ರಾಜ್ಯ

ರಾಜ್ಯದ ಶಾಂತಿ ಕದಡಿದರೆ ಅದರ ಹೊಣೆ ಸರ್ಕಾರವೇ ಹೊರಬೇಕಾಗುತ್ತದೆ: ನಾರಾಯಣಗೌಡ

ಬೆಂಗಳೂರು: ಬೆಳಗಾವಿಯಲ್ಲಿ ಬಸ್‌ ನಿರ್ವಾಹಕ ಹಾಗೂ ಚಾಲಕರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ್ದು, ಗೃಹ ಸಚಿವರು ತಕ್ಷಣವೇ ಮಧ್ಯೆ ಪ್ರವೇಶಿಸಿ ಮಹದೇವಪ್ಪ ವಿರುದ್ಧದ ಪ್ರಕರಣ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಈ ಸಂಘರ್ಷ ಹೀಗೆ ಮುಂದುವರೆದು ರಾಜ್ಯದ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ನಾರಾಯಣಗೌಡ್ರೇ ಬೆಳಗಾವಿಗೆ ಬನ್ನಿ, ಬಾಳೆಕುಂದ್ರಿಗೆ ಬನ್ನಿ, ಮರಾಠಿ ಬಾರದ ಕಾರಣಕ್ಕೆ, ಮರಾಠಿಯಲ್ಲಿ ಮಾತನಾಡದ ಕಾರಣಕ್ಕೆ ಅನ್ಯಾಯವಾಗಿ ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಹದೇವಪ್ಪ ಹುಕ್ಕೇರಿಯವರಿಗೆ ನ್ಯಾಯ ಕೊಡಿಸಿ ಎಂದು ನೂರಾರು ಮಂದಿ ಹೇಳುತ್ತಿದ್ದೀರಿ. ಫೋನುಗಳು, ಸಂದೇಶಗಳು, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಪೋಸ್ಟ್ ಗಳ ಮೂಲಕ ನೀವು ನನ್ನನ್ನು ಕರೆಯುತ್ತಿದ್ದೀರಿ. ದೌರ್ಜನ್ಯಕ್ಕೆ ಒಳಗಾದ ಮಹದೇವಪ್ಪ ಅವರ ಮೇಲೇ ರಾತ್ರೋರಾತ್ರಿ ಒಂದು ಪ್ರಕರಣ ದಾಖಲಿಸಲಾಗಿದೆ. ಅದೂ ಕೂಡ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಆರೋಪಿಸಲಾದ ಸುಳ್ಳು ಪ್ರಕರಣ ಎಂದು ಹೇಳಿದ್ದಾರೆ.

ನಾನು ಬೆಳಗಾವಿಗೆ ಬಂದೇ ಬರುತ್ತೇನೆ. ಬಾಳೇಕುಂದ್ರಿಗೂ ಬಂದೇ ಬರುತ್ತೇನೆ. ಬಾಳೇಕುಂದ್ರಿ ಕರ್ನಾಟಕದ ಹೆಮ್ಮೆಯ ಇಂಜಿನಿಯರ್, ನೀರಾವರಿ ತಜ್ಞ ಶಿವಪ್ಪ ಗುರುಬಸಪ್ಪ ಬಾಳೇಕುಂದ್ರಿಯವರ ಊರು‌. ಕೃಷ್ಣಾ, ಮಲಪ್ರಭ, ಘಟಪ್ರಭ ವ್ಯಾಪ್ತಿಯ ನೀರಾವರಿ ಯೋಜನೆಗಳ ರೂವಾರಿಯವರು. ಇಂಥ ಶ್ರೇಷ್ಠ ವ್ಯಕ್ತಿಗೆ ಜನ್ಮ ನೀಡಿದ ಅಪ್ಪಟ ಕನ್ನಡದ ಊರು ಬಾಳೇಕುಂದ್ರಿಗೆ ಬರಲು ನನಗೆ ಯಾವ ಹಿಂಜರಿಕೆ ಇರಲು ಸಾಧ್ಯ? ಕರ್ನಾಟಕದ ಮೂಲೆಮೂಲೆಯ ಯಾವ ಹಳ್ಳಿಗಾದರೂ ನಾನು ಹೋಗುತ್ತೇನೆ.‌ ಅದು ನನ್ನ ಹಕ್ಕು, ಹೋಗಬೇಕಾದಾಗ ಹೋಗೇ ಹೋಗುತ್ತೇನೆ ಎಂದಿದ್ದಾರೆ.

ಪ್ರಶ್ನೆ ಅದಲ್ಲ, ಗೌಡ್ರೇ ಬೆಳಗಾವಿಗೆ, ಬಾಳೇಕುಂದ್ರಿಗೆ ಬನ್ನಿ ಎಂದು ಕರೆಯುತ್ತಿರುವವರಿಗೆ ನನ್ನ ಒಂದಷ್ಟು ಪ್ರಶ್ನೆಗಳಿವೆ. ಎಲ್ಲಿದ್ದಾರೆ ನಿಮ್ಮ ಜನಪ್ರತಿನಿಧಿಗಳು? ನೀವೇ ಓಟು ಹಾಕಿ ಗೆಲ್ಲಿಸಿದ ಶಾಸಕರೆಲ್ಲ ಹೋದರು? ನಿಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ಮಂತ್ರಿಗಳು ಬಾಯಿ ಹೊಲೆದುಕೊಂಡು ಕುಳಿತಿರುವುದು ಯಾಕೆ? ಎಲ್ಲಿದೆ ಆಡಳಿತ ಪಕ್ಷ? ಎಲ್ಲಿದೆ ವಿರೋಧ ಪಕ್ಷ? ಕನ್ನಡಿಗರ ಪಾಲಿಗೆ ಇವೆಲ್ಲ ಸತ್ತೇ ಹೋಗಿವೆಯೇ? ಒಬ್ಬ ಅಮಾಯಕ ಕನ್ನಡಿಗನ ಮೇಲೆ ಸುಳ್ಳು ಕೇಸು ಹಾಕಿದ್ದಾರಲ್ಲ? ಯಾರ ಚಿತಾವಣೆಯಿಂದ ಇದು ನಡೆದಿದೆ? ಸುಳ್ಳು ದೂರು ದಾಖಲಿಸಿಕೊಳ್ಳಿ‌ ಎಂದು ಪೊಲೀಸರಿಗೆ ತಾಕೀತು ಮಾಡಿದ ಶಕ್ತಿಗಳು ಯಾವುವು? ಮರೆಯಲ್ಲಿ ನಿಂತು ಬಾಣ ಬಿಡುವ ಇವರ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇವತ್ತು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿರುವ ಶಕ್ತಿಗಳ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯ ಮಹಾನಗರಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಿದಾಗ ಇವರ ಅಪ್ಪಂದಿರ ಮೂತಿಗೆ ಮಸಿ ಬಳಿದಿದವರು ನಾವು. ಇವರ ರಾಜಕಾರಣವನ್ನು ಹಂತಹಂತವಾಗಿ ತಿಪ್ಪೆಗೆಸೆದು ವಿಧಾನಸೌಧದ ಬಾಗಿಲು ಮುಚ್ಚಿದವರು ನಾವು. ಈಗ ಅವರು ಹತಾಶರಾಗಿದ್ದಾರೆ, ಅದಕ್ಕಾಗಿ ಈ ಅಮಾಯಕರ ಮೇಲೆ ಹಲ್ಲೆ ನಡೆಸುವ ಹೇಡಿತನ ತೋರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾವೀಗ ಯಾರ ವಿರುದ್ಧ ಬಡಿದಾಡಬೇಕು ಹೇಳಿ. ನೆರೆಯ ರಾಜ್ಯದ ಚಿತಾವಣೆಯಿಂದ ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಇಳಿಯುವ ದುಷ್ಟ ಶಕ್ತಿಗಳ ವಿರುದ್ಧವೇ? ಅಥವಾ ಇದೆಲ್ಲ ನೋಡಿಕೊಂಡು ಮರಾಠಿ ಓಟ್ ಬ್ಯಾಂಕ್ ಕೈತಪ್ಪುತ್ತದೆಯೆಂಬ ಕಾರಣಕ್ಕೆ ಸ್ವಾಭಿಮಾನ ಮರೆತು ಅಡಗಿ ಕುಳಿತಿರುವ ನಮ್ಮ ಹೇಡಿ ರಾಜಕಾರಣಿಗಳ ವಿರುದ್ಧವೇ? ಇವರು ಬಾಯಿಬಿಟ್ಟು ಮಾತಾಡುವಂತೆ ಮಾಡುವುದು ಕೂಡ ನಮ್ಮ ಕರ್ತವ್ಯವಲ್ಲವೇ? ಎಂದು ತಿಳಿಸಿದ್ದಾರೆ.

ನಾನೀಗ ಕೆಪಿಎಸ್‌ಸಿಯಲ್ಲಿ ಲಕ್ಷಾಂತರ ಕನ್ನಡದ ಮಕ್ಕಳಿಗೆ ಆಗಿರುವ ಅನ್ಯಾಯದ ವಿರುದ್ಧ ಬಡಿದಾಡುತ್ತಿದ್ದೇನೆ.‌ ಆ ಮಕ್ಕಳಿಗೆ ನ್ಯಾಯ ಕೊಡಿಸುವುದಕ್ಕಾಗಿ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗುತ್ತಿದ್ದೇನೆ. ಈ ಸಂಘರ್ಷದ ನಡುವೆಯೂ ನನ್ನ ಹೃದಯ ಏಟು ತಿಂದು, ಕೇಸು ಹಾಕಿಸಿಕೊಂಡ ಆ ಅಮಾಯಕ ಜೀವಕ್ಕಾಗಿ ಮಿಡಿಯುತ್ತಿದೆ. ನಾಡಿದ್ದು ಮಂಗಳವಾರವೇ ನಾನು ಬೆಳಗಾವಿಗೆ ಬರುತ್ತಿದ್ದೇನೆ. ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕರವೇ ಕಾರ್ಯಕರ್ತರು, ಅಕ್ಕ ಪಕ್ಕದ ಜಿಲ್ಲೆಗಳ ಮುಖಂಡರೂ ಅಂದು ಬೆಳಗಾವಿಗೆ ಬರುತ್ತಿದ್ದೇವೆ. ನಾನು ಬರುವಾಗ ಸುಮ್ಮನೇ ಬಂದು ಹೋಗುವುದಿಲ್ಲ. ಇಷ್ಟು ಸೂಕ್ಷ್ಮ ನಮ್ಮ ಪೊಲೀಸ್ ಇಲಾಖೆಗೆ ಗೊತ್ತೇ ಇದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಗೃಹ ಸಚಿವರು ಕೂಡಲೇ ಮಧ್ಯೆ ಪ್ರವೇಶಿಸಿ ಮಹದೇವಪ್ಪ ವಿರುದ್ಧದ ಪ್ರಕರಣ ಹಿಂದಕ್ಕೆ ಪಡೆಯಲಿ. ಇದು ನನ್ನ ಆಗ್ರಹ. ಈ ಸಂಘರ್ಷ ಹೀಗೇ ಮುಂದುವರೆಯಲಿ ಎಂಬುದು ಅವರ ಆಸೆಯಾದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಪಂಚಾಯಿತಿ ಚುನಾವಣೆ: ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ರಾಜ್ಯದ ಬಹುತೇಕ ಪಂಚಾಯ್ತಿಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…

50 mins ago

ಮಡಿಕೇರಿ: ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್:‌ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಮಡಿಕೇರಿ: ಗುಂಡು ಹಾರಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಸಮೀಪದ ಕುಂಬಳದಾಳು ಬಳಿ ನಡೆದಿದೆ. ಕವನ್(‌24) ಆತ್ಮಹತ್ಯೆ ಮಾಡಿಕೊಂಡಿರುವ…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ : ದೇಶವನ್ನು ಒಂದುಗೂಡಿಸಿದ ಖಾದಿ ಮಂತ್ರ

ಡಾ.ಪ್ರಮೀಳಾದೇವಿ ಬಿ.ಕೆ ಖಾದಿಯಿಂದ ದೇಶವನ್ನು ಒಂದು ಗೂಡಿಸುವುದು ಸಾಧ್ಯವೇ? ಇಂದು ಸಾಮಾನ್ಯವಾಗಿ ಕೇಳಬಹುದಾದ ಪ್ರಶ್ನೆ. ಸ್ವಾತಂತ್ರ್ಯ ಬಂದು ಏಳು ದಶಕ…

5 hours ago

ಗಾಂಧಿ ಅಭಿಯಾನ ಅರಿವಿನ ಯಾನ : ನಿದ್ದೆ ಇಲ್ಲದ ಇಂಗ್ಲೆಂಡಿನ ಮೊದಲ ದಿನಗಳು

ಜಹಜಿನಲ್ಲಿ ನನಗೆ ಸಮುದ್ರ ಪ್ರಯಾಣದ ಯಾವ ತೊಂದರೆಯೂ ಆಗಲಿಲ್ಲ. ದಿನಗಳು ಕಳೆದಂತೆಲ್ಲ ನನ್ನ ಮನಸ್ಸು ಸಂದಿಗ್ಧ ಪರಿಸ್ಥಿತಿಗೆ ಬೀಳತೊಡಗಿದ್ದಿತು. ಹಡಗಿನ…

6 hours ago

ಮಳೆಗಾಲದಲ್ಲೇ ವೈಟ್‌ ಟಾಪಿಂಗ್‌ ಆಗಬೇಕೆ?

ವಸಂತ್‌ ಕುಮಾರ್‌, ಮೈಸೂರು ಮಠ ಪ್ರತಿ ವರ್ಷವೂ ಪಾಲಿಕೆಯ ಬಜೆಟ್‌ನಲ್ಲಿ ರಸ್ತೆ ದುರಸ್ತಿಗಾಗಿ ಇಂತಿಷ್ಟು ಹಣವನ್ನು ನಿಗದಿಪಡಿಸಲಾಗುತ್ತದೆ. ೨೦೨೪-೨೦೨೫ರಲ್ಲಿ ಕೊಟ್ಟ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 11 , ಶನಿವಾರ

7 hours ago