Andolana originals

‘ಬಿತ್ತನೆ ಶುಂಠಿ ಆಯ್ಕೆ, ಬೀಜೋಪಚಾರದಲ್ಲಿ ಇರಲಿ ಎಚ್ಚರ’

ಲಕ್ಷ್ಮಿಕಾಂತ್ ಕೊಮಾರಪ್ಪ

ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಲಹೆ

ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅದರ ಜೊತೆಗೆ ಮಾಹಿತಿ ಕೊರತೆಯಿಂದ ರೋಗಬಾಧೆಯಿಂದಾಗಿ ಕೆಲವು ರೈತರು ನಷ್ಟವನ್ನೂ ಅನುಭವಿಸುತ್ತಿದ್ದಾರೆ.

ಹೀಗಾಗಿ ಬಿತ್ತನೆಯ ಶುಂಠಿಯ ಆಯ್ಕೆ, ಬಿತ್ತನೆ ಶುಂಠಿಯ ಬೀಜೋಪಚಾರದ ಬಗ್ಗೆ ಗೋಣಿಕೊಪ್ಪಲಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಅಗತ್ಯ ಸಲಹೆ ನೀಡಿದೆ.

ಈ ವರ್ಷವೂ ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಮತ್ತು ಪ್ರದೇಶ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ವೈಜ್ಞಾನಿಕ ಮಾಹಿತಿಯಿಲ್ಲದೆ ಶುಂಠಿ ಬೆಳೆಯುತ್ತಿರುವವರು ಗೆಡ್ಡೆ ಕೊಳೆ ರೋಗ, ಮಹಾಕಾಳಿ ರೋಗದಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ಶುಂಠಿ ಕೃಷಿಗೆ ಬಿತ್ತನೆ ಬೀಜದ ಆಯ್ಕೆ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆರೋಗ್ಯಕರ, ರೋಗ-ಕೀಟ ರಹಿತ, ತಾಜಾ ಹಾಗೂ ಬಲಿಷ್ಠ ಶುಂಠಿಯನ್ನು ಮಾತ್ರ ಆಯ್ಕೆ ಮಾಡಬೇಕು. ಹುಳುಕು, ಕೊಳೆ, ಕಪ್ಪು ಕಲೆಗಳು ಇರುವ ಶುಂಠಿಗಳನ್ನು ಬಿತ್ತನೆಗೆ ಬಳಸಬಾರದು. ಸರಿಯಾದ ಗಾತ್ರದ ಅಂದರೆ ಕನಿಷ್ಠ ೩೦ ರಿಂದ ೩೫ ಗ್ರಾಂ, ಗರಿಷ್ಟ ೧೦೦ ಗ್ರಾಂ ತೂಕದ ಶುಂಠಿಯ ತುಂಡುಗಳನ್ನು ಬಿತ್ತನೆಗೆ ಬಳಸಬೇಕು, ಅತಿ ಚಿಕ್ಕ ತುಂಡುಗಳನ್ನು ಬಳಸಬಾರದು.

ಪ್ರತಿ ಬಿತ್ತನೆ ಶುಂಠಿಯಲ್ಲಿ ಕನಿಷ್ಠ ೧ ರಿಂದ ೨, ಗರಿಷ್ಟ ೪ ರಿಂದ ೫ ಆರೋಗ್ಯಕರ ಗಿಣ್ಣುಗಳು ಇರಬೇಕು. ಗಿಣ್ಣುಗಳು ಹಸಿರು ಅಥವಾ ತಾಜಾ ಬಣ್ಣದಲ್ಲಿ ಇರಬೇಕು. ಶುಂಠಿಯ ಬಣ್ಣ ಮಂಜಳ-ಹಳದಿ ಅಥವಾ ಬೆಳ್ಳಗಿನ ಬಣ್ಣದಲ್ಲಿರಬೇಕು. ಒತ್ತಿದಾಗ ಮೃದುವಾಗಿರದೆ ಗಟ್ಟಿಯಾಗಿರಬೇಕು. ಹಿಂದಿನ ಬೆಳೆಯಲ್ಲಿ ರೋಗ ಕಾಣಿಸದ ತೋಟದಿಂದ ಬೀಜ ಆಯ್ಕೆ ಮಾಡುವುದು ಸೂಕ್ತ.

ಸ್ಥಳೀಯವಾಗಿ ಉತ್ತಮ ಫಲ ನೀಡುವ ಮತ್ತು ರೋಗ ನಿರೋಧಕ ಶಕ್ತಿ ಇರುವ ತಳಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆ ಬೀಜದ ರೈಸೋಮ್‌ಗಳನ್ನು ನೆರಳಿನಲ್ಲಿಯೇ, ಒಣ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇಡಬೇಕು. ನೇರವಾಗಿ ಸೂರ್ಯನ ರಶ್ಮಿ ಬೀಳುವ ಜಾಗದಲ್ಲಿ ಇಡಬಾರದು. ಬಹಳ ಹಳೆಯ ಅಥವಾ ಒಣಗಿದ ರೈಸೋಮ್‌ಗಳನ್ನು ಬಳಸಬಾರದು. ಅವಽಗೆ ಮುಂಚಿತವಾಗಿ ಕಟಾವಾದ ತಾಕುಗಳ ಶುಂಠಿಯನ್ನು ಬಿತ್ತನೆಗೆ ಬಳಸಬಾರದು. ೨೭೦ರಿಂದ ೩೦೦ ದಿನಗಳು ತುಂಬಿದ ಶುಂಠಿಯನ್ನು ಬಿತ್ತನೆಗೆ ಆಯ್ಕೆ ಮಾಡಿಕೊಳ್ಳಬೇಕು.

ಬಿತ್ತನೆ ಶುಂಠಿಯನ್ನು ಸಂಗ್ರಹಿಸುವ ಮೊದಲು, ೨೦೦ ಕೆ.ಜಿ. ಶುಂಠಿ ಬೀಜವನ್ನು ಪ್ರೊಪಿಕೊನಜೋಲ್ ೨೦೦ ಮಿ.ಲಿ. ಅಥವಾ ಕಾರ್ಬೆಂಡಜಿಮ್ + ಮ್ಯಾಂಕೋಜೆಬ್ ೪೦೦ ಗ್ರಾಂ ಅಥವಾ ೬೦೦ ಗ್ರಾಂ ಮ್ಯಾಂಕೋಜೆಬ್ ಮತ್ತು ಕ್ವಿನಾಲ್‌ಫಾಸ್ ೪೦೦ ಮಿ.ಲಿ.ಯನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರತೆಗೆದು ೧೫ ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ, ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು.

ಸಾವಯವ ಪದ್ಧತಿಯಲ್ಲಿ ಶುಂಠಿಯನ್ನು ಬೆಳೆಯುವವರು ಪ್ರತೀ ಲೀಟರ್ ನೀರಿಗೆ ಅಥವಾ ಪ್ರತಿ ಕೆ.ಜಿ.ಬಿತ್ತನೆ ಬೀಜಕ್ಕೆ ಸುಡೋ ಮೋನಾಸ್ ೧೦.೦ ಗ್ರಾಂ.ಅನ್ನು ಮಿಶ್ರಣ ಮಾಡಿ ಅದಕ್ಕೆ ಬಿತ್ತನೆ ಶುಂಠಿಯನ್ನು ಅದ್ದಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರ ತೆಗೆದು ೩೦ ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿದ ನಂತರ ಬಿತ್ತನೆ ಮಾಡಬೇಕು.

ಬೀಜೋಪಚಾರ ಮಾಡುವಾಗ ಶುಂಠಿಯನ್ನು ಅದ್ದಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಲೇಬೇಕು. ಹೆಚ್ಚಿನ ರೈತರು ಶಿಫಾರಸು ಮಾಡಿರುವ ಶಿಲೀಂಧ್ರನಾಶಕವನ್ನು ಉಪಯೋಗಿಸುತ್ತಾರಾದರೂ ಶುಂಠಿಯನ್ನು ಶಿಲೀಂಧ್ರನಾಶಕದ ದ್ರಾವಣದಲ್ಲಿ ಮುಳುಗಿಸಿದ ನಂತರ ೫ ನಿಮಿಷಗಳಲ್ಲೇ ಹೊರತೆಗೆದು, ನೆರಳಿನಲ್ಲಿ ೩೦ ನಿಮಿಷಗಳ ಕಾಲ ಒಣಗಿಸದೆ ಬಿತ್ತನೆ ಮಾಡುತ್ತಾರೆ. ಇದು ಸರಿಯಾದ ಬೀಜೋಪಚಾರದ ಕ್ರಮವಲ್ಲ. ಒಂದು ಬಾರಿ ಕಲಸಿದ ದ್ರಾವಣದಲ್ಲಿ ಬೀಜೋಪಚಾರ ಮಾಡಿದ ನಂತರ ಮತ್ತೆ ಅದೇ ದ್ರಾವಣವನ್ನು ಬಳಸುವುದಾದರೆ ಶೇ.೫೦ ಶಿಫಾರಸು ಮಾಡಿರುವ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಮತ್ತೆ ಸೇರಿಸಬೇಕು. ಬೀಜೋಪಚಾರಕ್ಕೆ ಶಿಫಾರಸು ಮಾಡಿರುವ ಶಿಲೀಂದ್ರ ನಾಶಕ ಮತ್ತು ಕೀಟನಾಶಕವನ್ನು ಮಾತ್ರ ಉಪಯೋಗಿಸಬೇಕು.

ಸಲಹೆ ನೀಡಲಾದ ಪೀಡೆನಾಶಕವನ್ನು ಬಿಟ್ಟು ಬೇರೆ ಯಾವುದೇ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಮಿಶ್ರಣ ಮಾಡಬಾರದು ಎಂದು ಗೋಣಿಕೊಪ್ಪಲಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಸಲಹೆ ನೀಡಿದೆ.

” ಶುಂಠಿಯು ಮುಖ್ಯವಾದ ಸಂಬಾರ ಬೆಳೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಶುಂಠಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೆಲವರು ಪಾಳು ಬಿಟ್ಟಿರುವ ಕೃಷಿ ಪ್ರದೇಶಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಶುಂಠಿ ಬೆಳೆಯುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಶುಂಠಿ ಬಿತ್ತನೆ, ಬೀಜೋಪಚಾರ ಮಾಡದಿದ್ದಲ್ಲಿ ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಕೃಷಿ ವಿಜ್ಞಾನ ಕೇಂದ್ರದ ಸಲಹೆಯನ್ನು ಪಡೆದು ರೈತರು ಲಾಭದಾಯಕ ಕೃಷಿ ಮಾಡಬೇಕು.”

-ಡಾ.ಕೆ.ವಿ.ವೀರೇಂದ್ರ ಕುಮಾರ್, ಪ್ರಕೃತಿ, ಸಸ್ಯ ಸಂರಕ್ಷಣೆ ವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ

 

 

ಆಂದೋಲನ ಡೆಸ್ಕ್

Recent Posts

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

2 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

2 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

3 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

6 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

6 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

6 hours ago