Andolana originals

ಕೊಡಗಿನಲ್ಲಿ ತಲೆ ಎತ್ತುತ್ತಿರುವ ಅಕ್ರಮ ವಿಲ್ಲಾಗಳು: ಆರೋಪ

ಕಾಂಗೀರ ಬೋಪಣ್ಣ

ಸೂಕ್ತ ತನಿಖೆಗೆ ಪರಿಸರವಾದಿಗಳ ಒತ್ತಾಯ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ವಿರಾಜಪೇಟೆ: ಅಚ್ಚ ಹಸಿರಿನ ಸುಂದರ ಪರಿಸರ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಅರಣ್ಯವನ್ನು ನಾಶ ಮಾಡಿ ಎಗ್ಗಿಲ್ಲದೆ ರೆಸಾರ್ಟ್, ವಿಲ್ಲಾಗಳ ನಿರ್ಮಾಣ ಮಾಡಲಾಗುತ್ತಿದ್ದು, ಕೊಡಗು-ಕೇರಳ ಗಡಿಭಾಗದಲ್ಲಿ ನಿಯಮ ಉಲ್ಲಂಸಿ ಸುಮಾರು ೩೦ ಎಕರೆ ಪ್ರದೇಶದಲ್ಲಿ ವಿಲ್ಲಾ ನಿರ್ಮಿಸುತ್ತಿರುವ ಆರೋಪ ಕೇಳಿ ಬಂದಿದೆ.

ವಿರಾಜಪೇಟೆಯ-ಕೇರಳ ಗಡಿಭಾಗದ ಬಾಳುಗೋಡು ವ್ಯಾಪ್ತಿಯಲ್ಲಿ ನಿಯಮ ಬಾಹಿರ ರೆಸಾರ್ಟ್, ಹೋಟೆಲ್, ಬಾರಿ ವಿಲ್ಲಾಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಬ್ರಹ್ಮಗಿರಿ ವನ್ಯಜೀವಿ ವಲಯ ಅರಣ್ಯ ಬಫರ್ ಜೋನ್ ಆಗಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಇಂತಹ ಕಾಮಗಾರಿ ನಡೆಸಲಾಗುತ್ತಿರುವ ಬಗ್ಗೆ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅಕ್ರಮ ಕಟ್ಟಡಗಳಿಂದ ಪರಿಸರ ಹಾಗೂ ವನ್ಯಜೀವಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸಂಸ್ಥೆಯೊಂದು ಇದೀಗ ಸುಮಾರು ೩೦ ಎಕರೆ ಪ್ರದೇಶದಲ್ಲಿ ಮೈಸೂರು ಮುಡಾದ ಅನುಮತಿ ಇದೆ ಎಂದು ಹೇಳಿಕೊಂಡು ಬೃಹತ್ ವಿಲ್ಲಾಗಳನ್ನು ನಿರ್ಮಿಸಲು ನಿವೇಶನ ಸಿದ್ಧ ಮಾಡಿಕೊಳ್ಳುತ್ತಿದೆ. ಇದೇ ರೀತಿ ನಿಯಮ ಬಾಹಿರ ಅಕ್ರಮ ಕಟ್ಟಡ ನಿರ್ಮಾಣಗಳು ಮುಂದುವರಿದರೆ ಕೊಡಗಿನ ಜಲ ಮೂಲ, ಪರಿಸರಕ್ಕೆ ಭಾರೀ ಧಕ್ಕೆಯಾಗಲಿದೆ. ಮುಂದೆ ಕಾವೇರಿಯ ಒಡಲು ಬರಿದಾಗಿ ಮೈಸೂರು, ಮಂಡ್ಯ ಭಾಗದ ಜನರಿಗೆ ನೀರು ಅಲಭ್ಯವಾಗಲಿದೆ ಎಂದು ಕೊಡಗು ವನ್ಯಜೀವಿಗಳ ಸಂಘದ ಅಧ್ಯಕ್ಷ ಕರ್ನಲ್ ಮುತ್ತಣ್ಣ ಹೇಳಿದ್ದಾರೆ.

ನಿಯಮಬಾಹಿರ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಕೆಲ ಅಧಿಕಾರಿಗಳು ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ಜನ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

” ನಾವು ಕೇರಳದಲ್ಲಿ ಒಂದು ಸ್ಥಳ ಖರೀದಿ ಮಾಡುವುದಾಗಲಿ, ಅಂಗಡಿ ತೆರೆಯುವುದಾಗಲಿ ಸಾಧ್ಯವಾಗುವುದಿಲ್ಲ. ಆದರೆ ಅಲ್ಲಿನವರು ಇಲ್ಲಿ ಬಂದು ಕಾಫಿ ತೋಟ, ಗದ್ದೆಗಳನ್ನು ಖರೀದಿಸಿ, ನಿಯಮ ಬಾಹಿರವಾಗಿ ಬೃಹತ್ ವಿಲ್ಲಾಗಳನ್ನು ನಿರ್ಮಿಸಿ, ಪರಿಸರ ನಾಶ ಮಾಡುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು.”

-ಪದ್ಮಿನಿ ಶೇಖರ್, ಪರಿಸರವಾದಿ

” ಕೆಲ ಅಧಿಕಾರಿಗಳು ಪರಿಸರ ನಾಶಕ್ಕೆ ಮೂಲ ಕಾರಣಕರ್ತರಾಗಿದ್ದಾರೆ. ಈ ಬಗ್ಗೆ ಆಗತ್ಯ ತನಿಖೆ ನಡೆಸಿದರೆ ಈ ಅಕ್ರಮಗಳ ಮೂಲ ಹೊರ ಬರುತ್ತದೆ. ನಾಂಗಾಲದಲ್ಲಿ ಈ ರೀತಿ ಬೆಟ್ಟವನ್ನು ಅಗೆದು ವಿಲ್ಲಾಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇತ್ತ ಬಾಳುಗೋಡುವಿನಲ್ಲಿ ೩೦ ಎಕರೆ ಕಾಫಿ ತೋಟ, ಗದ್ದೆಯ ಜಾಗದಲ್ಲಿ ಬೃಹತ್ ವಿಲ್ಲಾ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಂತಹ ಪ್ರಕೃತಿ ವಿರೋಧಿ, ನಿಯಮ ಬಾಹಿರ ಕೆಲಸಗಳ ವಿರುದ್ಧ ಪರಿಸರ, ನೆಲ, ಜಲ ಉಳಿಸಲು ಉಗ್ರ ಹೋರಾಟ ಅನಿವಾರ್ಯ”

-ರಘು ಮಾಚಯ್ಯ, ಕಾರ್ಯದರ್ಶಿ, ಕಾವೇರಿ ಸೇನೆ

” ತಮ್ಮ ಗ್ರಾಮದ ಅಳಿವು ಉಳಿವಿನ ಜೊತೆಗೆ ಬ್ರಹ್ಮಗಿರಿ ವನ್ಯಜೀವಿ ಅರಣ್ಯದ ಉಳಿವಿನ ಪ್ರಶ್ನೆ ಎದುರಾಗಿದೆ. ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ. ತನಿಖೆ ನಡೆಸಿ ನಿಯಮ ಉಲ್ಲಂಘನೆಯಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.”

-ಪುಚ್ಚಿಮಂಡ ಮಾಚಯ್ಯ, ಸ್ಥಳೀಯರು

” ನಿಯಮಬಾಹಿರವಾಗಿ ವನ್ಯಜೀವಿ ಅರಣ್ಯದ ಸಮೀಪವೇ ಬೃಹತ್ ವಿಲ್ಲಾ ನಿರ್ಮಾಣ ಕೆಲಸ ನಡೆಯುತ್ತಿದೆ. ಇಂತಹ ಕಾಮಗಾರಿಗಳಿಂದ ಪರಿಸರದ ಮೇಲೆ ನೇರ ಪರಿಣಾಮ ಬೀರಲಿದೆ. ಜಿಲ್ಲಾಧಿಕಾರಿಗಳು, ಕ್ಷೇತ್ರದ ಶಾಸಕರು, ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಎಲ್ಲರನ್ನೂ ಸಂಘಟಿಸಿ ಉಗ್ರ ಹೋರಾಟ ನಡೆಸಲಾಗುವುದು.”

– ಕರ್ನಲ್ ಮುತ್ತಣ್ಣ, ಅಧ್ಯಕ್ಷ,ಕೊಡಗು ವನ್ಯ ಜೀವಿಗಳ ಸಂಘ

 

 

ಆಂದೋಲನ ಡೆಸ್ಕ್

Recent Posts

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

3 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

3 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

3 hours ago

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ ೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ…

3 hours ago

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

11 hours ago