವಿವಿಧ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪರಿಸ್ಥಿತಿ ಆಯೋಮಯವಾಗಿದೆ.

50:50 ಅನುಪಾತದಡಿ ನಿವೇಶನಗಳ ಅಕ್ರಮ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಮತ್ತೊಂದೆಡೆ ಹಣದ ವಹಿವಾಟು ನಡೆದಿರುವ ಅನುಮಾನದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಒಂದೇ ವಿಚಾರದ ಬಗ್ಗೆ ಮೂರು ತನಿಖಾ ಸಂಸ್ಥೆಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವ ಪರಿಣಾಮವಾಗಿ ಮುಡಾ ಅಧಿಕಾರಿಗಳು, ಸಿಬ್ಬಂದಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಹೇಳಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಮೈಸೂರಿನಲ್ಲೇ ಇರುವ ಕಾರಣ ಯಾವುದೇ ಸಮಸ್ಯೆ ಆಗುತ್ತಿಲ್ಲ. ಆದರೆ, ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ, ಜಾರಿ ನಿರ್ದೇಶನಾಲಯ ಕಚೇರಿಗೆ ಮುಡಾ ಸಿಬ್ಬಂದಿ ಪ್ರತಿದಿನ ಹೋಗಿ ಬರುವಂತಾಗಿದೆ.

ಹಗರಣದ ತನಿಖೆ ವೇಳೆ ಹೊಸ ಹೊಸ ಅಂಶಗಳು ಗೊತ್ತಾಗುತ್ತಿದ್ದಂತೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗಳು ಅಥವಾ ಆಯೋಗದಿಂದ ಸೂಚನೆ ಬರುತ್ತಿದ್ದಂತೆ ಅಧಿಕಾರಿಗಳು ಅಲ್ಲಿಗೆ ದೌಡಾಯಿಸಬೇಕು. ಕೆಲವೊಮ್ಮೆ ಮಾಹಿತಿಗಳು ಅಪೂರ್ಣವಾಗಿದ್ದರೆ ಮತ್ತೆ ಮತ್ತೆ ಕರೆಯುತ್ತಿರುವುದರಿಂದ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ ಎನ್ನಲಾಗಿದೆ.

ಹಳಬರಿಗೆ ತಂದಿಟ್ಟ ಸಂಕಟ ಆಯುಕ್ತರು, ಕಾರ್ಯದರ್ಶಿ, ನಗರ ಯೋಜಕ ಸದಸ್ಯರು, ಅಧೀಕ್ಷಕ ಅಭಿಯಂತರರನ್ನು ಹೂರತುಪಡಿಸಿ ಇತರ ಎಲ್ಲ ಅಧಿಕಾರಿಗಳಿಗೂ ಈ ಹಗರಣ ಸಂಕಟ ತಂದೊಡ್ಡಿದೆ. ಹಿಂದಿನ ಆಯುಕ್ತರ ಅವಧಿಯಲ್ಲಿ ಮಾತ್ರ ನಗರ ಯೋಜಕ ಶಾಖೆ, ಭೂಸ್ವಾಧೀನ ಶಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ವಿಚಾರಣೆಗೆ ಕರೆಯಿಸಿ ಮಾಹಿತಿ ಪಡೆಯಲಾಗುತ್ತಿದೆ.

ಹಿರಿಯ ಅಧಿಕಾರಿಗಳ ಸೂಚನೆಯಂತೆ ನೋಟ್ ಮಾಡಿ ಕಡತಗಳನ್ನು ಮಂಡಿಸಿರುತ್ತೇವೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎನ್ನುವ ಮಾತನ್ನು ತನಿಖಾ ಸಂಸ್ಥೆಗಳ ಅಧಿಕಾರಿಗಳು ನಂಬುವ ಸ್ಥಿತಿಯಲ್ಲಿ ಇಲ್ಲ ಎಂಬುದು ಮುಡಾದ ಕೆಲ ಸಿಬ್ಬಂದಿ ಮನೋವೇದನೆಯ ಮಾತುಗಳು.

ನಾವು ಹಿರಿಯ ಅಧಿಕಾರಿಗಳ ಮಾತನ್ನು ಪಾಲಿಸಿದ್ದೇವೆ. ಆಯುಕ್ತರ ಹಂತದಲ್ಲಿ ಆಗುವ ತೀರ್ಮಾನಗಳು ನಮ್ಮ ಗಮನಕ್ಕೆ ಬರಲ್ಲ. ಕಡತಗಳು ಬಂದಾಗ ಅದನ್ನು ನೋಡಿ ಪರಿಶೀಲಿಸಿ ಸಂಖ್ಯೆ ನಮೂದಿಸುವುದು ನಮ್ಮ ಕರ್ತವ್ಯ. ಯಾರೋ ಮಾಡಿದ ತಪ್ಪಿಗೆ ನಾವು ವಿಚಾರಣೆ ಎದುರಿಸುತ್ತಿದ್ದೇವೆ. ಕಚೇರಿ ಕೆಲಸ ಮಾಡುವುದೆ? ಅಥವಾ ವಿಚಾರಣೆ ಎದುರಿಸುವುದೆ? ಎನ್ನುವಂತಹ ಸನ್ನಿವೇಶ ನಮ್ಮದಾಗಿದೆ ಎಂದು ಮುಡಾದ ಕೆಲ ಅಧಿಕಾರಿಗಳು, ಸಿಬ್ಬಂದಿ ಅಸಹಾಯಕತೆಯಿಂದ ಅಲವತ್ತುಕೊಳ್ಳುತ್ತಾರೆ.

ಸಿಬ್ಬಂದಿ ಅಳಲು:
ಮೈಸೂರು: ಒಂದೊಂದು ಪ್ರಶ್ನೆಗಳನ್ನು ಕೇಳುತ್ತಲೇ ಬಾಯಿ ಬಿಡಿಸುವ ಕೆಲಸ ಮಾಡಿರುವುದರಿಂದ ಅನೇಕರು ವಿಚಾರಣೆ ಎದುರಿಸುವ ಆತಂಕದಲ್ಲೇ ಕಾಲಕಳೆಯುತ್ತಿದ್ದಾರೆ. ವಿಚಾರಣೆಗೆ ಕರೆದಾಗಲೆಲ್ಲಾ ಹೋಗುತ್ತಿರುವ ಕಾರಣ ಕಚೇರಿಯ ಕೆಲಸಗಳು ನಡೆಯುತ್ತಿಲ್ಲ ಎಂಬುದು ಸಿಬ್ಬಂದಿಯೊಬ್ಬರ ಅಳಲು.

 

 

ಆಂದೋಲನ ಡೆಸ್ಕ್

Recent Posts

ಗ್ರಾಪಂನಲ್ಲೇ ವಾಸಸ್ಥಳ ದೃಢೀಕರಣ ಪತ್ರ ; ಇನ್ನು ಹೋಬಳಿ ಕೇಂದ್ರಗಳಿಗೆ ಅಲೆಯುವಂತಿಲ್ಲ: ಸರ್ಕಾರದ ತೀರ್ಮಾನ

ಬೆಂಗಳೂರು : ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರ ಮಹತ್ವದ ರಿಲೀಫ್ ನೀಡಿದ್ದು, ಇನ್ನು ಮುಂದೆ ವಾಸಸ್ಥಳ ದೃಢೀಕರಣ ಪತ್ರವನ್ನು ತಮ್ಮ…

5 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ರಾಜ್ಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು : ಬಿಜೆಪಿ -ಜಾ.ದಳ ನಾಯಕರಿಗೆ ಆಘಾತ

ಪರಿಷತ್ ಚುನಾವಣೆ ಫಲಿತಾಂಶದ ಮೂಲಕ ಭಿನ್ನಮತೀಯರು, ಮೈತ್ರಿ ಕೂಟಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಡಿಕೆಶಿ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು…

2 hours ago

ಆಂದೋಲನ ಸಂಪಾದಕೀಯ | ಅಡ್ಡ ಮತದಾನ : ರಾಜಕಾರಣದ ನೈತಿಕ ದಿವಾಳಿತನ

ಅಡ್ಡ ಮತದಾನ ಮಾಡಿ ‘ಆತ್ಮ ಸಾಕ್ಷಿ’ಯೆಂಬ ತಡೆಗೋಡೆಯ ರಕ್ಷಣೆ ಪಡೆದಿರುವ ಶಾಸಕರ ಪತ್ತೆಗೆ ‘ಸತ್ಯಶೋಧನೆ’, ‘ಆಣೆ-ಪ್ರಮಾಣ’ಗಳೆಲ್ಲವೂ ಗುಡ್ಡ ಅಗೆದು ಇಲಿ…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 22 ಸೋಮವಾರ

4 hours ago

ನೀಟ್-ಯುಜಿ ಮರುಪರೀಕ್ಷೆ : ಪರೀಕ್ಷೆ ಬರೆದ 22 ಲಕ್ಷ ವಿದ್ಯಾರ್ಥಿಗಳು

ಹೊಸದಿಲ್ಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೇಶದ…

15 hours ago

ತಮಿಳುನಾಡು ಸೀಫುಡ್‌ ಘಟಕದಲ್ಲಿ ಅನಿಲ ಸೋರಿಕೆ ; 7 ಜನ ಸಾವು, ಹಲವರು ಗಂಭೀರ

ಚೆನ್ನೆ : ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಂದಿ ಮಹಿಳಾ…

15 hours ago