Andolana originals

ಬಂಡೀಪಾಳ್ಯದಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಶೀಘ್ರ ಆರಂಭ

ಕೆ.ಬಿ.ರಮೇಶನಾಯಕ

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೈತರಿಗೆ ಅನುಕೂಲ

ರೈತರು ರೇಷ್ಮೆ ಬೆಳೆಯತ್ತ ಮುಖ ಮಾಡಿರುವ ಪರಿಣಾಮ ಉತ್ಪಾದನೆಯಲ್ಲಿ ಹೆಚ್ಚಳ

ಮೈಸೂರು: ರೇಷ್ಮೆ ಸೀರೆ ಖರೀದಿಯಲ್ಲಿ ಹೆಚ್ಚಳ, ರೇಷ್ಮೆ ಬೆಳೆಯತ್ತ ರೈತರು ಮುಖ ಮಾಡುತ್ತಿರುವ ಕಾರಣಕ್ಕಾಗಿ ರೇಷ್ಮೆಗೂಡು ಉತ್ಪಾದನೆಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬಂಡೀ ಪಾಳ್ಯದ ಎಪಿಎಂಸಿ ಆವರಣದಲ್ಲಿ ಅತ್ಯಾಧುನಿಕ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಶೀಘ್ರ ಚಾಲನೆ ದೊರೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ರೇಷ್ಮೆ ಸಚಿವರ ದಿನಾಂಕ ನಿಗದಿಯಾದ ದಿನದಂದು ಮಾರುಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಈ ಮೂಲಕ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೇಷ್ಮೆಗೂಡು ಬೆಳೆಯುವ ರೈತರಿಗೆ ಅನುಕೂಲವಾಗುವ ದಿನಗಳು ಸಮೀ ಪಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿರುವ ಬಂಡೀಪಾಳ್ಯದ ಎಪಿಎಂಸಿ ಯಲ್ಲಿ ೨೦೧೯ರಲ್ಲಿ ರೇಷ್ಮೆಗೂಡು ಮಾರುಕಟ್ಟೆ ಆರಂಭಿಸ ಲಾಗಿತ್ತು. ಆದರೆ, ಮಾರುಕಟ್ಟೆಗೆ ಸ್ವಂತ ಕಟ್ಟಡ ಇಲ್ಲದಿದ್ದರಿಂದ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇದೀಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಹೊಸಹುಂಡಿ ಗ್ರಾಮದ ಸ.ನಂ.೪೪ರಲ್ಲಿ ೨.೧೮ ಎಕರೆ ಜಮೀನು ಮಂಜೂರು ಮಾಡಿದ್ದು, ಈಗಾಗಲೇ ರೇಷ್ಮೆ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ರೇಷ್ಮೆ ಇಲಾಖೆ ಆಯುಕ್ತರು ಜಾಗ ಪರಿಶೀಲಿಸಿ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಮೇ ತಿಂಗಳ ಅಂತ್ಯ ಅಥವಾ ಜೂನ್ ಮೊದಲ ವಾರ ಶಂಕುಸ್ಥಾಪನೆ ನೆರವೇರಿಸಲು ಸಮಯ ನಿಗದಿ ಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

೨೦ ಕೋಟಿ ರೂ.ಅನುದಾನ: ನೂತನ ಮಾರುಕಟ್ಟೆ ನಿರ್ಮಾಣಕ್ಕಾಗಿ ರೇಷ್ಮೆ ಇಲಾಖೆಯಿಂದ ೨೦ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯವರೇ ಆಗಿರುವ ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ಮಾರುಕಟ್ಟೆ ನಿರ್ಮಾಣಕ್ಕೆ ಇದ್ದ ಜಾಗದ ಕೊರತೆಯನ್ನು ನೀಗಿಸಿ ಮಂಜೂರು ಮಾಡಿಸಿದ್ದಲ್ಲದೆ, ಅನುದಾನ ಕೊಡಿಸಿದ್ದಾರೆ. ಈಗಾಗಲೇ ಕೇಂದ್ರ ಕಚೇರಿಯಿಂದ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ನಿರ್ವಹಣೆಯ ಹೊಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಹಳೆಯ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ೨೫ ಸ್ಲಾಟ್‌ಗಳಿದ್ದು, ಒಂದೊಂದು ಸ್ಲಾಟ್‌ನಲ್ಲಿ ೧೦೦ ಕೆಜಿಯಂತೆ ೨೫೦೦ ಕೆಜಿ ರೇಷ್ಮೆಗೂಡು ಇಡಬಹುದು. ಆದರೆ, ಈಗ ಹೊಸ ಮಾರುಕಟ್ಟೆಯಲ್ಲಿ ೧೫೦ ಸ್ಲಾಟ್‌ಗಳನ್ನು ತೆರೆಯಲಿದ್ದು, ದಿನಕ್ಕೆ ೧೫ ಸಾವಿರ ಕೆಜಿ ಗೂಡುಗಳನ್ನು ದಾಸ್ತಾನು ಮಾಡಬಹುದಾಗಿದೆ. ಹರಾಜು ಕೇಂದ್ರ, ಸ್ಲಾಟ್‌ಗಳ ಕೇಂದ್ರ, ಕ್ಯಾಂಟೀನ್, ವಿಶ್ರಾಂತಿಗೃಹ, ರೈತರ ಕಾಯ್ದಿರಿಸುವಿಕೆ ಕೊಠಡಿ, ಭದ್ರತಾ ಕೊಠಡಿ, ಅಧಿಕಾರಿಗಳ ಕೊಠಡಿ, ಪಾರ್ಕಿಂಗ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಹೊಂದಿರಲಿದೆ. ಮೈಸೂರು ಜಿಲ್ಲೆಯ ರೈತರಲ್ಲದೆ ಶ್ರೀರಂಗಪಟ್ಟಣ, ಮಳವಳ್ಳಿ, ಪಾಂಡವಪುರ, ನಾಗಮಂಗಲ ತಾಲ್ಲೂಕುಗಳು, ಚಾಮರಾಜನಗರ ಜಿಲ್ಲೆಯ ಭಾಗದಿಂದ ರೈತರು ಹರಾಜಿಗೆ ಗೂಡು ತರುತ್ತಿದ್ದು,ಮುಂದೆ ಚನ್ನಪಟ್ಟಣ,ರಾಮನಗರಕ್ಕೆ ಹೋಗುವುದು ಸಂಪೂರ್ಣ ನಿಲ್ಲುವ ನಿರೀಕ್ಷೆ ಹೊಂದಲಾಗಿದೆ.

ವರ್ಷದಿಂದ ವರ್ಷಕ್ಕೆ ರೇಷ್ಮೆ ಬೆಳೆ ಹೆಚ್ಚಳ: ಒಂದು ಕಾಲದಲ್ಲಿ ಬಂಪರ್ ಬೆಳೆಯಾಗಿದ್ದ ರೇಷ್ಮೆ ಬೆಳೆಗೆ ಬೇಡಿಕೆ ಕಡಿಮೆಯಾಗಿದ್ದರಿಂದ ರೈತರು ವಿಮುಖರಾಗಿದ್ದರು. ಅದರಲ್ಲೂ ರೇಷ್ಮೆಗೂಡಿನ ದರ ಕಡಿಮೆಯಾಗಿದ್ದರಿಂದ ಹಾಗೂ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿ ರೇಷ್ಮೆ ಬೆಳೆಯುವುದನ್ನು ನಿಲ್ಲಿಸಿ ದ್ದರು. ಆದರೆ, ಬದಲಾದ ಕಾಲಕ್ಕೆ ತಕ್ಮಂತೆ ರೇಷ್ಮೆಗೂಡಿಗೆ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಮತ್ತೆ ರೇಷ್ಮೆಯತ್ತ ಮುಖ ಮಾಡುತ್ತಿದ್ದಾರೆ. ೨೦೨೦ರಲ್ಲಿ ಜಿಲ್ಲೆಯಲ್ಲಿ ೩೫೦೦ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿತ್ತು. ಆದರೆ, ಈಗ ಅದು ೬ ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ೫೮೦೦ ರೈತರು ರೇಷ್ಮೆಗೂಡು ಬೆಳೆಯುತ್ತಿದ್ದಾರೆ. ತಂಬಾಕು, ಹತ್ತಿ ಬೆಳೆಯುವ ರೈತರು ಇತ್ತೀಚೆಗೆ ಪರ್ಯಾಯವಾಗಿ ರೇಷ್ಮೆ ಗೂಡನ್ನುಬೆಳೆಯುವುದು ಹೆಚ್ಚಾಗಿದ್ದು, ಹುಣಸೂರು, ಎಚ್. ಡಿ.ಕೋಟೆ ತಾಲ್ಲೂಕುಗಳಲ್ಲಿ ರೇಷ್ಮೆ ಬೆಳೆಯುವ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯ ಏಳು ತಾಲ್ಲೂಕುಗಳ ೬೦೦ ಗ್ರಾಮಗಳಲ್ಲಿ ೫,೦೦೦ ಹೆಕ್ಟೇರ್ ಜಮೀನಿನಲ್ಲಿ ೩,೩೦೦ ರೈತರು ಹಿಪ್ಪುನೇರಳೆ ಬೆಳೆಯುತ್ತಿದ್ದಾರೆ.

ರಿಂಗ್ ರಸ್ತೆ ಬಳಿಯ ಬಂಡೀ ಪಾಳ್ಯದ ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ಆರಂಭಿ ಸುತ್ತಿರುವುದರಿಂದ ಚಾಮರಾಜನಗರ, ಮೈಸೂರು ಸುತ್ತ ಮುತ್ತ, ತಿ.ನರಸೀಪುರ, ಕೆ.ಆರ್.ನಗರ, ಪಿರಿಯಾ ಪಟ್ಟಣದ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಈ ರೈತರು ರೇಷ್ಮೆ ಮಾರಾಟಕ್ಕಾಗಿ ಕೊಳ್ಳೇಗಾಲ ಇಲ್ಲವೇ ರಾಮನಗರ ಮಾರುಕಟ್ಟೆಗೆ ರೇಷ್ಮೆಗೂಡು ಕೊಂಡೊಯ್ಯುವುದು ತಪ್ಪಲಿದೆ.

ರೇಷ್ಮೆ ಸೀರೆಗಳಿಗೂ ಭಾರೀ ಬೇಡಿಕೆ: ಇತ್ತೀಚಿನ ವರ್ಷಗಳಲ್ಲಿ ಮೈಸೂರು ರೇಷ್ಮೆ ಸೀರೆಗೆ ಭಾರೀ ಬೇಡಿಕೆ ಉಂಟಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ರೇಷ್ಮೆ ಸೀರೆ ಒದಗಿಸುವುದು ಕಷ್ಟಕರವಾಗಿದೆ. ತಿ.ನರಸೀಪುರದಲ್ಲಿರುವ ರೇಷ್ಮೆ ನೂಲು ಘಟಕದ ಸಾಮರ್ಥ್ಯ ಹೆಚ್ಚಳವಾದರೆ, ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆಯಲ್ಲಿ ಉತ್ಪಾದನೆ ಹೆಚ್ಚಳವಾಗಲಿದೆ. ಹೀಗಾಗಿ, ತಿ.ನರಸೀಪುರದ ನೂಲು ಘಟಕವನ್ನು ಮೇಲ್ದರ್ಜೇಗೇರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

” ಮೈಸೂರಿನಲ್ಲಿ ನೂತನ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ೨.೧೮ ಎಕರೆ ಜಾಗ ಮಂಜೂರಾಗಿದ್ದು, ೨೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ರೇಷ್ಮೆ ಸಚಿವರ ಒತ್ತಾಸೆಯಿಂದಾಗಿ ಭೂಮಿ ಕಾಯ್ದಿರಿಸಲಾಗಿದೆ. ಸಚಿವರು ಸಮಯ ಕೊಟ್ಟ ದಿನದಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ.”

-ನಾಗೇಂದ್ರಪ್ಪ, ಉಪ ನಿರ್ದೇಶಕರು, ರೇಷ್ಮೆ ಇಲಾಖೆ

ಆಂದೋಲನ ಡೆಸ್ಕ್

Recent Posts

ಅಪ್ಪಟ ಸಮಾಜವಾದಿ, ಗುಡಿಸಲೂ ಇರದಿದ್ದ ಜೋಗಿ ಕಿಶನ್ ಪಟ್ನಾಯಕ್

ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…

3 hours ago

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…

3 hours ago

ಜೇನು ಕೃಷಿಗೆ ಸರ್ಕಾರದ ಬಲ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು…

4 hours ago

ಜು.20ಕ್ಕೆ ವಿಧಾನಪರಿಷತ್ ಐದು ಸ್ಥಾನ ತೆರವು

ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯದಲ್ಲಿ ಜುಲೈ ೨೦ಕ್ಕೆ ತೆರವಾಗಲಿರುವ ವಿಧಾನಪರಿಷತ್‌ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ.…

4 hours ago

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

13 hours ago