Andolana originals

ಗುಂಡ್ಲುಪೇಟೆ: ಟಿಪ್ಪರ್‌ಗಳಿಗೆ ಬೀಳಬೇಕಿದೆ ಬ್ರೇಕ್

ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟಿಪ್ಪರ್‌ಗಳ ಅಬ್ಬರದಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆಯಲು ಪ್ರಾರಂಭವಾಗಿದೆ. ೨-೩ ವರ್ಷಗಳ ಹಿಂದೆ ಕೇರಳ ನೋಂದಣಿ ಸಂಖ್ಯೆಯ ಟಿಪ್ಪರ್ ಗಳು ಇರಲಿಲ್ಲ. ಆದರೆ ಇತ್ತೀಚೆಗೆ ಯಾವ ಟಿಪ್ಪರ್ ನೋಡಿದರೂ ಬಹುತೇಕ ಕೇರಳ ನೋಂದಣಿ ಸಂಖ್ಯೆಯೇ ಇರುತ್ತದೆ. ಜೊತೆಗೆ ಬೃಹತ್ ಗಾತ್ರದ ಕಂಟೇನರ್ ಮಾದರಿಯ ಟಿಪ್ಪರ್‌ಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಿ ನೋಡಿದರೂ ಟಿಪ್ಪರ್‌ಗಳೇ ಕಾಣಿಸುತ್ತಿದ್ದು, ಅಪಘಾತಗಳ ಸಂಖ್ಯೆ ಉಲ್ಬಣಿಸಿದೆ ಎಂಬ ಆರೋಪ ಕೇಳಿಬಂದಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರು-ಕೇರಳ ರಸ್ತೆ ಹಾಗೂ ಜಿಲ್ಲಾ ಸಂಪರ್ಕ ರಸ್ತೆಯಲ್ಲಿ ಹಿರೀಕಾಟಿ, ಬೇಗೂರು, ಮಾದಾಪಟ್ಟಣ ಗೇಟ್, ರಾಘವಾಪುರ, ಗರಗನಹಳ್ಳಿ, ಬೆಂಡಗಳ್ಳಿ ಗೇಟ್, ವೀರನಪುರ ಗೇಟ್, ಕೇರಳ ರಸ್ತೆಯ ಮಲ್ಲಯ್ಯನಪುರ, ಕೂತನೂರು ಭೀಮನಬೀಡು, ಕಣ್ಣೇಗಾಲ ಗೇಟ್, ಬಸವಾಪುರ, ಕಲ್ಲಿಗೌಡನಹಳ್ಳಿ ಗೇಟ್, ಚಿಕತುಪ್ಪೂರು, ಕಗ್ಗಳ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ.

ಅರಣ್ಯ ಇಲಾಖೆ ಮೌನ: ಪ್ರತಿನಿತ್ಯ ನೂರಾರು ಟಿಪ್ಪರ್ ಅಧಿಕ ಬಾರದ ಕಲ್ಲುಗಳನ್ನು ತುಂಬಿ ಸಾಗಿಸುತ್ತಿದ್ದರೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಟಿಪ್ಪರ್‌ಗಳ ಓಡಾಟಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಆದೇಶ ಇರುವುದರಿಂದ ನಾವೇನು ಮಾಡಲು ಸಾಧ್ಯ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಾತ್ರಿ ಗಣಿಗಾರಿಕೆ, ಕ್ರಷರ್ ನಿಲ್ಲಿಸಿದರೆ ಟಿಪ್ಪರ್‌ಗಳಿಗೆ ಕಡಿವಾಣ:  ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಗಣಿಗಾರಿಕೆ ಕ್ರಷರ್‌ಗಳು ನಿಯಮಾನುಸಾರ ಪ್ರತಿದಿನ ಸಂಜೆ ೬ ಗಂಟೆಗೆ ಕಾರ್ಯ ಸ್ಥಗಿತಗೊಳಿಸಬೇಕು. ಆದರೆ ಕಾನೂನು ಗಾಳಿಗೆ ತೂರಿ ರಾತ್ರಿ ಪೂರ್ತಿ ಗಣಿಗಾರಿಕೆ, ಕ್ರಷರ್ ನಡೆಸಲಾಗುತ್ತಿದೆ. ಇದರಿಂದ ಟಿಪ್ಪರ್‌ಗಳು ಸಂಚಾರದ ಪ್ರಮಾಣ ಅಧಿಕವಾಗಿದೆ. ಹಗಲಿರುಳು ಎನ್ನದೇ ಟಿಪ್ಪರ್‌ಗಳು ಸಂಚರಿಸುತ್ತಿವೆ. ಇದರಿಂದ ಅಪಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ.

ಕೇರಳಕ್ಕೆ ನೂರಾರು ಟಿಪ್ಪರ್‌ನಲ್ಲಿ ಖನಿಜ ಸಂಪತ್ತು ಸಾಗಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ರಾಜ್ಯದ ಎರಡು ಚೆಕ್ ಪೋಸ್ಟ್‌ಗಳಲ್ಲಿಯೂ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಲಂಚಕ್ಕಾಗಿ ಚಾಲಕರನ್ನು ಪೀಡಿಸಲಾಗುತ್ತದೆ. ಒಂದು ವೇಳೆ ತಕರಾರಿಲ್ಲದೆ ಲಂಚ ಕೊಟ್ಟರೆ, ದಾಖಲೆ ಇಲ್ಲದ ಟಿಪ್ಪರ್‌ಗಳನ್ನೂ ಸಲೀಸಾಗಿ ಚೆಕ್‌ಪೋಸ್ಟ್ ದಾಟಿಸಲಾಗುತ್ತದೆ ಎಂದು ಕೇರಳ ಮೂಲದ ಟಿಪ್ಪರ್ ಚಾಲಕರೊಬ್ಬರು ಅಲವತ್ತುಕೊಳ್ಳುತ್ತಾರೆ.

ಟಿಪ್ಪರ್‌ಗಳಿಂದ ಅಪಘಾತ: ಗುಂಡ್ಲುಪೇಟೆ, ಬೇಗೂರು ಭಾಗದಲ್ಲಿ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ಟಿಪ್ಪರ್‌ಗಳಿಂದ ಸಂಭವಿಸಿವೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ನಿಯಮ ಮೀರಿದ ಗಣಿಗಾರಿಕೆ, ನಿಯಮ ಮೀರಿದ ಕ್ರಷರ್‌ಗಳೇ ಕಾರಣ. ಹಾಗಾಗಿ ಸಂಜೆ ೬ ಗಂಟೆಗೆ ಕ್ರಷರ್ ಕ್ವಾರಿ ಕೆಲಸವನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು

” ಟಿಪ್ಪರ್ ಅಪಘಾತದಿಂದ ಮೂವರು ಮೃತಪಟ್ಟಿರುವ ಪ್ರಕರಣ ಆಘಾತ ಉಂಟುಮಾಡಿದೆ. ಟಿಪ್ಪರ್ ಹಾವಳಿ ಬಗ್ಗೆ ಜನರಲ್ಲಿ ಆಕ್ರೋಶ ವ್ಯಕ್ತವಾಗಿರುವುದು ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಕ್ರಷರ್ ಹಾಗೂ ಗಣಿಗಾರಿಕೆ ಮಾಡುವುದು ಸರಿಯಲ್ಲ. ಕನಿಷ್ಠ ಪ್ರತಿದಿನ ಸಂಜೆ ೭ ಗಂಟೆಗೆ ಕಾರ್ಯ ಸ್ಥಗಿತವಾಗಬೇಕು. ಈ ಬಗ್ಗೆ ಆದೇಶಿಸುವ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ.”

ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ

” ತಾಲ್ಲೂಕಿನಲ್ಲಿ ಕೇರಳ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಯಾವ ರೀತಿ ಕಡಿವಾಣ ಹಾಕಬಹುದು ಎಂಬುದರ ಬಗ್ಗೆ ಜಂಟಿ ನಿರ್ದೇಶಕರ ಜೊತೆ ಮಾತನಾಡುತ್ತೇನೆ. ದಿನಕ್ಕೆ ೬೦೦-೭೦೦ ಪರ್ಮಿಟ್ ವಿತರಣೆ ಯಾಗುತ್ತಿದೆ. ಕೆಲವು ಟಿಪ್ಪರ್‌ಗಳು ಪರ್ಮಿಟ್ ಇಲ್ಲದೆ ಓಡಾಡುತ್ತಿರಬಹುದು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಸಂಜೆಯ ನಂತರ ಕ್ರಷರ್ ಹಾಗೂ ಟಿಪ್ಪರ್‌ಗಳ ಸಂಚಾರ ಸ್ಥಗಿತದ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ಮಾಡಬೇಕು.”

ರಾಜೇಶ್, ಉಪ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ 

” ಗುಂಡ್ಲುಪೇಟೆ ಮಾರ್ಗದಲ್ಲಿ ರಾಜ್ಯದ ಖನಿಜ ಸಂಪತ್ತನ್ನು ಸಾಗಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಇದು ಅಧಿಕಾರಿಗಳಿಗೂ ಅಕ್ರಮವಾಗಿ ಹಣ ಸಂಪಾದಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಕೇರಳಕ್ಕೆ ಖನಿಜ ಸಂಪತ್ತು ಸಾಗಣೆ ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು. ಇಲ್ಲದಿದ್ದರೆ ರೈತ ಸಂಘದ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ.”

ಹೊನ್ನೂರು ಪ್ರಕಾಶ್, ಮುಖಂಡ, ಸಾಮೂಹಿಕ ನಾಯಕತ್ವ ರೈತ ಸಂಘ

 

 

ಆಂದೋಲನ ಡೆಸ್ಕ್

Recent Posts

ಕಾಕ್ರೋಚ್‌ ಪ್ರತಿಭಟನೆ ; ವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್‌ ವ್ಯಾನ್‌ ತಡೆದ ಜೇನ್‌-ಝಿ ಕಿಡ್‌

ಮುಂಬೈ : ನೀಟ್‌ ಅಕ್ರಮ ವಿರೋಧಿಸಿ ದೇಶಾದ್ಯಂತ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯು ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.…

1 hour ago

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

14 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

14 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

14 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

14 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

14 hours ago