Andolana originals

ಶ್ರೀಕಂಠನ ಸನ್ನಿಧಿಯಲ್ಲಿ ವ್ಯಾಪಾರೀಕರಣವಾದ ಶಿವರಾತ್ರಿ ಜಾಗರಣೆ

ಎಸ್.ಎಸ್.ಭಟ್

ಈ ಬಾರಿ ೫೦ ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ಸಿದ್ಧವಾಗಿರುವುದಕ್ಕೆ ಭಕ್ತರ ಆಕ್ರೋಶ

ನಂಜನಗೂಡು: ಶಿವರಾತ್ರಿಯ ಮುನ್ನಾ ದಿನ ದೇವಾಲಯಕ್ಕೆ ಆಗಮಿಸಿ ಇರುಳೆಲ್ಲ ಜಾಗರಣೆ ಮಾಡಿ ಬೆಳಗಿನ ಜಾವ ಕಪಿಲೆಯಲ್ಲಿ ಮಿಂದೆದ್ದು ದೇವಾಲಯಕ್ಕೆ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದು ವಾಪಸ್ ತೆರಳುವ ಸಂಪ್ರದಾಯ ನಂಜುಂಡೇಶ್ವರನ ಸನ್ನಿಧಿಯಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬಂದಿದೆ.

ಶಿವರಾತ್ರಿಯ ಮುನ್ನಾ ದಿನ ಸೇವೆಯ ರೂಪದಲ್ಲಿ ಪೌರಾಣಿಕ ನಾಟಕ, ಜಾನಪದ ಹಾಡುಗಳು ಹಾಗೂ ಹರಿಕಥೆಗಳು ಇಲ್ಲಿ ನಡೆಯುತ್ತಲೇ ಇರುತ್ತಿದ್ದವು. ಆದರೆ, ದಿನಕಳೆದಂತೆ ಮತ್ತು ಆಡಳಿತಗಾರರ ಬದಲಾವಣೆಯೊಂದಿಗೆ ಸೇವಾರೂಪದ ಈ ಕಾರ್ಯಕ್ರಮಗಳಿಗೆ ತಿಲಾಂಜಲಿ ನೀಡಿದ ಪರಿಣಾಮ ಶಿವರಾತ್ರಿಯ ಜಾಗರಣೆ ವ್ಯಾಪಾರೀಕರಣವಾಗಿ ಶ್ರೀಕಂಠೇಶ್ವರನ ಬೊಕ್ಕಸಕ್ಕೆ ಲಕ್ಷಾಂತರ ರೂ. ಕನ್ನ ಹಾಕತೊಡಗಿದೆ.

ಶಿವರಾತ್ರಿ ಜಾಗರಣೆಯಂದು ಮಾಂಬಳ್ಳಿ ಪಾಪೇಗೌಡರು ಹಾಗೂ ಮಳವಳ್ಳಿ ಮಹದೇವಸ್ವಾಮಿಯಂತಹ ಭಕ್ತರು ತಮ್ಮದೇ ತಂಡದ ಕಲಾವಿದರು ಹಾಗೂ ಹಾಡುಗಾರರೊಂದಿಗೆ ನಂಜನಗೂಡಿಗೆ ಆಗಮಿಸಿ ರಾತ್ರಿ-ಬೆಳಗಿನವರೆಗೂ ಕಾರ್ಯಕ್ರಮ ರೂಪಿಸಿ ದೇವಾಲಯದಿಂದ ಬಿಡಿಗಾಸನ್ನೂ ಪಡೆಯದೆ ಭಕ್ತರ ಜಾಗರಣೆಗೆ ಭಕ್ತಿಯ ಲೇಪವನ್ನಿಟ್ಟು ಅವರನ್ನು ಪ್ರೋತ್ಸಾಹಿಸುತ್ತಿದ್ದರು.

ಸದಾಶಿವ ದೀಕ್ಷಿತರು, ಸತ್ಯನಾರಾಯಣ ದೀಕ್ಷಿತರು, ಎನ್. ಎ. ಸದಾಶಿವ (ವಳಗುಡಿ ಶಿವಣ್ಣ ), ಆಗಮಿಕ ನಾಗಚಂದ್ರ ದೀಕ್ಷಿತರು, ಮತ್ತಿತರರು ತಮ್ಮ ಸಂಪರ್ಕಗಳನ್ನು ಬಳಸಿ ಸೇವಾರೂಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದುದು ಈಗ ಇತಿಹಾಸ. ಒಬ್ಬರು ದೇವಾಲಯದ ದೀಪಾಲಂಕಾರ ತಮ್ಮ ಸೇವೆ ಎಂದರೆ, ಮತ್ತೊಬ್ಬರು ಹೂವಿನ ಸೇವೆ ತಮ್ಮದು ಎಂದು ಸ್ಪರ್ಧೆಯೋಪಾದಿಯಲ್ಲಿ ದೇವಾಲಯವನ್ನು ಶೃಂಗರಿಸುತ್ತಿದ್ದನ್ನು ಆಗ ಕಾಣಬಹುದಿತ್ತು. ಇಂಥವರಿಂದಾಗಿ ಶಿವರಾತ್ರಿ ಜಾಗರಣೆ ದೇವಾಲಯಕ್ಕೆ ಖರ್ಚಿಲ್ಲದೆ ಮುಕ್ತಾಯವಾಗುತ್ತಿತ್ತು.

೨೦೨೦ರಲ್ಲಿ ಸೇವಾ ಕಾರ್ಯಕ್ರಮಗಳ ಬದಲಾಗಿ ವ್ಯಾಪಾರೀಕರಣದ ಕಾರ್ಯಕ್ರಮಗಳು ಆರಂಭವಾದವು. ತಮಗೆ ಬೇಕಾದ ತಂಡಗಳನ್ನು ಕರೆಸಿ ಜಾಗರಣೆಯ ಕಾರ್ಯಕ್ರಮ ಮಾಡಿಸಿ ಅದಕ್ಕೆ ಆಧುನಿಕತೆಯ ಲೇಪ ಬಳಿದ ಪರಿಣಾಮ ದೇವಾ ಲಯಕ್ಕೆ ಖರ್ಚು, ಆಯೋಜನೆ ಮಾಡಿದವರಿಗೆ, ಸಹಕರಿಸಿದವರಿಗೆ ಹಣ ಎಂಬಂತಾಯಿತು ಶಿವರಾತ್ರಿ ಜಾಗರಣಾ ಸೇವೆಯ ಸ್ಥಿತಿ. ೨೦೨೦ರಲ್ಲಿ ೮ ಲಕ್ಷ ರೂ. ಖರ್ಚಿನೊಂದಿಗೆ ಆರಂಭವಾದ ಜಾಗರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ೨೦೨೫ರ ಹೊತ್ತಿಗೆ ೪೬ ಲಕ್ಷ ರೂ. ದಾಟಿದ್ದು, ಈ ಬಾರಿ ೫೦ ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ಸಿದ್ಧವಾಗಿ ಜಿಲ್ಲಾಧಿಕಾರಿಗಳ ಅಂಗೀಕಾರಕ್ಕಾಗಿ ಕಾದಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

” ಶಿವರಾತ್ರಿ ಜಾಗರಣೆಗೆ ಆಧುನಿಕ ಸಿನಿಮಾದ ಹಾಡಿನ ರಂಗು ಹಾಸ್ಯಬೇಕಿಲ್ಲ. ಭಕ್ತಿರೂಪಕವಾದ ನಾಟಕ ಹಾಡುಗಳೇ ಸಾಕು. ಅದಕ್ಕೆ ಈಗಲೂ ಸೇವಾ ಕಾರ್ಯಕರ್ತರು ಸಿದ್ಧರಿದ್ದಾರೆ. ದೇವಾಲಯದಿಂದ ೫೦ ಲಕ್ಷ ರೂ. ಖರ್ಚು ಮಾಡುವುದು ಎಂದರೆ ಹೇಗೆ? ಆ ದುರ್ಬಳಕೆ ನಿಲ್ಲಿಸಿ. ಸೇವಾದಾರರುಗಳಿಗೆ ಅವಕಾಶ ನೀಡಿ.”

-ಧನಂಜಯ, ಬೆಂಗಳೂರು

” ಸ್ವಂತ ಹಣ ಖರ್ಚು ಮಾಡಿಕೊಂಡು ಶ್ರೀಕಂಠನ ಸನ್ನಿಧಿಯಲ್ಲಿ ಬರೋಬ್ಬರಿ ೨೮ ವರ್ಷಗಳ ಕಾಲ ನಾಟಕದ ಮೂಲಕ ಲಕ್ಷಾಂತರ ಜನರಿಗೆ ಜಾಗರಣೆ ಮಾಡಿಸಿದ ತೃಪ್ತಿಯಿದೆ. ಬದಲಾದ ಸನ್ನಿವೇಶದಲ್ಲಿ ನಾನು ೨೦೨೦ರಲ್ಲಿ ಆ ಸೇವೆಯಿಂದ ವಿಮುಖನಾಗಬೇಕಾಯಿತು.”

-ಪಾಪೇಗೌಡ, ಸೇವಾಕರ್ತ, ಮಾಂಬಳ್ಳಿ

” ದೇವಾಲಯದ ಆವರಣದಲ್ಲಿ ಜಾಗರಣೆಯ ಸೇವೆ ಮಾಡಿಸಿಕೊಳ್ಳಲು ಅಧಿಕಾರಿಗಳು, ಆಡಳಿತಗಾರರು ಸಿದ್ಧರಿದ್ದರೆ ಸೇವಾದಾರರಿಗೇನೂ ಕೊರತೆಯಲ್ಲ. ಅವರನ್ನು ಆಯ್ಕೆ ಮಾಡಿ ಗೌರವದಿಂದ ಆಹ್ವಾನಿಸಿದರೆ ಸಂತೋಷವಾಗಿ ಬಂದು ಸೇವೆ ಮಾಡುವ ಸಾಕಷ್ಟು ಭಕ್ತರು ನಂಜುಂಡನಿಗೆ ಇದ್ದಾರೆ.”

-ಎನ್.ಎ.ಸದಾಶಿವು

” ಜಾಗರಣೆ ಸಾಂಸ್ಕೃತಿಕ ಕಾರ್ಯಕ್ರಮದ ಸೇವೆ ಮರುಕಳಿಸಲಿ. ಅದಕ್ಕೆ ಖರ್ಚು ಮಾಡುವ ಹಣವನ್ನು ಆಗಮಿಸುವ ಭಕ್ತರ ಮೂಲಭೂತ ಸೌಕರ‍್ಯಕ್ಕೆ ವಿನಿಯೋಗಿಸಲಿ.”

-ಶಂಕರಪುರ ಸುರೇಶ

” ಜಾಗರಣೆಯ ಸೇವೆ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ದುಂದುವೆಚ್ಚದ ಕುರಿತು ಇದೀಗ ‘ಆಂದೋಲನ’ ಪತ್ರಿಕೆ ನನ್ನ ಗಮನಕ್ಕೆ ತಂದಿದೆ. ೨೦೨೭ರ ಸಾಲಿನ ಶಿವರಾತ್ರಿಗೆ ಸೇವಾ ಕಾರ್ಯಕ್ರಮಗಳನ್ನೇ ಆಯೋಜಿಸುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುವುದು.”

-ದರ್ಶನ್ ಧ್ರುವನಾರಾಯಣ, ಶಾಸಕ

” ನಾನೀಗ ಇಲ್ಲಿಗೆ ಹೊಸದಾಗಿ ಬಂದಿದ್ದು, ಮುಂದಿನ ವರ್ಷದ ಶಿವರಾತ್ರಿ ಜಾಗರಣೆ ಸೇವಾ ರೂಪದ ಜಾಗರಣೆಯಾಗಲಿದೆ.”

-ಸಿ.ಜೆ.ಕೃಷ್ಣ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ

 

 

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

3 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

3 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

3 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

3 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

3 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

3 hours ago