Andolana originals

ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯ ದುರ್ಬಲ

ಚಿರಂಜೀವಿ ಸಿ ಹುಲ್ಲಹಳ್ಳಿ

ಮೈಸೂರು: ನಗರದ ಶೈಕ್ಷಣಿಕ ಪರಂಪರೆಯ ಭಾಗವಾಗಿರುವ ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯ ಕಟ್ಟಡ ಈಗ ಆತಂಕದ ಕೇಂದ್ರವಾಗಿದೆ. ಸುಮಾರು ೮೦-೯೦ ವರ್ಷಗಳ ಹಳೆಯ ಈ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ.

ಒಮ್ಮೆ ವಿದ್ಯಾರ್ಥಿಗಳ ಕಲರವದಿಂದ ಉತ್ಸಾಹದ ಬುಗ್ಗೆಯಂತಿದ್ದ ಈ ವಸತಿ ನಿಲಯ ಇಂದು ನೀರವ ಮೌನಕ್ಕೆ ಶರಣಾಗಿದೆ. ಗೋಡೆಗಳಲ್ಲಿ ದೊಡ್ಡ ಬಿರುಕುಗಳು, ಚಾವಣಿಯಿಂದ ಉದುರುತ್ತಿರುವ ಗಾರೆ, ಪಿಲ್ಲರ್‌ಗಳು ಕೂಡ ಶಿಥಿಲವಾಗಿದ್ದು, ಕಟ್ಟಡದ ದುಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಮಳೆಗಾಲದ ವೇಳೆ ಸೋರಿಕೆಯಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತವೆ. ಇದು ಕಟ್ಟಡದ ಭದ್ರತೆಗೆ ಭಾರಿ ಹೊಡೆತ ನೀಡಿದೆ. ಕಟ್ಟಡ ಸ್ಥಿತಿ ಅಪಾಯಕಾರಿಯಾಗಿದೆ.

ಹಾಗಾಗಿ ೨-೩ ವರ್ಷಗಳಿಂದ ಕಟ್ಟಡಕ್ಕೆ ಪ್ರವೇಶವನ್ನು ನಿರ್ಬಂಽಸಲಾಗಿದೆ. ಈ ಕಟ್ಟಡ ಪಾರಂಪರಿಕ ಮಹತ್ವ ಹೊಂದಿರುವುದರಿಂದ ಅದನ್ನು ಕೆಡವಲು ಆಡಳಿತ ಮಂಡಳಿ ಮೀನ ಮೇಷ ಎಣಿಸುತ್ತಿದೆ. ಇತಿಹಾಸದ ಗುರುತಾಗಿ ಉಳಿದಿರುವ ಈ ವಸತಿನಿಲಯವನ್ನು ಉಳಿಸಬೇಕೆಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಆದರೆ, ಇಂದಿನ ಸ್ಥಿತಿ ನೋಡಿದಾಗ, ಪಾರಂಪರಿಕತೆಗಿಂತ ಮನುಷ್ಯರ ಜೀವಗಳ ಭದ್ರತೆ ಮುಖ್ಯ ಎನ್ನುವ ಮಾತು ಗಟ್ಟಿಯಾಗಿ ಕೇಳಿಬರುತ್ತಿದೆ. ಯಾವುದೇ ಕ್ಷಣದಲ್ಲಿ ಕಟ್ಟಡ ಕುಸಿಯುವ ಪರಿಸ್ಥಿತಿ ಇದೆ. ಒಂದು ವೇಳೆ ದುರಂತ ಸಂಭವಿಸಿದರೆ, ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಅನುರಣಿಸುತ್ತಿದೆ.

ಒಂದು ಕಡೆ ಪಾರಂಪರಿಕ ಮೌಲ್ಯ ಕಾಪಾಡಬೇಕೆಂಬ ಒತ್ತಡ, ಮತ್ತೊಂದು ಕಡೆ ವಿದ್ಯಾರ್ಥಿಗಳ ಭದ್ರತೆ ಈ ಎರಡರ ಮಧ್ಯೆ ಆಡಳಿತ ಮಂಡಳಿ ಸಿಲುಕಿಕೊಂಡಿದೆ. ಕಟ್ಟಡವನ್ನು ಕೂಡಲೇ ಕೆಡವಿ, ಹೊಸದಾಗಿ ಸುರಕ್ಷಿತ ವಸತಿನಿಲಯವನ್ನು ನಿರ್ಮಿಸಬೇಕು. ಪರಂಪರೆಯ ಬಗ್ಗೆ ಯೋಚಿಸುತ್ತಿದ್ದರೆ, ಅದು ದುರ್ಘಟನೆಯನ್ನು ಆಹ್ವಾನ ನೀಡಿದಂತಾಗುತ್ತದೆ ಎಂಬುದು ಸ್ಥಳೀಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಆತಂಕವಾಗಿದೆ.

ಪ್ರಸ್ತುತ ಈ ವಿದ್ಯಾರ್ಥಿನಿಲಯದಲ್ಲಿ ಎ, ಬಿ, ಸಿ ಎಂಬ ಮೂರು ವಿಭಾಗಗಳಿವೆ. ಇದರಲ್ಲಿ ರಾಜ್ಯದ ವಿವಿಧ ವಿಭಾಗಗಳ ೨೭೦ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಮೂರು ಬ್ಲಾಕ್‌ಗಳಲ್ಲಿ ಎರಡು ಕಟ್ಟಡಗಳು ಹೊಸದಾಗಿದ್ದು, ಮತ್ತೊಂದು ಕಟ್ಟಡ ಹಳೆಯದಾದರೂ ಸುಸ್ಥಿತಿಯಲ್ಲಿದೆ. ಆದರೆ, ನಿರ್ವಹಣೆ ಕೊರತೆಯಿಂದ ಈ ಕಟ್ಟಡಗಳುಸೊರಗುತ್ತಿವೆ. ಕೊಠಡಿಗಳಲ್ಲಿ ದೂಳು ಮನೆ ಮಾಡಿದೆ. ಎಷ್ಟೋ ವರ್ಷಗಳಿಂದ ಕೊಠಡಿಗಳನ್ನು ಸ್ವಚ್ಛಗೊಳಿಸಿಲ್ಲ ಎನ್ನುವಂತೆ ಭಾಸವಾಗುತ್ತಿದೆ.

ವಿದ್ಯುತ್ ದೀಪವಿಲ್ಲ: ಹಾಸ್ಟೆಲ್‌ನ ಹೊರಭಾಗದಲ್ಲಿ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಕತ್ತಲೆಯೇ ತುಂಬಿರುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಓಡಾಡುತ್ತಾರೆ. ಓದುವು ದಂತೂ ಅಸಾಧ್ಯ. ಹಾಗಾಗಿ ವಿದ್ಯುತ್ ದೀಪಗಳನ್ನು ಅಳವಡಿಸುವುದರಿಂದ ವಿದ್ಯಾರ್ಥಿ ಗಳ ಓಡಾಟದ ಜೊತೆಗೆ ನಿಲಯದ ಹೊರಭಾಗದಲ್ಲಿ ಕುಳಿತು ಓದಲು ಅನುಕೂಲ ಕಲ್ಪಿಸಿದಂತಾಗುತ್ತದೆ. ವಸತಿನಿಲಯದ ಎ ಬ್ಲಾಕ್ ಮುಂಭಾಗ ಹಾಸ್ಟೆಲ್‌ನ ಆಡಳಿತ ಕಚೇರಿ ಇರುವ ಬ್ಲಾಕ್‌ನಲ್ಲಿ ಹೆಂಚುಗಳು ಒಡೆದು ಹೋಗಿವೆ. ಮಳೆ ಸುರಿದಾಗ ಕೆಲವು ಕಡೆ ಸೋರಿಕೆ ಯಾಗುತ್ತದೆ. ನಾಲ್ಕೈದು ತಿಂಗಳ ಹಿಂದೆ ವಿದ್ಯಾರ್ಥಿಗಳೇ ಪಕ್ಕದಲ್ಲಿ ಇದ್ದ ಹೆಂಚುಗಳನ್ನು ಬಳಸಿಕೊಂಡು ಸ್ವತಃ ನಾವೇ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕೆಲ ವಿದ್ಯಾರ್ಥಿಗಳು.

” ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯದ ಶಿಥಿಲಾವಸ್ಥೆಯಲ್ಲಿರುವ ಅನುಪಯುಕ್ತ ಕಟ್ಟಡವನ್ನು ಖಾಲಿ ಬಿಡಲಾಗಿದೆ. ಕಳೆದೆರಡು ವರ್ಷಗಳಿಂದ ಈ ಬ್ಲಾಕಿಗೆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ನಿರ್ಬಂDiಸಲಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿದ್ದು, ಯಾವ ತೊಂದರೆಯೂ ಆಗಿಲ್ಲ. ಶಿಥಿಲಗೊಂಡಿರುವ ಕಟ್ಟಡವನ್ನು ಕೆಡಹುವ ಸಂಬಂಧ ಇಂಜಿನಿಯರಿಂಗ್ ವಿಭಾಗದ ಗಮನಕ್ಕೆ ತರಲಾಗಿದೆ.”

ಗುರುಸಿದ್ದಯ್ಯ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ವಿದ್ಯಾರ್ಥಿನಿಲಯಗಳು, ಮೈಸೂರು ವಿವಿ

” ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಶಿಥಿಲಗೊಂಡಿರುವ ಕಟ್ಟಡವು ತುಂಬ ಹಳೆಯದಾಗಿದೆ. ಅನಾಹುತದ ಮುನ್ನೆಚ್ಚರಿಕೆಯಿಂದ ಕಟ್ಟಡಕ್ಕೆ ಪ್ರವೇಶವನ್ನು ನಿರ್ಬಂಽಸಲಾಗಿದೆ. ಈ ಕಟ್ಟಡವೂ ಪಾರಂಪರಿಕ ವಿನ್ಯಾಸದಲ್ಲಿರುವ ಹಿನ್ನೆಲೆಯಲ್ಲಿ ಪುನರ್ ನವೀಕರಣ ಮಾಡಬೇಕೆ ಅಥವಾ ಕೆಡವಿ ಹೊಸ ಕಟ್ಟಡ ಕಟ್ಟಡ ನಿರ್ಮಿಸಬೇಕೇ ಎಂಬುದರ ಬಗ್ಗೆ ಚಿಂತಿಸಲಾಗುತ್ತಿದೆ.”

ಎನ್.ಎ.ಉಮೇಶ್, ಕಾರ್ಯಪಾಲಕ ಅಭಿಯಂತರ, ಮೈಸೂರು ವಿವಿ

” ಮಹಾರಾಜ ವಿದ್ಯಾರ್ಥಿನಿಲಯದಲ್ಲಿ ಶಿಥಿಲಗೊಂಡಿರುವ ಅನುಪಯುಕ್ತ ಕಟ್ಟಡದ ಸ್ಥಿತಿಗತಿ ಅರಿತ ಇಂಜಿನಿಯರಿಂಗ್ ವಿಭಾಗವು ಆ ಕಟ್ಟಡಕ್ಕೆ ಪ್ರವೇಶಾತಿ ಕೊಡಬಾರದು ಎಂಬ ಸೂಚನೆಯನ್ನು ಪಾಲಿಸಿದೆ. ಪದವಿ ತರಗತಿಗಳ ಶೈಕ್ಷಣಿಕ ವರ್ಷ ಪೂರ್ಣಗೊಂಡು ವಿದ್ಯಾರ್ಥಿಗಳು ಊರಿಗೆ ತೆರಳಿದ ನಂತರ ಕಟ್ಟಡದ  ದುರಸ್ತಿಯ ರೂಪರೇಷೆ ಸಿದ್ಧಪಡಿಸಲಾಗುವುದು.”

ಡಾ.ನಿಂಗರಾಜು, ನಿಲಯ ಪಾಲಕ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

12 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

12 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

12 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

12 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

12 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

12 hours ago