Andolana originals

‘ಬೇಡು ಹಬ್ಬದ ಹೆಸರಿನಲ್ಲಿ ತೊಂದರೆ ನೀಡಿದಲ್ಲಿ ಕಾನೂನು ಕ್ರಮ’

ನವೀನ್ ಡಿಸೋಜ

ಕಂಡ ಕಂಡವರನ್ನು ನಿಂದಿಸಿ, ಹಣ ಸಂಗ್ರಹಿಸುವ ವಿಭಿನ್ನ ಹಬ್ಬ; ಕಾನೂನು ಪಾಲಿಸಲು ಪೊಲೀಸ್ ಇಲಾಖೆ ಸೂಚನೆ 

ಮಡಿಕೇರಿ: ಅಶ್ಲೀಲ ಪದಗಳ ಬೈಗುಳದೊಂದಿಗೆ ವಿಭಿನ್ನ ವೇಷ ಧರಿಸಿ ದೇವರನ್ನು ಆರಾಧಿಸುವ ಬೇಡು ಹಬ್ಬದ ಆಚರಣೆ ವೇಳೆ ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಅಸಭ್ಯವಾಗಿ ವರ್ತಿಸಿ ಕೆಟ್ಟ ಪದಗಳಿಂದ ಬೈಯುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಅಶ್ಲೀಲ ಪದಗಳ ಮಂತ್ರಘೋಷದೊಂದಿಗೆ ದೇವರನ್ನು ಆರಾಧಿಸುವ ಕಾಡು ಮಕ್ಕಳ ಬೇಡು ಹಬ್ಬ ದಕ್ಷಿಣ ಕೊಡಗಿನಲ್ಲಿ ಪ್ರತಿ ವರ್ಷ ನಡೆಯುತ್ತಿದೆ. ಹಿಗ್ಗಾಮುಗ್ಗಾ ಬೈದು, ಕಂಡ ಕಂಡವರನ್ನೂ ನಿಂದಿಸಿ ಅವರಿಂದ ಹಣ ಸಂಗ್ರಹಿಸಿ ಬಳಿಕ ದೇವರೇ ಕ್ಷಮಿಸಿ ಬಿಡಪ್ಪಾ ಎಂದು ಅಡ್ಡಬಿದ್ದು ಎಲ್ಲವನ್ನೂ ಮರೆತು ಬಿಡುವ ಬುಡಕಟ್ಟು ಜನರ ವಿಶಿಷ್ಟವಾದ ಹಬ್ಬವೇ ಈ ಬೇಡು ಹಬ್ಬ ಅಥವಾ ಕುಂಡೆ ಹಬ್ಬ.

ಬುಡಕಟ್ಟು ಜನರು ವಿಚಿತ್ರ ವೇಷಭೂಷಣಗಳೊಂದಿಗೆ ತಂಡತಂಡವಾಗಿ ಹಲವು ಭಾಗಗಳಿಗೆ ತೆರಳಿ ಕುಣಿಯುತ್ತಾ, ದೇವರನ್ನು ಬಯ್ಯುತ್ತಾ ಹಣ ಸಂಗ್ರಹಿಸುತ್ತಾರೆ. ಬೇರೆ ಬೇರೆ ಕಡೆಗಳಿಗೆ ತೆರಳಿದ ಎಲ್ಲ ತಂಡಗಳು ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಸೇರುತ್ತಾರೆ. ನೂರಾರು ಮಂದಿ ಒಂದೆಡೆ ವಿಚಿತ್ರ ವೇಷ ಹಾಕಿಕೊಂಡು, ಮೈಗೆ ಬಣ್ಣ ಬಳಿದುಕೊಂಡು, ಟಿನ್, ಡ್ರಮ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳಲ್ಲಿ ತಾಳ ಹಾಕುತ್ತಾ ಕುಂಡೆ ಕುಂಡೆ ಎಂದು ಬಯ್ಯುತ್ತಾ ಸಾಗುತ್ತಾರೆ.

ಕೊಡಗಿನ ಕಾಫಿ ತೋಟ, ವಿವಿಧ ಕಡೆಗಳಲ್ಲಿ ಕೆಲಸ ಮಾಡುವ ಬುಡಕಟ್ಟು ಮಂದಿ ದೇವರಪುರದಲ್ಲಿ ಸೇರುತ್ತಾರೆ. ಪೊನ್ನಂಪೇಟೆ, ಸಿದ್ದಾಪುರ, ಕುಶಾಲನಗರ ಹಾಗೂ ಕೆಲವು ಕಡೆಗಳಿಗೂ ತೆರಳಿ ಕುಣಿಯುತ್ತಾ, ದೇವರನ್ನು, ಮನುಷ್ಯರನ್ನು ಬಯ್ಯುತ್ತಾ ಸಾಗುತ್ತಾರೆ. ದಾರಿ ಮಧ್ಯೆ ಸಿಗುವವರಿಂದ ಹಣ ವಸೂಲಿ ಮಾಡುತ್ತಾರೆ. ಇವರು ಬೈದರೆ ಆ ದಿನಗಳಲ್ಲಿ ಬಹುತೇಕ ಮಂದಿ ಯಾರೂ ಸಿಟ್ಟು ಮಾಡಿಕೊಳ್ಳುವುದಿಲ್ಲ.

ಕೆಲವು ವರ್ಷಗಳಿಂದ ಕುಂಡೆ ಹಬ್ಬ ಹಾದಿ ತಪ್ಪುತ್ತಿದ್ದು, ಹೆಂಡ ಕುಡಿದು ಕಂಡ ಕಂಡವರಿಂದ ಹಣ ವಸೂಲಿ ಹಾಗೂ ಘರ್ಷಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವೊಂದು ನಿಯಂತ್ರಣವನ್ನು ಹೇರಿದ್ದು, ಆ ಸಮಯದಲ್ಲಿ ಗೋಣಿಕೊಪ್ಪ ವಿಭಾಗದಲ್ಲಿ ಮದ್ಯ ನಿಷೇಧಿಸಲಾಗುತ್ತದೆ.

ಈ ಬಾರಿ ಮೇ ೨೮ರಂದು ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದಲ್ಲಿ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ಬೇಡು ಹಬ್ಬ ನಡೆಯಲಿದೆ. ಜಿಲ್ಲೆಯ ವಿವಿಧ ಕಡೆಗಳಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ವೇಷಧಾರಿಗಳು ದೇವಸ್ಥಾನದ ಹರಕೆ ತೀರಿಸುವ ಪದ್ಧತಿಗಾಗಿ ಬರುತ್ತಾರೆ. ಈ ವೇಳೆ ವಿಪರೀತ ಮದ್ಯಸೇವನೆ ಮಾಡಿ ಗೊಣಿಕೊಪ್ಪಲು ಪಟ್ಟಣ ಮತ್ತು ತಿತಿಮತಿ ನಗರದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಹಣವನ್ನು ನೀಡುವಂತೆ ಪೀಡಿಸುವುದು, ಸಾರ್ವಜನಿಕರಿಗೆ ತೊಂದರೆ ನೀಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊ ಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವ‌ರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

” ದಕ್ಷಿಣ ಕೊಡಗಿನಲ್ಲಿ ನಡೆಯುವ ಬೇಡು ಹಬ್ಬ ಸಂದರ್ಭದಲ್ಲಿ ಕಾನೂನು ಪಾಲಿಸಬೇಕು. ವ್ಯಾಪಾರಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ ತೊಂದರೆ ನೀಡುವುದು, ವಾಹನಗಳನ್ನು ಅಡ್ಡಗಟ್ಟುವುದು ಮಾಡಬಾರದು. ಅಂಗಡಿಗಳಿಗೆ ಬರುವ ವರ್ತಕರೊಂದಿಗೆ, ಮಾಲೀಕರೊಂದಿಗೆ ಹಾಗೂ ವಿಶೇಷವಾಗಿ ಮಹಿಳೆಯರೊಂದಿಗೆ ವೇಷಧಾರಿಗಳು ಅಸಭ್ಯವಾಗಿ ವರ್ತಿಸಿ ಕೆಟ್ಟ ಪದಗಳಿಂದ ಬೈಯುತ್ತಾ ತೊಂದರೆ ನೀಡುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.”

-ಆರ್.ಎನ್.ಬಿಂದುಮಣಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೇಡು ಹಬ್ಬದ ಹಿನ್ನೆಲೆ…: 

ಅಯ್ಯಪ್ಪ ಎಂಬ ವ್ಯಕ್ತಿ ಜೇನುಕುರುಬರನ್ನು ಕರೆದುಕೊಂಡು ದಟ್ಟ ಅರಣ್ಯಕ್ಕೆ ಬೇಟೆಗೆ ಹೋದನಂತೆ. ಅಲ್ಲಿ ಭದ್ರಕಾಳಿ ಎಂಬ ಮಹಿಳೆ ಕಾಣಿಸಿಕೊಂಡಾಗ ಅಯ್ಯಪ್ಪ ಆಕೆಯ ವ್ಯಾಮೋಹಕ್ಕೆ ಒಳಗಾಗಿ ತನ್ನ ಜತೆಯಲ್ಲಿದ್ದ ಜೇನುಕರುಬರನ್ನು ಕಾಡಿನಲ್ಲೇ ಬಿಟ್ಟು ಆಕೆಯೊಂದಿಗೆ ಓಡಿ ಹೋದನಂತೆ. ದಿಕ್ಕೆಟ್ಟಂತಾದ ಜೇನುಕುರುಬರು ಮತ್ತೆ ಹಿಂದಿರುಗಲು ಅಸಹಾಯಕರಾಗಿ ದಾರಿ ಹುಡುಕಾಡುವಾಗ ಅವರಿಬ್ಬರೂ ಏಕಾಂತದಲ್ಲಿ ಮುಳುಗಿರುವುದು ಕಂಡು ಬಂದಿತಂತೆ. ತಮ್ಮನ್ನು ಮಧ್ಯ ಕಾಡಿನಲ್ಲಿ ಕೈಬಿಡಲು ಕಾರಣಳಾದ ಭದ್ರಕಾಳಿಯ ಮೇಲೆ ಕೋಪಗೊಂಡ ಜೇನುಕುರುಬರು ಆಕೆಯನ್ನು ’ಏ ಕುಂಡೆ’ ಎಂದು ಮನಸಾರೆ ಶಪಿಸಿದರಂತೆ. ಹೀಗಾಗಿ ಭದ್ರಕಾಳಿಯನ್ನು ಮನಸೋ ಇಚ್ಛೆ ಅಶ್ಲೀಲವಾಗಿ ಬೈಯ್ಯುವ ಹಬ್ಬವೇ ಕುಂಡೆಹಬ್ಬ ಎನ್ನುತ್ತಾರೆ ಹಿರಿಯರು.

 

 

ಆಂದೋಲನ ಡೆಸ್ಕ್

Recent Posts

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026: ಗಜಪಯಣಕ್ಕೆ ವಿದ್ಯುಕ್ತ ಚಾಲನೆ

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…

2 hours ago

ಓದುಗರ ಪತ್ರ: ಕಾವೇರಿ ನದಿ ನೀರಿನ ವಿವಾದಕ್ಕೆ ಮಾತುಕತೆಯೇ ಮದ್ದು

ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ.…

3 hours ago

ಓದುಗರ ಪತ್ರ: ಈ ‘ಎರಡು’ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ…

3 hours ago

ಓದುಗರ ಪತ್ರ: ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣವಾಗಲಿ

ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ…

3 hours ago

ಮಳೆ ಕೊರತೆಯ ನಡುವೆಯೂ ಕೃಷಿಗೆ ಆತಂಕವಿಲ್ಲ

ನವೀನ್ ಡಿಸೋಜ ಕೊಡಗಿನಲ್ಲಿ ಇಲ್ಲಿಯವರೆಗೆ ಶೇ.೩೭ರಷ್ಟು ಮಳೆ ಕೊರತೆ; ಭರದಿಂದ ಸಾಗಿದ ಬಿತ್ತನೆ ಕಾರ್ಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ…

7 hours ago

ರಸ್ತೆ ಕಾಮಗಾರಿ ಕಳಪೆ: ಸಾರ್ವಜನಿಕರ ಆರೋಪ

ದಾಸೇಗೌಡ ಸರಗೂರು ಸರಗೂರು: ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆಗ್ರಹ ಸರಗೂರು: ಪಟ್ಟಣದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ…

7 hours ago