Andolana originals

ಸುಗ್ಗನಹಳ್ಳಿಯ ಬಂಡಿ ಉತ್ಸವಕ್ಕೆ ಸಕಲ ಸಿದ್ಧತೆ

ಭೇರ್ಯ: ಕೆ.ಆರ್.ನಗರ ತಾಲ್ಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಮೇ 24ರ ಶುಕ್ರವಾರ ರಾತ್ರಿ ನಡೆಯಲಿರುವ ಬಂಡಿ ಉತ್ಸವದ ಹಬ್ಬಕ್ಕೆ ಸಕಲ ಸಿದ್ಧತೆ ನಡೆದಿದೆ. ಗ್ರಾಮೀಣ ಸಂಪ್ರದಾಯದಂತೆ ಗ್ರಾಮ ದೇವತೆಯ ಹೆಸರಿನಲ್ಲಿ ನಡೆಸುವ ಈ ಹಬ್ಬವನ್ನು ಕೆಲವು ಕಡೆ ಹಸಿರುಬಂಡಿ ಎನ್ನುತ್ತಾರೆ. ಸುಗ್ಗನಹಳ್ಳಿ ಗ್ರಾಮದಲ್ಲಿ 1950ರಿಂದಲೂ ಈ ಗ್ರಾಮದ ಪೂರ್ವಿಕರು, ಹಿರಿಯರು ಸಾಂಪ್ರದಾಯಿಕವಾಗಿ ಬಂಡಿಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

ಇದೇ ಮೇ 24ರ ಶುಕ್ರವಾರ ಗ್ರಾಮದ ತುಂಬೆಲ್ಲ ಹಸಿರೆಲೆಯ ತೋರಣ, ತೆಂಗಿನ ಗರಿ, ಅಡಕೆ, ಹೊಂಬಾಳೆ ಇವುಗಳಿಂದ ಅಲಂಕರಿಸಿ, ಜೊತೆಗೆ ಕಲ್ಲಿನ ಚಕ್ರದಿಂದ ನಿರ್ಮಾಣ ಮಾಡಿರುವ ಬಂಡಿಯನ್ನು ವಿಶೇಷವಾಗಿ ವಿವಿಧ ಬಣ್ಣಗಳಿಂದ ಅಲಂಕರಿಸಿ, ಬಾಳೆ ಗೊನೆ ಕಟ್ಟಿ, ತಮಟೆ, ಡೊಳ್ಳು, ನಗಾರಿಯೊಂದಿಗೆ ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆಯವರೆಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂಡಿ ಎಳೆಯುತ್ತಾರೆ.

ಇದಕ್ಕೂ ಮೊದಲು ಯುವತಿಯರು, ಮುತ್ತೈದೆಯರು ತಂಬಿಟ್ಟು ಆರತಿ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ಹಬ್ಬಕ್ಕೂ ಮೊದಲು ಕನ್ನಂಬಾಡಿ ಅಮ್ಮನವರ ಹಬ್ಬ ಹರಿಸೇವೆ ಜೊತೆಗೆ ಅನ್ನದಾನ, ಮುನಿಯಪ್ಪನ ಹಬ್ಬ ಆಚರಣೆ ಮಾಡಿದ ನಂತರ ಬಹಳ ವಿಶಿಷ್ಟವಾಗಿ ಬಂಡಿ ಹಬ್ಬ ಆಚರಣೆ ಮಾಡಲಾಗುವುದು ಎಂದು ಮುಖಂಡ ಬಂಡೆಕುಮಾರ್ ತಿಳಿಸಿದರು.

ಗ್ರಾಮದೇವತೆ ಪಟ್ಟಲದಮ್ಮದೇವಿಗೆ ಹರಕೆ, ಮುಡಿಪು ಕಾಣಿಕೆ ಒಪ್ಪಿಸುವ ಸಲುವಾಗಿ ಗ್ರಾಮದ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಿಂದ ಬಂಡಿ ಚಕ್ರವನ್ನು ಎಳೆಯುವ ಸಂದರ್ಭದಲ್ಲಿ ದೂಳ್‌ಮರಿ ಹೊಡೆಯಲಾಗುತ್ತದೆ.

ಈ ಹಬ್ಬವನ್ನು ಸಾಮರಸ್ಯದಿಂದ ಯಾವುದೇ ಜಾತಿ-ಭೇದವಿಲ್ಲದೆ ಎಲ್ಲಾ ಸಮುದಾಯದವರು ಒಟ್ಟಾಗಿ ಸೇರಿ ಆಚರಿಸುವುದು ವಿಶೇಷ. ಮುಖಂಡರಾದ ಡೇರಿ ಅಧ್ಯಕ್ಷ ರಾಜು, ವಿಜಯ್, ರಾಜಶೆಟ್ಟಿ, ರಾಜಶೇಖರ್, ತಿಮ್ಮೇಗೌಡ, ಧರಣಿ, ವೀರಭದ್ರಶೆಟ್ಟಿ, ವೆಂಕಟೇಶ್, ಮೂರ್ತಿ, ಪುನೀತ್, ರವೀಶ್, ಅಮರ್, ಬಾಂಡ್ ರವಿ, ವಿಜಿ, ಮಹದೇವ ಸೇರಿದಂತೆ ಗ್ರಾಮದ ಅನೇಕ ಯುವಕರು ಗ್ರಾಮದಲ್ಲಿ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಬಂಡಿ ಹಬ್ಬವನ್ನು ಗ್ರಾಮದಲ್ಲಿ ಸಾಮರಸ್ಯದಿಂದ ಯಾವುದೇ ಜಾತಿ-ಭೇದವಿಲ್ಲದೆ ನಮ್ಮ ಪೂರ್ವಿಕರ ಕಾಲದಿಂದಲೂ ಆಚರಣೆ ಮಾಡುತ್ತಾ ಬಂದಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಜನಪದ ಸೊಗಡು ಇಂದಿಗೂ ಉಳಿದಿದೆ. – ಬಂಡೆ ಕುಮಾರ್, ಹಿರಿಯ ಮುಖಂಡ, ಸುಗ್ಗನಹಳ್ಳಿ.

ಭೇರ್ಯ ಮಹೇಶ್

ಮೂಲತಃ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಸಮೀಪದ ಬಟಿಗನಹಳ್ಳಿ ಗ್ರಾಮದವನಾದ ನಾನು ಭೇರ್ಯ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿ ಹೊಸ ಅಗ್ರಹಾರದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದೇನೆ. 2002 ಹಾಗೂ 2004ರಲ್ಲಿ ಪತ್ರಿಕೋದ್ಯಮ ತರಬೇತಿ ಪಡೆದಿದ್ದೇನೆ. 1992ರಿಂದ ಆಂದೋಲನ ಮತ್ತು ಮೈಸೂರು ಮಿತ್ರ ಸೇರಿದಂತೆ ಪತ್ರಿಕಾ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದು, 2000ರಲ್ಲಿ ಪ್ರಜಾನುಡಿ ದಿನ ಪತ್ರಿಕೆಯ ಕೆ.ಆರ್.ನಗರ ತಾಲ್ಲೂಕು ಗ್ರಾಮಾಂತರ ವರದಿಗಾರನಾಗಿ ತದ ನಂತರ ಆಂದೋಲನ ಮತ್ತು ಕನ್ನಡ ಪ್ರಭ ಪತ್ರಿಕೆಯ ತಾಲ್ಲೂಕು ಗ್ರಾಮಾಂತರ ಮತ್ತು ಭೇರ್ಯ ಗ್ರಾಮದ ವರದಿಗಾರನಾಗಿ ಕಾರ್ಯನಿರ್ವಹಿಸಿ ಪ್ರಸ್ತುತ 2021ರಿಂದ ಕೆ.ಆರ್.ನಗರ ತಾಲ್ಲೂಕು ಆಂದೋಲನ ಪತ್ರಿಕೆಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

13 hours ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

13 hours ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

13 hours ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

13 hours ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

13 hours ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

14 hours ago