ಆಂದೋಲನ 50

ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧವಾದ ಆಂದೋಲನ ; ಭಾಗ -1

ಚಳವಳಿಗಳ ಮಡಿಲಲ್ಲೇ ಬೆಳೆದ ‘ಆಂದೋಲನ’ಕ್ಕೆ ಸದಾ ಜನಪರ ಚಿಂತನೆಗಳಿಗೆ ಕಿವಿಯಾಗಿ, ನೋವುಗಳ ಪರಿಹಾರಕ್ಕೆ ಧ್ವನಿಯಾಗಿ ಮೌಲ್ಯಭರಿತ ಸುದ್ದಿಗಳನ್ನು ಪ್ರಕಟಿಸುವುದೇ ಏಕೈಕ ಗುರಿಯಾಗಿದೆ. ಅಷ್ಟೇ ಅಲ್ಲದೆ, ವ್ಯಕ್ತಿಗತ ಅನ್ಯಾಯವಾದರೂ, ಸಾಮೂಹಿಕವಾಗಿ ದೌರ್ಜನ್ಯ ನಡೆದರೂ ‘ಪತ್ರಿಕೆ’ ಸಂತ್ರಸ್ತರ ಪರವಾಗಿ ನಿಂತು ಚಿಕಿತ್ಸಕ ದೃಷ್ಟಿಯಿಂದ ಸುದ್ದಿಗಳನ್ನು ಬಿತ್ತರಿಸುತ್ತಿದೆ. ೫೦ ವರ್ಷಗಳ ಪಯಣದಲ್ಲಿ ಇಂತಹ ಅನೇಕ ಪ್ರಕರಣಗಳಿಗೆ ‘ಪತ್ರಿಕೆ’ ಸಾಕ್ಷಿಯಾಗಿದೆ. ನೊಂದವರಿಗೆ ನ್ಯಾಯ ಒದಗಿಸುವ ಹೋರಾಟಕ್ಕೆ ವೇದಿಕೆಯಾಗಿದೆ. ಅದರಲ್ಲಿಯೂ ಪ್ರಮುಖವಾಗಿ ವಿಕ್ರಾಂತ್ ಟೈರ್ಸ್‌ ಕಾರ್ಖಾನೆ ಕಾರ್ಮಿಕ ಸತ್ಯದೇವ್ ಕೊಲೆ ಪ್ರಕರಣ, ಹಂಗರಹಳ್ಳಿ ಜೀತಕ್ಕಿದ್ದವರಿಗೆ ಬಿಡುಗಡೆ ಸಿಕ್ಕಿದ್ದು ಮತ್ತು ಜಾತಿ ದಳ್ಳುರಿಯಿಂದ ಬೆಂದು ಹೋದ ಬದನವಾಳು ದುರಂತದ ಸಂದರ್ಭಗಳಲ್ಲಿ ಪ್ರಾದೇಶಿಕ ಪತ್ರಿಕೆಯಾಗಿಯೂ ‘ಆಂದೋಲನ’ ತಳೆದ ದಿಟ್ಟ ನಿಲುವು ಪತ್ರಿಕಾ ಕ್ಷೇತ್ರದಲ್ಲಿ ಅನುಕರಣೀಯ. ಸತ್ಯದೇವ್ ಕೊಲೆ ಪ್ರಕರಣ ಮುಚ್ಚಿಯೇ ಹೋಗಿತ್ತು. ಆರೋಪಿ ಮೈಸೂರಿನಲ್ಲೇ ಡಿಸಿಪಿಯಾಗಿದ್ದ ಸೋಮಶೇಖರ್! ಸತ್ಯಶೋಧನೆಗಾಗಿ ‘ಪತ್ರಿಕೆ’ ಅವರನ್ನೂ ಎದುರು ಹಾಕಿಕೊಂಡಿತ್ತು. ಹಂಗರಹಳ್ಳಿಯಲ್ಲಿ ಕಾಲುಗಳಿಗೆ ಸರಪಳಿ ಬಿಗಿಸಿಕೊಂಡಿದ್ದ ಕಾರ್ಮಿಕರ ಬಿಡುಗಡೆಗೆ ಶ್ರಮ ವಹಿಸಿದ ರೈತ ಸಂಘದ ಮುಖಂಡರಿಗೆ ಸಹಕಾರ ನೀಡಿದ್ದಲ್ಲದೆ, ಬದನವಾಳು ದುರಂತದಲ್ಲಿ ಸಂತ್ರಸ್ತರ ಪರ ನಿಲ್ಲುವ ಮೂಲಕ ‘ಪತ್ರಿಕೆ’, ಇನ್ನೊಂದು ಕೋಮಿನ ಬಹಿಷ್ಕಾರಕ್ಕೆ ಒಳಗಾಗುವ ಹಂತಕ್ಕೂ ಹೋಗಿತ್ತು.

ಡಿಸಿಪಿಯನ್ನೇ ಜೈಲಿಗಟ್ಟಿದ ‘ಸತ್ಯದೇವ್ ಕೊಲೆ’ ಪ್ರಕರಣ

ಡಿಸಿಪಿ ಮತ್ತು ಅವರ ಕುಟುಂಬ ಲಲಿತ ಮಹಲ್ ಪ್ಯಾಲೆಸ್ ಈಜುಕೊಳದಲ್ಲಿ ವಿಹರಿಸುತ್ತಿದ್ದ ಸಂದರ್ಭದಲ್ಲಿ ವಿಕ್ರಾಂತ್ ಟೈರ್ಸ್‌ ಕಾರ್ಮಿಕ ಸತ್ಯದೇವ್ ಅಲ್ಲಿಗೆ ಹೋಗಿದ್ದ. ಅದರಿಂದ ಕುಪಿತಗೊಂಡ ಡಿಸಿಪಿ ಆತನ ಮೇಲೆ ಹಲ್ಲೆ ನಡೆಸಿದ್ದರಿಂದ ಸತ್ಯದೇವ್ ಮೃತಪಟ್ಟ. ಪ್ರಕರಣವನ್ನು ಮುಚ್ಚಿ ಹಾಕಲು ಡಿಸಿಪಿ ಮೃತದೇಹವನ್ನು ಈಜುಕೊಳಕ್ಕೆ ತಳ್ಳಿದ್ದರು. ಆದರೆ, ‘ಆಂದೋಲನ’ದ ವರದಿಗಾರರು, ಸಂಪಾದಕರ ಜನಪರ ಕಾಳಜಿಯಿಂದ ಸತ್ಯವನ್ನು ಮುಚ್ಚಿಡುವುದು ಸಾಧ್ಯವಾಗಲಿಲ್ಲ. 

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತನಿಖಾ ಪತ್ರಿಕೋದ್ಯಮದ ಬಗ್ಗೆ ಪಾಠ ಹೇಳುವಾಗ ಮೈಸೂರಿನ ಸತ್ಯದೇವ್ ಕೊಲೆ ಪ್ರಕರಣ ಬಯಲು ಮಾಡಿದ್ದನ್ನು ಆಗಾಗ ಉಲ್ಲೇಖಿಸಲಾಗುತ್ತದೆ. ಇದನ್ನ ಬಯಲಿಗೆಳೆದಿದ್ದು ಆಂದೋಲನ.

ಅಮಾಯಕ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾಬ್ಬ ಈಜುಕೊಳದಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಅದನ್ನು ಮುಚ್ಚಿ ಹಾಕುವುದಕ್ಕೆ ನಡೆಸಿದರೂ ‘ಆಂದೋಲನ’ ದಿನಪತ್ರಿಕೆಯ ಎಕ್ಸ್‌ರೇ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅದೊಂದು ಅಸ್ವಾಭಾವಿಕ ಸಾವು ಎಂದು ಸಮಾಜವನ್ನು ನಂಬಿಸಲಾಗಿತ್ತು. ಆದರೆ, ಅಂದು ‘ಆಂದೋಲನ’ ವರದಿಗಾರರಾಗಿದ್ದ ‘ಅಂಶಿ ಪ್ರಸನ್ನಕುಮಾರ್’ ಅವರಿಗೆ ಸಿಕ್ಕಿದ ಕೂದಲೆಳೆಯಂತಹ ಮಾಹಿತಿ ಡಿಸಿಪಿ ಹುದ್ದೆಯಲ್ಲಿದ್ದ ಅಧಿಕಾರಿಯನ್ನು ಕಾನೂನಿನ ಮುಷ್ಟಿಗೊಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿತು.

ಅದು ೧೯೯೦ರ ದಶಕ. ಮೈಸೂರಿನ ಲಲಿತ ಮಹಲ್ ಪ್ಯಾಲೇಸ್‌ನ ಈಜುಕೊಳದಲ್ಲಿ ಸತ್ಯದೇವ್ ಎಂಬ ಯುವಕನ ಶವ ಪತ್ತೆಯಾಗಿತ್ತು. ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಲಾಗಿತ್ತು. ಒಂದು ದಿನ ವರದಿಗಾರ ಅಂಶಿ ಅವರಿಗೆ ಫೋನ್ ಕರೆೊಂಂದು ಬರುತ್ತದೆ. ‘‘ಸತ್ಯದೇವ್ ಶವ ಸಿಕ್ಕಿದಾಗ ಡಿಸಿಪಿ ಅಲ್ಲಿದ್ದರು. ಆದರೆ, ನಾನು ಅಲ್ಲಿರಲಿಲ್ಲ ಎಂದು ಎಲ್ಲರಿಗೂ ವೈರ್‌ಲೆಸ್ ಮೂಲಕ ಸಂದೇಶ ರವಾನಿಸಿದ್ದಾರೆ’’ ಎಂಬುದಾಗಿ ಇನ್‌ಸ್ಪೆಕ್ಟರ್ ದರ್ಜೆ ಅಧಿಕಾರಿೊಂಬ್ಬರು ಮಾಹಿತಿ ನೀಡಿದ್ದರು. ಅದರ ಬೆನ್ನುಬಿದ್ದಾಗ, ಮರಣೋತ್ತರ ವರದಿಯಲ್ಲಿ ಕೂಡ ಶವದ ಹೊಟ್ಟೆಯಲ್ಲಿ ನೀರು ಇರಲಿಲ್ಲ ಎಂದು ದಾಖಲಾಗಿತ್ತು. ಅಲ್ಲದೆ, ಸತ್ಯದೇವ್ ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಅಂದರೆ ಉಸಿರು ಹೋದ ಮೇಲೆ ನೀರಿಗೆ ಬಿದ್ದಿರಬೇಕು ಅಥವಾ ಯಾರೋ ಸಾಯಿಸಿ ಬಳಿಕ ನೀರಿಗೆ ಹಾಕಿರಬೇಕು ಎನ್ನುವುದು ಸ್ಪಷ್ಟವಾಗಿತ್ತು.

ಹಲವು ಪೊಲೀಸ್ ಕುಟುಂಬದವರು ಲಲಿತ ಮಹಲ್ ಈಜುಕೊಳಕ್ಕೆ ವಿಹಾರಕ್ಕಾಗಿ ಹೋಗುತ್ತಿದ್ದರು. ಸತ್ಯದೇವ್ ಪ್ರತಿದಿನ ಆ ಈಜುಕೊಳದತ್ತ ಹೋಗುತ್ತಿದ್ದ ಎಂಬ ಅಂಶಗಳೂ ಒಂದಕ್ಕೊಂದು ತಾಳೆಯಾಗುತ್ತಿದ್ದವು. ಅಂದರೆ ಘಟನೆ ನಡೆದ ದಿನ ಡಿಸಿಪಿ ಕೂಡ ಆ ಈಜುಕೊಳದ ಬಳಿ ಇದ್ದರು ಎಂಬುದಕ್ಕೆ ಸಾಕ್ಷಿಗಳೂ ಇದ್ದವು. ಇದನ್ನೇ ಆಧರಿಸಿ ‘ಆಂದೋಲನ’ದಲ್ಲಿ ‘ವಿಕ್ರಾಂತ್ ಟೈರ್ಸ್‌ ಕಾರ್ಮಿಕ ಸತ್ಯದೇವ್ ಕೊಲೆಯಾದನೆ?’ ಶೀರ್ಷಿಕೆಯಡಿ ವರದಿ ಪ್ರಕಟವಾಯಿತು. ಅದೇ ದಿನ ಸತ್ಯದೇವ್ ತಾಯಿ ಕೂಡ ತನ್ನ ಮಗ ಕೊಲೆಯಾಗಿರಬಹುದು ತನಿಖೆ ನಡೆಸಿ ಎಂದು ದೂರು ನೀಡಿದರು.

ಡಿಸಿಪಿಯೇ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಅಂದಿನ ಸಿಒಡಿಗೆ ವಹಿಸಲಾಯಿತು. ಡಿಸಿಪಿ ಬಂಧನಕ್ಕೊಳಗಾದರು. ಅವರು ಜಾಮೀನು ಸಿಗುವ ತನಕ ಸೆರೆಮನೆಯಲ್ಲಿರುವುದು ಅನಿವಾರ್ಯವಾಯಿತು. ಜಿಲ್ಲಾ ನ್ಯಾಯಾಲಯ ಡಿಸಿಪಿಯನ್ನು ಆರೋಪ ಮುಕ್ತಗೊಳಿಸಿದರೂ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆರೋಪಿಗೆ ೧೦ ವರ್ಷ ಸಜೆ ವಿಧಿಸಲಾಯಿತು. ನಂತರ ಆತ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ, ಅಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದಾಗಲೇ ಆರೋಪಿ ನಿಧನರಾದರು. ಅದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago