Andolana originals

ಮೈಸೂರಲ್ಲಿ ಸ್ಥಾಪನೆಯಾಗಲಿದೆ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರ

ರಾಜ್ಯದಲ್ಲೇ ಪ್ರಪ್ರಥಮವಾಗಿ ಆರಂಭವಾಗಲಿರುವ ಕೇಂದ್ರ

ಕೆ.ಆರ್.ಆಸ್ಪತ್ರೆಯಲ್ಲಿ ೩೦ ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್ ಮೀಸಲು

ಎನ್‌ಜಿಒ ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿ

ಗುಣಮುಖರಾದವರ ವಿಳಾಸ ಪತ್ತೆ ಹಚ್ಚಿ ಮನೆಗೆ ಕಳುಹಿಸಲು ಯೋಜನೆ

ಮೈಸೂರು: ದೂರ ದೂರದ ರಾಜ್ಯಗಳಿಂದ ರೈಲು ಮತ್ತಿತರ ವಾಹನಗಳಲ್ಲಿ ಮೈಸೂರಿಗೆಬಂದಿಳಿಯುವ ಮಾನಸಿಕ ಅಸ್ವಸ್ಥರನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಲು ರಾಜ್ಯದಲ್ಲೇ ಮೊದಲ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರವನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಸರ್ಕಾರದ ಸೂಚನೆಯಂತೆ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ಇನ್ನೊಂದು ತಿಂಗಳಲ್ಲಿ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರ ಸ್ಥಾಪನೆ ಯಾಗಲಿದೆ. ಪತ್ತೆಯಾದ ನಿರಾಶ್ರಿತರಿಗೆ ಚಿಕಿತ್ಸ ಕೊಡಿಸುವ ಹೊಣೆಯನ್ನು ಎನ್‌ಜಿಒಗೆ ವಹಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರು ಇದೆ. ವರ್ಷವಿಡೀ ಹೊರ ರಾಜ್ಯ, ಹೊರ ದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬಂದು ಹೋಗು ತ್ತಾರೆ. ಅದೇ ರೀತಿ ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು, ಮಣಿಪುರ, ಒಡಿಶ್ಶಾ, ಗುಜರಾತ್ ಮತ್ತಿತರ ರಾಜ್ಯಗಳಿಂದ ಕಟ್ಟಡ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ಕೇಬಲ್ ಅಳವಡಿಕೆ ಮತ್ತಿತರ ಕೆಲಸಗಳಿಗಾಗಿ ರೈಲುಗಳಲ್ಲಿ ಬರುವುದು ಸಾಮಾನ್ಯವಾಗಿದೆ.

ಇನ್ನೊಂದು ಕಡೆ ಮೈಸೂರಿಗೆ ಮಾನಸಿಕ ಅಸ್ವಸ್ಥರು ಕೂಡ ರೈಲುಗಳು, ಲಾರಿಗಳಲ್ಲಿ ಬರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ದೊಡ್ಡಗಡಿಯಾರ, ಪುರಭವನ, ಕರ್ಜನ್ ಪಾರ್ಕ್, ಕೆ.ಆರ್.ಆಸ್ಪತ್ರೆ ಇನ್ನಿತರ ಕಡೆಗಳಲ್ಲಿ ಓಡಾಡಿಕೊಂಡು, ಅವರಿವರು ಕೊಟ್ಟ ತಿಂಡಿ, ಊಟ ಮಾಡಿಕೊಂಡು ಕಾಲ ಕಳೆಯುತ್ತಾರೆ. ಇಂತಹವರ ಪೈಕಿ ಅನೇಕರು ಕ್ರಮೇಣ ಮಾನಸಿಕ ಅಸ್ವಸ್ಥರಾಗುತ್ತಾರೆ ಎನ್ನಲಾಗಿದೆ. ಹಾಗಾಗಿಯೇ, ರಾಜ್ಯ ಸರ್ಕಾರ ನಿರಾಶ್ರಿತರ ಮಾನಸಿಕ ಅಸ್ವಸ್ಥರ ಕೇಂದ್ರ(ಇಸಿಆರ್‌ಸಿ)ವನ್ನು ಸ್ಥಾಪನೆಗೆ ನಿರ್ಧಾರ ಕೈಗೊಂಡಿದ್ದು, ಇದು ರಾಜ್ಯದಲ್ಲಿ ಮೊದಲನೆಯದಾಗಲಿದೆ.

ಇದನ್ನು ಓದಿ: ಜಿಲ್ಲೆಯಲ್ಲಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಯಶಸ್ವಿ

೩೦ ಹಾಸಿಗೆಗಳ ಕೇಂದ್ರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಮರ್ಜೆನ್ಸಿ ಕೇರ್ ರಿಕವರಿ ಸೆಂಟರ್‌ನ್ನು ಸ್ಥಾಪಿಸಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯಲ್ಲಿ ೩೦ ಹಾಸಿಗೆಗಳುಳ್ಳ ವಾರ್ಡ್‌ನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಈಗಾಗಲೇ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗೆ ಇದರ ಜವಾಬ್ದಾರಿಯನ್ನು ನೀಡಲಾಗಿದೆ. ಎನ್‌ಜಿಒ ಸಿಬ್ಬಂದಿ ನಗರದಲ್ಲಿ ಓಡಾಡುವ ನಿರಾಶ್ರಿತ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಕೆ.ಆರ್.ಆಸ್ಪತ್ರೆಗೆ ಕರೆತಂದು ದಾಖಲಿಸುತ್ತಾರೆ.

ಈ ಕೇಂದ್ರದಲ್ಲಿ ಕನಿಷ್ಠ ಮೂರು ತಿಂಗಳುಗಳ ಕಾಲ ನಿರಂತರವಾಗಿ ಚಿಕಿತ್ಸೆ ನೀಡಿದ ಮೇಲೆ ಗುಣವಾದರೆ ಅಂತಹವರನ್ನು, ವಿಳಾಸ ಪತ್ತೆ ಮಾಡಿ ಮನೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಕುಟುಂಬದವರು ಇಲ್ಲದಿದ್ದರೆ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಚಿಕಿತ್ಸೆ ಕೊಡುವ ಜತೆಗೆ, ನಿರಂತರ ಮೂರು ವರ್ಷಗಳ ಕಾಲ ನಿಗಾ ಇಟ್ಟು ಫಾಲೋ ಅಪ್ ಮಾಡಲಾಗುತ್ತದೆ.ವಯೋವೃದ್ಧರಾಗಿದ್ದರೆ ಜೀವನ ಪೂರ್ತಿ ಚಿಕಿತ್ಸೆ ಕೊಡಿಸುವುದಕ್ಕೂ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ನಿರ್ವಹಣೆಗೆ ಅನುದಾನ: ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರದ ನಿರ್ವಹಣೆಗೆ ನಿಗದಿತ ಎನ್‌ಜಿಒಗೆ ರಾಜ್ಯ ಸರ್ಕಾರ ಅನುದಾನ ಕೊಡುತ್ತದೆ. ಅದರ ಹೊರತಾಗಿ ಬೇರೆ ಯಾವುದೇ ಅನುದಾನ ಇಲ್ಲದೆ ಎನ್ ಜಿಒ ಸೇವಾ ಮನೋಭಾವದಲ್ಲಿ ಕೆಲಸ ಮಾಡಬೇಕಾಗಿದೆ. ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಗೌರವಧನ ಹೊರತುಪಡಿಸಿ ಇತರೆ ಯಾವುದೇ ಸೌಲಭ್ಯಗಳೂ ಇರುವುದಿಲ್ಲ. ವೈದ್ಯರು, ಮನೋರೋಗ ತಜ್ಞರು, ಸಿಬ್ಬಂದಿ ಸರ್ಕಾರಿ ಆಸ್ಪತ್ರೆಯವರೇ ಆಗಿರುತ್ತಾರೆ. ಮಾನಸಿಕ ಅಸ್ವಸ್ಥರನ್ನು ಪತ್ತೆ ಮಾಡುವುದು, ಚಿಕಿತ್ಸೆ ಕೊಡಿಸುವುದು ಮತ್ತು ಗುಣಮುಖರಾದರೆ ಸಂಬಂಧಿಕರ ಮನೆಗೆ ತಲುಪಿಸುವುದು ಅಥವಾ ಪುನರ್ ವಸತಿ ಕೇಂದ್ರಕ್ಕೆ ರವಾನೆ ಮಾಡುವುದನ್ನು ನೋಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

” ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ. ಈಗಾಗಲೇ ಎನ್‌ಜಿಒ ಆಯ್ಕೆ ಮಾಡಲು ಸರ್ಕಾರಕ್ಕೆ ಪಟ್ಟಿ ಕಳುಹಿಸಲಾಗಿದೆ. ಎಲ್ಲಾ ಪ್ರಕ್ರಿಯೆ ಮುಗಿದರೆ ಇನ್ನೊಂದು ತಿಂಗಳಲ್ಲಿ ಕೇಂದ್ರ ಶುರುವಾಗಲಿದೆ.”

-ಡಾ.ಬಿ.ಬೃಂದಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ, ಮೈಸೂರು.

” ಮಾನಸಿಕ ಆರೋಗ್ಯ ಕಾಯ್ದೆ ೨೦೧೭ರ ಪ್ರಕಾರ ಬೀದಿಗಳಲ್ಲಿ ಗೊತ್ತು ಗುರಿಯಿಲ್ಲದೆ ಅಲೆದಾಡುತ್ತಿರುವ ಜನರನ್ನು ರಕ್ಷಿಸುವುದು ಮುಖ್ಯವಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯು, ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಕೇಂದ್ರ ನಿರ್ವಹಣೆಗೆ ಕ್ರಮ ಕೈಗೊಳ್ಳ ಬೇಕೆಂದು ಹೇಳಿದ್ದರಿಂದಾಗಿ ಮೈಸೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.”

-ಕೆ.ಬಿ.ರಮೇಶನಾಯಕ

ಆಂದೋಲನ ಡೆಸ್ಕ್

Recent Posts

ಮೈಸೂರು | ವ್ಯಕ್ತಿ ಅನುಮಾನಾಸ್ಪದ ಸಾವು ; ಹೆಂಡತಿಯಿಂದಲೇ ಕೊಲೆಯ ಶಂಕೆ

ಮೈಸೂರು : ಇಲ್ಲಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಕೊಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ…

2 hours ago

ಬಿಜೆಪಿ ವಕ್ತಾರ ಎಂ.ಜಿ.ಮಹೇಶ್‌ 6 ವರ್ಷ ಪಕ್ಷದಿಂದ ಉಚ್ಛಾಟನೆ

ಬೆಂಗಳೂರು : ಬಿಜೆಪಿ ಪಕ್ಷದ ರಾಷ್ಟೀಯ ಮತ್ತು ರಾಜ್ಯ ಮಟ್ಟದ ನಾಯಕರ ವಿರುದ್ಧ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿ…

3 hours ago

ಅಸ್ಸಾಂನಲ್ಲಿ ಭೀಕರ ಪ್ರವಾಹ: ಜನಜೀವನ ಅಸ್ತವ್ಯಸ್ತ

ದಿಸ್ಪುರ್:‌ ನೆರೆಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಭಾರೀ…

6 hours ago

ಕೈಕೊಟ್ಟ ಮುಂಗಾರು: ಕಬಿನಿ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿತ

ಎಚ್.ಡಿ.ಕೋಟೆ: ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳು ಬರಿದಾಗುತ್ತಿವೆ. ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಜಲಾಶಯ ಎಂಬ…

6 hours ago

ರಾಮಮಂದಿರದಲ್ಲಿ ಅಕ್ರಮ; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಉತ್ತರ ಪ್ರದೇಶದ ಅಯೋಧ್ಯಾ ರಾಮಮಂದಿರದಲ್ಲಿ ಕಾಣಿಕೆ ಹಣ ಹಾಗೂ ದೇಣಿಗೆಯನ್ನು ದುರ್ಬಳಕೆ ಮಾಡಿರುವುದು ಅನೂಹ್ಯ ಪ್ರಕರಣ. ಇದರಿಂದ ಕೋಟ್ಯಂತರ ಜನರ…

11 hours ago

ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮೇಜರ್ ಸರ್ಜರಿಗೆ ಕೇಂದ್ರ ವರಿಷ್ಠರ ಚಿಂತನೆ

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಹಲವು ಲಿಂಗಾಯತ ಮಠಗಳಿಗೆ ಮುಖ್ಯಮಂತ್ರಿ ಡಿಕೆಶಿ ಅವರು ಆಪ್ಯಾಯಮಾನ ಕರ್ನಾಟಕದಲ್ಲಿ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲು…

11 hours ago