ಆಂದೋಲನ 50

ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧವಾದ ಆಂದೋಲನ ; ಭಾಗ -1

ಚಳವಳಿಗಳ ಮಡಿಲಲ್ಲೇ ಬೆಳೆದ ‘ಆಂದೋಲನ’ಕ್ಕೆ ಸದಾ ಜನಪರ ಚಿಂತನೆಗಳಿಗೆ ಕಿವಿಯಾಗಿ, ನೋವುಗಳ ಪರಿಹಾರಕ್ಕೆ ಧ್ವನಿಯಾಗಿ ಮೌಲ್ಯಭರಿತ ಸುದ್ದಿಗಳನ್ನು ಪ್ರಕಟಿಸುವುದೇ ಏಕೈಕ ಗುರಿಯಾಗಿದೆ. ಅಷ್ಟೇ ಅಲ್ಲದೆ, ವ್ಯಕ್ತಿಗತ ಅನ್ಯಾಯವಾದರೂ, ಸಾಮೂಹಿಕವಾಗಿ ದೌರ್ಜನ್ಯ ನಡೆದರೂ ‘ಪತ್ರಿಕೆ’ ಸಂತ್ರಸ್ತರ ಪರವಾಗಿ ನಿಂತು ಚಿಕಿತ್ಸಕ ದೃಷ್ಟಿಯಿಂದ ಸುದ್ದಿಗಳನ್ನು ಬಿತ್ತರಿಸುತ್ತಿದೆ. ೫೦ ವರ್ಷಗಳ ಪಯಣದಲ್ಲಿ ಇಂತಹ ಅನೇಕ ಪ್ರಕರಣಗಳಿಗೆ ‘ಪತ್ರಿಕೆ’ ಸಾಕ್ಷಿಯಾಗಿದೆ. ನೊಂದವರಿಗೆ ನ್ಯಾಯ ಒದಗಿಸುವ ಹೋರಾಟಕ್ಕೆ ವೇದಿಕೆಯಾಗಿದೆ. ಅದರಲ್ಲಿಯೂ ಪ್ರಮುಖವಾಗಿ ವಿಕ್ರಾಂತ್ ಟೈರ್ಸ್‌ ಕಾರ್ಖಾನೆ ಕಾರ್ಮಿಕ ಸತ್ಯದೇವ್ ಕೊಲೆ ಪ್ರಕರಣ, ಹಂಗರಹಳ್ಳಿ ಜೀತಕ್ಕಿದ್ದವರಿಗೆ ಬಿಡುಗಡೆ ಸಿಕ್ಕಿದ್ದು ಮತ್ತು ಜಾತಿ ದಳ್ಳುರಿಯಿಂದ ಬೆಂದು ಹೋದ ಬದನವಾಳು ದುರಂತದ ಸಂದರ್ಭಗಳಲ್ಲಿ ಪ್ರಾದೇಶಿಕ ಪತ್ರಿಕೆಯಾಗಿಯೂ ‘ಆಂದೋಲನ’ ತಳೆದ ದಿಟ್ಟ ನಿಲುವು ಪತ್ರಿಕಾ ಕ್ಷೇತ್ರದಲ್ಲಿ ಅನುಕರಣೀಯ. ಸತ್ಯದೇವ್ ಕೊಲೆ ಪ್ರಕರಣ ಮುಚ್ಚಿಯೇ ಹೋಗಿತ್ತು. ಆರೋಪಿ ಮೈಸೂರಿನಲ್ಲೇ ಡಿಸಿಪಿಯಾಗಿದ್ದ ಸೋಮಶೇಖರ್! ಸತ್ಯಶೋಧನೆಗಾಗಿ ‘ಪತ್ರಿಕೆ’ ಅವರನ್ನೂ ಎದುರು ಹಾಕಿಕೊಂಡಿತ್ತು. ಹಂಗರಹಳ್ಳಿಯಲ್ಲಿ ಕಾಲುಗಳಿಗೆ ಸರಪಳಿ ಬಿಗಿಸಿಕೊಂಡಿದ್ದ ಕಾರ್ಮಿಕರ ಬಿಡುಗಡೆಗೆ ಶ್ರಮ ವಹಿಸಿದ ರೈತ ಸಂಘದ ಮುಖಂಡರಿಗೆ ಸಹಕಾರ ನೀಡಿದ್ದಲ್ಲದೆ, ಬದನವಾಳು ದುರಂತದಲ್ಲಿ ಸಂತ್ರಸ್ತರ ಪರ ನಿಲ್ಲುವ ಮೂಲಕ ‘ಪತ್ರಿಕೆ’, ಇನ್ನೊಂದು ಕೋಮಿನ ಬಹಿಷ್ಕಾರಕ್ಕೆ ಒಳಗಾಗುವ ಹಂತಕ್ಕೂ ಹೋಗಿತ್ತು.

ಡಿಸಿಪಿಯನ್ನೇ ಜೈಲಿಗಟ್ಟಿದ ‘ಸತ್ಯದೇವ್ ಕೊಲೆ’ ಪ್ರಕರಣ

ಡಿಸಿಪಿ ಮತ್ತು ಅವರ ಕುಟುಂಬ ಲಲಿತ ಮಹಲ್ ಪ್ಯಾಲೆಸ್ ಈಜುಕೊಳದಲ್ಲಿ ವಿಹರಿಸುತ್ತಿದ್ದ ಸಂದರ್ಭದಲ್ಲಿ ವಿಕ್ರಾಂತ್ ಟೈರ್ಸ್‌ ಕಾರ್ಮಿಕ ಸತ್ಯದೇವ್ ಅಲ್ಲಿಗೆ ಹೋಗಿದ್ದ. ಅದರಿಂದ ಕುಪಿತಗೊಂಡ ಡಿಸಿಪಿ ಆತನ ಮೇಲೆ ಹಲ್ಲೆ ನಡೆಸಿದ್ದರಿಂದ ಸತ್ಯದೇವ್ ಮೃತಪಟ್ಟ. ಪ್ರಕರಣವನ್ನು ಮುಚ್ಚಿ ಹಾಕಲು ಡಿಸಿಪಿ ಮೃತದೇಹವನ್ನು ಈಜುಕೊಳಕ್ಕೆ ತಳ್ಳಿದ್ದರು. ಆದರೆ, ‘ಆಂದೋಲನ’ದ ವರದಿಗಾರರು, ಸಂಪಾದಕರ ಜನಪರ ಕಾಳಜಿಯಿಂದ ಸತ್ಯವನ್ನು ಮುಚ್ಚಿಡುವುದು ಸಾಧ್ಯವಾಗಲಿಲ್ಲ. 

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತನಿಖಾ ಪತ್ರಿಕೋದ್ಯಮದ ಬಗ್ಗೆ ಪಾಠ ಹೇಳುವಾಗ ಮೈಸೂರಿನ ಸತ್ಯದೇವ್ ಕೊಲೆ ಪ್ರಕರಣ ಬಯಲು ಮಾಡಿದ್ದನ್ನು ಆಗಾಗ ಉಲ್ಲೇಖಿಸಲಾಗುತ್ತದೆ. ಇದನ್ನ ಬಯಲಿಗೆಳೆದಿದ್ದು ಆಂದೋಲನ.

ಅಮಾಯಕ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾಬ್ಬ ಈಜುಕೊಳದಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಅದನ್ನು ಮುಚ್ಚಿ ಹಾಕುವುದಕ್ಕೆ ನಡೆಸಿದರೂ ‘ಆಂದೋಲನ’ ದಿನಪತ್ರಿಕೆಯ ಎಕ್ಸ್‌ರೇ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅದೊಂದು ಅಸ್ವಾಭಾವಿಕ ಸಾವು ಎಂದು ಸಮಾಜವನ್ನು ನಂಬಿಸಲಾಗಿತ್ತು. ಆದರೆ, ಅಂದು ‘ಆಂದೋಲನ’ ವರದಿಗಾರರಾಗಿದ್ದ ‘ಅಂಶಿ ಪ್ರಸನ್ನಕುಮಾರ್’ ಅವರಿಗೆ ಸಿಕ್ಕಿದ ಕೂದಲೆಳೆಯಂತಹ ಮಾಹಿತಿ ಡಿಸಿಪಿ ಹುದ್ದೆಯಲ್ಲಿದ್ದ ಅಧಿಕಾರಿಯನ್ನು ಕಾನೂನಿನ ಮುಷ್ಟಿಗೊಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿತು.

ಅದು ೧೯೯೦ರ ದಶಕ. ಮೈಸೂರಿನ ಲಲಿತ ಮಹಲ್ ಪ್ಯಾಲೇಸ್‌ನ ಈಜುಕೊಳದಲ್ಲಿ ಸತ್ಯದೇವ್ ಎಂಬ ಯುವಕನ ಶವ ಪತ್ತೆಯಾಗಿತ್ತು. ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಲಾಗಿತ್ತು. ಒಂದು ದಿನ ವರದಿಗಾರ ಅಂಶಿ ಅವರಿಗೆ ಫೋನ್ ಕರೆೊಂಂದು ಬರುತ್ತದೆ. ‘‘ಸತ್ಯದೇವ್ ಶವ ಸಿಕ್ಕಿದಾಗ ಡಿಸಿಪಿ ಅಲ್ಲಿದ್ದರು. ಆದರೆ, ನಾನು ಅಲ್ಲಿರಲಿಲ್ಲ ಎಂದು ಎಲ್ಲರಿಗೂ ವೈರ್‌ಲೆಸ್ ಮೂಲಕ ಸಂದೇಶ ರವಾನಿಸಿದ್ದಾರೆ’’ ಎಂಬುದಾಗಿ ಇನ್‌ಸ್ಪೆಕ್ಟರ್ ದರ್ಜೆ ಅಧಿಕಾರಿೊಂಬ್ಬರು ಮಾಹಿತಿ ನೀಡಿದ್ದರು. ಅದರ ಬೆನ್ನುಬಿದ್ದಾಗ, ಮರಣೋತ್ತರ ವರದಿಯಲ್ಲಿ ಕೂಡ ಶವದ ಹೊಟ್ಟೆಯಲ್ಲಿ ನೀರು ಇರಲಿಲ್ಲ ಎಂದು ದಾಖಲಾಗಿತ್ತು. ಅಲ್ಲದೆ, ಸತ್ಯದೇವ್ ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಅಂದರೆ ಉಸಿರು ಹೋದ ಮೇಲೆ ನೀರಿಗೆ ಬಿದ್ದಿರಬೇಕು ಅಥವಾ ಯಾರೋ ಸಾಯಿಸಿ ಬಳಿಕ ನೀರಿಗೆ ಹಾಕಿರಬೇಕು ಎನ್ನುವುದು ಸ್ಪಷ್ಟವಾಗಿತ್ತು.

ಹಲವು ಪೊಲೀಸ್ ಕುಟುಂಬದವರು ಲಲಿತ ಮಹಲ್ ಈಜುಕೊಳಕ್ಕೆ ವಿಹಾರಕ್ಕಾಗಿ ಹೋಗುತ್ತಿದ್ದರು. ಸತ್ಯದೇವ್ ಪ್ರತಿದಿನ ಆ ಈಜುಕೊಳದತ್ತ ಹೋಗುತ್ತಿದ್ದ ಎಂಬ ಅಂಶಗಳೂ ಒಂದಕ್ಕೊಂದು ತಾಳೆಯಾಗುತ್ತಿದ್ದವು. ಅಂದರೆ ಘಟನೆ ನಡೆದ ದಿನ ಡಿಸಿಪಿ ಕೂಡ ಆ ಈಜುಕೊಳದ ಬಳಿ ಇದ್ದರು ಎಂಬುದಕ್ಕೆ ಸಾಕ್ಷಿಗಳೂ ಇದ್ದವು. ಇದನ್ನೇ ಆಧರಿಸಿ ‘ಆಂದೋಲನ’ದಲ್ಲಿ ‘ವಿಕ್ರಾಂತ್ ಟೈರ್ಸ್‌ ಕಾರ್ಮಿಕ ಸತ್ಯದೇವ್ ಕೊಲೆಯಾದನೆ?’ ಶೀರ್ಷಿಕೆಯಡಿ ವರದಿ ಪ್ರಕಟವಾಯಿತು. ಅದೇ ದಿನ ಸತ್ಯದೇವ್ ತಾಯಿ ಕೂಡ ತನ್ನ ಮಗ ಕೊಲೆಯಾಗಿರಬಹುದು ತನಿಖೆ ನಡೆಸಿ ಎಂದು ದೂರು ನೀಡಿದರು.

ಡಿಸಿಪಿಯೇ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಅಂದಿನ ಸಿಒಡಿಗೆ ವಹಿಸಲಾಯಿತು. ಡಿಸಿಪಿ ಬಂಧನಕ್ಕೊಳಗಾದರು. ಅವರು ಜಾಮೀನು ಸಿಗುವ ತನಕ ಸೆರೆಮನೆಯಲ್ಲಿರುವುದು ಅನಿವಾರ್ಯವಾಯಿತು. ಜಿಲ್ಲಾ ನ್ಯಾಯಾಲಯ ಡಿಸಿಪಿಯನ್ನು ಆರೋಪ ಮುಕ್ತಗೊಳಿಸಿದರೂ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆರೋಪಿಗೆ ೧೦ ವರ್ಷ ಸಜೆ ವಿಧಿಸಲಾಯಿತು. ನಂತರ ಆತ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ, ಅಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದಾಗಲೇ ಆರೋಪಿ ನಿಧನರಾದರು. ಅದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.

andolana

Recent Posts

ಓದುಗರ ಪತ್ರ | ಚಲನ ಚಿತ್ರದ ಅಶ್ಲೀಲ ಸಾಹಿತ್ಯ ನಿಷೇಧಿಸಿ

ಕನ್ನಡ ಚಲನಚಿತ್ರಗಳು ಭಾರತೀಯ ಸಿನಿರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ತೆರೆ ಕಂಡ ಚಿತ್ರಗಳ ಹಾಡುಗಳು…

20 mins ago

ಓದುಗರ ಪತ್ರ | ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಿ

ಸರಗೂರು ಹಾಗೂ ಎಚ್‌.ಡಿ.ಕೋಟೆಯಿಂದ ಗುಂಡ್ಲುಪೇಟೆಗೆ ಪ್ರತಿನಿತ್ಯ ನೂರಾರು ಜನರು ಪ್ರಯಾಣಿಸುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸರಿಯಾದ ಸಮಯಕೆ…

31 mins ago

ಓದುಗರ ಪತ್ರ | ಕೆರೆಗಳ ಉಳಿವಿಗೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಿ

ರಾಜ್ಯದ ಜಲಮೂಲಗಳ ಸ್ಥಿತಿ ಇಂದು ಶೋಚನೀಯವಾಗಿದೆ. ಅಂಕಿ-ಅಂಶಗಳ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಅತಿಕ್ರಮಣದಿಂದಾಗಿ ನಗರ ಪ್ರದೇಶದ ಕೆರೆಗಳ ವಿಸ್ತೀರ್ಣ…

36 mins ago

ಓದುಗರ ಪತ್ರ | ನೀರು ಪೋಲು ಮಾಡದಂತೆ ಜಾಗೃತಿ ಮೂಡಿಸಿ

ಬೇಸಿಗೆಯ ತಾಪ ಹೆಚ್ಚಾದಂತೆ ರಾಜ್ಯದ ಹಲವೆಡೆ ಜನರು ಒಂದು ಬಿಂದಿಗೆ ನೀರಿಗಾಗಿ ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಹೀಗಿರುವಾಗ, ಮೈಸೂರು…

42 mins ago

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ತಾಲ್ಲೂಕು ವೀರಶೈವ ಲಿಂಗಾಯತ ಮಹಾ…

47 mins ago

ಅಪಘಾತದಿಂದ ಹೊತ್ತಿ ಉರಿದ ಟಿಪ್ಪರ್‌, ಬಸ್‌ : 14 ಮಂದಿ ಸಜೀವ ದಹನ

ಹೈದರಾಬಾದ್ : ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ,…

56 mins ago