ಆಂದೋಲನ 50

ನಟಿಯಾಗುವುದು ನನ್ನ ಕನಸಾಗಿತ್ತು….

ಕಿರಿಕ್ ಪಾರ್ಟಿಯ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಯವಾದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇಂದು ದೇಶ ವಿದೇಶಗಳಲ್ಲಿ ಚಿರಪರಿಚಿತ ಹೆಸರು. ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ಮಿಂಚಿ ಈಗ ಬಾಲಿವುಡ್ ಗೂ ಕಾಲಿಟ್ಟು ಯಶಸ್ಸಿನ ಉತ್ತುಂಗದಲ್ಲಿದ್ದಾರೆ.
ತಮ್ಮ ಸ್ನಿಗ್ಧ ಸೌಂದರ್ಯ, ಸಹಜ ನಗು ಮತ್ತು ನಟನೆಯ ಬಲದಿಂದಲೇ ಪ್ರೇಕ್ಷಕರಿಂದ ‘ನ್ಯಾಷನಲ್ ಕ್ರಶ್’ ಎನಿಸಿಕೊಂಡ ರಸ್ಮಿಕಾ, ಬಿಡುವಿಲ್ಲದ ಚಿತ್ರೀಕರಣಗಳ ನಡುವೆ 50ರ ಸಂಭ್ರಮದಲ್ಲಿರುವ ಆಂದೋಲನದ ಜೊತೆ ಮಾತನಾಡಿದ್ದಾರೆ. ಮುಂಬೈಯಿಂದ ದೂರವಾಣಿ ಮೂಲಕ ಮಾತನಾಡುತ್ತಲೇ, ಕನ್ನಡದಲ್ಲಿ ಮತ್ತೆ ನಟಿಸುವ ಸುಳಿವನ್ನೂ ಕೊಟ್ಟಿದ್ದಾರೆ.

ಬಾನಾಸು
ಕೊಡಗಿಗೆ ಅತಿ ಹೆಚ್ಚು ಯೋಧರನ್ನು ದೇಶಕ್ಕೆ ನೀಡಿದ ಹೆಮ್ಮೆ ಇದೆ. ಇದೀಗ ದೇಶದ ಅತ್ಯಂತ ಜನಪ್ರಿಯ ತಾರೆಯೊಬ್ಬರು ನೀಡಿದ ಹೆಗ್ಗಳಿಕೆ. ಆ ತಾರೆಯಾಗಿ ನಿಮಗೆ ಏನನ್ನಿಸುತ್ತದೆ?
ಹೌದು, ಬಹಳಷ್ಟು ಮಂದಿ ದೊಡ್ಡವರನ್ನು ಕೊಡಗು ನೀಡಿದೆ. ಕೊಡಗಿನಿಂದ ಬಂದು ಈ ಸ್ಥಾನದಲ್ಲಿ ನಿಂತಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ಸಂತೋಷ ಆಗುತ್ತಿದೆ ಇನ್ನೂ ಹೆಚ್ಚಿನದನ್ನು ಸಾಧಿಸಬೇಕು ಎಂದು ಮನಸ್ಸು ಹೇಳುತ್ತಿದೆ ನಾಡಿನ ಬಗ್ಗೆ ಕೃತಜ್ಞತಾ ಭಾವ ಇದೆ.

ಅಭಿನಯ ನೀವು ಆರಿಸಿಕೊಂಡ ವೃತ್ತಿಯೇ? ಅದು ನಿಮ್ಮನ್ನು ಆರಿಸಿಕೊಂಡು ಬಂತೇ?

ಅಭಿನಯ ನನ್ನನ್ನು ಆರಿಸಿಕೊಂಡು ಬಂತು. ನಾನು ಓದು ಮುಗಿದ ಮೇಲೆ ಕೊಡಗಿಗೆ ಹಿಂದಿರುಗಿ, ತಂದೆಯ ಜೊತೆ ಅವರ ಕಂಪನಿಯ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಆದರೆ ವಿಧಿ ನನ್ನನ್ನು ಇತ್ತ ಕರೆದು ತಂದಿತು. ನಟಿಯಾಗುವುದು ನನ್ನ destiny ಆಗಿತ್ತು. ಹಾಗಾಗಿ ಅದು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂತು.

ನಿಮ್ಮ instagram ನಲ್ಲಿ ನೀವು ‘be a miracle ಎಂದಿದ್ದೀರಿ. ನಿಮ್ಮದೂ ಪವಾಡ ಸದೃಶ ಬೆಳವಣಿಗೆ. ಇದು ಹೇಗಾಯಿತು ಎಂದು ನಿಮಗನಿಸುತ್ತದೆ.?

ನಾವು ಪ್ರಾಮಾಣಿಕರಾಗಿದ್ದಾಗ, ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದಾಗ ಎಲ್ಲವೂ ಸೇರಿ ಬರುತ್ತದೆ ಎನ್ನುವುದು ನನ್ನ ನಂಬಿಕೆ. ಅದು ಈಗ ನನ್ನ ಅನುಭವ ಕೂಡಾ. ನಾವು ನಾವಾಗಿದ್ದಾಗ ಇದು ಸಾಧ್ಯ. ಯಾರನ್ನು ಅನುಕರಿಸದೆ, ವೃತ್ತಿಗೆ ನಿಷ್ಠರಾಗಿದ್ದಾಗ, ದೇವರು ಜೊತೆಗಿರುತ್ತಾನೆ. ಬದುಕೇ ಒಂದು ಪಾವಡವಲ್ಲವೇ? ಜಗತ್ತಿಗೆ ಪ್ರತಿಯೊಂದು ಜೀವ ಕೂಡ miracle ಅಲ್ಲವೇ…?

ನಿಮ್ಮ ವೃತ್ತಿ ಜೀವನ ಹೇಗೆ ಸಾಗಿದೆ?
ಬಹಳ ಚೆನ್ನಾಗಿ ಸಾಗಿದೆ ಎಲ್ಲಾ ಕಡೆಯಿಂದ ಅವಕಾಶಗಳು ಬರುತ್ತಿವೆ. ಪ್ರತಿಯೊಂದು ಕಡೆ ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ನಾನಂತೂ ಇದನ್ನು ನಿರೀಕ್ಷಿಸಿರಲಿಲ್ಲ. ಜಗತ್ತಿನ ಮೂಲೆ ಮೂಲೆಗಳಿಂದ ಅಭಿಮಾನಿಗಳು ತೋರಿಸುವ ಪ್ರೀತಿ, ಗೌರವ ನಿಜಕ್ಕೂ ನನಗೆ ಬಹಳ ಸಂತೋಷ ತಂದಿದೆ ಅದಕ್ಕಾಗಿ ಎಲ್ಲರಿಗೂ ನನ್ನ ಕೃತಜ್ಞತೆ ಸಲ್ಲಬೇಕು.

ನೀವು ಒಂದು ಚಿತ್ರದಲ್ಲಿ ಅಭಿನಯಿಸಲು ಪರಿಗಣಿಸುವ ಮುಖ್ಯ ಅಂಶ ಯಾವುದು? ನಿಮ್ಮ ಪಾತ್ರವೇ? ಅದರ ನಿರ್ದೇಶಕರೇ? ನಾಯಕ ನಟರೇ? ಅದನ್ನು ನಿರ್ಮಿಸುವ ನಿರ್ಮಾಣ ಸಂಸ್ಥೆಯೇ? ಯಾಕೆ?

ಅದರ ಕಥಾ ವಸ್ತು. ಇವತ್ತು ಯಾವುದೇ ಚಿತ್ರ ಯಶಸ್ವಿಯಾಗುವುದು ಅದರ ಕಥೆಯಿಂದ. ಹಾಗಾಗಿ ಕಥೆ ಚೆನ್ನಾಗಿರುವುದು ಮುಖ್ಯ. ಅದನ್ನು ಸಮರ್ಥವಾಗಿ ತೆರೆಯ ಮೇಲೆ ನಿರೂಪಿಸುವವರು, ನಿರ್ಮಾಣ ವೆಚ್ಚ ಮಾಡುವವರು ಮುಖ್ಯ. ಅಷ್ಟೇ ಅಲ್ಲ ಅಭಿನಯ ಎಂದರೆ ಎದುರು ಇದ್ದವರ ನಟನೆಗೆ ಸರಿಯಾದ ಪ್ರತಿಕ್ರಿಯೆ. ಹಾಗಾಗಿ ನಮ್ಮ ಜೊತೆ ನಟಿಸುವ ಸಹನಟರು ಮುಖ್ಯರಾಗುತ್ತಾರೆ. ಸಮರ್ಥ ನಟರಿದ್ದಾಗ ನಮ್ಮ ಅಭಿನಯವೂ ಉತ್ತಮವಾಗುತ್ತದೆ. ಪಾತ್ರಗಳ ಆಯ್ಕೆಯೂ ಅಷ್ಟೇ. ಕೆಲವು ಸಲ ಪಾತ್ರಗಳು ಚಿಕ್ಕದಾಗಿದ್ದು ಕಥೆ ಚೆನ್ನಾಗಿದ್ದಾಗ ಒಪ್ಪಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ನಮ್ಮ ಹೃದಯಕ್ಕೆ ಹತ್ತಿರವಾದ ಪಾತ್ರಗಳು ಇರುತ್ತವೆ. ಉದಾಹರಣೆಗೆ? ಕಿರಿಕ್ ಪಾರ್ಟಿ ಯ ‘ಸಾನ್ವಿ, ಗೀತಾ ಗೋವಿಂದದ ಗೀತಾ, ಡಿಯರ್ ಕಾಮ್ರೆಡ್ ನ ಲಿಲ್ಲಿ’ ಅಂತಹ ಪಾತ್ರಗಳು ಇಂತಹ ಪಾತ್ರಗಳು ವೃತ್ತಿ ಜೀವನದಲ್ಲಿ ಸಿಗುವುದು ಅಪರೂಪ.

ನಿಮ್ಮನ್ನು ನ್ಯಾಷನಲ್ ಕ್ರಶ್ ಎನ್ನುತ್ತಿದ್ದಾರೆ ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ?

ಖುಷಿಯಾಗುತ್ತದೆ ಆಶ್ಚರ್ಯವೂ ಆಗುತ್ತದೆ. ನನಗೆ ಗೊತ್ತಿಲ್ಲ, ಎಲ್ಲವೂ ಅಭಿಮಾನಿಗಳ ಪ್ರೀತಿ, ವಿಶ್ವಾಸ ವೆರಿ ಸ್ವೀಟ್ ಆಫ್ ದೆಮ್.

ಸಾಮಾಜಿಕ ಜಾಲತಾಣದಲ್ಲಿ, ಟ್ರೋಲ್ ಗಳ ಮೂಲಕ ನಿಮ್ಮ ಬಗ್ಗೆ ಟೀಕೆ ಮೆಚ್ಚುಗಳು ಇರುತ್ತವೆ. ಇವುಗಳಿಗೆ ನಿಮ್ಮ ಪ್ರತಿಕ್ರಿಯೆ ಏನು ?

ಸಹಜವಾಗಿಯೇ ಮೆಚ್ಚುಗೆ ಬಂದಾಗ ಖುಷಿಯಾಗುತ್ತದೆ. ಟೀಕೆಗಳು ಬಂದಾಗ ಬೇಸರವಾಗುತ್ತದೆ. ಒಳ್ಳೆಯ ವಿಷಯ ಕೇಳಿದ್ದು ಎರಡು ಗಂಟೆ ಇರುತ್ತದೆ, ಮತ್ತೆ ಮರೆತು ಬಿಡುತ್ತೇನೆ. ಕೆಟ್ಟ ಟೀಕೆಯಾದರೆ ಮೂರು ಗಂಟೆ. ಮತ್ತೆ ಅದೇ ಅದು ಮರೆತುಬಿಡುತ್ತೇನೆ. ಅದು ಅಲ್ಲದೆ ಎರಡು ಮೂರು ಭಾಷೆಗಳ ಚಿತ್ರಗಳಲ್ಲಿ ನಟಿಸುವಾಗ, ಅದರ ಪಾತ್ರೆಗಳು ಅವುಗಳ ಹುಡುಗಿ ಇತ್ಯಾದಿಗಳ ಕಡೆ ಹೆಚ್ಚು ತೊಡಗಿಕೊಳ್ಳುವುದರಿಂದ ಈ ಬಗ್ಗೆ ಯೋಚಿಸಲು ಸಮಯ ಇರುವುದಿಲ್ಲ ಅದು ಅಲ್ಲದೆ ಹೊಸ ಚಿತ್ರ ಬಿಡುಗಡೆ ಆದಾಗ ಈ ಒಳ್ಳೆಯ ಕೆಟ್ಟ ಪ್ರತಿಕ್ರಿಯೆ ಟೀಕೆಗಳನ್ನೆಲ್ಲ ಮರೆತು ಅರ್ಥ ಗಮನ ಹರಿಸುತ್ತಾರೆ. ಹಾಗಾಗಿ ಯಾರು ಏನೇ ಹೇಳಿದರೂ ಅವರೆಲ್ಲ ನನ್ನ ಅಭಿಮಾನಿಗಳೇ ಆಗಿರುವುದರಿಂದ ಅವರ ಬಗ್ಗೆ ಗೌರವವಿದೆ.

ನಿಮ್ಮ ಅಭಿಮಾನಿಗಳ ಸಂಖ್ಯೆ ಸಾಕಷ್ಟು. ಇನ್ಸ್ಟಾಗ್ರಾಮ್ ನಲ್ಲಿ 3 ಕೋಟಿಗೂ ಹೆಚ್ಚು ಮಂದಿ ನಿಮ್ಮನ್ನು ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬ ನಿಮ್ಮನ್ನು ನೋಡಲು ನಿಮ್ಮ ಮನೆಗೆ ಹುಡುಕಿಕೊಂಡು ಬಂದದ್ದೂ ಇದೆ. ಇವರಿಗೆಲ್ಲ ನೀವು ಏನು ಹೇಳಲು ಬಯಸುತ್ತೀರಿ?

ನಟಿಯಾಗಿ ನನ್ನಿಂದ ಮನರಂಜನೆ ಬಯಸುವ ಅಭಿಮಾನಿಗಳಲ್ಲಿ ಎಲ್ಲಾ ಸ್ವಭಾವದವರೂ ಇರುತ್ತಾರೆ. ಅವರ ಬಗ್ಗೆ ನಾನು ಬೇರೆ ಏನೂ ಹೇಳಲಾರೆ. ಕಲಾವಿದರಿಗೆ ಅಭಿಮಾನಿಗಳೇ ಮೂಲ. ಅಭಿಮಾನಿಗಳ ಬಳಿ ನನ್ನದೊಂದು ಕೋರಿಕೆ ಇದೆ. ಕಮೆಂಟ್ ಮಾಡುವುದಾಗಲೀ, ಟ್ರೋಲ್ ಮಾಡುವುದಾಗಲೀ, ಮೀಮ್ ಗಳಾಗಲಿ, ನನ್ನ ಬಗ್ಗೆ ಏನೂ ಬೇಕಾದರೂ ಮಾಡಲಿ. ಆದರೆ ಅದು ನಮ್ಮ ಕುಟುಂಬದವರ ಬಗ್ಗೆ ಬೇಡ ಎನ್ನುವುದಷ್ಟೇ ನನ್ನ ಕೋರಿಕೆ.

‘ಆಂದೋಲನ’ದ ಓದುಗರಿಗೆ ನೀವು ಏನು ಹೇಳ ಬಯಸುತ್ತೀರಿ?

ಮೊಟ್ಟಮೊದಲು ಪತ್ರಿಕೆಗೆ ಅಭಿನಂದನೆಗಳು. ಬಹಳ ಸಂತೋಷವಾಗುತ್ತಿದೆ ಪತ್ರಿಕೆಯ 50 ವರ್ಷಗಳ ಸುದೀರ್ಘ ಯಾನಕ್ಕೆ ಸಂಬಂಧಪಟ್ಟವರಿಗೆಲ್ಲ ಪ್ರೀತಿಯ ಶುಭಾಶಯಗಳು. ಓದುಗರೆಲ್ಲರಿಗೂ LOVE and HUGS. ನಿಮಗೆಲ್ಲ ಆರೋಗ್ಯ ಭಾಗ್ಯ ಸದಾ ಇರಲಿ. ಎಲ್ಲರಿಗೂ ಒಳ್ಳೆಯದಾಗಲಿ ನನ್ನ ಅಭಿಮಾನಿಗಳಿಗೆ, ಮತ್ತೆ ಕನ್ನಡ ಚಿತ್ರದ ಮೂಲಕ ನಿಮಗೆಲ್ಲ ರಂಜಿಸಲು ಬರುತ್ತೇನೆ.
big big hugs….

andolanait

Recent Posts

ಓದುಗರ ಪತ್ರ: ನಾಗನಹಳ್ಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ನಾಗನಹಳ್ಳಿಯಿಂದ ಪ್ರತಿನಿತ್ಯ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೈಸೂರು ನಗರಕ್ಕೆ ತೆರಳುತ್ತಾರೆ. ಆದರೆ ನಾಗನಹಳ್ಳಿಯಿಂದ ಮೈಸೂರಿಗೆ…

3 hours ago

ಓದುಗರ ಪತ್ರ: ತಾಲ್ಲೂಕು ಕಚೇರಿ ಆವರಣದಲ್ಲಿ ಕಸ ತೆರವುಗೊಳಿಸಿ

ಮೈಸೂರಿನಲ್ಲಿ ಪಾರಂಪರಿಕತೆ ಹಾಗೂ ಆಧುನಿಕತೆಯನ್ನು ಸಮ್ಮಿಳಿಸಿಕೊಂಡು ನಿರ್ಮಿಸಲಾಗಿರುವ ತಾಲ್ಲೂಕು ಕಚೇರಿಯ ಕಟ್ಟಡದ ಆವರಣದಲ್ಲೇ ಕಸ ಸಂಗ್ರಹವಾಗಿದ್ದು, ಕೆಲಸ ಕಾರ್ಯಗಳಿಗಾಗಿ ಪ್ರತಿ…

3 hours ago

ಓದುಗರ ಪತ್ರ: ಜನಪ್ರತಿನಿಧಿಗಳು ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಲಿ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಶಾಸಕ, ಹುಬ್ಬಳ್ಳಿಯ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಶಿವರಾಜಕುಮಾರ್-‘ಆನಂದ್’೪೦ರ ವೇಳೆ-ಆ ದಿನಗಳ ನೆನಪು

ಕಳೆದವಾರ, ಫೆಬ್ರವರಿ ೧೯, ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರ ಸೆಟ್ಟೇರಿ ೪೦ ವರ್ಷ. ಅಭಿಮಾನಿಗಳು ಈ ನೆನಪಿನ ಸಂಭ್ರಮವನ್ನು ಆಚರಿಸಿದರು.…

3 hours ago

ಸಫಾರಿ ಪುನಾರಂಭಕ್ಕೆ ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆ

ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ…

3 hours ago

ಕುಶಾಲನಗರ: ಕೆಎಸ್‌ಆರ್‌ಟಿಸಿ ಡಿಪೋ ಕಾಮಗಾರಿ ಚುರುಕು

ಪುನೀತ್ ಮಡಿಕೇರಿ ಒಟ್ಟು ೮ ಕೋಟಿ ರೂ. ಮೊತ್ತದ ಯೋಜನೆ; ಸಾರಿಗೆ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ  ಮಡಿಕೇರಿ: ಕುಶಾಲನಗರದ ಬಹು…

4 hours ago