ರಾಜ್ಯ

ಅಡಿಕೆ–ತೆಂಗು ರೈತರ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಕೃಷಿ ಸಚಿವರ ಭೇಟಿ; ನಿಯೋಗದೊಂದಿಗೆ ಮನವಿ ಹೊಸದಿಲ್ಲಿ

ದಾವಣಗೆರೆ : ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕದ ಸಂಸದರು ಮತ್ತು ಮುಖಂಡರ ನಿಯೋಗವು ಗುರುವಾರ ಭೇಟಿಯಾಗಿ, ತೆಂಗು ಮತ್ತು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ಪರಿಹಾರಕ್ಕಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಈ ನಿಯೋಗದಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಉಪಸ್ಥಿತರಿದ್ದರು ಹಾಗೂ ದಾವಣಗೆರೆ ಕ್ಷೇತ್ರದಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟಗಳ ಕುರಿತು ಗಮನಸೆಳೆದರು. ಈ ನಿಯೋಗವು ಅಡಿಕೆ ಮತ್ತು ಮಾನವ ಆರೋಗ್ಯದ ಮೇಲೆ “ಪ್ರಮಾಣಾಧಾರಿತ ಸಂಶೋಧನೆ” ನಡೆಸಲು ಕೃಷಿ ಸಚಿವಾಲಯ ಮಂಜೂರು ಮಾಡಿದ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿತು.

ಅಡಿಕೆ ರೈತರು ಎದುರಿಸುತ್ತಿರುವ ಹಳದಿ ಎಲೆ ಹಾಗೂ ಹುಳು ರೋಗಗಳಿಗೆ ಸಮಗ್ರ ದೀರ್ಘಕಾಲಿಕ ಅಧ್ಯಯನ ನಡೆಸಲು ಖ್ಯಾತ ವೈಜ್ಞಾನಿಕ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅಗತ್ಯವೆಂದು ತಿಳಿಸಲಾಯಿತು. ಅಡಿಕೆಯ ಅಕ್ರಮ ಆಮದು ತಡೆಗಟ್ಟಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, ಆಮದು ಅನುಮತಿಗೆ ಮುನ್ನ CAMPCO, TSS, MAMCOS ಮುಂತಾದ ಸಹಕಾರಿಗಳ ಸಲಹೆ ಪಡೆಯುವುದು ಸೂಕ್ತವೆಂದು ಸೂಚಿಸಲಾಯಿತು. ಹೆಚ್ಚಿನ ಪ್ರಮಾಣದ ಸಾಗಾಟಗಳಿಗೆ GPS ಟ್ರ್ಯಾಕಿಂಗ್ ಮತ್ತು ತಪಾಸಣಾ ಕೇಂದ್ರಗಳಲ್ಲಿ CCTV ಅಳವಡಿಕೆಯಿಂದ ಅಕ್ರಮ ವಹಿವಾಟು, ಅಂಡರ್-ಬಿಲ್ಲಿಂಗ್ ತಡೆಗಟ್ಟಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತವಾಯಿತು. ಅಡಿಕೆಯ ಮೇಲಿನ GST ದರವನ್ನು 5% ನಿಂದ 2% ಕ್ಕೆ ಇಳಿಸುವಂತೆ ಮನವಿ ಮಾಡಲಾಯಿತು. GPS ಟ್ರ್ಯಾಕಿಂಗ್ ಮತ್ತು ಇ-ಡಾಕ್ಯುಮೆಂಟೇಶನ್ ಕಡ್ಡಾಯಗೊಳಿಸಿದರೆ ತೆರಿಗೆ ನಷ್ಟವಿಲ್ಲದೆ ಆದಾಯವನ್ನು ಕಾಪಾಡಬಹುದೆಂದು ಸೂಚಿಸಲಾಯಿತು.

ಜೊತೆಗೆ, ಗೋದಾಮುಗಳ ಕೊರತೆಯಿಂದ ಸಣ್ಣ ರೈತರು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾವಾರು ಗೋದಾಮು ನಿರ್ಮಾಣಕ್ಕೆ ಸಹಕಾರಿಗಳಿಗೆ ಸಬ್ಸಿಡಿ ಆಧಾರಿತ ನೆರವು ನೀಡುವಂತೆ ಮನವಿ ಮಾಡಲಾಯಿತು. ಇತ್ತೀಚೆಗೆ ಅಮೆರಿಕಾದಲ್ಲಿ ಅಡಿಕೆ ಎಲೆಗಳಿಂದ ತಯಾರಾದ ಬಯೋಡಿಗ್ರೇಡಬಲ್ ತಟ್ಟೆಗಳು ಕ್ಯಾನ್ಸರ್ ಉಂಟುಮಾಡುತ್ತವೆ ಎಂಬ ವರದಿ ರಫ್ತು ಹಾನಿಗೊಳಗಾಗಲು ಕಾರಣವಾದ ಹಿನ್ನೆಲೆಯಲ್ಲಿ, ಭಾರತದಲ್ಲಿಯೇ ವೈಜ್ಞಾನಿಕ ಅಧ್ಯಯನ ನಡೆಸಿ ಸೂಕ್ತ ಮಾಹಿತಿಯನ್ನು ಒದಗಿಸುವ ಅಗತ್ಯವಿದೆ ಎಂದು ತಿಳಿಸಲಾಯಿತು. ಹವಾಮಾನ ಬದಲಾವಣೆಯಿಂದ ಬೆಳೆಗಳಿಗೆ ಉಂಟಾಗುತ್ತಿರುವ ಪರಿಣಾಮಗಳನ್ನು ಗಮನಿಸಿ ಮಳೆ, ವಿಪತ್ತು ಹಾಗೂ ರೋಗಗಳ ಕುರಿತು ನಿಖರ ಮಾಹಿತಿ ಪಡೆಯಲು ಆಧುನಿಕ ತಂತ್ರಜ್ಞಾನ ಬಳಕೆಯ ಅಗತ್ಯತೆಯನ್ನು ನಿಯೋಗ ಒತ್ತಿ ಹೇಳಿತು. ಬೆಳೆ ವಿಮೆ ಯೋಜನೆಗಳನ್ನು ಬಲಿಷ್ಠ ಮತ್ತು ತಂತ್ರಜ್ಞಾನ ಆಧಾರಿತವಾಗಿಸಲು ಕೇಂದ್ರ–ರಾಜ್ಯ ಸರ್ಕಾರಗಳ ಸಮನ್ವಯ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ದಾವಣಗೆರೆ ಕ್ಷೇತ್ರದ ಅಡಿಕೆ ಬೆಳೆಗಾರರ ಸಂಕಷ್ಟಗಳ ಕುರಿತು ಸಹ ನಿಯೋಗದಲ್ಲಿ ಪ್ರಸ್ತಾಪವಾಯಿತು.ಅಡಕೆಗೆ ಪ್ರತ್ಯೇಕ ‌ಮಂಡಳಿ ರಚನೆ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಈಗಾಗಲೇ ಸದನದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.ಕ್ಷೇತ್ರದ ಅಡಕೆಬೆಳಗಾರರ ಹಿತ ರಕ್ಷಣೆಗಾಗಿ ಸಂಸದರು‌‌ ಧ್ವನಿ ಎತ್ತಿದ್ದು ಬೆಳಗಾರರಲ್ಲಿ ಸಂತಸ ಮೂಡಿಸಿದೆ. ಈ ನಿಯೋಗದಲ್ಲಿ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಆಹಾರ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವರಾದ ಪ್ರಹ್ಲಾದ್ ಜೋಶಿ, ರೈಲು ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಸೇರಿದಂತೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಕೋಟ ಶ್ರೀನಿವಾಸ ಪೂಜಾರಿ, ಯದುವೀರ್ ಒಡೆಯರ್, ಗೋವಿಂದ ಕಾರಜೋಳ, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕೊಡ್ಗೆ ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಕೊಡಗಿನಲ್ಲಿ ಸಾಧಾರಣ ಮಳೆ: ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ…

2 mins ago

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

5 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

5 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

5 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

5 hours ago

‘ರಾಮ ರಾಜಕಾರಣಕ್ಕೆ ಅಗ್ನಿ ಪರೀಕ್ಷೆ..!

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ ರಾಮಭಕ್ತರ ವಿಶ್ವಾಸವನ್ನು…

5 hours ago