Andolana originals

ಏ.25ಕ್ಕೆ ಮೈಸೂರು ಬೃಹತ್‌ ನಗರಪಾಲಿಕೆ ರಚನೆ ನಿರ್ಧಾರ

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ಕೆ. ಬಿ. ರಮೇಶ್ ನಾಯಕ

ಮೈಸೂರು: ಹಲವು ದಿನಗಳಿಂದ ಎದುರು ನೋಡುತ್ತಿರುವ ಮೈಸೂರು ಮಹಾ ನಗರಪಾಲಿಕೆಯನ್ನು ಬೃಹತ್ ಮೈಸೂರು ಮಹಾ ನಗರಪಾಲಿಕೆ ಯನ್ನಾಗಿ ಮೇಲ್ದರ್ಜೆಗೇರಿಸುವ ವಿಷಯ ಏ. 25ರಂದು ನಿರ್ಧಾರವಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿರುವ ಮಹತ್ವದ ಸಭೆಯಲ್ಲಿ ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ರಚನೆ ಸಂಬಂಧ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿರುವುದರಿಂದ ಅಂದಿನ ಸಭೆ ಕುತೂಹಲ ಮೂಡಿಸಿದೆ. ಈ ಸಭೆಯಲ್ಲಿ ಗ್ರೇಟರ್ ಮೈಸೂರು ರಚನೆಗೆ ಒಲವು ತೋರಿದರೆ ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ಜಿಲ್ಲಾಡಳಿತ ಬೇಕಾದ ತಯಾರಿ ಮಾಡಿಕೊಂಡಿದೆ.

ಒಂದು ವೇಳೆ ಗ್ರೇಟರ್ ಮೈಸೂರು ಪ್ರಸ್ತಾಪವನ್ನು ಮುಂದೂಡಿ ಚುನಾವಣೆ ನಡೆಸುವ ತೀರ್ಮಾನ ತೆಗೆದುಕೊಂಡರೆ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಸಂತಸ ಮೂಡಲಿದೆ.

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ವರ್ಷದಿಂದ ವರ್ಷಕ್ಕೆ ನಗರದ ನಾಲ್ಕೂ ದಿಕ್ಕುಗಳಲ್ಲಿ ವಿಸ್ತಾರಗೊಂಡಿರುವುದರಿಂದ ಮುಂದಿನ 30-40 ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಗರಪಾಲಿಕೆಯನ್ನು ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆ ರಚನೆ ಮಾಡಬೇಕೆಂಬ ಕೂಗು ಎದ್ದಿತ್ತು. ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದಾಗ ಈ ಪ್ರಸ್ತಾಪ ಚರ್ಚೆಗೆ ಬಂದಿತ್ತಾದರೂ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಕಳುಹಿಸಿರಲಿಲ್ಲ.

2025ರ ನ.14ರಂದು ಸದಸ್ಯರ ಐದು ವರ್ಷಗಳ ಅಧಿಕಾರಾವಧಿ ಮುಗಿದಿದ್ದು, ನಂತರ ಪ್ರಾದೇಶಿಕ ಆಯುಕ್ತರನ್ನು ಆಡಳಿತಾಧಿಕಾರಿ ಯನ್ನಾಗಿ ನೇಮಿಸಲಾಗಿದೆ. ಅವಧಿ ಮುಗಿದ ಮೇಲೆ ಚುನಾವಣೆ ನಡೆಸಬೇಕಾಗಿತ್ತಾದರೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಅವರು ಮೈಸೂರು ನಗರದ ಸುತ್ತಮುತ್ತಲ ಪ್ರದೇಶಗಳನ್ನು ಸೇರಿಸಿಕೊಂಡು ಬೃಹತ್ ಪಾಲಿಕೆ ಮಾಡಬೇಕೆಂಬ ಮನವಿ ಸಲ್ಲಿಸುವ ಜತೆಗೆ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್. ಕೆ. ಅತೀಕ್ ಅವರು ಎರಡು ತಿಂಗಳ ಹಿಂದೆ ಅಧಿಕಾರಿಗಳ ಸಭೆ ನಡೆಸಿ ವರದಿ ಸಲ್ಲಿಸಲು ಆಗಮಿಸಬೇಕಿತ್ತಾದರೂ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಇದೀಗ ಕಾಲು ನೋವಿನಿಂದ ಗುಣಮುಖರಾಗಿ ಮೂರು ತಿಂಗಳ ಬಳಿಕ ತವರು ಜಿಲ್ಲೆಗೆ ಆಗಮಿಸುತ್ತಿರುವ ಸಿದ್ದರಾಮಯ್ಯ ಅವರು 25ಕ್ಕೆ ಮಹತ್ವದ ಸಭೆ ನಡೆಸುವುದು ನಿಶ್ಚಿತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ, ಪೌರಾಡಳಿತ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

ನಗರದ ಹೊರವಲಯದ ಹೂಟಗಳ್ಳಿ ನಗರಸಭೆ, ಕಡಕೊಳ, ಶ್ರೀರಾಂಪುರ, ಬೋಗಾದಿ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಆಡಳಿತಾಧಿಕಾರಿಗಳು ಆಡಳಿತ ನಿರ್ವಹಿಸುತ್ತಿದ್ದು, ಬೃಹತ್ ಮಹಾನಗರ ಪಾಲಿಕೆಯೊಂದಿಗೆ ಇವುಗಳ ಸೇರ್ಪಡೆಗೆ ಈಗಾಗಲೇ ಸಮ್ಮತಿ ಸಿಕ್ಕಿದೆ. ಅದೇ ರೀತಿ ಚಾಮುಂಡಿಬೆಟ್ಟ, ಇಲವಾಲ, ಸಿದ್ದಲಿಂಗಪುರದಲ್ಲೂ ಆಕ್ಷೇಪಣೆ ಇಲ್ಲವೆಂದು ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಪತ್ರ ನೀಡಲಾಗಿದೆ. ಇದರಿಂದಾಗಿ ಬೃಹತ್ ಮಹಾನಗರ ಪಾಲಿಕೆ ರಚನೆಗೆ ಸಂಬಂಧಪಟ್ಟಂತೆ ಯಾವುದೇ ಆಕ್ಷೇಪಣೆಗಳು ಇಲ್ಲದಿರುವ ಬಗ್ಗೆ ಸಿಎಂಗೆ ಮಾಹಿತಿ ಒದಗಿಸಲಾಗುತ್ತದೆ ಎಂದು ಗೊತ್ತಾಗಿದೆ.

ಡಿಸಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ: ಸಿಎಂ ಸಭೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮುಡಾ ಆಯುಕ್ತ ಎ. ಎನ್. ರಘನಂದನ್, ಉಪ ವಿಭಾಗಾಧಿಕಾರಿ ಕೆ. ಆರ್. ರಕ್ಷಿತ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿ. ಪ್ರಿಯದರ್ಶಿನಿ, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್, ಮುಖ್ಯಾಧಿಕಾರಿಗಳಾದ ಎಚ್. ಎಂ. ಸುರೇಶ್, ಎಚ್. ಆರ್. ದೀಪಾ, ಬಸವರಾಜು, ನಗರಪಾಲಿಕೆ ಉಪ ಆಯುಕ್ತ ಜಿ. ಎಸ್. ಸೋಮಶೇಖರ್, ಅಧಿಕ್ಷಕ ಅಭಿಯಂತರರಾದ ಕೆ. ಜೆ. ಸಿಂಧು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸೀಫ್ ಇಕ್ಬಾಲ್ ಖಲೀಲ್, ಮುಡಾ ನಗರ ಯೋಜಕ ಸದಸ್ಯ ಶಿವರಾಮಯ್ಯ ಮತ್ತಿತರರು ಹಾಜರಿದ್ದು ಸಿಎಂ ಸಭೆಯಲ್ಲಿ ಚರ್ಚಿಸುವ ವಿಷಯಗಳ ಪ್ರಾತ್ಯಕ್ಷಿಕೆ ನೀಡಿದರು. ‌

ಬೃಹತ್ ಮಹಾನಗರ ಪಾಲಿಕೆ ರಚನೆ ಮಾಡಲು ಒಪ್ಪಿಗೆ ಸಿಕ್ಕಿದರೆ ಕನಿಷ್ಠ 2-3 ವರ್ಷಗಳ ಕಾಲ ಚುನಾವಣೆ ನಡೆಯುವುದು ಅನುಮಾನ. ಪಪಂಗಳು ಮತ್ತು ನಗರಸಭೆಯನ್ನು ಪಾಲಿಕೆಯೊಂದಿಗೆ ವಿಲೀನ ಮಾಡಿದರೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಎಂಎಎಸ್ ಮಟ್ಟದ ಅಧಿಕಾರಿಗಳು ಬದಲಿ ಜಾಗ ನೋಡಿಕೊಳ್ಳಬೇಕಿದೆ. ಒಂದು ವೇಳೆ ಚುನಾವಣೆ ನಡೆದರೆ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ತಯಾರಿ ಮಾಡಿಕೊಳ್ಳುವುದು ಗ್ಯಾರಂಟಿಯಾಗಿದೆ.

 

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಶಿಕ್ಷಣವೇ ದೇಶ ಕಟ್ಟುವ ಹಾದಿ ಎಂದು ತಿಳಿದಿದ್ದ ದೇಶಪಾಂಡೆಯವರು

ಡಾ.ಎಂ.ಡಿ.ಉಮೇಶ್‌, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಬಾಲ ಕೃಷ್ಣ ಮತ್ತು ರಾಧಾಬಾಯಿ…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಇಂಗ್ಲೆಂಡಿನಲ್ಲಿ ಶಾಕಾಹಾರದ ದಿನಗಳು

ಡಾಕ್ಟರ್ ಮೆಹತಾ ಮತ್ತು ನಾನು ಅವರ ಮಿತ್ರನ ಮನೆಗೆ ಹೋದೆವು. ಅವರು ನನ್ನ ವಿಷಯದಲ್ಲಿ ತುಂಬಾ ಕರುಣೆ ಮತ್ತು ಆದರವುಳ್ಳವರಾಗಿದ್ದರು.…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 18 ಶನಿವಾರ

2 hours ago

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

15 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

17 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

20 hours ago