Andolana originals

‘ಬೇಡು ಹಬ್ಬದ ಹೆಸರಿನಲ್ಲಿ ತೊಂದರೆ ನೀಡಿದಲ್ಲಿ ಕಾನೂನು ಕ್ರಮ’

ನವೀನ್ ಡಿಸೋಜ

ಕಂಡ ಕಂಡವರನ್ನು ನಿಂದಿಸಿ, ಹಣ ಸಂಗ್ರಹಿಸುವ ವಿಭಿನ್ನ ಹಬ್ಬ; ಕಾನೂನು ಪಾಲಿಸಲು ಪೊಲೀಸ್ ಇಲಾಖೆ ಸೂಚನೆ 

ಮಡಿಕೇರಿ: ಅಶ್ಲೀಲ ಪದಗಳ ಬೈಗುಳದೊಂದಿಗೆ ವಿಭಿನ್ನ ವೇಷ ಧರಿಸಿ ದೇವರನ್ನು ಆರಾಧಿಸುವ ಬೇಡು ಹಬ್ಬದ ಆಚರಣೆ ವೇಳೆ ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಅಸಭ್ಯವಾಗಿ ವರ್ತಿಸಿ ಕೆಟ್ಟ ಪದಗಳಿಂದ ಬೈಯುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಅಶ್ಲೀಲ ಪದಗಳ ಮಂತ್ರಘೋಷದೊಂದಿಗೆ ದೇವರನ್ನು ಆರಾಧಿಸುವ ಕಾಡು ಮಕ್ಕಳ ಬೇಡು ಹಬ್ಬ ದಕ್ಷಿಣ ಕೊಡಗಿನಲ್ಲಿ ಪ್ರತಿ ವರ್ಷ ನಡೆಯುತ್ತಿದೆ. ಹಿಗ್ಗಾಮುಗ್ಗಾ ಬೈದು, ಕಂಡ ಕಂಡವರನ್ನೂ ನಿಂದಿಸಿ ಅವರಿಂದ ಹಣ ಸಂಗ್ರಹಿಸಿ ಬಳಿಕ ದೇವರೇ ಕ್ಷಮಿಸಿ ಬಿಡಪ್ಪಾ ಎಂದು ಅಡ್ಡಬಿದ್ದು ಎಲ್ಲವನ್ನೂ ಮರೆತು ಬಿಡುವ ಬುಡಕಟ್ಟು ಜನರ ವಿಶಿಷ್ಟವಾದ ಹಬ್ಬವೇ ಈ ಬೇಡು ಹಬ್ಬ ಅಥವಾ ಕುಂಡೆ ಹಬ್ಬ.

ಬುಡಕಟ್ಟು ಜನರು ವಿಚಿತ್ರ ವೇಷಭೂಷಣಗಳೊಂದಿಗೆ ತಂಡತಂಡವಾಗಿ ಹಲವು ಭಾಗಗಳಿಗೆ ತೆರಳಿ ಕುಣಿಯುತ್ತಾ, ದೇವರನ್ನು ಬಯ್ಯುತ್ತಾ ಹಣ ಸಂಗ್ರಹಿಸುತ್ತಾರೆ. ಬೇರೆ ಬೇರೆ ಕಡೆಗಳಿಗೆ ತೆರಳಿದ ಎಲ್ಲ ತಂಡಗಳು ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಸೇರುತ್ತಾರೆ. ನೂರಾರು ಮಂದಿ ಒಂದೆಡೆ ವಿಚಿತ್ರ ವೇಷ ಹಾಕಿಕೊಂಡು, ಮೈಗೆ ಬಣ್ಣ ಬಳಿದುಕೊಂಡು, ಟಿನ್, ಡ್ರಮ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳಲ್ಲಿ ತಾಳ ಹಾಕುತ್ತಾ ಕುಂಡೆ ಕುಂಡೆ ಎಂದು ಬಯ್ಯುತ್ತಾ ಸಾಗುತ್ತಾರೆ.

ಕೊಡಗಿನ ಕಾಫಿ ತೋಟ, ವಿವಿಧ ಕಡೆಗಳಲ್ಲಿ ಕೆಲಸ ಮಾಡುವ ಬುಡಕಟ್ಟು ಮಂದಿ ದೇವರಪುರದಲ್ಲಿ ಸೇರುತ್ತಾರೆ. ಪೊನ್ನಂಪೇಟೆ, ಸಿದ್ದಾಪುರ, ಕುಶಾಲನಗರ ಹಾಗೂ ಕೆಲವು ಕಡೆಗಳಿಗೂ ತೆರಳಿ ಕುಣಿಯುತ್ತಾ, ದೇವರನ್ನು, ಮನುಷ್ಯರನ್ನು ಬಯ್ಯುತ್ತಾ ಸಾಗುತ್ತಾರೆ. ದಾರಿ ಮಧ್ಯೆ ಸಿಗುವವರಿಂದ ಹಣ ವಸೂಲಿ ಮಾಡುತ್ತಾರೆ. ಇವರು ಬೈದರೆ ಆ ದಿನಗಳಲ್ಲಿ ಬಹುತೇಕ ಮಂದಿ ಯಾರೂ ಸಿಟ್ಟು ಮಾಡಿಕೊಳ್ಳುವುದಿಲ್ಲ.

ಕೆಲವು ವರ್ಷಗಳಿಂದ ಕುಂಡೆ ಹಬ್ಬ ಹಾದಿ ತಪ್ಪುತ್ತಿದ್ದು, ಹೆಂಡ ಕುಡಿದು ಕಂಡ ಕಂಡವರಿಂದ ಹಣ ವಸೂಲಿ ಹಾಗೂ ಘರ್ಷಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವೊಂದು ನಿಯಂತ್ರಣವನ್ನು ಹೇರಿದ್ದು, ಆ ಸಮಯದಲ್ಲಿ ಗೋಣಿಕೊಪ್ಪ ವಿಭಾಗದಲ್ಲಿ ಮದ್ಯ ನಿಷೇಧಿಸಲಾಗುತ್ತದೆ.

ಈ ಬಾರಿ ಮೇ ೨೮ರಂದು ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದಲ್ಲಿ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ಬೇಡು ಹಬ್ಬ ನಡೆಯಲಿದೆ. ಜಿಲ್ಲೆಯ ವಿವಿಧ ಕಡೆಗಳಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ವೇಷಧಾರಿಗಳು ದೇವಸ್ಥಾನದ ಹರಕೆ ತೀರಿಸುವ ಪದ್ಧತಿಗಾಗಿ ಬರುತ್ತಾರೆ. ಈ ವೇಳೆ ವಿಪರೀತ ಮದ್ಯಸೇವನೆ ಮಾಡಿ ಗೊಣಿಕೊಪ್ಪಲು ಪಟ್ಟಣ ಮತ್ತು ತಿತಿಮತಿ ನಗರದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಹಣವನ್ನು ನೀಡುವಂತೆ ಪೀಡಿಸುವುದು, ಸಾರ್ವಜನಿಕರಿಗೆ ತೊಂದರೆ ನೀಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊ ಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವ‌ರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

” ದಕ್ಷಿಣ ಕೊಡಗಿನಲ್ಲಿ ನಡೆಯುವ ಬೇಡು ಹಬ್ಬ ಸಂದರ್ಭದಲ್ಲಿ ಕಾನೂನು ಪಾಲಿಸಬೇಕು. ವ್ಯಾಪಾರಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ ತೊಂದರೆ ನೀಡುವುದು, ವಾಹನಗಳನ್ನು ಅಡ್ಡಗಟ್ಟುವುದು ಮಾಡಬಾರದು. ಅಂಗಡಿಗಳಿಗೆ ಬರುವ ವರ್ತಕರೊಂದಿಗೆ, ಮಾಲೀಕರೊಂದಿಗೆ ಹಾಗೂ ವಿಶೇಷವಾಗಿ ಮಹಿಳೆಯರೊಂದಿಗೆ ವೇಷಧಾರಿಗಳು ಅಸಭ್ಯವಾಗಿ ವರ್ತಿಸಿ ಕೆಟ್ಟ ಪದಗಳಿಂದ ಬೈಯುತ್ತಾ ತೊಂದರೆ ನೀಡುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.”

-ಆರ್.ಎನ್.ಬಿಂದುಮಣಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೇಡು ಹಬ್ಬದ ಹಿನ್ನೆಲೆ…: 

ಅಯ್ಯಪ್ಪ ಎಂಬ ವ್ಯಕ್ತಿ ಜೇನುಕುರುಬರನ್ನು ಕರೆದುಕೊಂಡು ದಟ್ಟ ಅರಣ್ಯಕ್ಕೆ ಬೇಟೆಗೆ ಹೋದನಂತೆ. ಅಲ್ಲಿ ಭದ್ರಕಾಳಿ ಎಂಬ ಮಹಿಳೆ ಕಾಣಿಸಿಕೊಂಡಾಗ ಅಯ್ಯಪ್ಪ ಆಕೆಯ ವ್ಯಾಮೋಹಕ್ಕೆ ಒಳಗಾಗಿ ತನ್ನ ಜತೆಯಲ್ಲಿದ್ದ ಜೇನುಕರುಬರನ್ನು ಕಾಡಿನಲ್ಲೇ ಬಿಟ್ಟು ಆಕೆಯೊಂದಿಗೆ ಓಡಿ ಹೋದನಂತೆ. ದಿಕ್ಕೆಟ್ಟಂತಾದ ಜೇನುಕುರುಬರು ಮತ್ತೆ ಹಿಂದಿರುಗಲು ಅಸಹಾಯಕರಾಗಿ ದಾರಿ ಹುಡುಕಾಡುವಾಗ ಅವರಿಬ್ಬರೂ ಏಕಾಂತದಲ್ಲಿ ಮುಳುಗಿರುವುದು ಕಂಡು ಬಂದಿತಂತೆ. ತಮ್ಮನ್ನು ಮಧ್ಯ ಕಾಡಿನಲ್ಲಿ ಕೈಬಿಡಲು ಕಾರಣಳಾದ ಭದ್ರಕಾಳಿಯ ಮೇಲೆ ಕೋಪಗೊಂಡ ಜೇನುಕುರುಬರು ಆಕೆಯನ್ನು ’ಏ ಕುಂಡೆ’ ಎಂದು ಮನಸಾರೆ ಶಪಿಸಿದರಂತೆ. ಹೀಗಾಗಿ ಭದ್ರಕಾಳಿಯನ್ನು ಮನಸೋ ಇಚ್ಛೆ ಅಶ್ಲೀಲವಾಗಿ ಬೈಯ್ಯುವ ಹಬ್ಬವೇ ಕುಂಡೆಹಬ್ಬ ಎನ್ನುತ್ತಾರೆ ಹಿರಿಯರು.

 

 

ಆಂದೋಲನ ಡೆಸ್ಕ್

Recent Posts

​ಮೈಸೂರು ವಿ.ವಿ | ಸಂಶೋಧಕರ ಶಿಷ್ಯವೇತನ ಬಿಕ್ಕಟ್ಟು ಬಗೆಹರಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2026-27ನೇ ಸಾಲಿನಲ್ಲಿ ಸಂಶೋಧನೆ ಕೈಗೊಂಡಿರುವ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST)…

4 mins ago

ಮೈಸೂರು | ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ ; ಫುಟ್‌ಪಾತ್ ಆಕ್ರಮಿಸಿದ್ದ 30 ಅಂಗಡಿಗಳಿಗೆ ಶಾಕ್‌

ಮೈಸೂರು : ಫುಟ್‌ಪಾತ್‌ಗಳನ್ನು ಅತಿಕ್ರಮಿಸಿದ್ದ ಅನಧಿಕೃತ ವ್ಯಾಪಾರಿಗಳ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಶುಕ್ರವಾರ ಖಡಕ್ಕಾಗಿ ಕಾರ್ಯಾಚರಣೆ ನಡೆಸಿತು. ವಲಯ-5…

2 hours ago

ರಸ್ತೆ ವೈಟ್‌ ಟಾಪಿಂಗ್‌ ; ಟೆಂಡರ್‌ ಶುವರ್‌ ಮಾದರಿ ಕಡ್ಡಾಯ

ರಸ್ತೆಗಳ ಬಾಳಿಕೆ ಹೆಚ್ಚಳ ; ಬಫರ್‌ ಜೋನ್‌ ಇಲ್ಲದಿದ್ದರೆ ಸಂಕಷ್ಟ ವಿಶ್ವನಾಥ್‌ ಶಂಕರಪ್ಪ ರಸ್ತೆ ವೈಟ್ ಟಾಪಿಂಗ್ ಮಾಡುವುದು ಎಂದರೆ,…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ : ಪೈರಸಿ ನಿಗ್ರಹಕ್ಕೆ ಟೆಲಿಗ್ರಾಮ್‌ ಆಪ್‌ಗೆ ಅವಧಿ ನೀಡಿದ ಕೇಂದ್ರ

ಮೂರು ವಾರಗಳ ಹಿಂದೆ ಈ ಅಂಕಣದಲ್ಲಿ ಪೈರಸಿ ಎನ್ನುವ ಪೆಡಂಭೂತದ ಬಗ್ಗೆ ಹೇಳಲಾಗಿತ್ತು. ನೀಟ್ ಪರೀಕ್ಷೆಯ ಅವಧಿಯ ಕೆಲವು ದಿನ…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 10 ಶುಕ್ರವಾರ

6 hours ago

ಬೆಟ್ಟಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ!

ಪ್ರತ್ಯಕ್ಷ ವರದಿ ಕೆ.ಪಿ.ನಾಗರಾಜ್‌ ಪಬ್ಲಿಕ್‌ ಟಿವಿ ಕೇರಳ ರಾಜ್ಯದ ವಯನಾಡಿನಲ್ಲಿ ಮತ್ತೆ ಬೆಟ್ಟ ಕುಸಿದಿದೆ. ಸುದ್ದಿ ವಾಹಿನಿಗಳು ಇದನ್ನು ‘ಭೂ…

1 day ago