Andolana originals

ವಾಣಿಜ್ಯ ಸಿಲಿಂಡರ್ ಅಭಾವ ಶುರು

ದಿನೇಶ್ ಕುಮಾರ್ ಹೆಚ್.ಎಸ್.

ಒಂದೆಡೆ ಬೆಲೆ ಏರಿಕೆ ಬಿಸಿ, ಮತ್ತೊಂದೆಡೆ ವಾಣಿಜ್ಯ ಸಿಲಿಂಡರ್ ಕೊರತೆ ಎದುರಾಗುವ ಆತಂಕ

ಇರಾನ್‌ನ ಹೊರ್ಮುಜ್ ಜಲಸಂಧಿ ಮುಚ್ಚಿರುವ ಹಿನ್ನೆಲೆಯಲ್ಲಿ ಸಿಲಿಂಡರ್ ಸರಬರಾಜು ವ್ಯತ್ಯಯ

ಮೈಸೂರು: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಯದ್ಧದ ಬಿಸಿ ಮೈಸೂರಿಗೂ ತಟ್ಟುತ್ತಿದೆ. ಕಳೆದ ಎರಡು ದಿನಗಳಿಂದ ಹೋಟೆಲ್‌ಗಳಿಗೆ ಸರಬರಾಜಾಗುತ್ತಿರುವ ಅನಿಲ ಸಿಲಿಂಡರ್‌ಗಳಲ್ಲಿ ವ್ಯತ್ಯಯವಾಗುತ್ತಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆ ಎದುರಾಗುವ ಸಾಧ್ಯತೆಯೂ ಇದೆ.

ಯುದ್ಧದಿಂದಾಗಿ ಇರಾನ್‌ನ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿರುವ ಪರಿಣಾಮ ಈ ಸಂಕಷ್ಟ ಎದುರಾಗಿದೆ. ವಿವಿಧ ದೇಶಗಳಿಗೆ ಕಚ್ಚಾ ತೈಲ ಹಾಗೂ ಅನಿಲ ರಫ್ತಿನಲ್ಲಿ ಶೇ.೨೦ರಷ್ಟು ಈ ಜಲಸಂಧಿಯ ಮೂಲಕವೇ ಹೋಗುತ್ತದೆ.

ಭಾರತದಲ್ಲಿ ಮುಂದಿನ ೬೦ ದಿನಗಳವರೆಗೆ ಅನಿಲ ಪೂರೈಕೆ ಸಂಬಂಧ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಕೂಡ ಅಡುಗೆ ಅನಿಲದ ಕೊರತೆ ಆರಂಭವಾಗಿದೆ. ಈ ನಡುವೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕೂಡ ಏರಿಕೆ ಆಗುತ್ತಿದೆ.

ಸದ್ಯಕ್ಕೆ ಗೃಹ ಬಳಕೆಯ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಿಲಿಂಡರ್ ಬುಕ್ ಮಾಡಿದ ಒಂದೆರಡು ದಿನಗಳಲ್ಲಿ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಆಗುತ್ತಿದೆ. ಆದರೆ, ಎಷ್ಟು ದಿನಗಳವರೆಗೆ ಇದು ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮನೆಗಳಿಗೆ ನೀಡುವ ಅಡುಗೆ ಅನಿಲ ಪೂರೈಕೆಯಲ್ಲಿ ದುರ್ಬಳಕೆ ತಡೆಯುವ ಸಲುವಾಗಿ ಸರ್ಕಾರ ಸಾಕಷ್ಟು ನಿಯಂತ್ರಣ ತರಲು ಮುಂದಾಗಿದೆ. ಮನೆಗಳಿಗೆ ಅಡುಗೆ ಅನಿಲ್ ಸಿಲಿಂಡರ್ ನೀಡಲು ಒಟಿಪಿ ವ್ಯವಸ್ಥೆ ಮಾಡಿದ್ದು, ೨೫ ದಿನಗಳಿಗೆ ಒಂದು ಸಿಲಿಂಡರ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಮನೆಗಳಿಗೆ ನೀಡುವ ಅಡುಗೆ ಅನಿಲದ ಬೆಲೆಯನ್ನು ಸರ್ಕಾರ ನಿಗದಿ ಮಾಡುತ್ತದೆ. ಆದರೆ ವಾಣಿಜ್ಯ ಅನಿಲದ ಬೆಲೆ ನಿಗದಿಯು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಇದು ತೈಲ ಕಂಪೆನಿಗಳ ನಿಯಂತ್ರಣದಲ್ಲಿರುವ ಕಾರಣ ವಾಣಿಜ್ಯ ಸಿಲಿಂಡರ್‌ಗಳು ಮತ್ತಷ್ಟು ದುಬಾರಿಯಾಗುವುದು ಬಹುತೇಕ ಖಚಿತ ಎನಿಸಿದೆ.

ಅನಿಲ ಪೂರೈಕೆಯಲ್ಲಿ ಕೊರತೆ ಉಂಟಾದರೆ ಮನೆಗಳ ಅನಿಲ ಪೂರೈಕೆಗೆ ತೊಂದರೆ ಆಗದಿರಲೆಂದು ಸರ್ಕಾರ ಮೊದಲಿಗೆ ವಾಣಿಜ್ಯ ಉದ್ದೇಶಿತ ಅನಿಲ ಪೂರೈಕೆಗೆ ಹೆಚ್ಚು ನಿಯಂತ್ರಣ ಹಾಕಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ ಎನ್ನಲಾಗಿದೆ.

ಇನ್ನು ಪೆಟ್ರೋಲ್ ಹಾಗೂ ಡೀಸೆಲ್‌ಗಳ ಪೂರೈಕೆಗೆ ಯಾವುದೇ ತೊಂದರೆ ಎದುರಾಗಿಲ್ಲ. ಜನರ ಅಗತ್ಯಗಳಿಗೆ ತಕ್ಕಂತೆ ಪೆಟ್ರೋಲ್ ಹಾಗೂ ಡೀಸೆಲ್ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಬೆಲೆ ಕೂಡ ಏರಿಕೆಯಾದರೆ ಆಶ್ಚರ್ಯ ಪಡಬೇಕಿಲ್ಲ.

೧೯೯೧ರಲ್ಲಿ ನಡೆದ ಇರಾಕ್ ಮತ್ತು ಅಮೆರಿಕ ಯುದ್ಧ ಸಂದರ್ಭದಲ್ಲಿ ಕೂಡ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆ ಈಗ ಮರುಕಳಿಸಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿಯೂ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಸರ್ಕಾರಕ್ಕೆ ಸಮಸ್ಯೆಯನ್ನು ಪರಿಹರಿಸುವ ಅವಕಾಶವಿದೆ. ಸಮಸ್ಯೆಯನ್ನು ಅರಿತು ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಸೂಕ

” ಇರಾನ್ ಮತ್ತು ಯುಎಇಯಿಂದ ದೇಶಕ್ಕೆ ಶೇ.೪೦ರಷ್ಟು ಎಲ್‌ಪಿಜಿ, ಸಿಎಲ್‌ಜಿ ಹಾಗೂ ಕಚ್ಚಾತೈಲ ಪೂರೈಕೆಯಾಗುತ್ತದೆ. ಹೊರ್ಮುಜ್ ಜಲಸಂಧಿ ಮಾರ್ಗದ ಮೂಲಕ ಹಡಗುಗಳಲ್ಲಿ ಸರಬರಾಜು ಆಗುತ್ತದೆ. ಆ ಮೂಲಕ ಭಾರತದ ಮಂಗಳೂರುಬಂದರು ಸೇರಿದಂತೆ ಭಾರತದ ವಿವಿಧ ಬಂದರುಗಳಿಗೆ ಬಂದಿಳಿಯುತ್ತದೆ. ಇದುಸ್ಥಗಿತಗೊಂಡ ಕಾರಣ ಅನಿಲ ಕೊರತೆ ಎದುರಾಗಿದೆ. ಕೊರತೆ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಏರುಪೇರಾಗಬಹುದು. ಇದೀಗ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗುವುದರ ಜೊತೆಗೆ ಕೊರತೆಯೂ ಎದುರಾಗಿದೆ. ಮುಂದೆ ಗೃಹ ಬಳಕೆ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೂಡ ವ್ಯತ್ಯಾಸವಾಗಬಹುದು. ಸಮಸ್ಯೆಯನ್ನು ಅರಿತು ಜನರು ಅಗತ್ಯದಷ್ಟು ಮಾತ್ರ ಅನಿಲ ಬಳಸುವುದು ಒಳ್ಳೆಯದು.”

– ಮೆಹುಲ್ ಜೆ.ಪಟೇಲ್, ಅಮರ್ ದೀಪ್ ಗ್ಯಾಸ್ ಏಜೆನ್ಸಿ ಮಾಲೀಕರು ಹಾಗೂ ಎಲ್‌ಡಿಎಐ ರಾಜ್ಯಾಧ್ಯಕ್ಷ 

” ಸದ್ಯಕ್ಕೆ ಅನಿಲ ಪೂರೈಕೆಯಲ್ಲಿ ನಮಗೆ ಯಾವುದೇ ತೊಂದರೆ ಎದುರಾಗಿಲ್ಲ. ಇದೀಗ ೨೫ ದಿನಗಳಿಗೆ ಒಂದು ಸಿಲಿಂಡರ್ ನೀಡಲಾಗುವುದು ಎಂಬುದು ಗೊತ್ತಾಗಿದೆ. ಸಾಮಾನ್ಯವಾಗಿ ಐದು ಮಂದಿ ಇರುವ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಸಾಕಾಗುತ್ತದೆ. ಹೆಚ್ಚು ಮಂದಿ ಇರುವ ಕುಟುಂಬಕ್ಕೆ ತೊಂದರೆ ಆಗಬಹುದು. ಇದು ಅಂತರರಾಷ್ಟ್ರೀಯ ಸಮಸ್ಯೆ ಆಗಿರುವುದರಿಂದ ನಾವು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಎಚ್ಚರಿಕೆ ವಹಿಸಬೇಕು.”

 – ವಾಣಿ, ದೇವರಾಜ ಮೊಹಲ್ಲಾ ನಿವಾಸಿ

” ಆಟೋಗೆ ಬಳಸುವ ಅನಿಲ ಲೀಟರ್ ಒಂದಕ್ಕೆ ೫ ರೂ. ಹೆಚ್ಚಾಗಿದೆ. ಅನಿಲ ಪೂರೈಕೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಿದೆ. ನಾವು ಸಾವಿರ ಲೀಟರ್ ಅನಿಲ ಕೇಳಿದಲ್ಲಿ ೬೦೦ ಲೀಟರ್ ಕೊಡುವ ಹಂತಕ್ಕೆ ಕಡಿತಗೊಳಿಸಿದೆ. ಆದರೆ, ಮೈಸೂರಿನಲ್ಲಿ ಇರುವ ಗ್ಯಾಸ್ ಆಟೋಗಳಿಗೆ ಬೇಕಾಗುವಷ್ಟು ಅನಿಲ ಸಿಗುತ್ತಿದೆ. ಇನ್ನು ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಮುಂದೇನಾಗುವುದೋ ನೋಡಬೇಕು.”

-ಹೆಚ್.ಕೆ.ರಮೇಶ್, ವಿಜಯ ಸರ್ವೀಸ್ ಸ್ಟೇಷನ್, ಈಗಾಗಲೇ ವಾಣಿಜ್ಯ ಸಿಲಿಂಡರ್ ಆಟೋ ಅನಿಲ ಹಾಗೂ ಇಂಧನ ಬಂಕ್ ಮಾಲೀಕರು

” ಈಗಾಗಲೇ ವಾಣಿಜ್ಯ ಸಿಲಿಂಡರ್  ಬೆಲೆ ೩೦೦ ರೂ. ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ೧೫೦ರಿಂದ ೨೦೦ ರೂ. ಹೆಚ್ಚಾಗುವ ಎಲ್ಲ ಸಾಧ್ಯತೆ ಇದೆ. ಒಂದೆಡೆ ಬೆಲೆ ಏರಿಕೆ ಬಿಸಿಯಾದರೆ ಮತ್ತೊಂದೆಡೆ ಸಿಲಿಂಡರ್‌ಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಸಮಸ್ಯೆ ಹೀಗೆಯೇ ಮುಂದುವರಿದಲ್ಲಿ ದಶಕದ ಹಿಂದೆ ಇದ್ದಂತೆ ಸೌದೆ, ಹೊಟ್ಟು, ಇದ್ದಿಲು ಒಲೆ ಬಳಸಿ ಹೋಟೆಲ್ ನಡೆಸಬೇಕು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಅದು ದೂರದ ಮಾತು. ಸಮಸ್ಯೆ ಹೀಗೇ ಮುಂದುವರಿದಲ್ಲಿ ನಗರದ ಶೇ.೫೦ರಷ್ಟು ಹೋಟೆಲ್ ಉದ್ಯಮ ಬಂದ್ ಆಗುವ ಆತಂಕ ನಿರ್ಮಾಣವಾಗಿದೆ.”

-ಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ 

 

 

ಆಂದೋಲನ ಡೆಸ್ಕ್

Recent Posts

ನೀರಿಗಿಳಿಯುವ ಮುನ್ನ ಇರಲಿ ಎಚ್ಚರ !

ಜಿಲ್ಲೆಯಲ್ಲಿ ೧೧ ಮಂದಿ ಸಾವು ಮುಂಜಾಗ್ರತೆ ಪಾಲಿಸುವುದು ಅಗತ್ಯ ಮೈಸೂರು: ಬಿರು ಬೇಸಿಗೆ ಸಂದರ್ಭದಲ್ಲಿ ನದಿ, ಕೆರೆ ಹಾಗೂ ಕಾಲುವೆಗಳಲ್ಲಿ…

2 hours ago

ಸರಳ, ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ

ಪ್ರೊ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮೈಸೂರು  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಎಸ್.ಎಂ.ಕೃಷ್ಣ ಪ್ರಶಸ್ತಿ ಪುರಸ್ಕಾರ ಮಂಡ್ಯ ಜಿಲ್ಲೆಯ…

2 hours ago

ಬಿಸಿಲಿಗೆ ಪರ್ಯಾಯ ಈಜುಕೊಳಗಳು

ಚಿರಂಜೀವಿ ಸಿ.ಹುಲ್ಲಹಳ್ಳಿ ೩,೭೫೦ ರೂ., ಶೇ.೧೮ರಷ್ಟು ಜಿಎಸ್‌ಟಿ ಸೇರಿ ಒಟ್ಟು ೪,೭೫೦ ರೂ.ಶುಲ್ಕ ಪ್ರತಿ ಶಿಬಿರಾರ್ಥಿಗೆ ನಿಗದಿ ಮೈಸೂರು: ಮಲ್ಲಿಗೆ…

2 hours ago

ಗ್ರಾಪಂ ಅಧಿಕಾರಿಗಳ ನಿಗಾಕ್ಕೆ ಜಿಪಿಎಸ್ ಸಿಸ್ಟಂ

ಕೆ.ಬಿ.ರಮೇಶನಾಯಕ ಬಯೋಮೆಟ್ರಿಕ್ ಹಾಜರಾತಿ ಜತೆಗೆ ಜಿಪಿಎಸ್ ವ್ಯವಸ್ಥೆ ಜಾರಿಗೆ ಚಿಂತನೆ ಹಾಜರಾತಿ ಹಾಕಿ ಬೇಕಾಬಿಟ್ಟಿ ಓಡಾಡುವ ಸಿಬ್ಬಂದಿಗಳಿಗೆ ಬ್ರೇಕ್ ಮೈಸೂರು:…

2 hours ago

ಕೈ ಸುಡುತ್ತಿದೆ ಎಳನೀರು ಬೆಲೆ

ಪ್ರಶಾಂತ್ ಎಸ್. ಮೈಸೂರು: ಎಲ್ಲೆಡೆ ಬಿರು ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಬಿಸಿಲ ಬೇಗೆಯಿಂದ ದಾಹ ನೀಗಿಸಿಕೊಳ್ಳಲು ಜನರು ಎಳನೀರು ಮೊರೆ…

2 hours ago

ಸಿದ್ದರಾಮಯ್ಯ ನಾಯಕತ್ವಕ್ಕೆ ಬಲ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಸಮರದಲ್ಲಿ ಕೈ ಜಯಭೇರಿ ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ…

2 hours ago