Andolana originals

ತಗ್ಗದ ಗ್ಯಾಸ್ ಟ್ರಬಲ್; ಕೈಸುಡುತ್ತಿದೆ ತಿಂಡಿ ಬಿಲ್!

ಚಿರಂಜೀವಿ ಸಿ ಹುಲ್ಲಹಳ್ಳಿ

ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಪರಿಣಾಮ ಜಿಲ್ಲೆಯಲ್ಲಿ ತಿಂಗಳು ಕಳೆದರೂ ಗ್ಯಾಸ್ ಟ್ರಬಲ್ ತಗ್ಗಿಲ್ಲ. ಅಡುಗೆ ಅನಿಲ ಏಜೆನ್ಸಿಗಳು ಸಮರ್ಪಕವಾಗಿ ಸಿಲಿಂಡರ್ ಪೂರೈಕೆ ಸರಿಯಾಗಿ ಮಾಡದಿರುವುದು, ಪರೋಕ್ಷವಾಗಿ ಹೋಟೆಲ್ ತಿಂಡಿ ತಿನಿಸುಗಳ ದರಗಳು ಗಗನಮುಖಿಯಾಗಲು ಕಾರಣವಾಗಿದೆ. ಇದರ ಬಿಸಿಗೆ ಗ್ರಾಹಕರು ಕಂಗಾಲಾಗಿದ್ದಾರೆ.

ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಂತಹ ವ್ಯತ್ಯಯವೇನೂ ಆಗಿಲ್ಲ. ಆದರೆ, ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಆಮದಿನಲ್ಲಿ ಅಡಚಣೆಯಾಗಿದೆ. ಇದರಿಂದ ಕೇಟರಿಂಗ್, ಫಾಸ್ಟ್ ಫುಡ್ ಸೇರಿದಂತೆ ಹೋಟೆಲ್ ಉದ್ಯಮಿಗಳ ಪರದಾಟ ಹೆಚ್ಚಾಗಿದೆ. ತೈಲ ಕಂಪೆನಿಗಳು ಶೇ.೩೦ರಷ್ಟು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಅಸ್ತು ಎಂದಿವೆ. ಆದರೆ, ಕೊಲ್ಲಿ ದೇಶಗಳಿಂದ ಭಾರತಕ್ಕೆ ಆಮದಾಗಬೇಕಿದ್ದ ಗ್ಯಾಸ್ ಸಿಲಿಂಡರ್‌ಗಳ ಅಭಾವ ನೀಗದೆ, ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ.

ಸರ್ಕಾರಿ ತೈಲ ಕಂಪೆನಿಗಳಾದ ಇಂಡೇನ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್), ಭಾರತ್ ಗ್ಯಾಸ್ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.) ಮತ್ತು ಎಚ್‌ಪಿ ಗ್ಯಾಸ್ (ಹಿಂದೂಸ್ತಾನ್ ಪೆಟ್ರೋಲಿಯಂ) ಸಂಸ್ಥೆಗಳು ಅಡುಗೆ ಅನಿಲ (ಎಲ್ ಪಿಜಿ) ಸಿಲಿಂಡರ್ ಪೂರೈಕೆ ಮಾಡುತ್ತಿವೆ. ಆದರೆ, ಅದು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿದೆ. ಎರಡು ವಾಣಿಜ್ಯ ಸಿಲಿಂಡರ್‌ಗಳನ್ನು

ಪಡೆಯುತ್ತಿದ್ದವರಿಗೆ ಕೇವಲ ಒಂದನ್ನು ಕೊಡುತ್ತಿದ್ದಾರೆ. ಅದರಲ್ಲಿಯೂ ಸರಿಯಾದ ಸಮಯಕ್ಕೆ ಕೊಡುವುದಿಲ್ಲ. ಖಾಸಗಿ ಏಜೆನ್ಸಿಗಳ ಮಾತಿರಲಿ, ಸರ್ಕಾರದ ಏಜೆನ್ಸಿಗಳೇ ಸುಲಿಗೆಗೆ ಮುಂದಾಗಿವೆ. ಸರ್ಕಾರ ನಿರ್ಧರಿಸಿರುವ ಬೆಲೆಯನ್ನು ಮಾತ್ರ ನಾಮಕಾವಸ್ತೆಗೆ ಹೇಳಿ ನಮ್ಮಿಂದ ೩,೬೦೦ ರೂ.ಗಳಷ್ಟು ಬೆಲೆ ಪಡೆಯುತ್ತಿದ್ದಾರೆ ಎಂದುಹೆಸರು ಹೇಳಲು ಇಚ್ಛಿಸದ ಪ್ರಸಿದ್ಧ ಹೋಟೆಲ್‌ನ ಮಾಲೀಕರೊಬ್ಬರು ದೂರಿದರು.

ಸರ್ಕಾರ ನೆಪಮಾತ್ರಕ್ಕೆ ಅಡುಗೆ ಅನಿಲ ಸಮಸ್ಯೆಯನ್ನು ಬಗೆಹರಿಸುತ್ತಿದೆ. ಆದರೆ, ಅವರು ಹೇಳಿದಷ್ಟು ಸಿಲಿಂಡರ್‌ಗಳನ್ನು ನಮಗೆ ಪೂರೈಕೆ ಮಾಡುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ನಮ್ಮಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.

ಕೆಲವು ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ದರವನ್ನು ಹೆಚ್ಚಳ ಮಾಡಲಾಗಿದ್ದರೂ ಸಿಲಿಂಡರ್‌ನ ವೆಚ್ಚಕ್ಕೆ ಹೊಂದಿಸಲು ಆಗುತ್ತಿಲ್ಲ. ಏಕೆಂದರೆ ದಿನ ಬಳಕೆಯ ವಸ್ತುಗಳ ದರ ಕೂಡ ಏರಿಕೆಯಾಗಿದೆ. ಈ ಬೆಲೆ ಹೆಚ್ಚಳವನ್ನು ಗ್ಯಾಸ್ ಸಿಲಿಂಡರ್ ಅಭಾವ ನಿವಾರಣೆಯಾದ ಬಳಿಕ ಸರಿ ಮಾಡಲಾಗುವುದು ಎಂದು ಅವರು ತಿಳಿಸಿದರು.

” ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ಕಾರಣ ನೀಡಿ ಹೋಟೆಲ್ಗಳು ತಿಂಡಿ ತಿನಿಸುಗಳ ದರ ಹೆಚ್ಚಿಸಿವೆ. ಆದರೆ, ಸಮಸ್ಯೆ ನಿವಾರಣೆಯಾದರೂ ಹೋಟೆಲ್‌ಗಳಲ್ಲಿ ಆಹಾರದ ಬೆಲೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮಹರಿಸಿ ಹೆಚ್ಚುತ್ತಿರುವ ಹೋಟೆಲ್ ತಿನಿಸುಗಳ ಬೆಲೆಗೆ ಕಡಿವಾಣ ಹಾಕಬೇಕು.”

-ವಿ.ಕಿರಣ್‌ಕುಮಾರ್, ಹೋಟೆಲ್ ಗ್ರಾಹಕ, ಮೈಸೂರು

” ಜಿಲ್ಲೆಯಲ್ಲಿ ಅಡುಗೆ ಅನಿಲ ಸಮಸ್ಯೆ ಬಗೆಹರಿದಿಲ್ಲ. ಇಂಡೇನ್ ಗ್ಯಾಸ್ ಸಿಲಿಂಡರ್ಗೆ ೧,೯೬೦ ರೂ. ದರವನ್ನು ಸರ್ಕಾರ ನಿಗದಿಪಡಿಸಿದ್ದರೆ, ನಮ್ಮಿಂದ ೩,೬೦೦ ರೂ. ವಸೂಲಿ ಮಾಡುತ್ತಿದ್ದಾರೆ. ಇದರಿಂದ ಹೋಟೆಲ್ ಉದ್ಯಮ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದೆ. ”

ಸಿ.ನಾರಾಯಣ ಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ

” ಜಿಲ್ಲೆಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಖಾಸಗಿ ಗ್ಯಾಸ್ ಏಜೆನ್ಸಿಸ್‌ಗಳವರು ಹೆಚ್ಚು ಹಣಪಡೆಯುತ್ತಿರಬಹುದು. ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಜಿಲ್ಲೆಗೆ ೨೫ ರಿಂದ ೩೦ ಸಾವಿರ ಸಿಲಿಂಡರ್‌ಗಳ ಅವಶ್ಯಕತೆ ಇದೆ. ಸಿಲಿಂಡರ್ ಅಭಾವದ ನಡುವೆಯೂ ಜಿಲ್ಲೆಯಲ್ಲಿ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗೆ ಯಾವುದೇ ತೊಂದರೆ ಇಲ್ಲ.”

ಮಂಟೇಸ್ವಾಮಿ, ಜಂಟಿ ನಿರ್ದೇಶಕರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು

ಬುಕ್ಕಿಂಗ್ ಸೇವೆ ಮತ್ತೆ ಸಕ್ರಿಯ: 

ಎಲ್‌ಪಿಜಿ ಎಚ್‌ಪಿ ಸಿಲಿಂಡರ್ ರೀಫಿಲ್ಲಿಂಗ್ (ಮರು ಪೂರಣ)ಗಾಗಿ ಎಸ್‌ಎಂಎಸ್ ಆಧಾರಿತ ಬುಕ್ಕಿಂಗ್ ಸೇವೆಯನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ. ಗ್ರಾಹಕರು ಬುಕ್ ಎಂದು ಟೈಪ್ ಮಾಡಿ ೮೮೮೮೮ ೨೩೪೫೬ (ಐವಿಆರ್‌ಎಸ್ ಸಂಖ್ಯೆ) ಸಂದೇಶ ಕಳುಹಿಸಿ ಅಥವಾ ಮೊ.ಸಂ. ೯೪೯೩೬ ೦೨೨೨೨ಕ್ಕೆ ಮಿಸ್ಡ್ ಕಾಲ್ ಮಾಡುವ ಮೂಲಕ ಎಸ್ ಎಎಂಎಸ್ ಆಧಾರಿತ ಬುಕ್ಕಿಂಗ್ ವಿನಂತಿ ಸಲ್ಲಿಸಬಹುದು. ಯಶಸ್ವಿಯಾಗಿ ಬುಕ್ಕಿಂಗ್ ಆದ ನಂತರ ಗ್ರಾಹಕರಿಗೆ ದೃಢೀಕರಣ ಸಂದೇಶ ರವಾನೆಯಾಗಲಿದೆ ಎಂದು ಭಾರತೀಯ ಎಲ್‌ಪಿಜಿ ವಿತರಕರ ಸಂಘದ (ಎಲ್‌ಡಿಎಐ) ರಾಜ್ಯಾಧ್ಯಕ್ಷ ಮೆಹುಲ್ ಜೆ.ಪಟೇಲ್ ತಿಳಿಸಿದ್ದಾರೆ.

 

 

ಆಂದೋಲನ ಡೆಸ್ಕ್

Recent Posts

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ ಅವರು ತಮ್ಮ ವಿದಾಯದ ಕೊನೇ ಕ್ಷಣದಲ್ಲೂ ಮಹತ್ವದ ಕ್ರಮ ಕೈಗೊಂಡಿದ್ದು,…

23 mins ago

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ…

3 hours ago

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆ : ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೆಟ್ಸ್‌

ಬೆಂಗಳೂರು : ಹೈಕಮಾಂಡ್‌ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ…

4 hours ago

ಯಾರೇ ಸಿಎಂ ಆದರೂ ಕರ್ನಾಟಕ ಅಭಿವೃದ್ಧಿಯಾಗಲ್ಲ: ವಿಜಯೇಂದ್ರ

ಕೊಪ್ಪಳ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ…

6 hours ago

ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್‌ ನಿರ್ಧಾರ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ…

7 hours ago

ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಸಿಎಂ ಡಿಕೆಶಿ ಮನವಿ

ಬೆಂಗಳೂರು: ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂತ್ರಿಗಳ ಜೊತೆ ಸಹಕಾರವನ್ನು ಕೇಳಿದ್ದಾರೆ. ಸಿಎಂ ಹುದ್ದೆಗೆ ಇಂದು ಸಿದ್ದರಾಮಯ್ಯ ರಾಜೀನಾಮೆ…

8 hours ago