Andolana originals

ನಾಲೆ ಮಣ್ಣು ಖಾಸಗಿಯವರಿಗೆ; ಕೋಟಿ ಕೋಟಿ ಕಾಸು ಅನ್ಯರ ಜೇಬಿಗೆ

ಶ್ರೀಧರ್ ಆರ್.ಭಟ್

ಗುತ್ತಿಗೆದಾರರು, ಅಧಿಕಾರಿಗಳ ಪಾಲಿಗೆ ಚಿನ್ನದ ಗಣಿಯಂತಾದ ಮಣ್ಣು; ಸರ್ಕಾರಕ್ಕೆ ಭಾರೀ ನಷ್ಟ

ನೂರಾರು ಕ್ಯೂಬಿಕ್ ಮೀಟರ್ ಮಣ್ಣು ಮಾರಾಟಕ್ಕೆ ಮಾತ್ರ ಲೆಕ್ಕ; ಲಕ್ಷಾಂತರ ಕ್ಯೂಬಿಕ್ ಮೀಟರ್ ಮಣ್ಣು ಸಾಗಾಟ

ಸರ್ಕಾರಿ ಕೆಲಸಕ್ಕೆ ಖಾಸಗಿಯವರಿಂದ ಮಣ್ಣು ಖರೀದಿ; ಖಾಸಗಿ ಕೆಲಸಕ್ಕೆ ಸರ್ಕಾರಿ ಮಣ್ಣನ್ನು ಉದಾರವಾಗಿ ನೀಡಿದ ಅಧಿಕಾರಿಗಳು

ಕಬಿನಿ ಬಲದಂಡೆ, ನುಗು ನಾಲೆಯ ೩ ಕೋಟಿ ರೂ. ಮೌಲ್ಯದ ಮಣ್ಣು ಮಂಗಮಾಯ

ನಂಜನಗೂಡು: ಕೋಟ್ಯಂತರ ರೂ. ಮೌಲ್ಯದ ನುಗು ಮತ್ತು ಕಬಿನಿ ಬಲದಂಡೆಯ ಮಣ್ಣು ನೋಡನೋಡುತ್ತಿದ್ದಂತೆಯೇ ಮಂಗಮಾಯವಾಗಿದೆ. ಬೆಟ್ಟದಂತೆ ಗುಡ್ಡೆಯಾಗಿದ್ದ ಮಣ್ಣನ್ನು ಕೆಲವೇ ದಿನಗಳಲ್ಲಿ ಕರಗಿಸಿದ್ದು, ಹಗಲು ದರೋಡೆ ನಡೆಯುತ್ತಿದೆ. ಇದರಿಂದಾಗಿ ಕೋಟಿ ಕೋಟಿ ರೂ.ಗಳ ನಷ್ಟವಾಗಿದ್ದು ಸರ್ಕಾರಕ್ಕೆ; ಲಾಭ ಮಾತ್ರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಂಬಂತಾಗಿದೆ.

ನಾಲೆಯ ಮಣ್ಣು ಕಾಯಬೇಕಿದ್ದ ನೀರಾವರಿ ನಿಗಮದ ಅಧಿಕಾರಿಗಳ ಕುತಂತ್ರದಿಂದಾಗಿ ಕಬಿನಿ ಬಲದಂಡೆ ಹಾಗೂ ನುಗು ನಾಲೆಯ ಲಕ್ಷಾಂತರ ಟನ್ ಮಣ್ಣು ನಂಜನಗೂಡು ನಗರದ ಅನೇಕ ಹೊಸ ಬಡಾವಣೆಗಳಿಗೆ ಬಳಕೆಯಾಗಿದೆ.

ಕಬಿನಿ ಬಲದಂಡೆ ಹಾಗೂ ಎಡದಂಡೆ ನಾಲಾ ಮಣ್ಣನ್ನು ಕ್ಯೂಬಿಕ್ ಮೀಟರ್ ಲೆಕ್ಕದಲ್ಲಿ ಕೃಷಿ ಜಮೀನಿಗೆ ಬಳಸಲು ಅನುಮತಿ ಕೊಡಬೇಕು ಎಂದು ಅರ್ಜಿ ನೀಡಲಾಗಿದೆ. ಆದರೆ ಆ ಮಣ್ಣನ್ನು ಹೊಸ ಬಡಾವಣೆಗಳನ್ನು ಸಮತಟ್ಟು ಮಾಡಲು ಉಪಯೋಗಿಸಲಾಗಿದೆ. ಒಂದು ಕ್ಯೂಬಿಕ್ ಮೀಟರ್ ಮಣ್ಣಿಗೆ ಶುಲ್ಕವಾಗಿ ನಿರಾವರಿ ಇಲಾಖೆಗೆ ೨೨೮ ರೂ., ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ೬೮ ರೂ. ನಿಗದಿಪಡಿಸಲಾಗಿದೆ. ಮಣ್ಣಿನ ಅಗತ್ಯ ಇರುವವರು ನಿಗದಿತ ಶುಲ್ಕ ನೀಡಿ ಮಣ್ಣು ಸಾಗಿಸಲು ಅನುಮತಿ ಪಡೆಯಬೇಕಾಗುತ್ತದೆ.

ಈ ಅನುಮತಿ ವ್ಯವಹಾರದಲ್ಲೇ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರ ಕರಾಮತ್ ಅಡಗಿದೆ. ಕೇವಲ ನೂರಾರು ಕ್ಯೂಬಿಕ್ ಮೀಟರ್ ಮಣ್ಣು ಸಾಗಿಸಲು ಅನುಮತಿ ಪಡೆದ ಗುತ್ತಿಗೆದಾರ ಅಧಿಕಾರಿಗಳ ಬೆಂಬಲದಿಂದ ಹತ್ತಾರು ಸಾವಿರ ಕ್ಯೂಬಿಕ್ ಮೀಟರ್ ಮಣ್ಣು ಸಾಗಾಣಿಕೆ ಮಾಡಿದ್ದರ ಫಲವಾಗಿ ಕಬಿನಿ ಬಲದಂಡೆ ಹಾಗೂ ನುಗು ನಾಲೆಗಳ ಮಣ್ಣಿನ ಗುಡ್ಡ ಈಗಾಗಲೇ ಕರಗತೊಡಗಿದೆ.

ಕಳೆದೆರಡು ತಿಂಗಳಲ್ಲಿ ಕಳಲೆ ಮತ್ತು ಹರತಲೆ ನಡುವಿನ ನಾಲೆಯ ದಡದಲ್ಲಿ ೨೦ರಿಂದ ೩೦ ಅಡಿ ಅಗಲಕ್ಕೆ, ೮ರಿಂದ ೧೫ ಅಡಿ ಎತ್ತರಕ್ಕೆ, ಮೂರೂವರೆ ಕಿಮೀ ಉದ್ದಕ್ಕೆ ಚಾಚಿಕೊಂಡಿದ್ದ ಮಣ್ಣಿನ ಗುಡ್ಡ ಈಗಾಗಲೆ ಖಾಸಗಿ ಬಡಾವಣೆಗಳು ಹಾಗೂ ತೆಂಗಿನ ತೋಟಗಳ ಭರ್ತಿಗೆ ಸಾಗಾಟವಾಗಿ ಹೋಗಿದೆ. ನೀರಾವರಿ ಇಲಾಖೆಯ ಅಧಿಕಾರಿಗಳ ಜಾಣಮೌನ ಸರ್ಕಾರಕ್ಕೆ ಕೋಟಿ ಕೋಟಿ ರೂ.ಗಳ ನಷ್ಟವಾಗಲು ಕಾರಣವಾಗಿದೆ. ೧ ಮೀಟರ್ ಅಗಲ, ೧ ಮೀಟರ್ ಉದ್ದ, ೧ ಮೀಟರ್ ಎತ್ತರ ಈ ಘನ ಮೀಟರ್ ಅಳತೆಯ ಮಣ್ಣಿಗೆ ಒಂದು ಕ್ಯೂಬಿಕ್ ಮೀಟರ್ ಎಂದು ಕರೆಯಲಾಗುತ್ತದೆ.

ಒಂದು ಘನ ಮೀಟರ್ ಮಣ್ಣಿಗೆ ಸರ್ಕಾರ ನಿಗದಿಪಡಿಸಿದ ಮೊತ್ತ ೨೯೬ ರೂ.ಗಳು ಇದರಂತೆ ಹರತಲೆ-ಕಳಲೆ ನಡುವೆ ಇದ್ದ ಮಣ್ಣಿನ ಪ್ರಮಾಣ ೩.೫ ಕಿಮೀ (೩,೫೦೦ ಮೀಟರ್), ಸರಾಸರಿ ೧೫ ಅಡಿ ಎತ್ತರ (೪.೫೭೨ ಮೀಟರ್), ೨೦ ಅಡಿ ಅಗಲ (೬.೦೯೬ ಮೀಟರ್) ಒಟ್ಟಾರೆ ಅಂದಾಜು ೧ ಲಕ್ಷ ಕ್ಯೂಬಿಕ್ ಮೀಟರ್ ಮಣ್ಣು ೧,೦೦,೦೦೦  ೨೯೬ ಅಂದರೆ ಈಗ ಸಾಗಿಸಿರುವ ಮಣ್ಣಿನಲ್ಲಿ ಸರ್ಕಾರಕ್ಕೆ ಪಾವತಿಯಾಗಬೇಕಿದ್ದ ರಾಜಧನ ಕನಿಷ್ಠ ೩ ಕೋಟಿ ರೂ. ಆದರೆ ಈವರೆಗೆ ನೀರಾವರಿ ಇಲಾಖೆಗೆ ಸಂದಾಯವಾಗಿರುವುದು ಲಕ್ಷಾಂತರ ರೂ.ಗಳು ಮಾತ್ರ. ನೀರಾವರಿ ಇಲಾಖೆಯ ದಾಖಲೆಗಳ ಪ್ರಕಾರ ಕಬಿನಿ ಬಲದಂಡೆಯ ಮೇಲಿನ ಮಣ್ಣಿಗೆ ಅನುಮತಿ ಪಡೆದಿದ್ದು ಸರಪಳಿ ೫೪, ೫೬, ೫೭, ೭೪, ೭೫,೭೫.೫ರ ಪ್ರದೇಶದ ೧,೩೯೦ ಕ್ಯೂಬಿಕ್ ಮೀಟರ್ ಮಣ್ಣು ಸಾಗಾಟಕ್ಕೆ ಮಾತ್ರ. ಅದೂ ಕೃಷಿ ಜಮೀನಿನ ಬಳಕೆಗೆ ಎಂದು. ಹಾಗಾದರೆ ಉಳಿದ ಕೋಟಿಗಟ್ಟಲೆ ಹಣ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ

” ನಾಲೆ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗಿದೆ ಎಂದಾದರೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.”

-ಶಿವಕುಮಾರ್, ತಹಸಿಲ್ದಾರ್

” ೧,೩೯೦ ಕ್ಯೂಬಿಕ್ ಮೀಟರ್ ಮಣ್ಣು ಮಾರಾಟಕ್ಕೆ ಮಾತ್ರ ಅಧಿಕೃತ ದಾಖಲೆ ಇದ್ದರೆ ಉಳಿದ ಲಕ್ಷ ಕ್ಯೂಬಿಕ್ ಮೀಟರ್ ಮಣ್ಣನ್ನು ಸಾಗಾಟ ಮಾಡಿದವರು ಯಾರು? ನಾಲಾ ಪಕ್ಕದ ಕೃಷಿ ಜಮೀನಿಗೆ ಭರ್ತಿ ಮಾಡುವ ಸಲುವಾಗಿ ಮಣ್ಣು ತುಂಬಿಕೊಳ್ಳಲು ಹೋದರೆ ಪೊಲೀಸರನ್ನು ಕರೆಸಿ ನಮಗೆ ಧಮ್ಕಿ ಹಾಕುತ್ತಾರೆ. ಆದರೆ ಟಿಪ್ಪರ್ ಲಾರಿಗಳ ಸಹಾಯದಿಂದ ಸಾವೀರಾರು ಲೋಡ್ ಮಣ್ಣು ದರೋಡೆ ಮಾಡಿದರೆ ಕೇಳುವವರ‍್ಯಾರೂ ಇಲ್ಲ.”

-ದೇವನಾಯಕ, ಕೃಷಿಕ, ಹರತಲೆ

” ಲಕ್ಷಾಂತರ ಕ್ಯೂಬಿಕ್ ಮೀಟರ್ ಮಣ್ಣು ಅನುಮತಿ ಇಲ್ಲದೆ ಸಾಗಾಣಿಕೆಯಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ೩ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಹಾಗಾಗಿ ಲೋಕಾಯುಕ್ತರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು.”

-ಹರತಲೆ ಕೆಂಪಣ್ಣ, ರೈತ ಹೋರಾಟಗಾರ

” ನಾಲೆಯ ಮಣ್ಣನ್ನು ಯಾವ ಜಮೀನು, ತೋಟ ಹಾಗೂ ಬಡಾವಣೆಗೆ ಸಾಗಿಸಲಾಗಿದೆ ಎಂದು ಪರಿಶೀಲಿಸಿದರೆ ಹಗಲು ದರೋಡೆ ಹಗರಣ ಬಯಲಾಗುತ್ತದೆ.”

 -ಬೊಕ್ಕಹಳ್ಳಿ ನಂಜುಂಡಸ್ವಾಮಿ, ರೈತ ಸಂಘ

” ಖಾಸಗಿ ವ್ಯಕ್ತಿಗಳು ನಾಲೆಯ ಮಣ್ಣು ಎತ್ತಲು ಪಕ್ಕದ ಜಮೀನಿನವರಿಂದಲೂಹಣವಸೂಲಿಮಾಡಿದ್ದಾರೆ. ಮಣ್ಣು ತುಂಬಿರುವ ನಾಲೆಯ ಜಾಗ ಸಮತಟ್ಟಾದರೆ ಪಕ್ಕದ ಜಮೀನಿನವರು ಒತ್ತುವರಿ ಮಾಡಲು ಅನುಕೂಲವಾಗುತ್ತದೆ. ಅವರಿಂದಲೂ ಹಣ ವಸೂಲಿ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಜಾಗ ಒತ್ತುವರಿಯಾಗುತ್ತದೆ.”

-ರಮೇಶ ಹರತಲೆ, ರೈತ

”  ಒಂದು ಲಾರಿ ಲೋಡ್‌ಗೆ ೯.೫ ಕ್ಯೂಬಿಕ್ ಮೀಟರ್ ಮಣ್ಣು ಬೇಕಾಗುತ್ತದೆ. ಅಂದರೆ ಇಲ್ಲಿ ೧೦ ಸಾವಿರ ಲೋಡ್‌ಗಳಿಗೂ ಹೆಚ್ಚು ಮಣ್ಣನ್ನು ಲಾರಿಗಳಲ್ಲಿ ಸಾಗಿಸಲಾಗಿದೆ.”

-ಕಳಲೆ ಮಹದೇವನಾಯಕ

ಆಂದೋಲನ ಡೆಸ್ಕ್

Recent Posts

ಶ್ವೇತಭವನದ ಸಮೀಪ ಗುಂಡಿನ ಚಕಮಕಿ : ಬಂದೂಕುಧಾರಿಯ ಹತ್ಯೆ

ವಾಷಿಂಗ್ಟನ್‌ : ಅಮೆರಿಕದ ಶ್ವೇತ ಭವನದ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ಸಂಜೆ ಭೀಕರ ಗುಂಡಿನ ದಾಳಿ ನಡೆದಿದ್ದು…

10 mins ago

ಮಹಾಪಂಚ್‌ ಕಾರ್ಟೂನ್‌ | ಮೇ.24 ಭಾನುವಾರ

ಮಹಾಪಂಚ್‌ ಕಾರ್ಟೂನ್‌ | ಮೇ.24 ಭಾನುವಾರ

1 hour ago

‘ಎಬೋಲಾ ಆತಂಕ ಬೇಡ’ ; ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದೇವೆ : ಆರೋಗ್ಯ ಸಚಿವ

ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ…

13 hours ago

ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಸಿಎಂ ಶಂಕುಸ್ಥಾಪನೆ

ಆನೇಕಲ್‌ ಇಂಡ್ಲವಾಡಿಯ ಸೂರ್ಯನಗರದಲ್ಲಿ ನಿರ್ಮಾಣ ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ,…

15 hours ago

ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ

ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…

16 hours ago

ಕಾಕ್ರೋಚ್‌ ಪಾರ್ಟಿಯ ಎಕ್ಸ್‌, ಇನ್‌ಸ್ಟಾ, ವೆಬ್‌ಸೈಟ್‌ಗೆ ತಡೆ ; ಅಭಿಜಿತ್‌ ದಿಪ್ಕೆ

ನವದೆಹಲಿ :  ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು  ಕಾಕ್ರೋಚ್​ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ.  ಈ…

17 hours ago