ಜಿಲ್ಲೆಯಲ್ಲಿ ೧೧ ಮಂದಿ ಸಾವು ಮುಂಜಾಗ್ರತೆ ಪಾಲಿಸುವುದು ಅಗತ್ಯ
ಮೈಸೂರು: ಬಿರು ಬೇಸಿಗೆ ಸಂದರ್ಭದಲ್ಲಿ ನದಿ, ಕೆರೆ ಹಾಗೂ ಕಾಲುವೆಗಳಲ್ಲಿ ಮುಳುಗಿ ಮೃತಪಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಬೇಸಿಗೆ ಸಂದರ್ಭದಲ್ಲಿ ಕೆರೆ, ನಾಲೆ, ಹೊಳೆಯಲ್ಲಿ ನೀರಿಗೆ ಇಳಿಯುವ ಮುನ್ನ ಎಚ್ಚರಿಕೆ ವಹಿಸುವುದು ಅವಶ್ಯ.
ಬೇಸಿಗೆ ಕಾಲ ಆರಂಭವಾದಾಗ ತಾಪಮಾನ ಹೆಚ್ಚಾಗುವುದರಿಂದ ಜನರು ತಂಪಿಗಾಗಿ ನದಿ, ಕೆರೆ, ಕಾಲುವೆ, ಅಣೆಕಟ್ಟು ಪ್ರದೇಶಗಳಿಗೆ ತೆರಳುವುದು ಸಾಮಾನ್ಯ. ವಿಶೇಷವಾಗಿ ಮಕ್ಕಳು, ಯುವಕರು ಹಾಗೂ ಗ್ರಾಮೀಣ ಪ್ರದೇಶದ ಜನರು ಈ ಜಲಾಶಯಗಳಲ್ಲಿ ಸ್ನಾನ, ಈಜಾಟವಾಡಲು ಹೋಗುತ್ತಾರೆ. ಆದರೆ ಪ್ರತಿವರ್ಷವೂ ಅನೇಕರು ಮುಳುಗಿ ಸಾವನ್ನಪ್ಪುವ ದುರ್ಘಟನೆಗಳು ಸಂಭವಿಸುತ್ತಿವೆ.
ಬೇಸಿಗೆ ಸಮಯದಲ್ಲಿ ನದಿ, ಕೆರೆ, ಕಾಲುವೆಗಳಲ್ಲಿ ಮುಳುಗು ಸಾವುಗಳು ಹೆಚ್ಚಾಗುವುದು ಮಾನವ ಅಜಾಗರೂಕತೆ, ಸುರಕ್ಷತಾ ಕೊರತೆ ಮತ್ತು ಜಾಗೃತಿ ಅಭಾವದಿಂದಾಗುತ್ತದೆ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳು, ಸಾರ್ವ ಜನಿಕ ಜಾಗೃತಿ ಹಾಗೂ ಆಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಎಚ್ಚರಿಕೆ ಜೀವ ರಕ್ಷಣೆ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಮನಗಾಣಬೇಕು.
೧೧ ಮಂದಿ ಬಲಿ: ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ೧೧ ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆ.ಆರ್.ನಗರ ಅರ್ಕೇಶ್ವರ ದೇವಾಲಯ ಸಮೀಪ ಆಯೋಜಿಸಿದ್ದ ಉರುಸ್ನಲ್ಲಿ ಭಾಗವಹಿಸಲು ಏ.೧೯ರಂದ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ವಯೋಮಾನದ ೬ ಜನರು ಮೃತಪಟ್ಟರು. ಏ.೨೦ರಂದು ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಹರವೆ ಸಮೀಪ ಕಾವೇರಿ ನದಿಯಲ್ಲಿ ಈಜಲು ತೆರಳಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಏ.೨೧ರಂದು ತಿ.ನರಸೀಪುರ ತಾಲ್ಲೂಕಿನ ತಲಕಾಡು ನಿಸರ್ಗಧಾಮಕ್ಕೆ ಪ್ರವಾಸಕ್ಕೆ ಆಗಮಿಸಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಏ.೨೨ ರಂದು ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಅರಣ್ಯ ರಕ್ಷಕರೊಬ್ಬರು ಈಜಲು ತೆರಳಿ ಮೃತಪಟ್ಟರು.
ಪೊಲೀಸ್ ಇಲಾಖೆಯಿಂದ ಜಾಗೃತಿ: ಜಿಲ್ಲೆಯಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ನೀರಿಗೆ ಇಳಿಯುವ ಮುನ್ನ ವಹಿಸಬೇಕಾಗಿರುವ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.
ದುರ್ಘಟನೆಗೆ ಕಾರಣವೇನು?:
* ಬಹುತೇಕರು ಈಜು ಬಾರದಿದ್ದರೂ ನೀರಿಗೆ ಇಳಿಯುವುದು.
* ನೀರಿನ ಆಳದ ಅರಿವಿಲ್ಲದೆ ನೀರಿಗೆ ಇಳಿಯುವುದು.
* ಕೆರೆ, ನದಿಯ ಮೇಲ್ನೋಟಕ್ಕೆ ಕಡಿಮೆ ಆಳ ಇದ್ದಂತೆ ಕಂಡರೂ ಒಳಗೆ ಅಪಾಯಕರ ಪ್ರದೇಶಗಳಿರುತ್ತವೆ
* ಕಾಲುವೆ, ನದಿ ಹಾಗೂ ಅಣೆಕಟ್ಟುಗಳ ಬಳಿ ನೀರಿನ ಹರಿವು ತೀವ್ರವಾಗಿರುತ್ತದೆ. ನೀರಿನ ಸೆಳವಿನ ರಭಸಕ್ಕೆ ಸಿಲುಕಿ ಮೃತಪಡುತ್ತಾರೆ
* ಕೆಲವರು ಮದ್ಯಪಾನ ಮಾಡಿದ ಬಳಿಕ ನೀರಿಗೆ ಇಳಿಯುತ್ತಾರೆ. ಇದರಿಂದ ಸಮತೋಲನ ಕಳೆದುಕೊಂಡು ಸಾವಿಗೀಡಾಗುತ್ತಾರೆ
* ಯುವಜನರು ಸ್ನೇಹಿತರ ಮುಂದೆ ಸಾಹಸ ತೋರಿಸಲು ಎತ್ತರದಿಂದ ಜಿಗಿತ, ದೂರ ಈಜು, ಆಳಕ್ಕೆ ಹೋಗುವುದು ಮುಂತಾದ ಅಪಾಯಕಾರಿ ಪ್ರದರ್ಶನ
* ಅನೇಕ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳು, ಕಂಬಿ ಬೇಲಿ, ರಕ್ಷಣಾ ಸಿಬ್ಬಂದಿ ಅಥವಾ ಜೀವ ರಕ್ಷಕ ಸಾಧನಗಳು ಇಲ್ಲದೆ ಇರುವುದು
* ತಡೆಗಟ್ಟಲು ವಹಿಸಬೇಕಾದ ಕ್ರಮಗಳು ಇಲ್ಲದಿರುವುದು
* ಒಬ್ಬರೇ ನದಿ ಅಥವಾ ಕೆರೆಯಲ್ಲಿ ಈಜಲು ಹೋಗುವುದು
* ಮಕ್ಕಳನ್ನು ಒಂಟಿಯಾಗಿ ನೀರಿನ ಬಳಿ ಬಿಡಬಾರದು.
* ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
* ಜೀವರಕ್ಷಕ ಜಾಕೆಟ್ ಬಳಕೆ ಮಾಡಬೇಕು.
* ಜಿಲ್ಲಾಡಳಿತ ಅಪಾಯಕಾರಿ ಜಲಾಶಯಗಳ ಬಳಿ ಎಚ್ಚರಿಕೆ ಫಲಕ ಅಳವಡಿಸಬೇಕು.
* ಬೇಲಿ, ತಡೆಗೋಡೆ ಮತ್ತು ಸುರಕ್ಷತಾ ಕಂಬಿ ವ್ಯವಸ್ಥೆ ಮಾಡಬೇಕು.
* ಬೇಸಿಗೆ ಅವಧಿಯಲ್ಲಿ ಪೊಲೀಸ್, ಸ್ಥಳೀಯ ಸಂಸ್ಥೆಗಳು ನಿಗಾ ವಹಿಸಬೇಕು.
* ಜೀವ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಬೇಕು.
* ಶಾಲಾ ಮಟ್ಟದಲ್ಲಿ ಈಜು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಬೇಕು.
* ತುರ್ತು ಸಹಾಯ ಸಂಖ್ಯೆಗಳ ಪ್ರಚಾರ ಮಾಡಬೇಕು.
* ರಜಾ ದಿನಗಳಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ಗಮನ ಇರಬೇಕು.
ಪ್ರೊ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮೈಸೂರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಎಸ್.ಎಂ.ಕೃಷ್ಣ ಪ್ರಶಸ್ತಿ ಪುರಸ್ಕಾರ ಮಂಡ್ಯ ಜಿಲ್ಲೆಯ…
ಚಿರಂಜೀವಿ ಸಿ.ಹುಲ್ಲಹಳ್ಳಿ ೩,೭೫೦ ರೂ., ಶೇ.೧೮ರಷ್ಟು ಜಿಎಸ್ಟಿ ಸೇರಿ ಒಟ್ಟು ೪,೭೫೦ ರೂ.ಶುಲ್ಕ ಪ್ರತಿ ಶಿಬಿರಾರ್ಥಿಗೆ ನಿಗದಿ ಮೈಸೂರು: ಮಲ್ಲಿಗೆ…
ಕೆ.ಬಿ.ರಮೇಶನಾಯಕ ಬಯೋಮೆಟ್ರಿಕ್ ಹಾಜರಾತಿ ಜತೆಗೆ ಜಿಪಿಎಸ್ ವ್ಯವಸ್ಥೆ ಜಾರಿಗೆ ಚಿಂತನೆ ಹಾಜರಾತಿ ಹಾಕಿ ಬೇಕಾಬಿಟ್ಟಿ ಓಡಾಡುವ ಸಿಬ್ಬಂದಿಗಳಿಗೆ ಬ್ರೇಕ್ ಮೈಸೂರು:…
ಪ್ರಶಾಂತ್ ಎಸ್. ಮೈಸೂರು: ಎಲ್ಲೆಡೆ ಬಿರು ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಬಿಸಿಲ ಬೇಗೆಯಿಂದ ದಾಹ ನೀಗಿಸಿಕೊಳ್ಳಲು ಜನರು ಎಳನೀರು ಮೊರೆ…
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಸಮರದಲ್ಲಿ ಕೈ ಜಯಭೇರಿ ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ…